ವಿಶ್ವಕ್ಕೆ 'ಯೋಗ'ದ ಮಹತ್ವವನ್ನು ತಿಳಿಸಿದ 'ಗುರು' ಮೋದಿ ; ಪವನ್ ಕಲ್ಯಾಣ್..!
ಮಲ್ಟಿ ಜಿಮ್ಗಳ ಈ ಜಮಾನಾದಲ್ಲಿ ಈಗೀಗ ಅನೇಕರು ಯೋಗವನ್ನು ತಮ್ಮ ಜೀವನ ಶೈಲಿಯ ಒಂದು ಭಾಗವಾಗಿಸಿಕೊಂಡಿದ್ದಾರೆ. ಮನಸ್ಸಿನ ಏಕಾಗ್ರತೆ ಹೆಚ್ಚಿಸಲು.. ಖಿನ್ನತೆ.. ಆತಂಕ.. ಭಯ.. ನಕಾರಾತ್ಮಕ ಭಾವನೆಗಳಿಂದ ಹೊರ ಬರಲು ಅನೇಕರು ಯೋಗಾಭ್ಯಾಸ ಮಾಡುತ್ತಿದ್ದಾರೆ. ಒಂದು ಅಧ್ಯಯನದ ಪ್ರಕಾರ ಜಗತ್ತಿನ ಮೂರನೇ ಒಂದಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಯೋಗಾಭ್ಯಾಸವನ್ನು ಮಾಡುತ್ತಿದೆ. ಆಂತರಿಕ ಬಲವನ್ನು ಕಂಡುಕೊಳ್ಳಲು ಯೋಗದ ಮೊರೆ ಹೋಗಿದೆ.
ಇಂತಹ ಯೋಗದ ಮಹತ್ವವನ್ನು ಇವತ್ತು ಜಗತ್ತು ಅರಿತಿದೆ ಅಂದರೆ ಅದಕ್ಕೆ ಕಾರಣ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎನ್ನುವುದು ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಅಭಿಪ್ರಾಯ.

ಹೌದು, ಇಂದು { ಜೂನ್ 21 } ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಈ ದಿನದಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಯೋಗದ ವಿವಿಧ ಪಟ್ಟುಗಳನ್ನು ಎಲ್ಲರಿಗೆ ಪರಿಚಯಿಸುತ್ತಾರೆ. ಯೋಗ ದಿನಾಚಾರಣೆಯ ಸಮಾರಂಭದಲ್ಲಿ ಭಾಗವಹಿಸುತ್ತಾರೆ.
ಅದರಂತೆ ಈ ಬಾರಿ ನರೇಂದ್ರ ಮೋದಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2025 ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2025ನ್ನು ವಿಶಾಖಪಟ್ಟಣಂನ ರಾಮಕೃಷ್ಣ ಬೀಚ್ನಿಂದ ಭೋಗಪುರಂವರೆಗಿನ 26 ಕಿಲೋಮೀಟರ್ ವ್ಯಾಪ್ತಿಯಲ್ಲಿ, ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ ಇಂದು ಯೋಗ ದಿನಾಚಾರಣೆಯನ್ನು ಆಚರಿಸಿದ್ದು ಇದೇ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಮಾತನಾಡಿ ಮೋದಿಯವರನ್ನು ಬಾಯ್ತುಂಬ ಹೊಗಳಿದ್ದಾರೆ.
ಈ ಕುರಿತು ಮಾತನಾಡಿರುವ ಪವನ್ ಕಲ್ಯಾಣ್ ಪ್ರಧಾನ ಮಂತ್ರಿ ಮೋದಿಯವರು ಯೋಗವನ್ನು ಜಾಗತೀಕರಣಗೊಳಿಸಿದ ದಾರ್ಶನಿಕ ಎಂದು ಹೇಳಿದ್ದಾರೆ. ಭಾರತದ ಹೆಮ್ಮೆಯ ಪರಂಪರೆಯಾದ ಯೋಗವನ್ನು ಜಗತ್ತು ಗುರುತಿಸುವಂತೆ ಮಾಡಿದ್ದು ಮೋದಿಯವರ ಹೆಗ್ಗಳಿಕೆ ಎಂದು ಹೇಳಿದ ಪವನ್ ಕಲ್ಯಾಣ್ ವಿಶ್ವಸಂಸ್ಥೆಯಲ್ಲಿ ಯೋಗದ ಮಹತ್ವದ ಕುರಿತು ಮೋದಿ ಅವರು ತಿಳಿಸಿದರು. ಹೀಗಾಗಿಯೇ ಈ ದಿನವನ್ನು ಇಂದು ವಿಶ್ವ ಯೋಗ ದಿನವನ್ನಾಗಿ ಆಚರಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ಮಾತನಾಡಿದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ,ಯೋಗವು ಜಾಗತಿಕವಾಗಿ ಇಂದು ಹರಡಿಕೊಂಡಿದೆ ಎಂದು ಹೇಳಿದ್ದಾರೆ. 175 ದೇಶಗಳು ಅದನ್ನು ಹೇಗೆ ಅಳವಡಿಸಿಕೊಂಡಿವೆ ಮತ್ತು ಪ್ರಪಂಚದಾದ್ಯಂತ 12 ಲಕ್ಷ ಸ್ಥಳಗಳಲ್ಲಿ ಹೇಗೆ ಅಭ್ಯಾಸ ಮಾಡುತ್ತಿವೆ ಎಂಬುದರ ಕುರಿತು ಮಾತನಾಡಿದ್ದಾರೆ.
ಜಗತ್ತನ್ನು ಒಂದು ಮಾಡುವ ಶಕ್ತಿ ಯೋಗಕ್ಕಿದೆ ಎಂದು ಹೇಳಿದ ಮೋದಿ, ಗಡಿಗಳನ್ನು ಸಂಸ್ಕ್ರತಿಗಳನ್ನು ಮತ್ತು ವಯಸ್ಸನ್ನು ಕೂಡ ಯೋಗ ಮೀರಿದೆ ಎಂದು ಹೇಳಿದ್ದಾರೆ. ಯೋಗ ಅಂದರೆ ಶಿಸ್ತು ಮತ್ತು ಪ್ರಜ್ಞೆಯ ಸಂಕೇತ ಎಂದು ಕೂಡ ಹೇಳಿದ ಮೋದಿ ಬಾಹ್ಯಾಕಾಶದಲ್ಲಿಯೂ ಕೂಡ ಯೋಗವು ತನ್ನ ಸ್ಥಾನವನ್ನು ಕಂಡುಕೊಂಡಿದೆ ಎಂದು ಹೇಳಿದ್ದಾರೆ.
ಇನ್ನುಳಿದಂತೆ ಪ್ರಧಾನಿ ಮೋದಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಹಿನ್ನೆಲೆ ಆಂಧ್ರ ಸರ್ಕಾರ ಭದ್ರತಾ ವ್ಯವಸ್ಥೆಗಳನ್ನು ಮಾಡಿತ್ತು. 10,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇನ್ನು ಇಡೀ ಮಾರ್ಗದುದ್ದಕ್ಕೂ 1,200 ಸಿಸಿಟಿವಿ ಕ್ಯಾಮೆರಾಗಳು ಮತ್ತು ಡ್ರೋನ್ ಮೇಲ್ವಿಚಾರಣೆಯ ಮೂಲಕ ಕಣ್ಗಾವಲು ನಿರ್ವಹಿಸಲಾಗಿತ್ತು. ಇದಲ್ಲದೇ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ಕಾರ್ಯಕ್ರಮದ ಸ್ಥಳಕ್ಕೆ ಕರೆತರಲು 3,000 ಕ್ಕೂ ಹೆಚ್ಚು ಬಸ್ಗಳನ್ನು ಕೂಡ ಆಂಧ್ರಪ್ರದೇಶದ ಸರ್ಕಾರ ನಿಯೋಜಿಸಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.


Click it and Unblock the Notifications











