ಮಾಲಿವುಡ್ ಕಾಮಕಾಂಡ; ಹೇಮಾ ಕಮಿಟಿ ವರದಿ ಬಗ್ಗೆ ಅನುಷ್ಕಾ ಶೆಟ್ಟಿ ಪ್ರತಿಕ್ರಿಯೆ
ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ಹಲವರ ನಿದ್ದೆ ಕೆಡಿಸಿದೆ. ಮೋಹನ್ ಲಾಲ್ ಸೇರಿದಂತೆ ಸ್ಟಾರ್ ನಟರು ಈ ಬಗ್ಗೆ ಮಾತನಾಡಲು ಹಿಂದೇಟು ಹಾಕುವಂತಾಗಿದೆ. ಚಿತ್ರರಂಗದಲ್ಲಿರುವ ಕರಾಳ ಮುಖ ಇದೀಗ ಬಯಲಾಗಿದೆ. ನಟಿಯರಿಗೆ ಲೈಂಗಿಕ ದೌರ್ಜನ್ಯ ನೀಡುವ ಬಗ್ಗೆ ಜಸ್ಟೀಸ್ ಹೇಮಾ ಕಮಿಟಿ ನೀಡಿರುವ ವರದಿಯನ್ನು ಕೇರಳ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಮಾಲಿವುಡ್ ಮಾತ್ರವಲ್ಲ ಅಕ್ಕ ಪಕ್ಕದ ಇಂಡಸ್ಟ್ರಿಗಳಲ್ಲಿ ಕೂಡ ಹೇಮಾ ಕಮಿಟಿ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮ ಚಿತ್ರರಂಗದಲ್ಲಿ ಕೂಡ ಇಂತಹ ಕಮಿಟಿ ರಚನೆ ಆಗಬೇಕು ಎಂದು ಕೆಲವರು ದನಿ ಎತ್ತಿದ್ದಾರೆ. ನಟಿ ಸಮಂತಾ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದೇ ವಿಚಾರವಾಗಿ ನಟಿ ಮಂಚು ಲಕ್ಷ್ಮಿ, ನಿರ್ದೇಶಕಿ ನಂದಿನಿ ರೆಡ್ಡಿ ಜೊತೆಗೆ ಇದೀಗ ಅನುಷ್ಕಾ ಶೆಟ್ಟಿ ಕೂಡ ಪೋಸ್ಟ್ ಮಾಡಿ ದನಿಗೂಡಿಸಿದ್ದಾರೆ.

ಚಿತ್ರರಂಗದಲ್ಲಿ ನಟಿಯರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಸಾಕಷ್ಟು ಬಾರಿ ಆರೋಪಗಳು ಕೇಳಿಬಂದಿದೆ. ಮೀಟು ಅಭಿಯಾನದ ಅಡಿಯಲ್ಲಿ ಹಲವರು ಈ ಬಗ್ಗೆ ಮಾತನಾಡಿದ್ದಾರೆ. ತಮಗಾದ ಕಹಿ ಅನುಭವಗಳನ್ನು ಕೆಲವರು ಬಹಿರಂಗವಾಗಿ ಹೇಳಿದ್ದಾರೆ. ಈ ಬಗ್ಗೆ ದೂರುಗಳು ದಾಖಲಾಗಿದೆ. ಆದರೂ ಕೆಲವರು ಆರೋಪಗಳನ್ನು ಒಪ್ಪಲು ಸಿದ್ಧರಿಲ್ಲ. ಇದೆಲ್ಲಾ ಪಬ್ಲಿಟಿಸಿ ಗಿಮಿಕ್, ತೇಜೋವಧೆ ಮಾಡುವ ಹುನ್ನಾರ ಎಂದೇ ವಾದಿಸುತ್ತಾರೆ. ಆದರೆ ಕೇರಳ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿತ್ತು.
ಜಸ್ಟೀಸ್ ಹೇಮಾ ನೇತೃತ್ವದಲ್ಲಿ ಕಮಿಟಿ ರಚಿಸಿ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಕೂಲಂಕುಷ ವರದಿ ಕೇಳಿತ್ತು. ಈಗಾಗಲೇ ಕಮಿಟಿ 235 ಪುಟಗಳ ವರದಿ ನೀಡಿ ಚಿತ್ರರಂಗದ ಕರಾಳ ಮುಖ ತೆರೆದಿಟ್ಟಿದ್ದಾರೆ. ಕೆಲ ಕಾಮುಕರು ಚಿತ್ರರಂಗದಲ್ಲಿದ್ದು ಅವರಿಂದ ಹಲವರು ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಸಾಕಷ್ಟು ನಟ-ನಟಿಯರು ಈ ಬಗ್ಗೆ ಮಾತನಾಡಿದ್ದಾರೆ. ವರದಿ ಬಳಿಕ ಕೆಲವರ ಮೇಲೆ ಆರೋಪ ಕೇಳಿಬಂದಿದೆ.

