'ಮನ ಶಂಕರವರಪ್ರಸಾದ್ ಗಾರು' ಕಥೆಗೆ ಆ ಚಿತ್ರವೇ ಸ್ಫೂರ್ತಿ ಎಂದ ನಿರ್ದೇಶಕ ಅನಿಲ್ ರಾವಿಪುಡಿ
ಚಿರಂಜೀವಿ ಹಾಗೂ ನಯನತಾರಾ ಜೋಡಿಯ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಸೂಪರ್ ಹಿಟ್ ಆಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದ ಸಿನಿಮಾ 3ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತದೆ. ಅನಿಲ್ ರಾವಿಪುಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಸಿಂಪಲ್ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತಂದು ಅನಿಲ್ ಸಕ್ಸಸ್ ಕಂಡಿದ್ದಾರೆ. ಇನ್ನು ಸಿನಿಮಾ ನೋಡಿದವರು ಬೇರೆ ಚಿತ್ರಗಳ ಜೊತೆ ಹೋಲಿಕೆ ಮಾಡುತ್ತಿದ್ದಾರೆ. ಆ ಸಿನಿಮಾ ಕಾಪಿ, ಈ ಸಿನಿಮಾ ಪ್ರೇರಣೆ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಇದೀಗ ಸ್ವತಃ ನಿರ್ದೇಶಕರೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಆ ಸಿನಿಮಾದಿಂದಲೇ ಪ್ರೇರಣಗೊಂಡು ಈ ಕಥೆ ಸಿದ್ಧಪಡಿಸಿದೆ ಎಂದು ಒಪ್ಪಿಕೊಂಡಿದ್ದಾರೆ.

ಸೆಕೆಂಡ್ ಇನ್ನಿಂಗ್ಸ್ನಲ್ಲಿ ಚಿರಂಜೀವಿ ನಟಿಸಿದ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಕೆಲ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿದರೂ ಪ್ರೇಕ್ಷಕರಿಗೆ ಹತ್ತಿರವಾಗಲಿಲ್ಲ. ಆದರೆ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸಿ ಗೆದ್ದಿದೆ. ಸುಗ್ಗಿ ಸಂಭ್ರಮದಲ್ಲಿ ದೊಡ್ಡ ಮಟ್ಟದಲ್ಲಿ ಫ್ಯಾಮಿಲಿ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಅನಿಲ್ ರಾವಿಪುಡಿ ನಿರ್ದೇಶನದ ಸಿನಿಮಾಗಳೆಲ್ಲಾ ಗೆದ್ದಿವೆ. ಸಿಂಪಲ್ ಕಥೆಗಳನ್ನು ಕಾಮಿಡಿ ಟಚ್ ಕೊಟ್ಟು ಹೇಳುವುದರಲ್ಲಿ ಅವರು ನಿಸ್ಸೀಮರು. ಈ ಚಿತ್ರದಲ್ಲಿ ಚಿರು ಜೊತೆಗೆ ವಿಕ್ಟರಿ ವೆಂಕಟೇಶ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ವೆಂಕಟೇಶ್- ಅನಿಲ್ ಕಾಂಬಿನೇಷನ್ ಸಿನಿಮಾಗಳೆಲ್ಲಾ ಹಿಟ್ ಆಗಿದೆ. 'ಮನ ಶಂಕರವರಪ್ರಸಾದ್ ಗಾರು' ಚಿತ್ರದ ಒನ್ಲೈನ್ ಸ್ಟೋರಿ ಸಿಂಪಲ್. ದೊಡ್ಡ ಉದ್ಯಮಿ ಮಗಳನ್ನು ಮದುವೆಯಾಗುವ ನಾಯಕ. ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದು ದೂರಾಗುತ್ತಾರೆ. ಆದರೆ ಮಕ್ಕಳನ್ನು ತಂದೆ ದೂರವಾಗಿ ತಾಯಿ ಸಾಕುತ್ತಿರುತ್ತಾಳೆ. ಅದೇ ಮಕ್ಕಳ ಮೂಲಕ ಹೇಗೆ ಮತ್ತೆ ಜೋಡಿ ಒಂದಾಗುತ್ತಾರೆ ಎನ್ನುವುದು ಕಥೆ.

