ಕನ್ನಡ ಹೀರೊ ಅದಕ್ಕೆ ಧೈರ್ಯವಾಗಿ ಹೇಳ್ತೀನಿ.. ಯಶ್ ಈಗ ಡಿಪ್ರೆಶನ್ನಲ್ಲಿದ್ದಾರೆ; ವೇಣು ಸ್ವಾಮಿ
ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಆಂಧ್ರದ ವೇಣುಸ್ವಾಮಿ ಸದಾ ಸುದ್ದಿಯಲ್ಲಿರ್ತಾರೆ. ವೇಣುಸ್ವಾಮಿ ನುಡಿದ ಕೆಲ ಭವಿಷ್ಯಗಳು ನಿಜವಾಗಿದೆ. ರಶ್ಮಿಕಾ ಮಂದಣ್ಣ ಸೇರಿ ಕೆಲ ನಟಿಯರು ಆತನ ಬಳಿ ಪೂಜೆ ಮಾಡಿಸಿ ಸಕ್ಸಸ್ ಕಂಡಿರುವುದಾಗಿ ಹೇಳಿಕೊಳ್ಳುತ್ತಾರೆ. ನಿಧಿ ಅಗರ್ವಾಲ್, ನಿಶ್ವಿಕಾ ನಾಯ್ಡು ಕೂಡ ವೇಣುಸ್ವಾಮಿ ಬಳಿ ರಾಜಶ್ಯಾಮಲಾ ಪೂಜೆ ಮಾಡಿಸಿದ್ದರು.
ವೇಣು ಸ್ವಾಮಿ ಮದ್ಯ, ಮಾಂಸ, ಮೀನು ನೈವೇದ್ಯವಾಗಿ ಇಟ್ಟು ವಾಮಾಚಾರದ ಪದ್ಧತಿಗಳಲ್ಲಿ ವೇಣು ಸ್ವಾಮಿ ಪೂಜೆ, ಹೋಮಗಳನ್ನು ಮಾಡಿಸುತ್ತಾರೆ. ಈ ಹಿಂದೆ ಮಾಜಿ ಸಚಿವ ರೇವಣ್ಣ ಕೂಡ ವೇಣುಸ್ವಾಮಿ ಬಳಿಕ ಪೂಜೆ ಮಾಡಿಸಿದ್ದು ಸುದ್ದಿ ಆಗಿತ್ತು. ಸದ್ಯ ನಟ ಯಶ್ ಬಗ್ಗೆ ವಿವಾದಾತ್ಮಕ ಜ್ಯೋತಿಷಿ ಆಡಿರುವ ಮಾತುಗಳು ವೈರಲ್ ಆಗುತ್ತಿದೆ. ಈ ಹಿಂದೆ ಕೆಲ ತೆಲುಗು ಕಲಾವಿದರ ಬಗ್ಗೆ ವೇಣುಸ್ವಾಮಿ ಮಾತುಗಳಿಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಹಾಗಾಗಿ ಕನ್ನಡ ನಟ ಯಶ್ ಬಗ್ಗೆ ಧೈರ್ಯವಾಗಿ ಮಾತನಾಡ್ತೀನಿ ಎಂದು ಜ್ಯೋತಿಷಿ ಹೇಳಿದ್ದಾರೆ.

'ಕೆಜಿಎಫ್' ಸರಣಿ ಸಿನಿಮಾಗಳ ಬಳಿಕ ಮತ್ತೆ ಹಿಟ್ ಸಿನಿಮಾ ಕೊಡುವ ಒತ್ತಡದಲ್ಲಿ ಯಶ್ ಇದ್ದಾರೆ. ಇದೇ ವಿಚಾರದ ಬಗ್ಗೆ ವೇಣುಸ್ವಾಮಿ ಮಾತನಾಡಿದ್ದಾರೆ. Eha TV ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವೇಣುಸ್ವಾಮಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಎಷ್ಟೇ ದೊಡ್ಡ ನಟನಾದರೂ ಯಶಸ್ಸು ಅಷ್ಟು ಸುಲಭವಲ್ಲ. ಅದೇ ರೀತಿ ಸಿಕ್ಕ ಯಶಸ್ಸನ್ನು ಮುಂದುವರೆಸುವುದು ಕಷ್ಟ ಎಂದು ಹೇಳಿದ್ದಾರೆ.
