ಶ್ರೀಲೀಲಾ ಜೊತೆ ಹೋಲಿಕೆ ಮಾಡಿದ್ದಕ್ಕೆ ನಟಿ ಅಂಜಲಿ ಕೆಂಡಾಮಂಡಲ
ತೆಲುಗು ನಟಿ ಅಂಜಲಿ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಸದ್ಯ ಈಗ ಸಿನಿಮಾಗಳಲ್ಲಿ ಮಾತ್ರವಲ್ಲದೇ ವೆಬ್ ಸೀರಿಸ್ಗಳಲ್ಲಿ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಕನ್ನಡದಲ್ಲಿ ಕೊನೆಯದಾಗಿ 'ಬೈರಾಗಿ' ಚಿತ್ರದಲ್ಲಿ ಮಿಂಚಿದ್ದರು. ಇದೀಗ 'ಗೀತಾಂಜಲಿ ಮಳ್ಳಿ ವಚ್ಚಿಂದಿ' ಎನ್ನುವ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
2014ರಲ್ಲಿ ಅಂಜಲಿ ನಟನೆಯ 'ಗೀತಾಂಜಲಿ' ಸಿನಿಮಾ ಹಿಟ್ ಆಗಿತ್ತು. 10 ವರ್ಷಗಳ ಬಳಿಕ ಈ ಚಿತ್ರದ ಸೀಕ್ವೆಲ್ ಪ್ರೇಕ್ಷಕರ ಮುಂದೆ ಬರಲಿದೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಯಿತು. ಇದು ಅಂಜಲಿ ನಟನೆಯ 50ನೇ ಸಿನಿಮಾ ಎನ್ನುವುದು ವಿಶೇಷ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಲಾಂಚ್ ಕಾರ್ಯಕ್ರಮ ನಡೀತು.

