ತೆಲುಗು ನಟಿ ಅನಸೂಯ ಭಾರಧ್ವಜ್ಗೆ ಕಿರುಕುಳ ಪ್ರಕರಣ; ಇಬ್ಬರ ಬಂಧನ
ಟಾಲಿವುಡ್ ನಟಿ, ನಿರೂಪಕಿ ಅನಸೂಯ ಭಾರಧ್ವಜ್ ಸಾಕಷ್ಟು ವಿಚಾರಗಳಿಂದ ಪದೇ ಪದೆ ಸುದ್ದಿ ಆಗುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಆಕೆ ಟ್ರೋಲ್ ಮಾಡುವವರಿಗೆ ತಿರುಗೇಟು ಕೊಡುತ್ತಾರೆ. ಕೆಲವರು ಪದೇ ಪದೆ 'ಆಂಟಿ' ಕರೆದು ಆಕೆಯನ್ನು ಕೆಣಕುವ ಪ್ರಯತ್ನ ಮಾಡುತ್ತಾರೆ. ಇತ್ತೀಚೆಗೆ ಬಹಿರಂಗ ವೇದಿಕೆಯಲ್ಲೇ ಆಂಟಿ.. ಆಂಟಿ ಎಂದು ಕೆಲವರು ಕೂಗಿದ್ದು ಭಾರೀ ಸುದ್ದಿ ಆಗಿತ್ತು.
ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿ ಕೆಲವರು ಅನಸೂಯಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಅಂತಹ ಇಬ್ಬರು ಕಿಡಿಗೇಡಿಗಳನ್ನು ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಮ್ಮ ಬಗ್ಗೆ ಅಶ್ಲೀಲ ಪೋಸ್ಟ್, ಕಾಮೆಂಟ್ ಮಾಡುತ್ತಿದ್ದಾರೆ. ಅಸಭ್ಯಕರವಾಗಿ ಕಂಟೆಂಟ್ ಕ್ರಿಯೇಟ್ ಮಾಡಿ ವೈರಲ್ ಮಾಡುತ್ತಿದ್ದಾರೆ ಎಂದು ಕಳೆದ ಡಿಸೆಂಬರ್ನಲ್ಲಿ ಅನಸೂಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆಕೆಯ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು.

ತಮ್ಮ ಬಗ್ಗೆ ಎಐ ಬಳಸಿ ಮಾರ್ಪಿಂಗ್ ಮಾಡಿದ ಕಂಟೆಂಟ್ಗಳು ಗೌರವ, ಭದ್ರತೆಗೆ ಧಕ್ಕೆ ತರುವಂತಿದೆ ಎಂದು ಅನಸೂಯ ದೂರಿನಲ್ಲಿ ತಿಳಿಸಿದ್ದರು. ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಶ್ಲೀಲ ಪೋಸ್ಟ್ ಮಾಡಿದ 42 ಜನರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು. ಇದೀಗ ಇಬ್ಬರೂ ಪ್ರಮುಖ ಆರೋಪಿಗಳನ್ನು ಬಂಧಿಸಿ ರಿಮ್ಯಾಂಡ್ ಹೋಮ್ಗೆ ಕಳುಹಿಸಿದ್ದಾರೆ. ಕಡಪ ಜಿಲ್ಲೆಯ ಜನಾರ್ದನ್ ಎಂಬ ವ್ಯಕ್ತಿ ಅನಸೂಯಾ ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಪೋಸ್ಟ್ ಮಾಡಿದ್ದು ಕಂಡುಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ವೀವ್ಸ್, ಲೈಕ್ಸ್ ಬೇಕು ಹಾಗೂ ಪೇಜ್ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳು ಹೀಗೆ ಮಾಡಿರುವುದಾಗಿ ಜನಾರ್ದನ್ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ.