ಈ ಕಥೆ ಈಗಾಗಲೇ ಕೆಲ ಸಿನಿಮಾಗಳಲ್ಲಿ ಬಂದು ಹೋಗಿದೆ. ವೆಂಕಟೇಶ್ ನಟನೆಯ 'ತುಳಸಿ', ಅಜಿತ್ ನಟನೆಯ 'ವಿಶ್ವಾಸಂ' ಚಿತ್ರಗಳಲ್ಲಿ ಕೂಡ ಇಂಥದ್ದೇ ಕಥೆಯಿದೆ. ಇನ್ನು ಸ್ವತಃ ಚಿರಂಜೀವಿ ನಟನೆಯ 'ಡ್ಯಾಡಿ', 'ಮೃಗರಾಜು' ಚಿತ್ರಗಳಲ್ಲಿ ಕೂಡ ಇಂಥದ್ದೇ ಕಥೆಯಿದೆ. ಹಾಗಾಗಿ ಕೆಲವರು ಕಾಪಿ, ಇನ್ಸ್ಪಿರೇಷನ್ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. 'ಡ್ಯಾಡಿ' ಸಿನಿಮಾ ನೋಡಿ ಈ ಕಥೆಗೆ ಸ್ಫೂರ್ತಿ ಪಡೆದೆ ಎಂದು ನಿರ್ದೇಶಕ ಅನಿಲ್ ರಾವಿಪುಡಿ ಒಪ್ಪಿಕೊಂಡಿದ್ದಾರೆ.
ಚಿರಂಜೀವಿ ಸರ್ ನಟಿಸಿದ 'ಡ್ಯಾಡಿ' ಸಿನಿಮಾ ನನಗೆ ಬಹಳ ಇಷ್ಟ. ಅದರಲ್ಲಿರುವ ಮುಖ್ಯವಾದ ಅಂಶವನ್ನು ರೆಫರೆನ್ಸ್ ಆಗಿ ತೆಗೆದುಕೊಂಡು 'ಮನ ಶಂಕರವರಪ್ರಸಾದ್ ಗಾರು' ಚಿತ್ರ ಮಾಡಿದ್ದೀನಿ. ಇದರಲ್ಲಿ ಮುಚ್ಚಿಡುವುದು ಏನು ಇಲ್ಲ. ಬಹಿರಂಗವಾಗಿ ಹೇಳ್ತೀನಿ 'ಡ್ಯಾಡಿ' ಚಿತ್ರವೇ ಇದಕ್ಕೆ ಮೂಲ ಎಂದಿದ್ದಾರೆ. ಇದನ್ನು ನೋಡಿ ನಿರ್ದೇಶಕರೇ ಒಪ್ಪಿಕೊಂಡಿದ್ದಾರೆ. ಅದನ್ನು ಮೆಚ್ಚಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
13 ದಿನಕ್ಕೆ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ 186 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಮೊದಲ ವಾರವೇ 292 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಘೋಷಿಸಿತ್ತು. 2ನೇ ವಾರವೂ ಸಿನಿಮಾ ಕಲೆಕ್ಷನ್ ಜೋರಾಗಿದೆ. ಈ ವರ್ಷದ ಮೊದಲ ಬ್ಲಾಕ್ಬಸ್ಟರ್ ಸಿನಿಮಾ ಎನಿಸಿಕೊಂಡಿದೆ.
ಮುಂದಿನ ವರ್ಷ ಸಂಕ್ರಾಂತಿಗೆ ಮತ್ತೊಂದು ಫ್ಯಾಮಿಲಿ ಕಾಮಿಡಿ ಎಂಟರ್ಟೈನರ್ ಸಿನಿಮಾ ಮಾಡಲು ಅನಿಲ್ ರಾವಿಪುಡಿ ಸಿದ್ಧತೆ ನಡೆಸಿದ್ದಾರೆ. ಮತ್ತೆ ವೆಂಕಟೇಶ್ ಜೊತೆ ಸಿನಿಮಾ ಮಾಡುವ ಸಾಧ್ಯತೆ ದಟ್ಟವಾಗಿದೆ. ನಾಗಾರ್ಜುನ ಜೊತೆ ಸಿನಿಮಾ ಮಾಡುವ ಬಗ್ಗೆ ಊಹಾಪೋಹ ಶುರುವಾಗಿದೆ.


Click it and Unblock the Notifications











