ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್, ಧರ್ಮ ವಿರೋಧಿಗಳಿಗೆ ಎಚ್ಚರಿಕೆ ನೀಡಿದ ಆಂಧ್ರ ಡಿಸಿಎಂ..!
ಸನಾತನ ಧರ್ಮದ ಅತ್ಯಂತ ಪ್ರಸಿದ್ಧ ಮಹಾಪರ್ವ ಮತ್ತು ಧಾರ್ಮಿಕ ಮೇಳವಾದ ಮಹಾಕುಂಭ ಮೇಳಕ್ಕೆ ಪ್ರಪಂಚದಾದ್ಯಂತದಿಂದ ಅನೇಕ ಜನರು ಬರುತ್ತಿದ್ದಾರೆ. ಗಂಗಾ, ಯಮುನಾ, ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಪಾಪ ಎಲ್ಲ ನಾಶ ಮಾಡಿಕೊಂಡು ಮೋಕ್ಷ ಸಿಗುತ್ತೆ ಎನ್ನುವ ನಂಬಿಕೆಯಲ್ಲಿ ಮರಳಿ ಮನೆ ಕಡೆ ಬರುತ್ತಿದ್ದಾರೆ.
ವಿಶೇಷ ಅಂದರೆ ಹೀಗೆ ಹೋಗುತ್ತಿರುವವರಲ್ಲಿ ಕೇವಲ ಜನಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿ ಸ್ಟೇಟಸ್ ಹೊಂದಿರುವರು ಕೂಡ ಇದ್ದಾರೆ. ಆ ವುಡ್ ಈ ವುಡ್ ಎನ್ನದೇ ಎಲ್ಲ ಭಾಷೆಯ ತಾರೆಯರು ಕೂಡ ಶಾಹಿ ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಚಿತ್ರರಂಗದವರು ಮಾತ್ರ ಅಲ್ಲ ರಾಜಕೀಯದ ಗಣ್ಯರು ಕೂಡ ಮಹಾಕುಂಭ ಮೇಳದಲ್ಲಿ ಮಿಂದೇಳುತ್ತಿದ್ದಾರೆ. ಪವನ್ ಕಲ್ಯಾಣ್ ಇದಕ್ಕೆ ಮತ್ತೊಂದು ಉದಾಹರಣೆ.

ಹೌದು, ಆಂಧ್ರದ ಪವರ್ ಸ್ಟಾರ್ ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ತಮ್ಮ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಜೊತೆ ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಇದೇ ವೇಳೆ ಮಾಧ್ಯಮದವರ ಜೊತೆ ಮಾತನಾಡಿರುವ ಪವನ್ ಕಲ್ಯಾಣ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಮಹಾಕುಂಭ ಮೇಳ ನಡೆಯುತ್ತಿರುವುದು ಅತ್ಯಂತ ಖುಷಿಯ ವಿಚಾರ ಎಂದು ಹೇಳಿದ್ದಾರೆ.
ಇನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸನಾತನ ಧರ್ಮವನ್ನು ರಕ್ಷಿಸುವ ನಿಟ್ಟಿನಲ್ಲಿ ತಮ್ಮ ಪಕ್ಷವಾದ ಜನಸೇನೆಯಿಂದ ನರಸಿಂಹ ವಾರಾಹಿ ವಿಭಾಗವನ್ನು ಸ್ಥಾಪಿಸಲಿದೆ ಎಂದು ಕಳೆದ ವರ್ಷ ಹೇಳಿದ್ದ ಪವನ್ ಕಲ್ಯಾಣ್ ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಆದರೆ ನನ್ನ ನಂಬಿಕೆಯಲ್ಲಿ ನಾನು ದೃಢವಾಗಿರುತ್ತೇನೆ, ಸನಾತನ ಧರ್ಮವನ್ನು ಟೀಕಿಸುವವರು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಅದರ ಬಗ್ಗೆ ಅಗೌರವದಿಂದ ಮಾತನಾಡುವರು ಪರಿಣಾಮಗಳನ್ನು ಎದುರಿಸಬೇಕಾಗುತ್ತೆ ಎಂದು ಎಚ್ಚರಿಕೆಯನ್ನು ಕೂಡ ನೀಡಿದ್ದರು.
