ಕುಟುಂಬ ಗೌರವ ಅಂದ್ರೆ ಏನು ತಾರಕ್ ನೋಡಿ ಕಲಿ; ಅಲ್ಲು ಅರ್ಜುನ್ ಟ್ರೋಲ್!
ಆಂಧ್ರ ವಿಧಾನಸಭೆ ಚುನವಾಣೆ ಈ ಬಾರಿ ಸಾಕಷ್ಟು ವಿಶೇಷತೆಗಳಿಗೆ ಸಾಕ್ಷಿ ಆಯಿತು. ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಕೆಳಗಿಸಿಸಿ ಟಿಡಿಪಿ- ಜನಸೇನಾ ಮೈತ್ರಿ ಸರ್ಕಾರ ಶೀಘ್ರದಲ್ಲೇ ರಚನೆ ಆಗಲಿದೆ. ಪವನ್ ಕಲ್ಯಾಣ್ ಭರ್ಜರಿ ಗೆಲುವು ಸಾಧಿಸಿ ಸುದ್ದಿಯಲ್ಲಿದ್ದಾರೆ. ತಮ್ಮ ಪಕ್ಷವನ್ನು ದೊಡ್ಡಮಟ್ಟದಲ್ಲಿ ಗೆಲ್ಲಿಸಿ ಗಮನ ಸೆಳೆದಿದ್ದಾರೆ.
10 ವರ್ಷಗಳ ಹಿಂದೆಯೇ ಪವನ್ ಕಲ್ಯಾಣ್ ಜನಸೇನಾ ಪಕ್ಷ ಸ್ಥಾಪಿಸಿ ರಾಜಕೀಯರಂಗಕ್ಕೆ ಧುಮುಕಿದರು. 2015 ಚುನಾವಣೆಯಿಂದ ದೂರ ಉಳಿದರು. 2019ರಲ್ಲಿ ಸ್ಪರ್ಧಿಸಿ ಗೆಲ್ಲಲು ಭಾರೀ ಕರರತ್ತು ನಡೆಸಿದ್ದರು. ಆದರೆ ಜಗನ್ ಫ್ಯಾನ್ ಗಾಳಿಗೆ ಪವನ್ ಗ್ಲಾಸ್ ನುಚ್ಚು ನೂರಾಗಿತ್ತು. ಖುದ್ದು ಪವನ್ ಕಲ್ಯಾಣ್ ತಮ್ಮದೇ ಕ್ಷೇತ್ರದಲ್ಲಿ ಸೋತು ಸುಣ್ಣವಾದರು. ಆದರೆ ಪಟ್ಟು ಬಿಡಲಿಲ್ಲ. ಕಳೆದ 5 ವರ್ಷಗಳಿಂದ ಪಕ್ಷ ಸಂಘಟಿಸಿ ಕೊನೆ ದಿನಗಳಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡು ಗೆದ್ದಿದ್ದಾರೆ.

ಆಂಧ್ರದಲ್ಲಿ ಟಿಡಿಪಿ ನೆಲೆ ಕಳೆದುಕೊಳ್ಳುತ್ತದೆ, ಮಾಜಿ ಸಿರಂ ಚಂದ್ರಬಾಬು ನಾಯ್ಡು ರಾಜಕೀಯ ಜೀವನ ಮುಗೀತು ಎನ್ನುವಂತಹ ಚರ್ಚೆ ಶುರುವಾಗಿತ್ತು. ಆದರೆ ಪವನ್ ಕಲ್ಯಾಣ್, ಬಿಜೆಪಿ ಜೊತೆಗೆ ಟಿಡಿಪಿ ಜೊತೆಯಾಗಿಸಿಕೊಂಡು ಜಗನ್ ವಿರುದ್ಧ ನಿಂತರು. ತಮ್ಮ ರೋಷಾವೇಶದ ಭಾಷಣಗಳಿಂದ ಸದ್ದು ಮಾಡಿದರು. ಅಂತಿಮವಾಗಿ ಭರ್ಜರಿ ಗೆಲುವು ಸಾಧಿಸಿದರು. 21 ವಿಧಾನಸಭೆ ಹಾಗೂ 2 ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿಗೆ ಗೆಲ್ಲಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿ ಜೊತೆಗೂ ಇದೀಗ ಪವನ್ ಕಲ್ಯಾಣ್ ಒಳ್ಳೆ ಬಾಂಧವ್ಯ ಗಳಿಸಿದ್ದಾರೆ. ಇದೆಲ್ಲದರ ನಡುವೆ ಅಲ್ಲು ಅರ್ಜುನ್ ಬಹಳ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೆ ಕಾರಣ ಬನ್ನಿ ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದು. ಹೌದು ತಮ್ಮದೇ ಫ್ಯಾಮಿಲಿಯ ಪವನ್ ಕಲ್ಯಾಣ್ ಜೊತೆ ನಿಲ್ಲದೇ ಎದುರಾಳಿ ಪಕ್ಷದ ಅಭ್ಯರ್ಥಿಗೆ ಅಲ್ಲು ಅರ್ಜುನ್ ಬೆಂಬಲ ಸೂಚಿಸಿದ್ದರು. ನಂದ್ಯಾಲ ಕ್ಷೇತ್ರದ ಶಿಲ್ಪಾ ರವಿಚಂದ್ರ ರೆಡ್ಡಿ ಪರ ಪ್ರಚಾರ ನಡೆಸಿದ್ದರು.
ಪವನ್ ಪರ ಅಲ್ಲು ಅರ್ಜುನ್ ಪ್ರಚಾರ ನಡೆಸದೇ ಇದ್ದರೂ ಪರವಾಗಿಲ್ಲ, ಆದರೆ ವಿರೋಧಿ ಪಕ್ಷದ ಬೆನ್ನಿಗೆ ನಿಂತಿದ್ದು ಮೆಗಾ ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಚುನಾವಣಾ ಫಲಿತಾಶಂದ ಬಳಿಕ ಮತ್ತಷ್ಟು ಟ್ರೋಲ್ ಆಗುತ್ತಿದ್ದಾರೆ. ಕಾರಣ ಅಲ್ಲು ಅರ್ಜುನ್ ಬೆಂಬಲವಾಗಿ ಪ್ರಚಾರ ನಡೆಸಿದ ಅಭ್ಯರ್ಥಿ ಶಿಲ್ಪಾ ರವಿಚಂದ್ರ ರೆಡ್ಡಿ ಚುನವಾಣೆಯಲ್ಲಿ ಸೋಲುಂಡಿದ್ದಾರೆ. ಇನ್ನು ಪವರ್ ಸ್ಟಾರ್ ಗೆಲುವಿನ ಸಂಭ್ರಮಾಚರಣೆಯಲ್ಲಿ ಕೂಡ ಅಲ್ಲು ಕುಟುಂಬದ ಯಾರೊಬ್ಬರು ಭಾಗಿ ಆಗಲಿಲ್ಲ.

