CCL 2026: ಕರ್ನಾಟಕ ಬುಲ್ಡೋಜರ್ಸ್ ಮೇಲೆ ಅಶ್ವಿನ್ ಬಾಬು ಸವಾರಿ; ಆಕರ್ಷಕ ಶತಕ
ಕರ್ನಾಟಕ ಬುಲ್ಡೋಜರ್ಸ್ ವರ್ಸಸ್ ತೆಲುಗು ವಾರಿಯರ್ಸ್ ಪಂದ್ಯದಲ್ಲಿ ಅಶ್ವಿನ್ ಬಾಬು ಶತಕ ಸಿಡಿಸಿ ತಂಡಕ್ಕೆ ಬಲ ತುಂಬಿದರು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಕಿಚ್ಚನ ನಿರ್ಧಾರ ತಪ್ಪು ಎಂದು ಅಖಿಲ್ ಅಕ್ಕಿನೇನಿ ಹಾಗೂ ಅಶ್ವಿನ್ ಬಾಬು ಕೆಲವೇ ಓವರ್ಗಳಲ್ಲಿ ಸಾಬೀತು ಮಾಡಿದ್ದರು.
ತೆಲುಗು ನಟ ಅಶ್ವಿನಿ ಬಾಬು ತಂಡದ ಪರ ಸಿಸಿಎಲ್ ಟೂರ್ನಿಗಳಲ್ಲಿ ಆಡುತ್ತಾ ಬರ್ತಿದ್ದಾರೆ. ಕಳೆದ ಪಂದ್ಯದಲ್ಲಿ ಪಂಜಾಬ್ ದೆ ಶೇರ್ ತಂಡದ ವಿರುದ್ಧ ನಾಯಕ ಅಖಿಲ್ ಅಕ್ಕಿನೇನಿ ಶತಕ ಸಿಡಿಸಿದ್ದರು. ಕೇವಲ 36 ಎಸೆತಗಳಲ್ಲಿ 101 ರನ್ ಕಲೆ ಹಾಕಿದ್ದರು. ಆದರೆ ಕರ್ನಾಟಕ ಬುಲ್ಡೋಜರ್ಸ್ ವಿರುದ್ಧದ ಪಂದ್ಯದಲ್ಲಿ 35 ಎಸೆತಗಳಲ್ಲಿ 44 ರನ್ ಸಿಡಿಸಿ ಅಖಿಲ್ ಔಟ್ ಆದರು. ಆದರೆ ಅಖಿಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಬಲಗೈ ಬ್ಯಾಟ್ಸ್ಮನ್ ಅಶ್ವಿನ್ ಬಾಬು ತಂಡಕ್ಕೆ ನೆರವಾದರು.

69 ಎಸೆತಗಳಲ್ಲಿ 132 ರನ್ ಸಿಡಿಸಿ ತಂಡ 226 ರನ್ ಕಲೆ ಹಾಕಲು ಕೈಜೋಡಿಸಿದರು. ಆಕರ್ಷಕ ಸಿಕ್ಸರ್, ಬೌಂಡರಿಗಳನ್ನು ಸಿಡಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಅಂತಿಮವಾಗಿ ರನ್ಔಟ್ ಆಗಿ ಅಶ್ವಿನ್ ಬಾಬು ಹೊರ ನಡೆದರು. ಕರ್ನಾಟಕ ಬುಲ್ಡೋಜರ್ಸ್ ಬೌಲರ್ಗಳನ್ನು ದಂಡಿಸಿದ ಅಶ್ವಿನ್ 191.30 ಸ್ಟ್ರೈಕ್ರೇಟ್ನಲ್ಲಿ ಅಬ್ಬರಿಸಿದರು. ಅಂತಿಮವಾಗಿ 20 ಓವರ್ಗಳಲ್ಲಿ ತೆಲುಗು ವಾರಿಯರ್ಸ್ ತಂಡ 227 ರನ್ಗಳ ಬೃಹತ್ ಗುರಿ ಬುಲ್ಡೋಜರ್ಸ್ ಮುಂದಿಟ್ಟಿತ್ತು.
