ವೇದಿಕೆಯಲ್ಲೇ ತಮ್ಮ ಸಂಭಾವನೆ ಹೆಚ್ಚಿಸಿಕೊಂಡುಬಿಟ್ರು ವರಲಕ್ಷ್ಮಿ ಹಾಗೂ ಅಂಜಲಿ
ಸಿನಿಮಾ ಕಲಾವಿದರು, ತಂತ್ರಜ್ಞರ ಸಂಭಾವನೆ ವಿಚಾರ ಸದಾ ಗುಟ್ಟಾಗಿಯೇ ಇರುತ್ತದೆ. ಕೋಟಿ ಕೋಟಿ ಸಂಭಾವನೆ ಪಡೆದರೂ ಅದನ್ನು ಸ್ಟಾರ್ ನಟ, ನಟಿಯರು ಬಹಿರಂಗವಾಗಿ ಹೇಳಿಕೊಳ್ಳಲ್ಲ. ಸಿನಿಮಾ ಗೆದ್ದರೆ ಸಹಜವಾಗಿಯೇ ಸಂಭಾವನೆ ಹೆಚ್ಚಿಸಿಕೊಳ್ಳುತ್ತಾರೆ. ಸೋತರೆ ತಗ್ಗಿಸಿಕೊಳ್ಳುತ್ತಾರೆ. ಒಟ್ಟಾರೆ ಸಂಭಾವನೆ ದೊಡ್ಡ ವಿಷಯವೇ ಸರಿ.
ಪ್ರತಿ ಚಿತ್ರಕ್ಕೆ ಸಹಿ ಮಾಡುವ ಮುನ್ನ ನಿರ್ಮಾಪಕರ ಜೊತೆ ಸಂಭಾವನೆ ವಿಚಾರ ಚರ್ಚೆ ನಡೆಯುತ್ತದೆ. ಕೆಲ ನಿರ್ಮಾಪಕರು ತಾವೇ ಇಷ್ಟಪಟ್ಟು ಹೆಚ್ಚು ಸಂಭಾವನೆ ಕೊಟ್ಟು ಕಾಲ್ಶೀಟ್ ಪಡೆಯುತ್ತಾರೆ. ಇನ್ನುಳಿದಂತೆ ನಟ-ನಟಿಯರ ಕ್ರೇಜ್, ಡಿಮ್ಯಾಂಡ್ ಸಂಭಾವನೆಯನ್ನು ನಿಗದಿಪಡಿಸುತ್ತದೆ. ತಮಿಳು ನಟಿಯರಾದ ಅಂಜಲಿ ಹಾಗೂ ವರಲಕ್ಷ್ಮಿ ಶರತ್ಕುಮಾರ್ ಇದೀಗ ವೇದಿಕೆಯಲ್ಲೇ ತಮ್ಮ ಸಂಭಾವನೆ ಹೆಚ್ಚಿಸಿಕೊಂಡುಬಿಟ್ಟಿದ್ದಾರೆ.

ವಿಶಾಲ್ ನಟನೆಯ 'ಮದಗಜ ರಾಜ' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಕಂಡು ತಕ್ಕಮಟ್ಟಿಗೆ ಸದ್ದು ಮಾಡಿತ್ತು. 12 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸಿನಿಮಾ ಬಹಳ ತಡವಾಗಿ ಪ್ರೇಕ್ಷಕರ ಮುಂದೆ ಬಂದಿತ್ತು. ಚಿತ್ರದಲ್ಲಿ ವಿಶಾಲ್ ಜೊತೆ ಅಂಜಲಿ ಹಾಗೂ ವರಲಕ್ಷ್ಮಿ ಶರತ್ಕುಮಾರ್ ನಾಯಕಿಯರಾಗಿ ಮಿಂಚಿದ್ದರು. ಇದೀಗ ಸಿನಿಮಾ ತೆಲುಗಿಗೆ ಡಬ್ ಆಗಿ ಬಿಡುಗಡೆಗೆ ಸಜ್ಜಾಗುತ್ತಿದೆ.
ಇತ್ತೀಚೆಗೆ ಹೈದರಾಬಾದ್ನಲ್ಲಿ ಚಿತ್ರದ ಪ್ರೀ- ರಿಲೀಸ್ ಈವೆಂಟ್ ನಡೀತು. ನಾಯಕಿಯರಿಬ್ಬರು ಭಾಗಿ ಆಗಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸಂಭಾವನೆ ವಿಚಾರವೂ ಚರ್ಚೆಗೆ ಬಂದಿದೆ. ಕೂಡಲೇ ನಿರ್ಮಾಪಕರ ಜೊತೆ ಮಾತನಾಡಿ ವೇದಿಕೆಯಲ್ಲೇ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಅವರಿಬ್ಬರು ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ.
