ಆಂಧ್ರ ವಿಧಾನಸಭೆ ಚುನಾವಣೆ; ಪೀಠಾಪುರದಲ್ಲಿ ಪವನ್ ಕಲ್ಯಾಣ್ ಗೆಲುವು
ಆಂಧ್ರದಲ್ಲಿ ಲೋಕಸಭೆ ಚುನಾವಣೆ ಜೊತೆ ವಿಧಾನಸಭೆ ಚುನಾವಣೆ ಕೂಡ ನಡೆದಿದೆ. ಜನಸೇನಾ ಪಕ್ಷದಿಂದ ಖ್ಯಾತ ನಟ ಪವನ್ ಕಲ್ಯಾಣ್ ಸ್ಪರ್ಧಿಸಿದ್ದಾರೆ. ಪವನ್ ಕಲ್ಯಾಣ್ ಮೊದಲ ಬಾರಿಗೆ ಶಾಸಕರಾಗಿ ಗೆಲುವು ಸಾಧಿಸಿದ್ದಾರೆ. ವೈಎಸ್ಆರ್ಪಿ ಕಾಂಗ್ರೆಸ್ ಪಕ್ಷದಿಂದ ವಂಗಾ ಗೀತಾ ಪೈಪೋಟಿ ನೀಡಿದ್ದರು.
ಜನಸೇನಾ ಪಕ್ಷ ಕಟ್ಟಿ ಕಳೆದ ಚುನಾವಣೆಯಲ್ಲಿ ಪವನ್ ಸೋತಿದ್ದರು. ತಮ್ಮ ಕ್ಷೇತ್ರದಲ್ಲೇ ಪವರ್ ಸ್ಟಾರ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಬಾರಿ ಗೆದ್ದೇ ಗೆಲ್ಲಬೇಕು ಎಂದು ಬಿಜೆಪಿ, ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದರು. ಪವನ್ ಎದುರು ವಂಗಾ ಗೀತಾ ಪರ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಸಹ ಪ್ರಚಾರ ನಡೆಸಿದ್ದರು. ಚುಣಾವಣೋತ್ತರ ಸಮೀಕ್ಷೆಗಳಲ್ಲಿ ಕೂಡ ಪವನ್ ಕಲ್ಯಾಣ್ ಗೆಲುವು ನಿಶ್ಚಿತ ಎನ್ನಲಾಗಿತ್ತು. ಅಂತಿಮವಾಗಿ ಪವನ್ ಒಟ್ಟು 134394 ಮತಗಳನ್ನು ಪಡೆದು 70279 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

ಮತ ಎಣಿಕೆ ಮುಕ್ತಾಯದ ವೇಳೆಗೆ ಪವರ್ ಸ್ಟಾರ್ 70 ಸಾವಿರಕ್ಕೂ ಹೆಚ್ಚು ಬಹುಮತದೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಆ ಮೂಲಕ ಇಲ್ಲಿ ಪವನ್ ಗೆಲುವು ನಿಶ್ಚಿತ. ಇನ್ನು ಮೈತ್ರಿ ಕೂಡ ಇಡೀ ರಾಜ್ಯವನ್ನು ಕ್ಲೀನ್ ಸ್ವೀಪ್ ಮಾಡಿದೆ. ಕಳೆದ ಚುನಾವಣೆಯಲ್ಲಿ 151 ಸ್ಥಾನ ಗೆದ್ದಿದ್ದ ವೈಸಿಪಿ ಈ ಬಾರಿ 15 ಸ್ಥಾನಕ್ಕೆ ಸೀಮಿತವಾಗುವ ಸಾಧ್ಯತೆಯಿದೆ. ಪವರ್ ಕಲ್ಯಾಣ್ ಗೆಲುವಿನ ಜೊತೆಗೆ ಸುಮಾರು 20 ಕ್ಷೇತ್ರ ಗೆಲುವು ಖಚಿತಪಡಿಸಿಕೊಂಡಿರುವ ಜನಸೇನಾಗೆ ಎಲ್ಲೆಡೆಯಿಂದ ಶುಭಾಶಯ ಹರಿದು ಬರುತ್ತಿವೆ. ಈ ಗೆಲುವಿನಿಂದ ಮೆಗಾ ಫ್ಯಾಮಿಲಿ ಖುಷಿಯಾಗಿದೆ.
