ತಿಮ್ಮಪ್ಪನಿಗೆ ಮುಡಿ ಅರ್ಪಿಸಿದ ಪವನ್ ಪತ್ನಿ.. BJP ಪ್ಲ್ಯಾನ್ ಸಕ್ಸಸ್?
ರಾಜಕೀಯ.. ರಾಜಕೀಯ.. ರಾಜಕೀಯ.. ಸದ್ಯ ಎಲ್ಲದರಲ್ಲೂ ಈಗ ರಾಜಕೀಯ ಆವರಿಸಿಕೊಂಡುಬಿಟ್ಟಿದೆ. ರಾಜಕೀಯ ನಾಯಕರು ಏನೇ ಮಾಡಿದರೂ ಅದರಲ್ಲಿ ರಾಜಕೀಯವನ್ನು ಹುಡುಕುವ ಪರಿಪಾಟ ಹೆಚ್ಚುತ್ತಿದೆ. ಕೊನೆಗೆ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರೂ ಕೂಡ ಅದರಲ್ಲಿ ಕೂಡ ರಾಜಕೀಯವನ್ನು ಕೆದಕುವವರ ಸಂಖ್ಯೆ ಹೆಚ್ಚುತ್ತಿದೆ.
ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ಇತ್ತೀಚೆಗೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಸಿಂಗಾಪುರದ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಪುತ್ರ ಮಾರ್ಕ್ ಶಂಕರ್ ಗಾಯಗೊಂಡಿದ್ದನು. ಆತ ಬೇಗ ಚೇತರಿಸಿಕೊಳ್ಳಲಿ ಎಂದು ಹರಕೆ ಕಟ್ಟಿಕೊಂಡಿದ್ದರು. ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ ಮಗನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಪವನ್ ಕಲ್ಯಾಣ್ ಭಾರತಕ್ಕೆ ಕರೆದುಕೊಂಡು ಬಂದಿದ್ದಾರೆ. ಅದರ ಬೆನ್ನಲ್ಲೇ ಪವನ್ ಪತ್ನಿ ಅನ್ನಾ ತಿರುಪತಿಗೆ ಭೇಟಿ ನೀಡಿದ್ದಾರೆ.

ತಿಮ್ಮಪ್ಪನಿಗೆ ಮುಡಿ ಅರ್ಪಿಸಿ ಪೂಜೆ ಸಲ್ಲಿಸಿದ್ದಾರೆ. ತಿರುಪತಿಯಲ್ಲಿ ಅನ್ನದಾನಕ್ಕೆ 17 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಭಕ್ತರಲ್ಲಿ ಒಬ್ಬರಾಗಿ ತಾವು ತಿರುಪತಿ ಪ್ರಸಾದ ಸ್ವೀಕರಿಸಿದ್ದಾರೆ. ರೇಷ್ಮೆ ಸೀರೆ ಉಟ್ಟು ತಿರುಮಲದಲ್ಲಿ ಪವನ್ ಪತ್ನಿ ಅನ್ನಾ ಕಾಣಿಸಿಕೊಂಡಿದ್ದಾರೆ. ಆಕೆ ರಷ್ಯಾ ಮೂಲದ ಕ್ರಿಶ್ಚಿಯನ್. ಆದರೂ ಹಿಂದೂ ದೇವಸ್ಥಾನಕ್ಕೆ ಬಂದು ಮುಡಿ ಅರ್ಪಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀರಿಸಿದ್ದು ಆಂಧ್ರದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಕೆಲವರು ಇದರಲ್ಲಿ ಕೂಡ ರಾಜಕೀಯ ಹುಡುಕುತ್ತಿದ್ದಾರೆ.
ಆಂಧ್ರದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಕ್ರಿಶ್ಚಿಯನ್ ಧರ್ಮದವರು. ಈ ಹಿಂದೆ ತಿರುಪತಿ ಲಡ್ಡು ವಿವಾದ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಪವನ್ ಕಲ್ಯಾಣ್ ಈ ಬಗ್ಗೆ ಹಿಂದಿನ ಜಗನ್ ಸರ್ಕಾರವನ್ನು ದೂಷಿಸಿದ್ದರು. ಸನಾತನ ಧರ್ಮದ ಪಾಠ ಮಾಡಿದ್ದರು. ಇದೆಲ್ಲದರ ಬೆನ್ನಲ್ಲೇ ಜಗನ್ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಲು ಮುಂದಾಗಿದ್ದರು. ಅಷ್ಟರಲ್ಲೇ ತಿರುಪತಿಯ ಡಿಕ್ಲರೇಶನ್ ವಿಚಾರ ಮುನ್ನಲೆಗೆ ಬಂದಿತ್ತು. ನಾನು ಯಾಕೆ ಡಿಕ್ಲರೇಷನ್ ಪತ್ರಕ್ಕೆ ಸಹಿ ಹಾಕಬೇಕು ಎನ್ನುವ ಕಾರಣಕ್ಕೂ ಏನೋ ಜಗನ್ ತಿರುಪತಿ ಭೇಟಿಯನ್ನು ರದ್ದುಪಡಿಸಿದ್ದರು ಎನ್ನುವ ಊಹಾಪೋಹ ಕೇಳಿಬಂದಿತ್ತು.

