ಬಿಡುಗಡೆಗೂ ಮುನ್ನವೇ ಮೂವಿ ಲೀಕ್; ಆದರೂ ಮಗಧೀರ ದಾಖಲೆ ಉಡೀಸ್ ಮಾಡಿ ಇಂಡಸ್ಟ್ರಿ ಹಿಟ್ ಆದ ಚಿತ್ರಕ್ಕೆ 9 ವರ್ಷ
ಪೈರಸಿ ಎಂಬ ಭೂತ ಚಿತ್ರಗಳಿಗೆ ಈಗಿನಿಂದಲ್ಲ ಕಳೆದ ಹತ್ತಾರು ವರ್ಷಗಳಿಂದಲೂ ಸಹ ತೊಂದರೆ ನೀಡುತ್ತಾ ಬಂದಿದೆ. ಅದರಲ್ಲಿಯೂ ಸ್ಮಾರ್ಟ್ಫೋನ್ ಯುಗ ಆರಂಭವಾದ ಮೇಲಂತೂ ಸಿನಿಮಾಗಳ ಪೈರಸಿ ಪ್ರಿಂಟ್ ಜನರ ಕೈಗೆ ಸುಲಭವಾಗಿ ಸಿಗಲಾರಂಭಿಸಿತು. ಪ್ರಮುಖವಾಗಿ ತಮಿಳ್ ರಾಕರ್ಸ್ ಎಂಬ ವೆಬ್ ತಾಣದಲ್ಲಿ ಬಿಡುಗಡೆಯಾದ ದಿನದ ಮಧ್ಯಾಹ್ನವೇ ಸಿನಿಮಾಗಳ ಥಿಯೇಟರ್ ರೆಕಾರ್ಡೆಡ್ ಪ್ರಿಂಟ್ ಲಭ್ಯವಿರುತ್ತಿತ್ತು. ಹೀಗೆ ತಮಿಳ್ ರಾಕರ್ಸ್ ವೆಬ್ ತಾಣದಿಂದ ಕಷ್ಟ ಅನುಭವಿಸಿದವರು ಹಲವಾರು ಸಿನಿಮಾ ಮಂದಿ.
ಈ ಪಟ್ಟಿಯಿಂದ ಟಾಲಿವುಡ್ನ ದೊಡ್ಡ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಕೂಡ ಹೊರತಾಗಿಲ್ಲ. ಹೌದು, ಇಂದಿಗೆ ( ಸೆಪ್ಟೆಂಬರ್ 27 ) ಒಂಬತ್ತನೇ ವಾರ್ಷಿಕ ಸಂಭ್ರಮಾಚರಣೆಯಲ್ಲಿರುವ ಪವನ್ ಕಲ್ಯಾಣ್ ಅಭಿನಯದ ಚಿತ್ರ 'ಅತ್ತಾರಿಂಟಿಕಿ ದಾರೇದಿ' ಚಿತ್ರ ಕೂಡ ತಮಿಳ್ ರಾಕರ್ಸ್ ವೆಬ್ಸೈಟ್ನಿಂದ ಹೊಡೆತ ತಿಂದಿತ್ತು. ಬೇರೆ ಸಿನಿಮಾಗಳ ಹಾಗೆ ಈ ಚಿತ್ರದ ಪೈರಸಿ ಪ್ರಿಂಟ್ ಚಿತ್ರ ಬಿಡುಗಡೆಯಾದ ನಂತರ ಲೀಕ್ ಆಗಿರಲಿಲ್ಲ, ಬಿಡುಗಡೆ ದಿನಾಂಕ ಘೋಷಿಸಿ ಚಿತ್ರ ಬಿಡುಗಡೆಗೆ ಇನ್ನೂ ಎರಡು ವಾರವಿದೆ ಎನ್ನುವಾದ ಚಿತ್ರದ 90 ನಿಮಿಷದ ವಿಡಿಯೋ ಲೀಕ್ ಆಗಿತ್ತು.
ಹೀಗೆ ಬಿಡುಗಡೆಗೂ ಮುನ್ನವೇ ಲೀಕ್ ಆದ ಅತ್ತಾರಿಂಟಿಕಿ ದಾರೇದಿ ಸಿನಿಮಾವನ್ನು ಜನ ಚಿತ್ರಮಂದಿರದಲ್ಲಿ ವೀಕ್ಷಿಸುತ್ತಾರಾ ಎಂಬ ಅನುಮಾನ ವ್ಯಕ್ತವಾಗಿತ್ತು. ಬಿಡುಗಡೆಗೂ ಮುನ್ನ ಚಿತ್ರ ಲೀಕ್ ಆಗಿದೆ ಎಂದರೆ ಚಿತ್ರ ಸೋಲುವುದು ಖಚಿತ ಎಂಬ ಲೆಕ್ಕಾಚಾರವಿತ್ತು. ಅತ್ತ 55 ಕೋಟಿ ಖರ್ಚು ಮಾಡಿ ಚಿತ್ರ ಮಾಡಿದ್ದ ಚಿತ್ರತಂಡ ಪೈರಸಿ ಲೀಕ್ ಆದರೂ ಸಹ ಜನರನ್ನು ನಂಬಿ ನಿಗದಿಪಡಿಸಿದ್ದ ದಿನಾಂಕಕ್ಕಿಂತ ಮುಂಚಿತವಾಗಿ ಸಿನಿಮಾವನ್ನು ಬಿಡುಗಡೆಗೊಳಿಸಿತು. ಹೀಗೆ ಚಿತ್ರತಂಡ ಪ್ರೇಕ್ಷಕರ ಮೇಲಿಟ್ಟಿದ್ದ ನಂಬಿಕೆಯನ್ನು ಜನ ಉಳಿಸಿಕೊಂಡರು. ಯಾರೂ ನಿರೀಕ್ಷಿಸಿರದ ಯಶಸ್ಸನ್ನು ಚಿತ್ರ ಸಾಧಿಸಿತು. ತೆಲುಗು ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದ್ದ ಅತ್ತಾರಿಂಟಿಕಿ ದಾರೇದಿ ಚಿತ್ರ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿತ್ತು.

