ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಕಹಿ ಸುದ್ದಿ: 'ಪುಷ್ಪಾ' ಬಿಡುಗಡೆ ಮುಂದೂಡಿಕೆ?
ಅಲ್ಲು ಅರ್ಜುನ್ ಅಭಿಮಾನಿಗಳಿಗೊಂದು ಕಹಿ ಸುದ್ದಿ. ಬಹು ನಿರೀಕ್ಷಿತ ಸಿನಿಮಾ 'ಪುಷ್ಪಾ' ಬಿಡುಗಡೆ ನಿಗದಿತ ದಿನಾಂಕಕ್ಕಿಂತಲೂ ತಡವಾಗುವ ಸಾಧ್ಯತೆ ದಟ್ಟವಾಗಿದೆ.
'ಪುಷ್ಪ' ಸಿನಿಮಾದ ಬಿಡುಗಡೆಯನ್ನು ಆಗಸ್ಟ್ 13 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಈಗ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗುವ ಬಗ್ಗೆ ಸುದ್ದಿ ಹಬ್ಬಿದೆ.
ಆಂಧ್ರ-ತೆಲಂಗಾಣ ರಾಜ್ಯಗಳ ಹೊರಗೆ ಚಿತ್ರೀಕರಣ ಮಾಡುವ ಯೋಜನೆಯನ್ನು ನಿರ್ದೇಶಕ ಸುಕುಮಾರ್ ಹಾಕಿಕೊಂಡಿದ್ದರು. ಆದರೆ ಕೊರೊನಾ ಎರಡನೇ ಅಲೆ ತೀವ್ರತೆಯಿಂದಾಗಿ ಹೊರ ರಾಜ್ಯಗಳಲ್ಲಿ ಮಾಡಲಿಚ್ಛಿಸಿದ್ದ ಚಿತ್ರೀಕರಣವನ್ನು ರದ್ದು ಮಾಡುವ ಆಲೋಚನೆಯಲ್ಲಿದೆ ಚಿತ್ರತಂಡ.

ಹೊರ ರಾಜ್ಯಗಳಲ್ಲಿ ಚಿತ್ರೀಕರಣ ಮಾಡುವ ಬದಲಿಗೆ ಸೆಟ್ಗಳನ್ನು ಹಾಕಿ ಚಿತ್ರೀಕರಣ ಮಾಡುವ ಯೋಚನೆ ಇರುವ ಕಾರಣ ಹಾಗೂ ಇದಕ್ಕೆ ಯೋಜಿತ ಅವಧಿಗಿಂತಲೂ ಹೆಚ್ಚಿನ ಸಮಯ ಬೇಕಾಗಿರುವ ಕಾರಣ ಚಿತ್ರೀಕರಣ ತಡವಾಗುವ ಸಾಧ್ಯತೆ ಇದೆ. ಹೀಗಾಗಿ ಸಿನಿಮಾದ ಬಿಡುಗಡೆ ದಿನಾಂಕವೂ ಮುಂದಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ಸಿನಿಮಾದ ಪೂರ್ಣ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತ ಬರುವ ವೇಳೆಗೆ ಹೊಸ ಬಿಡುಗಡೆ ದಿನಾಂಕವನ್ನು ಸಿನಿಮಾ ತಂಡ ಘೋಷಿಸಲಿದೆ.
'ಪುಷ್ಪ' ಸಿನಿಮಾವು ರಕ್ತಚಂದನ ಕಳ್ಳಸಾಗಣೆದಾರನ ಕತೆಯನ್ನು ಹೊಂದಿದ್ದು, ಅಲ್ಲು ಅರ್ಜುನ್ ಜೊತೆಗೆ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ವಿಲನ್ ಆಗಿ ಮಲಯಾಳಂನ ಖ್ಯಾತ ನಟಿ ಫಹಾದ್ ಫಾಸಿಲ್ ನಟಿಸಲಿದ್ದಾರೆ. ಸಿನಿಮಾವನ್ನು ಹಿಟ್ ನಿರ್ದೇಶಕ ಸುಕುಮಾರ್ ನಿರ್ದೇಶಿಸುತ್ತಿದ್ದಾರೆ.


Click it and Unblock the Notifications










