Just Tickets: ಜಗನ್ ಹೊಡೆತಕ್ಕೆ ಬಾಗಿಲು ಹಾಕಲಿದೆ 'ಬುಕ್ ಮೈ ಶೋ'
ಆಂಧ್ರ ಪ್ರದೇಶದಲ್ಲಿ ಸರ್ಕಾರ ಹಾಗೂ ಚಿತ್ರರಂಗದ ನಡುವೆ ಶುರುವಾಗಿದ್ದ ತಿಕ್ಕಾಟ ಚಿರಂಜೀವಿ ಮಧ್ಯ ಪ್ರವೇಶದಿಂದ ತುಸು ತಣ್ಣಗಾಗಿದೆ. ಆದರೆ ಟಿಕೆಟ್ ದರಗಳನ್ನು ತಗ್ಗಿಸುವ ನಿರ್ಣಯದಿಂದ ಮಾತ್ರ ಸಿಎಂ ಜಗನ್ ಹಿಂದೆ ಸರಿದಿಲ್ಲ.
ಆಂಧ್ರದಲ್ಲಿನ ಎಲ್ಲ ಚಿತ್ರಮಂದಿರಗಳ ಟಿಕೆಟ್ ದರವನ್ನು ಧಾರುಣವಾಗಿ ತಗ್ಗಿಸಿದ್ದ ಜಗನ್ ಚಿತ್ರರಂಗದ ಒಕ್ಕೂರಲ ವಿರೋಧ ಕಟ್ಟಿಕೊಂಡಿದ್ದರು. ಜಗನ್ ನಿರ್ಣಯಕ್ಕೆ ಬೇಸತ್ತು ಹಲವು ಚಿತ್ರಮಂದಿರಗಳು ಬಾಗಿಲು ಮುಚ್ಚಿದವು.
ಚಿತ್ರರಂಗದ ಟಿಕೆಟ್ ಮಾರಾಟವನ್ನು ಸರ್ಕಾರವೇ ಮಾರಾಟ ಮಾಡಲಿದೆ. ಏಕಗವಾಕ್ಷಿ ಮಾದರಿಯಲ್ಲಿ ಟಿಕೆಟ್ ಮಾರಾಟ ಮಾಡುತ್ತೇವೆ ಎಂದು ಸಹ ಜಗನ್ ಸರ್ಕಾರ ಘೋಷಿಸಿತ್ತು. ಇದೀಗ ಅದನ್ನು ಜಾರಿಗೆ ತರುವಲ್ಲಿ ದೊಡ್ಡ ಹೆಜ್ಜೆಯೊಂದನ್ನು ಸರ್ಕಾರ ಇಟ್ಟಿದೆ. ಎಲ್ಲ ಚಿತ್ರಮಂದಿರಗಳ ಟಿಕೆಟ್ ಅನ್ನು ಸರ್ಕಾರದ ಪರವಾಗಿ ಮಾರಾಟ ಮಾಡಲು ಆನ್ಲೈನ್ ಬುಕಿಂಗ್ ವೇದಿಕೆಗೆ ಟೆಂಡರ್ ಅನ್ನು ಸರ್ಕಾರ ಕರೆದಿತ್ತು. ಇದೀಗ ಟೆಂಡರ್ ಬಹುತೇಕ ಅಂತಿಮವಾಗಿದೆ.

ಟೆಂಡರ್ ಗೆಲ್ಲಲು ವಿಫಲವಾದ ಬುಕ್ ಮೈ ಶೋ
ಸರ್ಕಾರದ ವತಿಯಿಂದ ಎಲ್ಲ ಚಿತ್ರಮಂದಿರಗಳ ಟಿಕೆಟ್ ಅನ್ನು ಕಡಿಮೆ ದರದಲ್ಲಿ ಅಥವಾ ಸರ್ಕಾರ ನಿಶ್ಚಯಿಸಿದ ದರದಲ್ಲಿ ಮಾರಾಟ ಮಾಡಲು ಸರ್ಕಾರವು ಟೆಂಡರ್ ಕರೆದಿತ್ತು. ಟೆಂಡರ್ನಲ್ಲಿ ಬುಕ್ ಮೈ ಶೋ ಸೇರಿದಂತೆ ಹಲವು ಸಂಸ್ಥೆಗಳು ಭಾಗವಹಿಸಿದ್ದವು. ಕೊನೆಗೆ ಈ ಟೆಂಡರ್ ಪ್ರಕ್ರಿಯೆಯಲ್ಲಿ 'ಜಸ್ಟ್ ಟಿಕೆಟ್ಸ್' ಹೆಸರಿನ ಸಂಸ್ಥೆಯೊಂದು ಎಲ್ 1 ಆಗಿ ಆಯ್ಕೆ ಆಗಿದೆ. ಸರ್ಕಾರದ ಪರವಾಗಿ ಟಿಕೆಟ್ ಸೇಲ್ ಮಾಡುವ ಹಕ್ಕು ಇದೇ ಸಂಸ್ಥೆಗೆ ಸಿಗುವ ಸಾಧ್ಯತೆ ದಟ್ಟವಾಗಿದೆ. 'ಬುಕ್ ಮೈ ಶೋ' ಈ ಟೆಂಡರ್ ಅನ್ನು ಪಡೆಯುವಲ್ಲಿ ವಿಫಲವಾಗಿದೆ. 'ಜಸ್ಟ್ ಟಿಕೆಟ್ಸ್' ಸಂಸ್ಥೆಯಲ್ಲಿ ಜನಪ್ರಿಯ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರ ಅಲ್ಲು ಬಾಬಿ ಒಬ್ಬ ನಿರ್ದೇಶಕರಾಗಿದ್ದಾರೆ.