187 ಕೋಟಿ ಬಾಚಿದ ಅತ್ತಾರಿಂಟಿಕಿ ದಾರೇದಿ
55 ಕೋಟಿ ಬಜೆಟ್ನಲ್ಲಿ ತಯಾರಾಗಿ ಬಿಡುಗಡೆಗೂ ಮುನ್ನವೇ ಲೀಕ್ ಆಗಿ ಬಿಡುಗಡೆಗೊಂಡ ಅತ್ತಾರಿಂಟಿಕಿ ದಾರೇದಿ ಸಿನಿಮಾ ಒಟ್ಟು 187 ಕೋಟಿ ಕಲೆಕ್ಷನ್ ಮಾಡಿತ್ತು. ಈ ಮೂಲಕ 2009ರಲ್ಲಿ ಬಿಡುಗಡೆಗೊಂಡು 150 ಕೋಟಿ ಕಲೆಕ್ಷನ್ ಮಾಡಿದ್ದ ಮಗಧೀರ ಸಿನಿಮಾವನ್ನು ಬಾಕ್ಸ್ ಆಫೀಸ್ನಲ್ಲಿ ಹಿಂದಿಕ್ಕಿದ ಅತ್ತಾರಿಂಟಿಕಿ ದಾರೇದಿ ಟಾಲಿವುಡ್ನ ನೂತನ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿತು. ಲೀಕ್ ಆದ ಸಿನಿಮಾ ಇಂಡಸ್ಟ್ರಿ ಹಿಟ್ ಆಗುವುದೆಂದರೆ ಸುಲಭದ ಮಾತಂತೂ ಅಲ್ಲ.

ಲೀಕ್ ಆದ ವಿಷಯ ಕೇಳಿ ಎದೆಗುಂದಲಿಲ್ಲ ಎಂದಿದ್ದ ಪವನ್ ಕಲ್ಯಾಣ್
ಇನ್ನು ಈ ಸಿನಿಮಾ ಲೀಕ್ ಆಗಿದ್ದರ ಕುರಿತು ಚಿತ್ರದ ಸಕ್ಸಸ್ ಮೀಟ್ನಲ್ಲಿ ಮಾತನಾಡಿದ್ದ ಪವನ್ ಕಲ್ಯಾಣ್ ಚಿತ್ರ ಲೀಕ್ ಆದಾಗ ಹೇಗಾಯಿತು ಯಾಕಾಯಿತು ಎಂಬ ಪ್ರಶ್ನೆಯ ನಡುವೆ ಸಿಲುಕಿ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯಲಿಲ್ಲ ಎಂದಿದ್ದರು. ಹಾಗೂ ಇಷ್ಟೆಲ್ಲಾ ಆದರೂ ನಾನಾಗಲಿ ಅಥವಾ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಆಗಲಿ ಕೊಂಚವೂ ಎದೆಗುಂದಲಿಲ್ಲ, ಸೋತೆವು ಎಂಬ ಆಲೋಚನೆ ಎಲ್ಲಿಯೂ ಬರಲಿಲ್ಲ, ಚಿತ್ರವನ್ನು ಬಿಡುಗಡೆ ಮಾಡಿದೆವು ಎಂದು ಪವನ್ ಕಲ್ಯಾಣ್ ಹೇಳಿಕೆ ನೀಡಿದ್ದರು.

ಗೆದ್ದಿದ್ದು ಸಿನಿಮಾ ಮಾತ್ರವಲ್ಲ, ಪ್ರೇಕ್ಷಕ
ಇನ್ನು ಈ ಸಿನಿಮಾ ಗೆಲುವು ಚಿತ್ರತಂಡದ ಗೆಲುವು ಎನ್ನುವುದಕ್ಕಿಂತ ಇದೊಂದು ಪ್ರೇಕ್ಷಕರ ಗೆಲುವು ಎಂದರೆ ತಪ್ಪಾಗಲಾರದು. ಏಕೆಂದರೆ ಈ ಸಿನಿಮಾ ಲೀಕ್ ಆದರೂ ಸಹ ಅದನ್ನು ಮೊಬೈಲ್ನಲ್ಲಿ ವೀಕ್ಷಿಸದೇ ಚಿತ್ರಮಂದಿರಕ್ಕೆ ಬಂದು ವೀಕ್ಷಿಸದ್ದರು ಪ್ರೇಕ್ಷಕರು. ಇನ್ನು ಸ್ವತಃ ಪವನ್ ಕಲ್ಯಾಣ್ ಸಕ್ಸಸ್ ಮೀಟ್ನ ವೇದಿಕೆ ಮೇಲೂ ಸಹ ಹೇಳಿಕೊಂಡಿದ್ದರು. ನಾವು ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದೇ ನೀವಿದ್ದೀರ ಎನ್ನುವ ನಂಬಿಕೆ ಮೇಲೆ, ಅದಕ್ಕೇ ಧನ್ಯವಾದ ಹೇಳಲು ಬಂದಿದ್ದೇನೆ ಎಂದು ಗೆಲುವನ್ನು ಪ್ರೇಕ್ಷಕರಿಗೆ ಅರ್ಪಿಸಿದ್ದರು ಪವನ್ ಕಲ್ಯಾಣ್.


Click it and Unblock the Notifications