ಅಣ್ಣ ಚಿರಂಜೀವಿ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದ ಪವನ್ ಕಲ್ಯಾಣ್ ಸಿನಿರಸಿಕರ ಮನಗೆದ್ದರು. ಚಿರು ಪ್ರಭಾವಳಿಯಿಂದ ಹೊರಬಂದು ತಮ್ಮದೇ ವಿಭಿನ್ನ ನಟನೆ, ಸ್ಟೈಲ್, ಮ್ಯಾನರಿಸಂನಿಂದ ಅಭಿಮಾನಿಗಳನ್ನು ಸಂಪಾದಿಸಿದರು. ಹಿಂದೆ ಅಣ್ಣ ಪ್ರಜಾರಾಜ್ಯಂ ಪಕ್ಷ ಸ್ಥಾಪಿಸಿದಾಗ ಪವನ್ ಕಲ್ಯಾಣ್ ಬೆಂಬಲವಾಗಿ ನಿಂತಿದ್ದರು. ಆದರೆ ಆ ಪಕ್ಷ ಅಷ್ಟಾಗಿ ಸದ್ದು ಮಾಡಲಿಲ್ಲ.
ಚಿರಂಜೀವಿ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದ್ದ ಬಗ್ಗೆ ಪವನ್ ಬೇಸರ ವ್ಯಕ್ತಪಡಿಸಿದ್ದರು. ಬಳಿಕ 2014ರಲ್ಲಿ ಜನಸೇನಾ ಪಕ್ಷವನ್ನು ಪವರ್ ಸ್ಟಾರ್ ಸ್ಥಾಪಿಸಿದರು. ಆದರೆ 2015ರ ಚುನಾವಣೆಗೆ ಸ್ಪರ್ಧಿಸಲಿಲ್ಲ. 2019ರಲ್ಲಿ ಜನಸೇನಾ ಪಕ್ಷ ಸ್ಪರ್ಧಿಸಿ ಹೀನಾಯವಾಗಿ ಸೋತಿತ್ತು. ಆದರೂ ಪಟ್ಟು ಬಿಡದೇ ಪವನ್ ಕಲ್ಯಾಣ್ ಪಕ್ಷ ಸಂಘಟನೆ ಮುಂದುವರೆಸಿದರು. ಏಕಾಂಗಿಯಾಗಿ ಗೆಲ್ಲುವುದು ಕಷ್ಟ ಎಂದಾಗ ಮೈತ್ರಿಗೆ ಮುಂದಾದರು.

ಪವನ್ ಕಲ್ಯಾಣ್ ಗೆಲುವು ಅಭಿಮಾನಿಗಳಲ್ಲಿ ಸಂತಸ ತಂದಿದೆ. ಪವರ್ ಸ್ಟಾರ್ ಈ ಹಿಂದೆ ವೈಸಿಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದ ವೀಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಸಿನಿಮಾ ತಾರೆಯರಿಗೆ ಅಭಿಮಾನಿಗಳ ಶಿಳ್ಳೆ ಚಪ್ಪಾಳೆ ಮತಗಳಾಗಿ ಪರಿವರ್ತನೆ ಆಗುವುದು ಕಷ್ಟ ಎನ್ನುವ ಮಾತಿದೆ. ಆದರೆ ಸಕ್ರಿಯ ರಾಜಕಾರಣಕ್ಕಿಳಿದು ಜನರ ಪ್ರೀತಿ ಗಳಿಸಿದರೆ ಗೆಲುವು ಸಿಗುತ್ತದೆ ಎನ್ನುವುದು ಸಾಬೀತಾಗಿದೆ.
ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಮತ್ತೊಮ್ಮೆ ಆಂಧ್ರದ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಪವನ್ ಕಲ್ಯಾಣ್ ಡಿಸಿಎಂ ಆಗುವುದು ಖಚಿತ ಎನ್ನಲಾಗುತ್ತಿದೆ. ಇನ್ನು ಪವರ್ ಸ್ಟಾರ್ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶಾಸಕರಾಗಿ ಗೆಲುವು ಸಾಧಿಸಿರುವುದರಿಂದ ಆ ಸಿನಿಮಾ ಕಥೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಮುಂದೆ ಸಿನಿಮಾಗಳಲ್ಲಿ ನಟಿಸುತ್ತಾರಾ? ಇಲ್ವಾ? ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