"ಯಶ್ ಎಂಬ ಒಬ್ಬ ಹೀರೊ ಇದ್ದಾನೆ. ಆತನ ಪರಿಸ್ಥಿತಿ ಬಹಳ ದಾರುಣವಾಗಿದೆ. ಕನ್ನಡ ಹೀರೊ ಎನ್ನುವ ಕಾರಣಕ್ಕೆ ಧೈರ್ಯವಾಗಿ ಮಾತನಾಡ್ತೀನಿ. ತೆಲುಗು ನಟನಾಗಿದ್ದರೆ ಮಾತನಾಡುತ್ತಿರಲಿಲ್ಲ. ಈಗ ಯಶ್ ಪರಿಸ್ಥಿತಿ ಹೇಗಿದೆ ಅಂದ್ರೆ, ಡಿಪ್ರೆಶನ್ನಲ್ಲಿದ್ದಾರೆ. ಕಾರಣ ಆತ ಮಾಡಿದ ಎರಡು ಸಿನಿಮಾಗಳು ಎಲ್ಲೋ ಇದೆ. ಎಷ್ಟು ದಿನ 'ಕೆಜಿಎಫ್' ಮಾಡೋಕೆ ಸಾಧ್ಯ. ಬೇರೆ ಸಬ್ಜೆಕ್ ಮಾಡಬೇಕಲ್ಲ. ಸಬ್ಜೆಕ್ಟ್ ಬದಲಿಸಿ, 'ಕೆಜಿಎಫ್' ತರ ಸಿನಿಮಾ ಮಾಡೋಕ್ಕಾಗ್ತಿಲ್ಲ. ಆ ನಿರೀಕ್ಷೆ ಜನರಲ್ಲಿದೆ. ಹಾಗಾಗಿ ಅಯೋಮಯವಾಗಿಬಿಟ್ಟಿದೆ. ಆತನಿಗೆ ಹುಚ್ಚು ಹಿಡಿದಂತಾಗಿದೆ. ಸೆಲೆಬ್ರೆಟಿ ಸ್ಟೇಟಸ್ ಮೆಂಟೇನ್ ಮಾಡುವುದು ಕಷ್ಟ" ಎಂದು ವೇಣುಸ್ವಾಮಿ ಹೇಳಿದ್ದಾರೆ.
'ಕೆಜಿಎಫ್'-2 ಬಳಿಕ ಯಶ್ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪದೇ ಪದೆ ಸಿನಿಮಾ ರಿಲೀಸ್ ಮುಂದೂಡಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಮುಂದಿನ ವಾರ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಜೂನ್ 4ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಇತ್ತೀಚೆಗೆ ಘೋಷಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಸೇರಿ ಚಿತ್ರಕಥೆ ತಿದ್ದಿ ತೀಡಿದ್ದಾರೆ. ತಂದೆ ಮಗನಾಗಿ ದ್ವಿಪಾತ್ರದಲ್ಲಿ ನಟಿಸಿರುವಂತೆ ಕಾಣುತ್ತಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅದ್ವಾನಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗ್ತಿದ್ದು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ತರುವ ಲೆಕ್ಕಾಚಾರ ನಡೀತಿದೆ.
ರವಿ ಬಸ್ರೂರು ಜೊತೆ ಇನ್ನು ನಾಲ್ವರು ಸಂಗೀತ ನಿರ್ದೇಶಕರು 'ಟಾಕ್ಸಿಕ್' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ರಾಜೀವ್ ರವಿ ಛಾಯಾಗ್ರಹಣ ಚಿತ್ರಕ್ಕಿದೆ. ಹಾಲಿವುಡ್ ರೇಂಜ್ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ವಿದೇಶಗಳಲ್ಲಿ ಸಿನಿಮಾ ದೊಡ್ಡದಾಗಿ ಬಿಡುಗಡೆ ಆಗಲಿದೆ. ಇರಾನ್- ಇಸ್ರೇಲ್ ಯುದ್ಧದ ಹಿನ್ನಲೆಯಲ್ಲಿ ಸಿನಿಮಾ ರಿಲೀಸ್ ಡೇಟ್ ಮುಂದೂಡುತ್ತಿರುವುದಾಗಿ ಇತ್ತೀಚೆಗೆ ಚಿತ್ರತಂಡ ಹೇಳಿತ್ತು.


Click it and Unblock the Notifications