ಸಿಕಂದರಾಬಾದ್ ವೆಸ್ಟ್ ಮಾರೆದುಪಲ್ಲಿಯ ಅರುಣ್ ಕುಮಾರ್ ಎಂಬಾತನನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೃತ್ತಿಯಲ್ಲಿ ಈತ ಆಟೋ ಡ್ರೈವರ್ ಎನ್ನುವುದು ಗೊತ್ತಾಗಿದೆ. ನಟಿ ಅನಸೂಯಾಗೆ ಸಂಬಂಧಿಸಿದ ಇನ್ಸ್ಟಾಗ್ರಾಮ್ ರೀಲ್ಸ್ ನೋಡಿ ಕಾಮೆಂಟ್ ಬಾಕ್ಸ್ನಲ್ಲಿ ಈತ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. ಪ್ರಕರಣದಲ್ಲಿ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಮತ್ತಷ್ಟು ಜನರನ್ನು ಬಂಧಿಸುವ ಸಾಧ್ಯತೆ ದಟ್ಟವಾಗಿದೆ.
ತೆಲುಗಿನ 'ಜಬರ್ದಸ್ತ್' ಕಿರುತೆರೆ ಕಾರ್ಯಕ್ರಮದ ನಿರೂಪಕಿಯಾಗಿ ಅನಸೂಯ ಭಾರಧ್ವಜ್ ಮನೆ ಮಾತನಾಡಿದ್ದರು. ತಮ್ಮ ಗ್ಲಾಮರಸ್ ಫೋಟೊಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ನಿಧಾನವಾಗಿ ಒಂದಷ್ಟು ಸಿನಿಮಾ ಅವಕಾಶಗಳನ್ನು ಪಡೆದಿದ್ದರು. 'ರಂಗಸ್ಥಳಂ' ಚಿತ್ರದಲ್ಲಿ ರಂಗಮ್ಮತ್ತ ಪಾತ್ರದಲ್ಲಿ ನಟಿಸಿ ಗೆದ್ದಿದ್ದರು. ಬಳಿಕ ಒಂದಷ್ಟು ಅವಕಾಶಗಳು ಬರಲು ಶುರುವಾಯಿತು. ಇದೇ ಕಾರಣಕ್ಕೆ ಕಿರುತೆರೆಯಿಂದ ಬ್ರೇಕ್ ಪಡೆಯುವುದಾಗಿ ಹೇಳಿದ್ದರು. ಆದರೆ ಹೆಚ್ಚು ಸಿನಿಮಾ ಅವಕಾಶಗಳು ಸಿಗದೇ ಇದ್ದಾಗ ಮತ್ತೆ ಕಿರುತೆರೆಗೆ ಮರಳಿದ್ದರು. 'ಪುಷ್ಪ' ಸರಣಿ ಚಿತ್ರಗಳಲ್ಲಿ ದ್ರಾಕ್ಷಾಯಣಿ ಎಂಬ ನೆಗೆಟಿವ್ ರೋಲ್ನಲ್ಲಿ ಹುಬ್ಬೇರಿಸಿದ್ದರು.
ಎರಡು ಮಕ್ಕಳ ತಾಯಿಯಾಗಿರುವ ಅನಸೂಯ ಬಿಂದಾಸ್ ಆಟಿಟ್ಯೂಡ್ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ತಮ್ಮ ಬಗ್ಗೆ ಕಾಮೆಂಟ್ ಮಾಡುವವರಿಗೆ ಸರಿಯಾಗಿ ತಿರುಗೇಟು ಕೊಡುತ್ತಾರೆ. ಕೆಲ ದಿನಗಳ ಹಿಂದೆ ವಿಜಯ್ ದೇವರಕೊಂಡ ಅಭಿಮಾನಿಗಳು ಹಾಗೂ ಅನಸೂಯ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿತ್ತು. ಇತ್ತೀಚೆಗೆ ನಟಿಯರ ವಸ್ತ್ರಧಾರಣೆ ಬಗ್ಗೆ ತೆಲುಗು ನಟ ಶಿವಾಜಿ ಹೇಳಿಕೆ ಚರ್ಚೆ ಹುಟ್ಟಾಕ್ಕಿತ್ತು. ಶಿವಾಜಿಗೆ ಅನಸೂಯ ಖಡಕ್ ಕೌಂಟರ್ ಕೊಟ್ಟಿದ್ದರು. ಹೆಣ್ಣುಮಕ್ಕಳ ಬಟ್ಟೆ ವಿಚಾರ ನಿಮಗ್ಯಾಕೆ ಎಂದು ಪ್ರಶ್ನಿಸಿದ್ದರು.


Click it and Unblock the Notifications