ಇಂಥಾ ಪವನ್ ಕಲ್ಯಾಣ್ ಮಹಾಕುಂಭ ಮೇಳದಲ್ಲಿ ಮಾತನಾಡುತ್ತಾ ಇದು ನಮ್ಮೆಲ್ಲರಿಗೆ ಒಂದು ಸುವರ್ಣ ಅವಕಾಶ. ನಾವು ಭಾಷೆ ಅಥವಾ ಸಂಸ್ಕ್ರತಿಯಲ್ಲಿ ಭಿನ್ನವಾಗಿದ್ದರೂ ಕೂಡ ನಮ್ಮ ಧರ್ಮದಲ್ಲಿ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ ಧರ್ಮ ವಿರೋಧಿಗಳಿಗೆ ಖಡಕ್ ಎಚ್ಚರಿಕೆಯ ಸಂದೇಶವನ್ನು ಕೂಡ ಇನ್ನೊಮ್ಮೆ ಪವನ್ ಕಲ್ಯಾಣ್ ನೀಡಿದ್ದಾರೆ.
ಅಂದ್ಹಾಗೇ ಪವನ್ ಕಲ್ಯಾಣ್ ಜೊತೆ ಅವರ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಮಾತ್ರ ಇರಲಿಲ್ಲ. ಬದಲಿಗೆ ಪವನ್ ಕಲ್ಯಾಣ್ ಅವರಿಗೆ ಅವರ ಪುತ್ರ ಅಕಿರಾ ನಂದನ್ ಕೂಡ ಸಾಥ್ ನೀಡಿದ್ದಾರೆ. ತಂದೆಯ ಜೊತೆ ಪುಣ್ಯ ಸ್ನಾನ ಮಾಡಿದ್ದಾರೆ. ಇನ್ನು ತೆಲುಗಿನ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕೂಡ ಪವನ್ ಕಲ್ಯಾಣ್ ಜೊತೆಯಲ್ಲಿ ಮಹಾಕುಂಭ ಮೇಳಕ್ಕೆ ತೆರಳಿ ಪುನೀತರಾಗಿದ್ದಾರೆ.
ಇನ್ನುಳಿದಂತೆ ಚಿತ್ರರಂಗ ಮತ್ತು ರಾಜಕೀಯ, ಹೀಗೆ ಎರಡು ದೋಣಿಯ ನಾವಿಕನಾಗಿರುವ ಪವನ್ ಕಲ್ಯಾಣ್ ಅವರ ಕೈಯಲ್ಲಿ ಹರಿಹರ ವೀರ ಮಲ್ಲು, ಓಜಿ, ಉಸ್ತಾದ್ ಭಗತ್ ಸಿಂಗ್ ಸೇರಿ ಇನ್ನೊಂದು ಸಿನಿಮಾ ಇದೆ. ಈ ಚಿತ್ರಗಳಲ್ಲಿ ಕೆಲ ಚಿತ್ರೀಕರಣ ಬಹುತೇಕ ಶೇಕಡಾ 50ರಷ್ಟು ಮುಗಿದಿದೆ. ಆದರೆ ಅಷ್ಟರಲ್ಲಿ ಪವನ್ ಕಲ್ಯಾಣ್ ಗೆದ್ದು ಉಪಮುಖ್ಯಮಂತ್ರಿಯಾದ ಹಿನ್ನೆಲೆ ಈ ಎಲ್ಲ ಸಿನಿಮಾಗಳ ಕೆಲಸಗಳು ಸದ್ಯ ನೆನೆಗುದಿಗೆ ಬಿದ್ದಿದ್ದಾವೆ. ಈ ಚಿತ್ರಗಳ ಚಿತ್ರೀಕರಣವನ್ನು ಮುಗಿಸುವ ಮನಸನ್ನು ಪವನ್ ಕಲ್ಯಾಣ್ ಯಾವತ್ತು ಮಡುತ್ತಾರೆ ಎನ್ನುವುದು ಸದ್ಯಕ್ಕೆ ಯಾರಿಗೂ ಗೊತ್ತಿಲ್ಲವಾದರೂ ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಪವನ್ ಕಲ್ಯಾಣ್ ನನ್ನ ನಂಬಿ ಕೆಲವರು ಹಣ ಹೂಡಿದ್ದಾರೆ, ಅವರಿಗೆ ಚಿತ್ರಗಳನ್ನು ಮಾಡಿಕೊಡಲೇಬೇಕಿದೆ. ಹಾಗಂಥ ನಾನು ಈಗಲೇ ಚಿತ್ರೀಕರಣಕ್ಕೆ ಮರಳುವುದಿಲ್ಲ, ಮೊದಲು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ ಎಂದು ಹೇಳಿದ್ದರು. ಜನಸೇವೆಯೇ ನನ್ನ ಮೊದಲ ಆಧ್ಯತೆ ಎಂದು ಹೇಳಿದ್ದರು.


Click it and Unblock the Notifications











