ಸುಳ್ಳಾಯ್ತು ಚುನಾವಣಾ ಭವಿಷ್ಯ; ಇನ್ಮುಂದೆ ನಾನು ಜಾತಕ ನೋಡಿ ಭವಿಷ್ಯ ಹೇಳಲ್ಲ ಎಂದ ಖ್ಯಾತ ಜ್ಯೋತಿಷಿ
ಲೋಕಸಭೆ ಚುನಾವಣೆ ಕೆಲ ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿ ಆಗಿದೆ. ಎನ್ಡಿಎ ಅಥವಾ ಇಂಡಿಯಾ ಮೈತ್ರಿ ಕೂಟದಲ್ಲಿ ಯಾರು ಕೇಂದ್ರ ಸರ್ಕಾರ ರಚಿಸುತ್ತಾರೆ ಎನ್ನುವ ಬಗ್ಗೆ ಭಾರೀ ಕುತೂಹಲವಿದೆ. ಬಹುತೇಕ ಮೋದಿ ಮತ್ತೆ ಪ್ರಧಾನಿ ಆಗುವುದು ಖಚಿತವಾಗಿದೆ. ಆದರೂ ಇಂಡಿಯಾ ಮೈತ್ರಿ ಕೂಟ ಮ್ಯಾಜಿಕ್ ಮಾಡುತ್ತಾ ಕಾದು ನೋಡಬೇಕಿದೆ.
ಇನ್ನು ಲೋಕಸಭೆ ಜೊತೆಗೆ 4 ರಾಜ್ಯಗಳ ವಿಧಾನಸಭೆ ಚುನಾವಣೆ ಸಹ ನಡೆದಿದ್ದು ಫಲಿತಾಂಶ ಹೊರಬಿದ್ದಿದೆ. ಆಂಧ್ರದಲ್ಲಿ ಅಚ್ಚರಿ ಫಲಿತಾಂಶ ಬಂದಿದ್ದರು ಜನಸೇನಾ, ಬಿಜೆಪಿ, ಟಿಡಿಪಿ ಮೈತ್ರಿಕೂಟ ಸರ್ಕಾರ ರಚಿಸಲು ಮುಂದಾಗಿವೆ. ವೈಎಸ್ಆರ್ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿದೆ. ಇನ್ನು ಚುನಾವಣೆಗೂ ಮುನ್ನ ವೇಣುಸ್ವಾಮಿ ಮತ್ತೆ ಜಗನ್ ಸರ್ಕಾರ ಬರೋದು ಪಕ್ಕಾ ಎಂದು ಭವಿಷ್ಯ ನುಡಿದಿದ್ದರು. ಆದರೆ ಅದು ಈಗ ಸುಳ್ಳಾಗಿದೆ.

ಸೆಲೆಬ್ರೆಟಿಗಳ ಜಾತಕ ನೋಡಿ ಭವಿಷ್ಯ ಹೇಳುವ ಮೂಲಕ ವೇಣುಸ್ವಾಮಿ ಜನಪ್ರಿಯತೆ ಗಳಿಸಿದ್ದಾರೆ. ಸಮಂತಾ- ನಾಗಚೈತನ್ಯಾ ಡಿವೋರ್ಸ್ ಪಡೆಯುತ್ತಾರೆ ಎಂದು ಬಹಳ ಹಿಂದೆಯೇ ವೇಣುಸ್ವಾಮಿ ಹೇಳಿದ್ದರು. ಅದು ನಿಜವಾಗುತ್ತಿದ್ದಂತೆ ಆತನ ಮಾತುಗಳನ್ನು ಕೆಲವರು ನಂಬಲು ಆರಂಭಿಸಿದರು. ಹಾಗಾಗಿ ಸಿನಿಮಾ ತಾರೆಯರು, ರಾಜಕೀಯ ಮುಖಂಡರ ಬಗ್ಗೆ ಯುಟ್ಯೂಬ್ ಸಂದರ್ಶನಗಳಲ್ಲಿ ಭವಿಷ್ಯ ನುಡಿಯಲು ಆರಂಭಿಸಿದ್ದರು. ಈ ಮೂಲಕ ಬಹಳ ವೈರಲ್ ಆಗುತ್ತಿದ್ದರು.
ಚಂದ್ರಬಾಬು ನಾಯ್ಡು ಜಾತಕದ ಪ್ರಕಾರ ಮತ್ತೆ ಸಿಎಂ ಆಗುವುದು ಕಷ್ಟ ಎಂದು ವೇಣುಸ್ವಾಮಿ ಹೇಳಿದ್ದರು. ಇದೀಗ ಬಾಬು ಸಿಎಂ ಆಗುವುದು ಖಚಿತವಾಗಿದೆ. ಇನ್ನು ಪವನ್ ಕಲ್ಯಾಣ್ ಡಿಸಿಎಂ ಆಗುತ್ತಾರೆ. ಆದರೆ ವೇಣುಸ್ವಾಮಿ ತಾವು ನುಡಿದ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಸಂಬಂಧ ಒಂದು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
"ಓಂ ನಮೋ ವೆಂಕಟೇಶಾಯ... ಕೇಂದ್ರ ಹಾಗೂ ಆಂಧ್ರಪ್ರದೇಶ ವಿಧಾನಸಭೆ ಚುನಾವಣಾ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದಿದ್ದೆ. ನರೇಂದ್ರ ಮೋದಿ ವರ್ಚಸ್ಸು ಕಡಿಮೆಯಾಗಲಿದೆ ಹಾಗೂ ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ ಗೆಲ್ಲುತ್ತಾರೆ ಎಂದು ಹೇಳಿದ್ದೆ. ನನ್ನ ಜ್ಞಾನದಂತೆ ನಾನು ಹೇಳಿದ್ದೆ" ಎಂದು ವೇಣುಸ್ವಾಮಿ ಹೇಳಿದ್ದಾರೆ.