8 ಸಿಕ್ಸರ್ ಜೊತೆಗೆ 11 ಬೌಂಡರಿ ಸಿಡಿಗೆ ಅಶ್ವಿನ್ ಬಾಬು ಗಮನ ಸೆಳೆದರು. ಭಾರೀ ಮೊತ್ತ ಕಲೆ ಹಾಕಿದರೂ ಕರ್ನಾಟಕ ಬುಲ್ಡೋಜರ್ಸ್ ತಂಡದ ಗೆಲುವನ್ನು ಅಖಿಲ್ ನೇತೃತ್ವದ ತಂಡ ತಡೆಯಲು ಸಾಧ್ಯವಾಗಲಿಲ್ಲ. 227 ರನ್ಗಳ ಗುರಿಯನ್ನು 2 ಓವರ್ 4 ಎಸೆತ ಬಾಕಿ ಇರುವಂತೆ ಕಿಚ್ಚನ ಪಡೆ ತಲುಪಿತ್ತು. ಆ ಮೂಲ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಬುಲ್ಡೋಜರ್ಸ್ ಪರ ರಾಜೀವ್ ಶತಕ ಸಿಡಿಸಿ ತಂಡಕ್ಕೆ ಬಲ ತುಂಬಿದರು.
ಈ ಗೆಲುವಿನೊಂದಿಗೆ ಕರ್ನಾಟಕ ಬುಲ್ಡೋಜರ್ಸ್ ತಂಡ ಸೆಮಿಫೈನಲ್ ಹಾದಿ ಸುಗಮವಾಗಿದೆ. ಎರಡು ಪಂದ್ಯ ಸೋತು ಒಂದು ಪಂದ್ಯವನ್ನು ಮಾತ್ರ ಗೆದ್ದಿರುವ ತೆಲುಗು ವಾರಿಯರ್ಸ್ ಟೂರ್ನಿಯಿಂದ ಹೊರಬಿದ್ದಿದೆ.
ಇದೇ ಭಾನುವಾರ ಭೋಜ್ಪುರಿ ದಬಾಂಗ್ಸ್ ತಂಡದ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಲೀಗ್ ಹಂತದ ಅಂತಿಮ ಪಂದ್ಯ ಆಡಲಿದೆ. ಒಟ್ಟಾರೆ ಲೀಗ್ ಹಂತದಲ್ಲಿ ಇನ್ನು 4 ಪಂದ್ಯಗಳು ಬಾಕಿಯಿವೆ. 2 ಪಂದ್ಯ ಗೆದ್ದಿರುವ ಕರ್ನಾಟಕ ಬುಲ್ಡೋಜರ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನಕ್ಕೆ ಏರಿದೆ. ಆಡಿದ 3 ಪಂದ್ಯಗಳನ್ನು ಗೆದ್ದು ಬೆಂಗಾಲ್ ಟೈಗರ್ಸ್ ತಂಡ ಮೊದಲ ಸ್ಥಾನದಲ್ಲಿದೆ.
ಒಟ್ಟು 7 ತಂಡಗಳು ಸಿಸಿಎಲ್ ಟೂರ್ನಿಯಲ್ಲಿ ಆಡುತ್ತಿವೆ. ಬಣ್ಣ ಹಚ್ಚಿನ ನಟಿಸುವ ಕಲಾವಿದರು ಗ್ಲೌಸು, ಪ್ಯಾಡು ಧರಿಸಿ ಕ್ರಿಕೆಟ್ ಮೈದಾನಕ್ಕೆ ಇಳಿದು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆಕ್ಷನ್, ಡ್ಯಾನ್ಸ್ ಬದಲು ಫೋರ್, ಸಿಕ್ಸರ್ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಜಿಯೋ ಹಾಟ್ಸ್ಟರ್ನಲ್ಲಿ ಸಿಸಿಎಲ್ ಟೂರ್ನಿ ಪಂದ್ಯಗಳನ್ನು ಲೈವ್ ವೀಕ್ಷಿಸಬಹುದು.
ಮುಂದಿನ ವೀಕೆಂಡ್ ಹೈದರಾಬಾದ್ನಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿದೆ. ಮೊದಲಿಗೆ ಮೈಸೂರಿನಲ್ಲಿ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ಬಳಿಕ ಅದನ್ನು ರದ್ದು ಮಾಡಲಾಯಿತು. ತೆಲುಗು ವಾರಿಯರ್ಸ್ ಹಾಗೂ ಕರ್ನಾಟಕ ಬುಲ್ಡೋಜರ್ಸ್ ತಂಡಗಳ ನಡುವಿನ ಪಂದ್ಯಗಳು ಸದಾ ಕುತೂಹಲ ಮೂಡಿಸುತ್ತದೆ. ಈ ಬಾರಿ ಪಂದ್ಯ ಕೂಡ ಅದೇ ರೀತಿ ಗಮನ ಸೆಳೆದಿತ್ತು.


Click it and Unblock the Notifications