ಇತ್ತೀಚೆಗೆ ಸಮಂತಾ ಪೋಸ್ಟ್ ಮಾಡಿ "ತೆಲುಗು ಚಿತ್ರರಂಗದ ಮಹಿಳೆಯರು, ಹೇಮಾ ಸಮಿತಿಯ ವರದಿಯನ್ನು ಸ್ವಾಗತಿಸುತ್ತೇವೆ. ಕೇರಳದ ಡಬ್ಲ್ಯುಸಿಸಿಯ ನಿರಂತರ ಪ್ರಯತ್ನಗಳನ್ನು ಶ್ಲಾಘಿಸುತ್ತೇವೆ, ಇದರಿಂದಲೇ ಈ ವರದಿ ನೀಡಲು ಸಾಧ್ಯವಾಗಿದೆ. ಡಬ್ಲ್ಯುಸಿಸಿಯನ್ನು ಸ್ಫೂರ್ತಿಯಾಗಿ ತೆಗೆದುಕೊಂಡು 2019 ರಲ್ಲಿ ತೆಲುಗು ಚಿತ್ರೋದ್ಯಮದಲ್ಲಿ 'ದಿ ವಾಯ್ಸ್ ಆಫ್ ವುಮೆನ್' ರೂಪುಗೊಂಡಿತ್ತು" ಎಂದು ಸಮಂತಾ ನೆನಪಿಸಿದ್ದಾತೆ.
ಟಾಲಿವುಡ್ನಲ್ಲಿ ಮಹಿಳೆಯರ ಸಮಸ್ಯೆಗಳ ವಿರುದ್ಧ ಹೋರಾಡಲು ರಚಿಸಲಾದ ಈ ಉಪ ಸಮಿತಿಯ ವರದಿಯನ್ನು ಪ್ರಕಟಿಸುವಂತೆ ಸಂಮತಾ ತೆಲಂಗಾಣ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದೇ ಪೋಸ್ಟ್ ಅನ್ನು ಇದೀಗ ನಟಿ ಅನುಷ್ಕಾ ಶೆಟ್ಟಿ ಕೂಡ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಅದಕ್ಕೆ ದನಿಗೂಡಿಸಿದ್ದಾರೆ.
ನಟ ಸೂಪರ್ ಸ್ಟಾರ್ ರಜನಿಕಾಂತ್ ಮಾತ್ರ ಹೇಮಾ ಕಮಿಟಿ ವರದಿ ಬಗ್ಗೆ ಮಾತನಾಡದೇ ನುಣುಚಿಕೊಂಡಿದ್ದಾರೆ. ಮಾಲಿವುಡ್ ಕಾಮಕಾಂಡದ ಬಗ್ಗೆ ದೇಶಾದ್ಯಂತ ಚರ್ಚೆ ಆಗುತ್ತಿದೆ. ಮಹಿಳೆಯರಿಗೆ ಕೆಲಸ ಮಾಡುವ ಜಾಗದಲ್ಲಿ ನೀಡುವ ಕಿರುಕುಳದ ಬಗ್ಗೆ ಸಾಕಷ್ಟು ಜನ ಮಾತನಾಡುತ್ತಿದ್ದಾರೆ. ಆದರೂ ರಜನಿಕಾಂತ್ ಆ ಬಗ್ಗೆ ಗೊತ್ತೇಯಿಲ್ಲ ಎಂದಿದ್ದಾರೆ. ಆ ವಿಡಿಯೋ ವೈರಲ್ ಆಗುತ್ತಿದೆ. ಕೆಲವರು ಈ ಬಗ್ಗೆ ರಜನಿಕಾಂತ್ ಅವರನ್ನು ಟೀಕಿಸುತ್ತಿದ್ದಾರೆ.


Click it and Unblock the Notifications