ಮಗಳಿಂದ ಪವನ್ ಡಿಕ್ಲರೇಷನ್
ಪವನ್ ಕಲ್ಯಾಣ್ ತಮ್ಮ ಇಬ್ಬರು ಹೆಣ್ಣು ಮಕ್ಕಳ ಜೊತೆ ಕಳೆದ ವರ್ಷ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಂದಹಾಗೆ ಪವನ್ ಹಾಗೂ ಅನ್ನಾ ಮಗಳು ಪೊಲೆನಾ ಸಿಂಗಾಪುರದಲ್ಲಿ ಓದುತ್ತಿದ್ದಾಳೆ. ಆಕೆ ಕೂಡ ವಿದೇಶದಲ್ಲಿ ಹುಟ್ಟಿ ಬೆಳೆದಾಕೆ. ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿದ್ದಾರೆ. ಹಾಗಾಗಿ ತಿರುಪತಿಗೆ ಭೇಟಿ ನೀಡಿದಾಗ ಡಿಕ್ಲರೇಷನ್ ಪತ್ರಕ್ಕೆ ಸಹಿ ಮಾಡಿಸಿದ್ದರು. ಮಗಳು ಅಪ್ರಾಪ್ತಳಾಗಿದ್ದರಿಂದ ಸ್ವತಃ ಪವನ್ ಕಲ್ಯಾಣ್ ಅಫಿಡವಿಟ್ ಮೇಲೆ ಸಹಿ ಹಾಕಿದ್ದರು. ಆ ಮೂಲಕ ಪರೋಕ್ಷವಾಗಿ ಮಾಜಿ ಸಿಎಂ ಜಗನ್ಗೆ ಸಂದೇಶ ರವಾನಿಸಿದ್ದಾರೆ ಎಂದು ಚರ್ಚೆ ನಡೆದಿತ್ತು.
ಜಗನ್ ಹಿಂದೇಟು?
ಸದ್ಯ ಪವನ್ ಕಲ್ಯಾನ್ ಪತ್ನಿ ಅನ್ನಾ ಕೊನಿದೇಲ ತಿರುಪತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಿಕ್ಲರೇಷನ್ ಪತ್ರಕ್ಕೆ ಸಹಿ ಮಾಡಿದ್ದಾರೆ ಎಂದು ವರದಿಯಾಗಿದೆ. ಆ ಮೂಲಕ ಯಾವುದೇ ದೇಶದಲ್ಲಿ ಹುಟ್ಟಿ ಬೆಳೆದ, ಕ್ರಿಶ್ಚಿಯನ್ ಧರ್ಮ ಪಾಲಿಸುವ ಅನ್ನಾ ಡಿಕ್ಲರೇಷನ್ ಪತ್ರಕ್ಕೆ ಸಹಿ ಮಾಡಿದ್ದಾರೆ. ತಾವು ತಿಮ್ಮಪ್ಪನಲ್ಲಿ ನಂಬಿಕೆ, ಗೌರವ, ಭಕ್ತಿ ಎಂದು ದೃಢೀಕರಿಸಿದ್ದಾರೆ. ಆದರೆ ಆಂಧ್ರದಲ್ಲೇ ಇರುವ ಜಗನ್ ಮೋಹನ್ ರೆಡ್ಡಿ ಇದ್ದಕ್ಕೆ ಹಿಂದೇಟು ಹಾಕಿದ್ದು ಯಾಕೆ? ಎನ್ನುವ ಚರ್ಚೆ ಹುಟ್ಟುವಂತೆ ಮಾಡಲಾಗಿದೆ ಎನ್ನುವ ಚರ್ಚೆ ಶುರುವಾಗಿದೆ.