ಅಂಜಲಿ- ವರಲಕ್ಷ್ಮಿ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ "ಇದು 12 ವರ್ಷಗಳ ಹಿಂದೆ ಮಾಡಿದ್ದ ಸಿನಿಮಾ. ಈಗ ನಿಮ್ಮಬ್ಬರ ಕರಿಯರ್ ಉತ್ತುಂಗದಲ್ಲಿದೆ. ಹಾಗಾಗಿ ಈಗ ಈ ಚಿತ್ರಕ್ಕೆ ಸಂಭಾವನೆ ಹೆಚ್ಚಿಸಿಕೊಂಡಿದ್ದೀರಾ? ಎಂದು ಪತ್ರಕರ್ತರೊಬ್ಬರು ಕೇಳಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿದ ಇಬ್ಬರೂ "ಅಲ್ಲೇ ಇದ್ದ ನಿರ್ಮಾಪಕರ ಬಳಿ ಸಾರ್ ಹೇಳಿ ಸಂಭಾವನೆ ಹೆಚ್ಚಿಸುತ್ತೀರಾ? ಎಂದು ಹೇಳಿದ್ದಾರೆ. ಉತ್ತರಿಸಿದ ನಿರ್ಮಾಪಕರು ಸಿನಿಮಾ ಗೆದ್ದರೆ ಖಂಡಿತ ಕೊಡುತ್ತೀನಿ ಎಂದಿದ್ದಾರೆ.
ಈ ಸಂಭಾಷಣೆ ನೋಡಿದ ನೆಟ್ಟಿಗರು ವೇದಿಕೆಯಲ್ಲೇ ನಟಿರಿಬ್ಬರು ತಮ್ಮ ಸಂಭಾವನೆ ಹೆಚ್ಚಿಸಿಕೊಂಡುಬಿಟ್ಟರು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸುಂದರ್ ಸಿ. 'ಮದಗಜ ರಾಜ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಿಶಾಲ್ ಜೊತೆ ಸಂತಾನಂ ಕಾಮೆಡಿ ಇದೆ. ತಮಿಳು ಸಿನಿಮಾಗಳು ತೆಲುಗಿಗೆ ಡಬ್ ಆಗಿ ಬಿಡುಗಡೆ ಆಗುವುದು ಹೊಸದೇನು ಅಲ್ಲ.
'ಮದಗಜ ರಾಜ' ಸಿನಿಮಾ ತಮಿಳು ಈವೆಂಟ್ ವೇಳೆ ನಟ ವಿಶಾಲ್ ಅವರನ್ನು ಕಂಡ ಅಭಿಮಾನಿಗಳು ಶಾಕ್ ಆಗಿದ್ದರು. ಡೆಂಗಿ ಜ್ವರದಿಂದ ಬಳಲುತ್ತಿದ್ದ ಅವರು ಬಹಳ ಸುಸ್ತಾಗಿ ನಿಲ್ಲಲು ಕೂರಲು ಕಷ್ಟಪಡುತ್ತಿದ್ದರು. ಮೈಕ್ ಹಿಡಿದು ಮಾತನಾಡಲು ಸಾಧ್ಯವಾಗಲಿಲ್ಲ. ಕೈ ನಡುಗುತ್ತಿತ್ತು. ನಾಲಿಗೆ ತೊದಲುತ್ತಿತ್ತು. ಬಳಿಕ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.
ಅಂಜಲಿ ಹಾಗೂ ವರಲಕ್ಷ್ಮಿ ಇಬ್ಬರೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರದಲ್ಲೂ ವರಲಕ್ಷ್ಮಿಗೆ ಒಳ್ಳೆ ಅವಕಾಶ ಸಿಕ್ಕಿತ್ತು. ಇನ್ನು ಅಂಜಲಿ ಬಹಳ ಹಿಂದೆಯೇ ಕನ್ನಡ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು. ಕೊನೆಯದಾಗಿ 'ಬೈರಾಗಿ' ಚಿತ್ರದಲ್ಲಿ ಮಿಂಚಿದ್ದರು. ಸಂಕ್ರಾಂತಿ ಸಂಭ್ರಮದಲ್ಲಿ ಬಂದ ಗೇಮ್ 'ಚೇಂಜರ್' ಚಿತ್ರದಲ್ಲಿ ಆಕೆಯ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.


Click it and Unblock the Notifications