ಫಸ್ಟ್ ಲುಕ್ ರಿಲೀಸ್ ಬಳಿಕ ಅಂಜಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಈ ವೇಳೆ ಪರ್ತಕರ್ತೆಯ ಪ್ರಶ್ನೆಗೆ ಅಂಜಲಿ ಗರಂ ಆಗಿದ್ದರು. ನಾನು ನಿಮ್ಮ ಅಭಿಮಾನಿ, ತೆಲುಗಿನ ಹುಡುಗಿ ಎಂಬ ಕಾರಣಕ್ಕೆ ನಿಮಗೆ ಸರಿಯಾದ ಬ್ರೇಕ್ ಸಿಕ್ಕಿಲ್ಲ ಎಂದು ಎಂದಾದರೂ ಅಂದುಕೊಂಡಿದ್ದೀರಾ? ಎನ್ನುವ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಕೊಂಚ ಖಾರವಾಗಿಯೇ ಅಂಜಲಿ ಉತ್ತರಿಸಿದ್ದಾರೆ.
"ನನಗೆ ಬ್ರೇಕ್ ಸಿಗದೇ ಇದ್ದರೆ ನೀವು ಹೇಗೆ ನನಗೆ ಅಭಿಮಾನಿ ಆಗುತ್ತಿದ್ದಿರೀ? ಎಂದು ಪ್ರಶ್ನಿಸಿದ್ದಾರೆ. "ಅಷ್ಟೇ ಅಲ್ಲ ತೆಲುಗಿನಲ್ಲಿ ನಾನು ಸಿನಿಮಾಗಳನ್ನು ಮಾಡದೇ ಇರಬಹುದು, ತಮಿಳಿನಲ್ಲೂ ಸಿನಿಮಾ ಮಾಡುತ್ತಿದ್ದೇನೆ ಎಂದರು. ಪತ್ರಕರ್ತೆ ಮಾತು ಮುಂದುವರೆಸಿ ಶ್ರೀಲೀಲಾ ರೇಂಜ್ನಲ್ಲಿ ನೀವು ಯಾಕೆ ಯಶಸ್ವಿಯಾಗಲಿಲ್ಲ ಎಂದು ಮತ್ತೆ ಕೇಳಿದ್ದಾರೆ. ಸಿಟ್ಟಾದ ಅಂಜಲಿ, ನಾನು ಈ ನಂಬರ್ ಗೇಮ್ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ನನಗೆ ಇಷ್ಟವಾದ ಪಾತ್ರಗಳನ್ನು ನಾನು ಮಾಡುತ್ತೇನೆ ಎಂದಿದ್ದಾರೆ.
"ತೆಲುಗಿನಲ್ಲಿ ಸಿನಿಮಾ ಮಾಡುತ್ತಿಲ್ಲ ಎಂದ ಮಾತ್ರಕ್ಕೆ ನಾನು ಖಾಲಿ ಕೂತಿಲ್ಲ. ಸಿನಿಮಾಗಳ ಜೊತೆಗೆ ವೆಬ್ ಸೀರಿಸ್ಗಳಲ್ಲಿ ಬ್ಯುಸಿಯಾಗಿದ್ದೀನಿ. ಕಳೆದ ವರ್ಷ 2 ಸೀರಿಸ್ ರಿಲೀಸ್ ಆಗಿತ್ತು. ಬೇರೆ ಭಾಷೆ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದೀನಿ. ಹಾಗಾಗಿ ತೆಲುಗಿನಲ್ಲಿ ನಾನು ಕಡಿಮೆ ನಟಿಸುವಂತೆ ನಿಮಗೆ ಅನ್ನಿಸಬಹುದು" ಎಂದು ಹೇಳಿದ್ದಾರೆ.
ಆಂಧ್ರದಲ್ಲಿ ಹುಟ್ಟಿ ಬೆಳೆದ ಅಂಜಲಿ 'ಫೋಟೊ' ಎನ್ನುವ ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಮರು ವರ್ಷವೇ 'ಹೊಂಗನಸು' ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದರು. ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಜೋಡಿಯಾಗಿ ಮಿಂಚಿದರು. ಈ ಸಿನಿಮಾ ಬಳಿಕ ಪುನೀತ್ ರಾಜ್ಕುಮಾರ್ ಜೋಡಿಯಾಗಿ 'ರಣವಿಕ್ರಮ' ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. 'ಬೈರಾಗಿ' ಚಿತ್ರದಲ್ಲಿ ಶಿವಣ್ಣನ ಜೊತೆ ನಟಿಸಿದ್ದರು.
'ನವರಸ', 'ಜಾನ್ಸಿ', 'ಫಾಲ್', 'ಬಹಿಷ್ಕಾರಂ' ಎನ್ನುವ ವೆಬ್ ಸೀರಿಸ್ಗಳಲ್ಲಿ ಅಂಜಲಿ ಕಾಣಿಸಿಕೊಂಡಿದ್ದರು. ರಾಮ್ ಚರಣ್ ಜೊತೆ 'ಗೇಮ್ ಚೇಂಜರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಂಕರ್ ನಿರ್ದೇಶನದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. 'ಗ್ಯಾಂಗ್ಸ್ ಆಫ್ ಗೋದಾವರಿ' ಎನ್ನುವ ಮತ್ತೊಂದು ಸಿನಿಮಾ ಕೂಡ ಕೈಯಲ್ಲಿದೆ.

ಕನ್ನಡ ನಟಿ ಶ್ರೀಲೀಲಾ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್ ಜೊತೆಗೂ ನಟಿಸೋ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ಟಾಲಿವುಡ್ನಲ್ಲಿ ಈ ಪಾಟಿ ಕ್ರೇಜ್ ಸೃಷ್ಟಿಸಿಕೊಂಡ ಮತ್ತೊಬ್ಬ ನಟಿ ಶ್ರೀಲೀಲಾ ಅಂದರೆ ತಪ್ಪಾಗಲ್ಲ.


Click it and Unblock the Notifications