"ನಾನು ಹೇಳಿದಂತೆ ಕೇಂದ್ರದಲ್ಲಿ ಮೋದಿ ವರ್ಚಸ್ಸು ಕಡಿಮೆಯಾಗಿದೆ. ಆ ಭವಿಷ್ಯ ನಿಜವಾಗಿದೆ. ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಗೆಲ್ಲುತ್ತಾರೆ ಎಂಬ ನನ್ನ ಭವಿಷ್ಯ ಸುಳ್ಳಾಯಿತು. ನಾನು ಸಾಮಾನ್ಯವಾಗಿ ಜಾತಕದ ಆಧಾರದ ಮೇಲೆ ಹೇಳುತ್ತೇನೆ. ನನ್ನನ್ನು ಟೀಕಿಸುವವರು, ಟ್ರೋಲ್ ಮಾಡುತ್ತಿರುವವರು, ನನ್ನನ್ನು ಟಾರ್ಗೆಟ್ ಮಾಡುವವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದರು. ನಾನು ಕೇಳಿದ ಜಾತಕ ಶೇ.100ರಷ್ಟು ತಪ್ಪಾಗಿದೆ. ಅದನ್ನು ಖಂಡಿತ ಒಪ್ಪಿಕೊಳ್ಳುತ್ತೇನೆ"
"ಜಗನ್ ಮೋಹನ್ ರೆಡ್ಡಿ ಗೆಲ್ಲುತ್ತಾರೆ ಎಂದು ಹೇಳಿದ ಭವಿಷ್ಯ ತಪ್ಪಿದ್ದರಿಂದ ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಇನ್ನು ಮುಂದೆ ಯಾವುದೇ ರಾಜಕೀಯ ವಿಶ್ಲೇಷಣೆ ಮಾಡುವುದಿಲ್ಲ ಅಥವಾ ಇಂದಿನಿಂದ ಯಾವುದೇ ಪ್ರಿಡಿಕ್ಷನ್ ಮಾಡಲ್ಲ. ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರರಂಗದ ಸೆಲೆಬ್ರಿಟಿಗಳ ವೈಯಕ್ತಿಕ ಭವಿಷ್ಯ ನುಡಿಯುವುದನ್ನು ನಿಲ್ಲಿಸುತ್ತೇನೆ. ನಾನು ಇಲ್ಲಿ ವಿಫಲನಾಗಿದ್ದೇನೆ, ಜಗನ್ ಮೋಹನ್ ರೆಡ್ಡಿ ಅವರ ಜಾತಕವನ್ನು ಅರ್ಥೈಸಲು ವಿಫಲವಾದ ಕಾರಣ, ಚಂದ್ರಬಾಬು ನಾಯ್ಡು ಅವರ ಜಾತಕವನ್ನು ಅರ್ಥೈಸಲು ವಿಫಲವಾದ ಕಾರಣ ಇನ್ನು ಮುಂದೆ ನಾನು ಸಾರ್ವಜನಿಕ ವೇದಿಕೆಗಳಲ್ಲಿ ಯಾರ ಬಗ್ಗೆಯೂ ವೈಯಕ್ತಿಕ ಜಾತಕದ ಬಗ್ಗೆ ವಿಶ್ಲೇಷಣೆ ಮಾಡಲ್ಲ" ಎಂದು ಹೇಳಿ ವೇಣು ಸ್ವಾಮಿ ಶಾಕ್ ಕೊಟ್ಟಿದ್ದಾರೆ.


Click it and Unblock the Notifications











