ಮೆಗಾ ಫ್ಯಾಮಿಲಿಯಿಂದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಔಟ್?
ತೆಲುಗು ನಟ ಪವನ್ ಕಲ್ಯಾಣ್ ಆಂಧ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೆಗಾ ಫ್ಯಾಮಿಲಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಮೆಗಾ ಫ್ಯಾನ್ಸ್ ಸಂತಸಕ್ಕೆ ಪಾರವೇ ಇಲ್ಲ. ಇದೆಲ್ಲದರ ನಡುವೆ ಅಲ್ಲು ಅರ್ಜುನ್ ಮೇಲೆ ಮೆಗಾ ಫ್ಯಾನ್ಸ್ ಗರಂ ಆಗಿದ್ದಾರೆ. ಇದೀಗ ಮೆಗಾ ಹೀರೊ ಕೂಡ ಬೇಸರಗೊಂಡಿರುವ ಸುದ್ದಿ ಕೇಳಿ ಬರ್ತಿದೆ.
ನಟ ಚಿರಂಜೀವಿ ಸೋದರಳಿದ ಅಲ್ಲು ಅರ್ಜುನ್. ಚಿರು ಪತ್ನಿ ಸುರೇಖಾ ಅಣ್ಣನ ಮಗ. ಖ್ಯಾತ ಹಾಸ್ಯ ನಟ ಅಲ್ಲು ರಾಮಲಿಂಗಯ್ಯ ಮೊಮ್ಮಗ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಚಿರಂಜೀವಿ ಸಿನಿಮಾಗಳನ್ನು ನಿರ್ಮಿಸುತ್ತಾ ಬೆಳೆದವರು. ಇನ್ನು ಚಿಕ್ಕಂದಿನಿಂದ ಅಲ್ಲು ಅರ್ಜುನ್ ಕೂಡ ಮಾವ ಚಿರಂಜೀವಿ ನೆರಳಿನಲ್ಲೇ ಬೆಳೆದವರು. ಮಾವನನ್ನು ನೋಡುತ್ತಲೇ ಚಿತ್ರರಂಗಕ್ಕೆ ಬಂದವರು.

ಕೆಲ ವರ್ಷಗಳಿಂದ ಮೆಗಾ ಹಾಗೂ ಅಲ್ಲು ಫ್ಯಾಮಿಲಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಮುಖ್ಯವಾಗಿ ಪವನ್ ಕಲ್ಯಾಣ್ ಹಾಗೂ ಅಲ್ಲು ಅರ್ಜುನ್ ನಡುವೆ ಶೀತಲ ಸಮರ ನಡೆಯುತ್ತಿದೆ ಎನ್ನಲಾಗ್ತಿದೆ. ಇದು ಕೆಲವೊಮ್ಮೆ ಜಗಜ್ಜಾಹೀರು ಆಗಿರುವುದು ಇದೆ. ಪವನ್ ಕಲ್ಯಾಣ್ ಜನಸೇನಾ ಪಕ್ಷ ಕಟ್ಟಿ ರಾಜಕೀಯರಂಗ ಪ್ರವೇಶಿಸಿದರು. ಮೆಗಾ ಫ್ಯಾಮಿಲಿಯಲ್ಲಿ ಎಲ್ಲರೂ ಬೆಂಬಲಿಸಿದರು. ಅಲ್ಲು ಅರ್ಜುನ್ ಮಾತ್ರ ತೋರ್ಪಡಿಕೆಯ ಬೆಂಬಲ ತೋರಿಸುತ್ತಾ ಬರುತ್ತಿದ್ದಾರೆ.
ಇತ್ತೀಚೆಗೆ ನಡೆದ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಪವನ್ ನೇತೃತ್ವದ ಜನಸೇನಾ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಪಕ್ಷ ಈ ಬಾರಿ ಫೀನಿಕ್ಸ್ ರೀತಿ ಎದ್ದು ಬಂದಿದೆ. 21 ವಿಧಾನಸಭೆ ಹಾಗೂ 2 ಲೋಕಸಭಾ ಕ್ಷೇತ್ರಗಳಲ್ಲಿ ಜನಸೇನಾ ಪಕ್ಷದ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಇನ್ನು ಪವನ್ ಕಲ್ಯಾಣ್ ಎನ್ಡಿಎ ಮೈತ್ರಿಕೂಟಕ್ಕೂ ಬೆಂಬಲ ಸೂಚಿಸಿ ಪ್ರಧಾನಿ ಮೋದಿ ವಿಶ್ವಾಸ ಗಳಿಸಿದ್ದಾರೆ.