ವೈಸಿಪಿ ಬೆಂಬಲಿಗರು ವ್ಯಂಗ್ಯ
ಪವನ್ ಕಲ್ಯಾಣ್ ಪತ್ನಿ ಅನ್ನಾ ಕೊನಿದೇಲ ತಿರುಪತಿಗೆ ಭೇಟಿ ನೀಡಿದ ಫೋಟೊ, ವೀಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಸಾಕಷ್ಟು ಜನ ಆಕೆಯನ್ನು ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ. ರಾಜಕೀಯ ಏನೇ ಇರಲಿ, ವಿದೇಶದ ಮಹಿಳೆಯೊಬ್ಬರು ಇಷ್ಟರಮಟ್ಟಿಗೆ ಹಿಂದೂ ಸಂಪ್ರದಾಯವನ್ನು ಪಾಲಿಸುವುದು, ತಿಮ್ಮಪ್ಪನಿಗೆ ಮುಡಿ ಸಮರ್ಪಿಸಿ ಭಗವಂತನ ಕೃಪೆಗೆ ಪಾತ್ರರಾಗಿವುದು ಗ್ರೇಟ್ ಎಂದು ಹೇಳುತ್ತಿದ್ದಾರೆ. ವೈಸಿಪಿಯನ್ನು ಬೆಂಬಲಿಸುವ ಕೆಲವರು ಮಾತ್ರ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.
ಅನ್ನಾ ಬಗ್ಗೆ ಟ್ರೋಲ್
ಮಹಿಳೆಯರು ಸಂಪೂರ್ಣ ಮುಡಿಯನ್ನು ದೇವರಿಗೆ ಕೊಡಬಾರದು. ಈ ಬಗ್ಗೆ ಶಾಸ್ತ್ರಗಳು ಹೇಳುವುದೇ ಬೇರೆ ಅಂತೆಲ್ಲಾ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ರಾಜಕೀಯ ಇಲ್ಲದೇ ಇದ್ದರೆ ಪವತ್ ಪತ್ನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹೋಗುವುದನ್ನು HD ಕ್ಯಾಮರಾಗಳಲ್ಲಿ ಚಿತ್ರೀಕರಿಸಿ ಪೋಸ್ಟ್ ಮಾಡುವುದು ಏನಿತ್ತು. ಭಕ್ತಿ ಎನ್ನುವುದು ತೋರ್ಪಡಿಕೆ ಆಗಬಾರದು. ಇದರ ಹಿಂದೆ ರಾಜಕೀಯ ಉದ್ದೇಶ ಅಲ್ಲದೇ ಬೇರೇನು ಇಲ್ಲ. ಮೈತ್ರಿ ಸರ್ಕಾರ ಆಂಧ್ರದ ಅಭಿವೃದ್ಧಿ ಬಿಟ್ಟು ಜನರನ್ನು ಬೇರೆಡೆ ಡೈವರ್ಟ್ ಮಾಡುವ ಪ್ರಯತ್ನ ಮಾಡ್ತಿದೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.
ತಿರುಪತಿ ಲಡ್ಡೂ ವಿವಾದ
ಕಳೆದ ವರ್ಷ ತಿರುಪತಿ ಲಡ್ಡೂ ವಿವಾದ ಪ್ರಪಂಚದಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿತ್ತು. ವೈ. ಎಸ್. ಜಗನ್ ಆಡಳಿತ ಅವಧಿಯಲ್ಲಿ ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಿಸಲು ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿದ್ದರು ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಇದು ಭಾರೀ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು. "ಸನಾತನ ಧರ್ಮದ ಮೇಲಿನ ದಾಳಿ ಸಹಿಸಲ್ಲ" ಎಂದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ದರು.
ಏನಿದು ಡಿಕ್ಲರೇಷನ್ ಪದ್ಧತಿ?
ಟಿಡಿಪಿ ನಿಮಯದ ಪ್ರಕಾರ ವಿದೇಶಿಯರು ಹಾಗೂ ಅನ್ಯ ಧರ್ಮಿಯರು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ ವೆಂಕಟೇಶ್ವರ ಸ್ವಾಮಿಯಲ್ಲಿ ತಮ್ಮ ಭಕ್ತಿಯನ್ನು ಘೋಷಿಸಿಕೊಳ್ಳಬೇಕು. ಅದಕ್ಕೆ ಸಂಬಂಧಿಸಿದ ಪತ್ರಕ್ಕೆ ಸಹಿ ಹಾಕಬೇಕು. "ಪ್ರತಿ ಧರ್ಮದ ಸಂಪ್ರದಾಯ ಬೇರೆ ಬೇರೆ. ನೀವು ಪೂಜಾ ಸ್ಥಳಕ್ಕೆ ಭೇಟಿ ನೀಡಬೇಕು ಅಂದರೆ ಅಲ್ಲಿನ ಪದ್ಧತಿ ಗೌರವಿಸಬೇಕು. ದೇವರ ಸಂಪ್ರದಾಯ, ಭಕ್ತರ ನಂಬಿಕೆಯನ್ನು ಯಾರೂ ಕೂಡ ಅಗೌರವಿಸಬಾರದು" ಎಂದು ಚಂದ್ರಬಾಬು ನಾಯ್ಡು ಆಗ ಜಗನ್ಗೆ ಸುದ್ದಿಗೋಷ್ಠಿ ಮೂಲಕ ಹೇಳಿದ್ದರು.
