ರಕ್ತ ಚಂದನದ ಸುತ್ತ ರಕ್ತ-ಸಿಕ್ತ ಕತೆ: 'ಪುಷ್ಪ' ಟ್ರೇಲರ್ ಬಿಡುಗಡೆ
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ' ಸಿನಿಮಾದ ಟ್ರೇಲರ್ ಅನ್ನು ಇಂದು (ಡಿಸೆಂಬರ್ 06) ಸಂಜೆ 6:30ಗೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ ಅಡಚಣೆಯಿಂದಾಗಿ ಟ್ರೇಲರ್ ಬಹಳ ತಡವಾಗಿ ಬಿಡುಗಡೆ ಆಗಿದೆ.
ತಡವಾಗಿ ಬಿಡುಗಡೆ ಆದರೂ ಟ್ರೇಲರ್ ಮೂಲಕ ಚಿತ್ರತಂಡ ಒಳ್ಳೆಯ ಉಡುಗೊರೆಯನ್ನೇ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ನೀಡಿದ್ದಾರೆ. 'ಪುಷ್ಪ' ಸಿನಿಮಾದ ಟ್ರೇಲರ್ನಲ್ಲಿ ಹಲವು ಅಂಶಗಳನ್ನು ತುಣುಕುಗಳಲ್ಲಿ ತೋರಿಸಲಾಗಿದೆ. ಹಲವರ ಪಾತ್ರ ಪರಿಚಯವೂ ಇದೆ.
ಸಿನಿಮಾ ಚಿತ್ರೀಕರಣ ಆರಂಭಿಸುವ ಮುನ್ನವೇ ಇದು ರಕ್ತ ಚಂದನ ಕುರಿತಾದ ಕತೆ ಹೊಂದಿದೆ ಎಂದು ಚಿತ್ರತಂಡ ಘೋಷಿಸಿತ್ತು. ಇಂದು ಬಿಡುಗಡೆ ಆಗಿರುವ ಟ್ರೇಲರ್ನಲ್ಲಿಯೂ ಸಹ ಅದೇ ವಿಷಯಕ್ಕೆ ಹೆಚ್ಚು ಪ್ರಾಶಸ್ತ್ಯತೆ ನೀಡಲಾಗಿದೆ. ಭೂಮಿ ಮೇಲೆ ಬೆಳೆವ ಬಂಗಾರ ರಕ್ತ ಚಂದನಕ್ಕಾಗಿ ಗ್ಯಾಂಗ್ಗಳ ನಡುವೆ ಹೋರಾಟ, ಪೊಲೀಸರು ಹಾಗೂ ಕಳ್ಳ ಸಾಗಣೆದಾರರ ನಡುವೆ ಕಿತ್ತಾಟ ಇತರೆ ವಿಷಯಗಳ ಸುತ್ತ 'ಪುಷ್ಪ' ಕತೆ ಹೆಣೆದಿರುವುದು ಟ್ರೇಲರ್ನಿಂದ ಗೊತ್ತಾಗುತ್ತಿದೆ.

ಸಿನಿಮಾದಲ್ಲಿ ಭರ್ಜರಿ ಫೈಟ್ ಹಾಗೂ ಚೇಸ್ಗಳು ಇರುವ ಬಗ್ಗೆ ಟ್ರೇಲರ್ನಲ್ಲಿಯೇ ಪೀಠಿಕೆ ಇದೆ. ಜೊತೆಗೆ ರಶ್ಮಿಕಾ ಮಂದಣ್ಣ ಜೊತೆಗೆ ಲವ್ ಸ್ಟೋರಿ ಸಹ. ರಶ್ಮಿಕಾ ಮಂದಣ್ಣ ಮೈ ಚಳಿ ಬಿಟ್ಟೇ ಸಿನಿಮಾದಲ್ಲಿ ನಟಿಸಿದ್ದಾರೆ. ರಶ್ಮಿಕಾರ ಗ್ಲಾಮರಸ್ ಲುಕ್ನ ಕೆಲ ಝಲಕ್ ಟ್ರೇಲರ್ನಲ್ಲಿದೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮಾತ್ರವೇ ಅಲ್ಲದೆ ಇನ್ನೂ ಕೆಲವು ಪಾತ್ರಗಳ ಪರಿಚಯ ಟ್ರೇಲರ್ನಲ್ಲಿ ಆಗುತ್ತದೆ. ಹಾಸ್ಯನಟ ಸುನಿಲ್ ವಿಲನ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ್ ಸಹ ಕಾಣುತ್ತಾರೆ. ಟ್ರೇಲರ್ ನ ಕೊನೆಯಲ್ಲಿ ಕಾಣುವ ಫಹಾದ್ ಫಾಸಿಲ್ ಲುಕ್ ಹಾಗೂ ಅವರ ಅಭಿನಯ ಭಯ ಹುಟ್ಟಿಸುವಂತಿದೆ.
ಟ್ರೇಲರ್ನಲ್ಲಿ ಕೆಲವು ಪವರ್ಫುಲ್ ಡೈಲಾಗ್ಗಳು ಇದ್ದು, ಅದರಲ್ಲಿ ಅಲ್ಲು ಅರ್ಜುನ್ ಪಾತ್ರ ಪುಷ್ಪ ಡೈಲಾಗ್ ಹೇಳುವ ''ಈ ಲೋಕ ನಿನ್ನ ಕೈಗೆ ಬಂದೂಕು ಕೊಟ್ಟಿಗೆ, ನನಗೆ ಕೊಡ್ಲಿ ಕೊಟ್ಟಿದೆ, ಅವರವರ ಯುದ್ಧ ಅವರವರದ್ದು'' ಎಂಬ ಡೈಲಾಗ್ ಗಮನ ಸೆಳೆಯುತ್ತಿದೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟಿಸಿರುವ 'ಪುಷ್ಪ' ಸಿನಿಮಾದ ಮೊದಲ ಭಾಗ ಡಿಸೆಂಬರ್ 17ಕ್ಕೆ ಬಿಡುಗಡೆ ಆಗಲಿದೆ. ಎರಡನೇ ಭಾಗ ಕೆಲ ತಿಂಗಳ ಬಳಿಕ ಬಿಡುಗಡೆ ಆಗಲಿದೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಅಲ್ಲು ಅರ್ಜುನ್ ಜೊತೆಗೆ ಇದು ಇವರ ಮೂರನೇ ಸಿನಿಮಾ. ಸಿನಿಮಾವು ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಗೊಳ್ಳಲಿದೆ.


Click it and Unblock the Notifications











