ಪುರಿ ಜಗನ್ನಾಥ್ ಅಸಿಸ್ಟೆಂಟ್ ಕೆರೆಗೆ ಹಾರಿ ಆತ್ಮಹತ್ಯೆ: ಕಾರಣ ಅದೇನಾ?
'ಲೈಗರ್' ಸಿನಿಮಾ ಸೋಲಿನ ಬೇಸರದಲ್ಲಿರುವ ನಿರ್ದೇಶಕ ಪುರಿ ಜಗನ್ನಾಥ್ಗೆ ಮತ್ತೊಂದು ಶಾಕ್ ಎದುರಾಗಿದೆ. ಪುರಿ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಸಾಯಿಕುಮಾರ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡು ಕೊನೆಯುಸಿರು ಎಳೆದಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ತಂಡದಲ್ಲಿ ಸಾಯಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ಹೈದರಾಬಾದ್ನ ದುರ್ಗಂ ಕೆರೆಗೆ ಹಾರಿ ಸಾಯಿಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮಾದಪುರ್ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿದ್ದ ಸಾಯಿಕುಮಾರ್ ಸಾಲಭಾದೆ ತಾಳಲಾರದೇ ಕೊನೆಯುಸಿರು ಎಳೆದಿರುವ ಸಾಧ್ಯತೆಯಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಸಂಪೂರ್ಣ ವಿಚಾರಣೆಯ ಬಳಿಕ ಅಸಲಿ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಯಿಕುಮಾರ್ ಮೃತದೇಹವನ್ನು ಪೋಸ್ಟ್ಮಾರ್ಟಂಗೆ ಕಳುಹಿಸಲಾಗಿದ್ದು, ಪೊಲೀಸರ ವಿಚಾರಣೆ ಮುಂದುವರೆದಿದೆ. ಸದ್ಯ ಸಾಯಿ, ಪುರಿ ಜಗನ್ನಾಥ್ ಬಳಿ ಕೆಲಸ ಮಾಡುತ್ತಿದ್ದರಾ ಇಲ್ಲವಾ ಅನ್ನುವ ಬಗ್ಗೆಯೂ ಮಾಹಿತಿ ಸಿಗಬೇಕಿದೆ. ಆಗಸ್ಟ್ 25ಕ್ಕೆ ತೆರೆಕಂಡಿದ್ದ ಪುರಿ ಜಗನ್ನಾಥ್ ನಿರ್ದೇಶನದ 'ಲೈಗರ್' ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ವಿತರಕರು, ಪ್ರದರ್ಶನಕರಿಗೆ ಭಾರೀ ನಷ್ಟ ತಂದೊಡ್ಡಿತ್ತು. ಮೊದಲ ಶೋನಿಂದಲೇ ನೆಗೆಟಿವ್ ಟಾಕ್ ಗಿಟ್ಟಿಸಿಕೊಂಡ ಸಿನಿಮಾ ಪ್ರೇಕ್ಷಕರನ್ನು ಥಿಯೇಟರ್ಗೆ ಸೆಳೆಯುವಲ್ಲಿ ವಿಫಲವಾಗಿತ್ತು. ಅಂದಾಜು 100 ಕೋಟಿ ರೂ. ಬಜೆಟ್ನಲ್ಲಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು.

ನಿರ್ದೇಶನದ ಜೊತೆಗೆ ಪುರಿ ಜಗನ್ನಾಥ್, ಧರ್ಮ ಪ್ರೊಡಕ್ಷನ್ಸ್ ಜೊತೆ ಸೇರಿ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ಚಿತ್ರದ ಲೀಡ್ ರೋಲ್ಗಳಲ್ಲಿ ನಟಿಸಿದ್ದರು. ರಮ್ಯಾಕೃಷ್ಣ, ಮೈಕ್ ಟೈಸನ್ ಚಿತ್ರದ ತಾರಾಗಣದಲ್ಲಿದ್ದರು. 'ಲೈಗರ್' ಸೋಲಿನ ಬೆನ್ನಲ್ಲೇ ಪುರಿ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ನ 'ಜನ ಗಣ ಮನ' ಸಿನಿಮಾ ಕೂಡ ನಿಂತು ಹೋಗಿದೆ ಎನ್ನಲಾಗುತ್ತಿದೆ. ಬಾಡಿಗೆ ಕಟ್ಟಲು ಹಣವಿಲ್ಲದೇ ಪುರಿ ಜಗನ್ನಾಥ್ ಮುಂಬೈ ಫ್ಲಾಟ್ ಖಾಲಿ ಮಾಡುತ್ತಿದ್ದಾರೆ ಎನ್ನುವ ಗುಸುಗಸು ಕೂಡ ಕೇಳಿಬರ್ತಿದೆ.

ಒಳ್ಳೆ ಸಿನಿಮಾ ನಿರ್ದೇಶಕನಾಗಬೇಕು, ಬಣ್ಣದಲೋಕದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕನಸು ಕಂಡು ಸಾಯಿಕುಮಾರ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಡೈರೆಕ್ಷನ್ ಡಿಪಾರ್ಟ್ಮೆಂಟ್ ಅಂದರೆ ಕೆಲಸ ಸಿಗುತ್ತೆ. ಸಿನಿಮಾ ಮೇಕಿಂಗ್ ಕೆಲಸ ಕಲಿಯಬಹುದು. ಆದರೆ ಒಳ್ಳೆ ಸಂಭಾವನೆ ಸಿಗುತ್ತದೆ ಎಂದು ಹೇಳುವುದು ಕಷ್ಟ. ರಂಗೀನ್ ಲೋಕದಲ್ಲಿ ಸಾಕಷ್ಟು ಕನಸುಗಳನ್ನು ಕಾಣುತ್ತಾ ಹೀಗೆ ನೂರಾರು ಜನ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications











