ಜೈಲು ಪಾಲಾದ ಪುಷ್ಪರಾಜ್, ಅಲ್ಲು ಅರ್ಜುನ್ಗೆ 14 ದಿನ ನ್ಯಾಯಾಂಗ ಬಂಧನ
ಅಲ್ಲು ಅರ್ಜುನ್ ಬಂಧನ ಸಂಚಲನ ಸೃಷ್ಟಿಸಿದೆ. ಬಂಧನದ ಹಿಂದೆ ಷಡ್ಯಂತ್ರ, ಪಿತೂರಿ, ಹಗೆತನ, ದ್ವೇಷ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಕೂಡ ಪೊಲೀಸರ ಈ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದು ತಪ್ಪು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದರ ನಡುವೆ ನಾಂಪಲ್ಲಿ ನ್ಯಾಯಾಲಯ ಅಲ್ಲು ಅರ್ಜುನ್ ಅವರ ಜಾಮೀನಿಗೆ ಸಂಬಂಧಿಸಿದಂತೆ ತೀರ್ಪು ನೀಡಿದೆ. ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಹೌದು, ಸಂಧ್ಯಾ ಚಿತ್ರಮಂದಿರದ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆ ಸಾವನ್ನಪ್ಪಿದ ಹಿನ್ನೆಲೆ ಇಂದು ಬೆಳ್ಳಿಗ್ಗೆ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದ ಪೊಲೀಸರು, ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಅಲ್ಲು ಅರ್ಜುನ್ ಅವರನ್ನು ಎ 11 ಆರೋಪಿಯನ್ನಾಗಿಸಿದ್ದ ಪೊಲೀಸರು, ವೈದ್ಯಕೀಯ ತಪಾಸಣೆಗೆ ಅಲ್ಲು ಅರ್ಜುನ್ ಅವರನ್ನು ಕರೆದೊಯ್ದಿದ್ದರು. ಆ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಪ್ರಕರಣದ ವಿಚಾರಣೆಯನ್ನು ನಡೆಸಿದ ನಾಂಪಲ್ಲಿ ಕೋರ್ಟ್ ಪುಷ್ಪ 2 ಚಿತ್ರದ ಗೆಲುವಿನ ಸಂಭ್ರಮದಲ್ಲಿದ್ದ ಅಲ್ಲು ಅರ್ಜುನ್ ಅವರನ್ನು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದೆ. ಈಗಾಗಲೇ ಕೇಸ್ ಸಂಬಂಧ ಸಂಧ್ಯಾ ಥಿಯೇಟರ್ ಮಾಲೀಕ, ಮ್ಯಾನೇಜರ್ ಹಾಗೂ ಅಲ್ಲು ಅರ್ಜುನ್ ಜೊತೆಗೆ ಇದ್ದ ಬೌನ್ಸರ್ಗಳನ್ನು ಬಂಧಿಸಲಾಗಿದೆ. ಅಲ್ಲು ಅರ್ಜುನ್ ವಿರುದ್ಧ 105, 118 (1) ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಈ ಸೆಕ್ಷನ್ ಪ್ರಕಾರ ತಪ್ಪು ಸಾಬೀತಾದ್ರೆ ಸುಮಾರು 10 ವರ್ಷ ಜೈಲು ಶಿಕ್ಷೆ ಆಗಲಿದೆ.
ಇನ್ನೂ ಅಲ್ಲು ಅರ್ಜುನ್ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬೆನ್ನಲ್ಲೇ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಕರೆದೊಯ್ಯಲು ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್ ಅವರನ್ನು ಚಂಚಲಗೂಡ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ.
ಅಲ್ಲು ಅರ್ಜುನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿದ ಬೆನ್ನಲ್ಲೇ ಅಲ್ಲು ಅರ್ಜುನ್ ಪರ ವಕೀಲರು ಸೋಮವಾರದಂದು ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸುವ ಆಲೋಚನೆಯನ್ನು ಮಾಡುತ್ತಿದ್ದಾರೆ. ಇನ್ನೂ ಅಲ್ಲು ಅರ್ಜುನ್ ಅವರ ಬಂಧನದ ವಿಚಾರ ರಾಜಕೀಯ ಸ್ವರೂಪವನ್ನು ಕೂಡ ಪಡೆದಿದ್ದು ಈ ಪ್ರಕರಣದ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ಮತ್ತೊಂದೆಡೆ ಅಲ್ಲು ಅರ್ಜುನ್ ಹದಿನಾಲ್ಕು ದಿನಗಳ ಕಾಲ ಜೈಲು ಪಾಲಾದ ಬೆನ್ನಲ್ಲೇಕಾಲ್ತುಳಿತದಲ್ಲಿ ಮೃತಪಟ್ಟಿದ್ದ ಮಹಿಳೆಯ ಪತಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ಅಲ್ಲು ಅರ್ಜುನ್ರನ್ನು ಬಂಧಿಸುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ಅವರನ್ನು ಬಂಧಿಸುವುದಾದರೆ ನಾನು ಪ್ರಕರಣ ವಾಪಸ್ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಒಂದು ವೇಳೆ ದೂರುದಾರರು ಕೇಸ್ ವಾಪಸ್ ಪಡೆದರೆ, ಅಲ್ಲು ಅರ್ಜುನ್ಗೆ ಬಂದಿರುವ ಸಂಕಷ್ಟ ಪರಿಹಾರವಾಗುವ ಸಾಧ್ಯತೆ ಇದೆ. ಸದ್ಯ ಅಲ್ಲು ಅರ್ಜುನ್ರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಕಾರಣ ಅವರು ಜೈಲಿನಲ್ಲಿ ಇರಬೇಕಾಗುತ್ತದೆ.


Click it and Unblock the Notifications











