'ಜಯಂ' ಚಿತ್ರದಲ್ಲಿ ನಿತಿನ್ ಬದಲು ಅಲ್ಲು ಅರ್ಜುನ್ ನಟಿಸ್ಬೇಕಿತ್ತು
ತೆಲುಗು ನಟ ಅಲ್ಲು ಅರ್ಜುನ್ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಮುಂದೆ ಪ್ಯಾನ್ ವರ್ಲ್ಡ್ ಹೀರೊ ಆಗುವತ್ತ ಮುಖ ಮಾಡಿದ್ದಾರೆ. ಸ್ಟೈಲಿಶ್ ಸ್ಟಾರ್, ಐಕಾನ್ ಸ್ಟಾರ್ ಎಂದು ಅಭಿಮಾನಿಗಳು ಹಾಡಿ ಹೊಗಳುತ್ತಾರೆ. ಆದರೆ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಲುಕ್ಸ್ ಕಾರಣಕ್ಕೆ ಚಿರಂಜೀವಿ ಸೋದರಳಿಯ ಬಹಳ ಟ್ರೋಲ್ ಎದುರಿಸಿದ್ದರು.
'ಗಂಗೋತ್ರಿ' ಸಿನಿಮಾ ಮೂಲಕ ಅಲ್ಲು ಅರ್ಜುನ್ ಚಿತ್ರರಂಗ ಪ್ರವೇಶಿಸಿದ್ದರು. ಮೊದಲ ಚಿತ್ರದಲ್ಲೇ ಲವರ್ ಬಾಯ್ ಆಗಿ ಗಮನ ಸೆಳೆದಿದ್ದರು. ಬಳಿಕ 'ಆರ್ಯ' ಸಿನಿಮಾ ಮಾಡಿ ಚಿತ್ರರಂಗದಲ್ಲೇ ನೆಲೆವೂರಿದರು. ಮುಂದೆ ಒಂದೊಂದೇ ಹಿಟ್ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಹತ್ತಿರವಾದರು. ತಮ್ಮ ವಿಭಿನ್ನ ಸ್ಟೈಲ್, ಮ್ಯಾನರಿಸಂ ಹಾಗೂ ಡ್ಯಾನ್ಸ್ ಮೂಲಕ ಜಾದೂ ಮಾಡುತ್ತಾ ಬಂದರು. 'ಪುಷ್ಪ' ಸರಣಿ ಸಿನಿಮಾಗಳಲ್ಲಿ ನಟಿಸಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ.

'ಪುಷ್ಪ' ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಕೂಡ ಅಲ್ಲು ಅರ್ಜುನ್ ಪಾಲಾಗಿತ್ತು. ನಿತಿನ್ ನಟನೆಯ 'ಜಯಂ' ಸಿನಿಮಾ ಕೂಡ ತೆಲುಗಿನ ಬ್ಲಾಕ್ಬಸ್ಟರ್ ಸಿನಿಮಾ. ತೇಜಾ ನಿರ್ದೇಶನದ ಚಿತ್ರದಲ್ಲಿ ಸದಾ ನಾಯಕಿಯಾಗಿ ಮಿಂಚಿದ್ದರು. ಆರ್. ಪಿ ಪಟ್ನಾಯಕ್ ಸಂಗೀತದಲ್ಲಿ ಆಲ್ಬಮ್ ಹಿಟ್ ಆಗಿತ್ತು. ಅಂದಹಾಗೆ ಮೊದಲು ಈ ಚಿತ್ರಕ್ಕೆ ಅಲ್ಲು ಅರ್ಜುನ್ ಹೀರೊ ಆಗಿ ಆಯ್ಕೆ ಆಗಿದ್ರು ಎಂದು ಕಥೆಗಾರ ಚಿನ್ನಿಕೃಷ್ಣ ಹೇಳಿದ್ದಾರೆ.
'ಗಂಗೋತ್ರಿ' ಚಿತ್ರಕ್ಕಿಂತ ಒಂದು ವರ್ಷ ಮುಂದೆ 'ಜಯಂ' ಸಿನಿಮಾ ಬಂದು ಸಕ್ಸಸ್ ಕಂಡಿತ್ತು. ಅಲ್ಲು ಅರ್ಜುನ್ ಆ ಚಿತ್ರದಲ್ಲಿ ನಟಿಸುವ ಅವಕಾಶ ಕಳೆದುಕೊಂಡರು ಎನ್ನುವ ವಿಚಾರ ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅರೇ, 'ಜಯಂ' ಚಿತ್ರದಲ್ಲಿ ನಮ್ಮ ಹೀರೊ ನಟಿಸಿದ್ದರೆ ಇನ್ನು ಚೆನ್ನಾಗಿ ಇರ್ತಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಚಿನ್ನಿ ಕೃಷ್ಣ ಕಥೆ, ಚಿತ್ರಕಥೆ ಒದಗಿಸಿದ್ದಾರೆ. ಅಂದು ನಡೆದ ಘಟನೆಯನ್ನು ಅವರು ಮೆಲುಕು ಹಾಕಿದ್ದಾರೆ.
"ಅಲ್ಲು ಅರ್ಜುನ್ ಹೀರೊ ಆಗ್ತಿದ್ದಾರೆ ಎಂದು ಒಂದು ದಿನ ನಮಗೆ ಕರೆ ಮಾಡಿ ಹೇಳಿದ್ರು. ನಿರ್ಮಾಪಕ ಅಶ್ವಿನಿ ದತ್ ಆಫೀಸ್ನಲ್ಲಿ ಡಿನ್ನರ್ ಪಾರ್ಟಿ ಇತ್ತು. ಅಲ್ಲು ಅರವಿಂದ್ ಮಗನನ್ನು ನಿರ್ದೇಶಕ ತೇಜಾ ಚಿತ್ರರಂಗಕ್ಕೆ ಪರಿಚಯಿಸುತ್ತಾರೆ ಎಂದು ಚರ್ಚೆ ಆಯಿತು. ಆದರೆ ಕೆಲ ದಿನಗಳ ಬಳಿಕ ತೇಜಾ ನಿರ್ದೇಶನದಲ್ಲಿ ನಿತಿನ್ ಹೀರೊ ಆಗಿ ಸಿನಿಮಾ ಘೋಷಣೆ ಆಯಿತು. ಆ ಬದಲಾವಣೆ ಯಾಕೆ? ಎನ್ನುವುದು ಎಲ್ಲರಿಗೂ ಗೊತ್ತು" ಎಂದು ಚಿನ್ನಿಕೃಷ್ಣ ಹೇಳಿದ್ದಾರೆ.

ತಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಲ್ಲು ಅರ್ಜುನ್ಗೆ ಒಳ್ಳೆ ಕಥೆ ಮಾಡಬೇಕು ಎಂದು ನಿರ್ಧರಿಸಿ 'ಗಂಗೋತ್ರಿ' ಕಥೆ ಬರೆದಿದ್ದಾಗಿ ಚಿನ್ನಿ ಕೃಷ್ಣ ನೆನಪಿಸಿಕೊಂಡಿದ್ದಾರೆ. "ಮೆಗಾ ಫ್ಯಾಮಿಲಿಯಲ್ಲಿ ಅಲ್ಲು ಅರವಿಂದ್ ಅಂದ್ರೆ ದೊಡ್ಡ ಹೆಸ್ರು. ತಮ್ಮ ಮಗ ಚಿತ್ರರಂಗಕ್ಕೆ ಬರ್ತಾನೆ ಎಂದು ಘೋಷಣೆ ಬಳಿಕ ತೆಗೆದು ಹಾಕಿದ್ದು ಅವರಿಗೆ ಬಹಳ ಬೇಸರ ತಂದಿತ್ತು. ಆಗ ರಜನಿಕಾಂತ್ ಚಿತ್ರಕ್ಕೆ ಕಥೆ ಬರೆಯುವುದನ್ನು ನಿಲ್ಲಿಸಿ, ಅಲ್ಲು ಅರವಿಂದ್ಗೆ ಮಾತು ಕೊಟ್ಟು ಒಳ್ಳೆ ಕಥೆ ಮಾಡಿ ಕೊಟ್ಟೆ. ಆಗ ಬಂದ 'ಗಂಗೋತ್ರಿ' ಸಿನ್ಮಾ 175 ದಿನ ಪ್ರದರ್ಶನ ಕಂಡು ಗೆದ್ದಿತ್ತು" ಎಂದು ವಿವರಿಸಿದ್ದಾರೆ.
'ಗಂಗೋತ್ರಿ' ಸಿನಿಮಾ ಗೆದ್ದರೂ ಅಲ್ಲು ಅರ್ಜುನ್ ತಮ್ಮ ಲುಕ್ಸ್ ಕಾರಣಕ್ಕೆ ಬಹಳ ಟ್ರೋಲ್ ಎದುರಿಸಿದ್ದರು. ಆದರೆ ಅದನ್ನೆಲ್ಲಾ ಮೀರಿ ಸಕ್ಸಸ್ ಕಂಡರು. ಲುಕ್ಸ್ ಕಾರಣಕ್ಕೆ ಟೀಕಿಸಿದವರೇ ಮುಂದೆ ಸ್ಟೈಲಿಶ್ ಸ್ಟಾರ್ ಎಂದು ಒಪ್ಪಿಕೊಳ್ಳುವಂತೆ ಮಾಡಿದ್ದರು. ಕಠಿಣ ಪರಿಶ್ರಮದಿಂದ ಚಿರಂಜೀವಿ ಪ್ರಭಾವಳಿಯಿಂದ ಹೊರಬಂದು ಕಮಾಲ್ ಮಾಡಿದರು. ತಮ್ಮ ಅಭಿಮಾನಿ ಬಳಗ ಸೃಷ್ಟಿಸಿಕೊಂಡರು.


Click it and Unblock the Notifications