ಚುನಾವಣೆಯಲ್ಲಿ ಅಲ್ಲು ಅರ್ಜುನ್ ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಶಿಲ್ಪ ರವಿರೆಡ್ಡಿ ಪರ ಪ್ರಚಾರ ನಡೆಸಿದ್ದರು. ಪವನ್ ಕಲ್ಯಾಣ್ಗೆ ಬೆಂಬಲ ಸೂಚಿಸಿ ಒಂದು ಟ್ವೀಟ್ ಹಾಕಿದ್ದ ಸ್ಟೈಲಿಶ್ ಆತ್ಮೀಯ ಸ್ನೇಹಿತ ಎನ್ನುವ ಕಾರಣಕ್ಕೆ ನಂದ್ಯಾಲ ಕ್ಷೇತ್ರಕ್ಕೆ ಹೋಗಿ ಮತ ಯಾಚಿಸಿದ್ದರು. ಇದು ಮೆಗಾ ಫ್ಯಾನ್ಸ್, ಪವನ್ ಕಲ್ಯಾಣ್ ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿತ್ತು. ಖುದ್ದು ಪವನ್ ಸಹೋದರ ನಾಗಬಾಬು ಪರೋಕ್ಷವಾಗಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ನಾನು ಯಾವುದೇ ಪಕ್ಷದ ಪರ ಪ್ರಚಾರಕ್ಕೆ ಬಂದಿಲ್ಲ. ನಂದ್ಯಾಲ ಕ್ಷೇತ್ರದ ಶಿಲ್ಪ ರವಿರೆಡ್ಡಿ ನನ್ನ ಆತ್ಮೀಯ ಸ್ನೇಹಿತರು. ಅವರ ಒಳ್ಳೆಯ ಕೆಲಸಗಳನ್ನು ಮೆಚ್ಚಿ ಪ್ರಚಾರಕ್ಕೆ ಬಂದೆ ಎಂದರು. ಆದರೆ ಜನಸೇನಾಗೆ ಎದುರಾಳಿ ಪಕ್ಷದ ಪರ ಮೆಗಾ ಫ್ಯಾಮಿಲಿ ಹೀರೊ ಪ್ರಚಾರ ಮಾಡಿದ್ದು ಇರಿಸುಮುರಿಸಿಗೆ ಕಾರಣವಾಗಿತ್ತು. ಪವನ್ ಸಕ್ಸಸ್ ಬಗ್ಗೆ ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದರು. ಶುಭ ಹಾರೈಸಿದ್ದರು. ಆದರೂ ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಟ್ರೋಲ್ ಎದುರಿಸುವಂತಾಗಿದೆ.
ಕೆಲ ವರ್ಷಗಳಿಂದ ಅಲ್ಲು ಅರ್ಜುನ್ ಮೆಗಾ ಫ್ಯಾಮಿಲಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಆ ಮನೆಯ ಕಾರ್ಯಕ್ರಮಗಳಿಗೆ ಅಷ್ಟಾಗಿ ಹಾಜರಾಗುವುದಿಲ್ಲ. ಚುನಾವಣೆ ಗೆಲುವಿನ ಬಳಿಕ ಪವನ್ ಕಲ್ಯಾಣ್ ಚಿರಂಜೀವಿ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಫ್ಯಾಮಿಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಅಲ್ಲು ಕುಟುಂಬದ ಯಾರೊಬ್ಬರು ಅಲ್ಲಿರಲಿಲ್ಲ. ಇನ್ನು ಮೆಗಾ ಫ್ಯಾಮಿಲಿ ವಾಟ್ಸಪ್ ಗ್ರೂಪ್ಯಿಂದಲೂ ಅಲ್ಲು ಅರ್ಜುನ್ ಎಕ್ಸಿಟ್ ಆಗಿದ್ದಾರೆ ಎನ್ನುವಂತೆ ತೆಲುಗು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.
ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಸೋದರಳಿಯ ಸಾಯಿ ಧರಮ್ ತೇಜ್ ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ನ ಅನ್ಫಾಲೋ ಮಾಡಿದ್ದಾರೆ. ಇದು ಮೆಗಾ ಫ್ಯಾಮಿಲಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಸಾಕ್ಷಿ ಎನ್ನುವಂತಾಗಿದೆ. ಪವನ್ ಕಲ್ಯಾಣ್ ಸಹೋದರಿ ಮಗ ಸಾಯಿ ಧರಮ್ ತೇಜ್. ಕೆಲ ದಿನಗಳ ಹಿಂದೆ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾಯಿ ಧರಮ್ ತೇಜ್ ಪುನರ್ಜನ್ಮ ಪಡೆದಿದ್ದರು.
ಮಾವ ಪವನ್ ಕಲ್ಯಾಣ್ ಅಂದ್ರೆ ಸಾಯಿ ಧರಮ್ ತೇಜ್ಗೆ ಬಹಳ ಪ್ರೀತಿ. ಇತ್ತೀಚೆಗೆ ಪವನ್ ಚುನಾವಣೆ ಗೆಲುವನ್ನು ಮನೆಯಲ್ಲಿ ಎಲ್ಲರಿಗಿಂತ ಹೆಚ್ಚು ಸಂಭ್ರಮಿಸಿದ್ದು ಇವರೇ. ಇದೀಗ ಪವನ್ ಉಪಮುಖ್ಯಮಂತ್ರಿ ಆಗುತ್ತಿದ್ದಂತೆ ಅಲ್ಲು ಅರ್ಜುನ್ನ ಸೋಶಿಯಲ್ ಮೀಡಿಯಾದಲ್ಲಿ ಅನ್ಫಾಲೋ ಮಾಡಿರುವುದು ಟಾಲಿವುಡ್ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.


Click it and Unblock the Notifications