ಆಂಧ್ರದಲ್ಲಿ ಹಿಂದುತ್ವ
2014ರಲ್ಲಿ ಆಂಧ್ರಪ್ರದೇಶ ಎರಡು ರಾಜ್ಯಗಳಲ್ಲಿ ವಿಂಗಡನೆ ಆಗಿತ್ತು. ತೆಲಂಗಾಣ ಹಾಗೂ ಆಂಧ್ರಪ್ರದೇಶಕ್ಕೆ ಪ್ರತ್ಯೇಕ ಸರ್ಕಾರಗಳು ರೂಪುಗೊಂಡಿದ್ದವು. ಆಂಧ್ರಪ್ರದೇಶದಲ್ಲಿ ಹಿಂದುತ್ವದ ಪ್ರಭಾವ ಕಮ್ಮಿ ಇದೆ. ಇನ್ನು ಬಿಜೆಪಿ ಪಕ್ಷ ಅಲ್ಲಿ ದೊಡ್ಡಮಟ್ಟದಲ್ಲಿ ತಳವೂರಿಲ್ಲ. ಟಿಡಿಪಿ, ವೈಎಸ್ಆರ್ ಕಾಂಗ್ರೆಸ್ ಪಕ್ಷಗಳ ಪ್ರಾಬಲ್ಯವೇ ಹೆಚ್ಚಾಗಿದೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ, ಬಿಜೆಪಿ ಜೊತೆ ಜನಸೇನಾ ಪಕ್ಷ ಕೈ ಜೋಡಿಸಿತ್ತು. ಮೂರು ಪಕ್ಷಗಳು ಒಂದಾಗಿ ಜಗನ್ ಸರ್ಕಾರ ಉರುಳಿಸಿ ಹೊಸ ಸರ್ಕಾರ ಸ್ಥಾಪಿಸಿದ್ದವು. ಆ ಮೂಲಕ ಬಿಜೆಪಿ ನಿಧಾನವಾಗಿ ಬೇರೂರಲು ಪ್ರಾರಂಭಿಸಿದೆ. ಹಿಂದುತ್ವದ ಪರಿಕಲ್ಪನೆ ಹೆಚ್ಚುವಂತೆ ಮಾಡಿದೆ.
ಪವನ್ - ಅರ್ಜುನ್ ಭೇಟಿ
ಮೆಗಾ ಫ್ಯಾಮಿಲಿ ವರ್ಷನ್ ಅಲ್ಲು ಫ್ಯಾಮಿಲಿ ಮುಸುಕಿನ ಗುದ್ದಾಟ ಗೊತ್ತೇಯಿದೆ. ಚಿರಂಜಿವಿ ಸೋದರಳಿಯ ಅಲ್ಲು ಅರ್ಜುನ್ ಮಾವನ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದಿವರು. ಆದರೆ ಕೆಲ ದಿನಗಳಿಂದ ಎರಡೂ ಕುಟುಂಬಗಳ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿ ಬರ್ತಿದೆ. ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ವೈಸಿಪಿ ಅಭ್ಯರ್ಥಿ ಪರ ಅಲ್ಲು ಅರ್ಜುನ್ ಪತ ಯಾಚಿಸಿದ್ದೂ ಪವನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಇದೀಗ ಎಲ್ಲಾ ಭಿನ್ನಾಭಿಪ್ರಾಯ ಬದಿಗಿಟ್ಟು ಪವನ್ ಮನೆಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ದಾರೆ ಎನ್ನಲಾಗ್ತಿದೆ. ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಆರೋಗ್ಯ ವಿಚಾರಿಸಲು ಅರ್ಜುನ್ ಹೋಗಿದ್ದಾರೆ.


Click it and Unblock the Notifications