ಕಡಿಮೆ ದರಕ್ಕೆ ಜನರಿಗೆ ಸಿನಿಮಾ ಟಿಕೆಟ್
ಕಡಿಮೆ ದರಕ್ಕೆ, ಇಂಟರ್ನೆಟ್ ಚಾರ್ಜಸ್ ಮುಕ್ತವಾಗಿ, ಖಾಸಗಿಯವರ ಅಥವಾ ಮಧ್ಯವರ್ತಿ ಇಲ್ಲದ ರೀತಿ ಜನರಿಗೆ ಸಿನಿಮಾ ಟಿಕೆಟ್ ಮಾರಾಟ ಮಾಡಲು ಸರ್ಕಾರ ಆನ್ಲೈನ್ನಲ್ಲಿ ಟಿಕೆಟ್ ಮಾರಾಟ ಮಾಡಲು ಮುಂದಾಗಿದೆ. ಜನರಿಗೆ ಕಡಿಮೆ ದರದಲ್ಲಿ ಟಿಕೆಟ್ ಮಾರಾಟ ಮಾಡುವ ಜೊತೆಗೆ ಸಿನಿಮಾದ ಒಟ್ಟು ಗಳಿಕೆಯ ಮೇಲೆ ಕಣ್ಣಿಡುವುದು, ಚಿತ್ರಮಂದಿರಗಳ ಗಳಿಕೆ ಮೇಲೆ ಕಣ್ಣಿಡುವುದು ಸಹ ಈ ಆನ್ಲೈನ್ ಟಿಕೆಟ್ ಮಾರಾಟದಿಂದ ಸರ್ಕಾರಕ್ಕೆ ಬಲು ಸುಲಭವಾಗಲಿದೆ. ಆ ಮೂಲಕ ಚಿತ್ರಮಂದಿರ ಹಾಗೂ ನಿರ್ಮಾಪಕರುಗಳ ತೆರಿಗೆಗಳ್ಳತನ ಬಹುತೇಕ ಶೂನ್ಯವಾಗುವ ಸಾಧ್ಯತೆ ಇದೆ.

ಬಾಗಿಲು ಹಾಕಿಕೊಳ್ಳಲಿದೆ ಬುಕ್ ಮೈ ಶೋ
ಜಸ್ಟ್ ಟಿಕೆಟ್ಸ್ ಮೂಲಕ ಸರ್ಕಾರವು ಟಿಕೆಟ್ ಮಾರಾಟ ಆರಂಭಿಸಿದರೆ ಆಂಧ್ರದಲ್ಲಿ ಬುಕ್ ಮೈ ಶೋಗೆ ಕೆಲಸವೇ ಇಲ್ಲದಾಗುತ್ತದೆ. ಹಾಗಾಗಿ ಕೆಲವೇ ತಿಂಗಳಲ್ಲಿ ಆಂಧ್ರದಲ್ಲಿ ಬುಕ್ ಮೈ ಶೋ ತನ್ನ ಸೇವೆಗಳನ್ನು ಬಹುತೇಕ ಸ್ಥಗಿತಗೊಳಿಸಲಿದೆ. ಆಂಧ್ರದಲ್ಲಿ ಮಾತ್ರವಲ್ಲ ತೆಲಂಗಾಣದಲ್ಲಿಯೂ ಬುಕ್ ಮೈ ಶೋ ತನ್ನ ಕಾರ್ಯವನ್ನು ಸ್ಥಗಿತಗೊಳಿಸಬೇಕಾಗುವ ಸಾಧ್ಯತೆ ಇದೆ. ತೆಲಂಗಾಣದಲ್ಲಿಯೂ ಸರ್ಕಾರವೇ ಟಿಕೆಟ್ ಮಾರಾಟ ಮಾಡುವುದಕ್ಕೆ ಉತ್ಸುಕವಾಗಿದೆ.

ಚಿರಂಜೀವಿ ಸಂಧಾನ
ಜಗನ್ ನೇತೃತ್ವದ ಸರ್ಕಾರವು ಆಂಧ್ರದಲ್ಲಿ ಟಿಕೆಟ್ ದರಗಳನ್ನು ಧಾರುಣವಾಗಿ ತಗ್ಗಿಸಿತ್ತು. ಬಳಿಕ ನಟ ಚಿರಂಜೀವಿ, ಸಿಎಂ ಜೊತೆ ಮಾತುಕತೆ ನಡೆಸಿ ದೊಡ್ಡ ಬಜೆಟ್ ಸಿನಿಮಾಗಳು ಆರು ವಾರಗಳ ಕಾಲ ಟಿಕೆಟ್ ದರವನ್ನು ನಿಗದಿತ ಮೊತ್ತದ ವರೆಗೆ ಹೆಚ್ಚಿಸಿಕೊಳ್ಳುವಂತೆ ಆದೇಶ ಹೊರಡಿಸಲು ಯಶಸ್ವಿಯಾದರು. ಇದೀಗ RRR ಸಿನಿಮಾದ ಟಿಕೆಟ್ ದರವನ್ನು ಆಂಧ್ರದಲ್ಲಿ ತುಸು ಹೆಚ್ಚಾಸಲಾಗಿತ್ತು. ಮುಂದಿನ ಕೆಲ ಸಿನಿಮಾಗಳಿಗೂ ಟಿಕೆಟ್ ದರವನ್ನು ತುಸು ಹೆಚ್ಚಿಸಲಾಗುತ್ತದೆ.


Click it and Unblock the Notifications