ಮೆಗಾ ಹಾಗೂ ಅಲ್ಲು ಕುಟುಂಬಗಳ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಪದೇ ಪದೆ ಕೇಳಿಬರುತ್ತದೆ. ಅದರಲ್ಲೂ ಅಲ್ಲು ಅರ್ಜುನ್ ಮೆಗಾ ಫ್ಯಾಮಿಲಿಯಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಪವನ್ ಅಭಿಮಾನಿಗಳಂತೂ ಬನ್ನಿ ಮೇಲೆ ಗರಂ ಆಗಿದ್ದಾರೆ.
ಇತ್ತ ಟಿಡಿಪಿ ವಿಚಾರದಲ್ಲಿ ಜ್ಯೂ. ಎನ್ಟಿಆರ್ ಕೂಡ ಅಂತರ ಕಾಯ್ದುಕೊಂಡಿದ್ದಾರೆ. ಒಂದ್ಕಾಲದಲ್ಲಿ ತಾರಕ್ ತೆಲುಗು ದೇಶಂ ಸ್ಟಾರ್ ಪ್ರಚಾರಕರಾಗಿದ್ದವರು. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯದಿಂದ ದೂರವೇ ಉಳಿದಿದ್ದಾರೆ. ನಂದಮೂರಿ ಬಾಲಕೃಷ್ಣ ಜೊತೆಗೂ ಕೆಲ ಭಿನ್ನಾಭಿಪ್ರಾಯಗಳಿವೆ. ಆದರೆ ಚುನವಾಣೆಯಲ್ಲಿ ಯಾವುದೇ ಪಕ್ಷದ ಪರ ಪ್ರಚಾರ ಮಾಡದೇ ಸುಮ್ಮನಿದ್ದುಬಿಟ್ಟರು. ಚುನಾವಣೆಯಲ್ಲಿ ಟಿಡಿಪಿ, ಜನಸೇನಾ, ಬಿಜೆಪಿ ಮೈತ್ರಿಕೂಟ ಗೆಲ್ಲುತ್ತಿದ್ದಂತೆ ಟ್ವೀಟ್ ಮಾಡಿ ಅಭಿನಂದಿಸಿದರು.
ಚಂದ್ರಬಾಬು ನಾಯ್ಡು, ಬಾಲಯ್ಯ ಜೊತೆ ಏನೇ ಭಿನ್ನಾಭಿಪ್ರಾಯ ಇದ್ದರೂ ಅದನ್ನೂ ಪ್ರದರ್ಶಿಸಲಿಲ್ಲ. ಜೊತೆಗೆ ಫಲಿತಾಂಶದ ಬಳಿಕ ಎಲ್ಲರನ್ನು ಅಭಿನಂದಿಸಿದರು. ಅಲ್ಲು ಅರ್ಜುನ್ ಕೂಡ ಪವನ್ ಕಲ್ಯಾಣ್ ಗೆಲುವಿಗೆ ಟ್ವಿಟ್ ಮಾಡಿ ಅಭಿನಂದಿಸಿದ್ದಾರೆ. ಆದರೆ ಮೆಗಾ ಫ್ಯಾನ್ಸ್ ಮಾತ್ರ ಇದನ್ನು ಒಪ್ಪಲು ಸಿದ್ಧರಿಲ್ಲ. ಕುಟುಂಬದ ಗೌರವ ಕಾಪಾಡುವುದು ಹೇಗೆ ಎಂದು ತಾರಕ್ನ ನೋಡಿ ಕಲಿ ಅಲ್ಲು ಅರ್ಜುನ್ ಎಂದು ಟ್ರೋಲ್ ಮಾಡುತ್ತಿದ್ದಾರೆ.


Click it and Unblock the Notifications











