ಎಲ್ಲಿ ನನ್ನ ಜಾನಿ ? ಪೊಲೀಸ್ ಠಾಣೆಯಲ್ಲಿ ನೃತ್ಯ ನಿರ್ದೇಶಕನ ಪತ್ನಿಯ ಹೈಡ್ರಾಮಾ..!
ಮಲಯಾಳಂನಲ್ಲಿ ಎದ್ದ ಲೈಂಗಿಕ ದೌರ್ಜನ್ಯದ ಅಲೆ ಪಕ್ಕದ ತೆಲುಗು ಚಿತ್ರರಂಗಕ್ಕೆ ಜೋರಾಗಿ ಅಪ್ಪಳಿಸಿದೆ. ಯುವತಿಯೊಬ್ಬರು ಮಾಡಿದ ಆರೋಪದಿಂದ ದಕ್ಷಿಣದ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗೋವಾದಿಂದ ಹೈದ್ರಾಬಾದ್ಗೆ ಕರೆತರುತ್ತಿದ್ದಾರೆ. ಇದರ ನಡುವೆ ಜಾನಿ ಮಾಸ್ಟರ್ ಪತ್ನಿ ಆಯೇಷಾ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ ಮಾಡಿದ್ದಾರೆ.
ಹೌದು, ಇಂದು ಬೆಳ್ಳಿಗ್ಗೆ ಆ ಕಡೆ ಗೋವಾದಲ್ಲಿ ತಲೆ ಮರೆಸಿಕೊಂಡಿದ್ದ ಜಾನಿ ಮಾಸ್ಟರ್ ಅವರನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿದ ಬೆನ್ನಲ್ಲಿಯೇ, ಹೈದ್ರಾಬಾದ್ ನರಸಂಗಿ ಠಾಣೆಗೆ ಓಡೋಡಿ ಬಂದ ಆಯೇಷಾ, ನನ್ನ ಪತಿ ಜಾನಿ ಎಲ್ಲಿ ಎಂದು ನೇರವಾಗಿ ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ.

ಆ ನಂತರ ಪೊಲೀಸರು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದು, ನಿಮ್ಮ ಪತಿಯನ್ನು ಇಲ್ಲಿ ಅಲ್ಲ ಬದಲಿಗೆ ಗೋವಾದಲ್ಲಿ ಬಂಧಿಸಲಾಗಿದ್ದು ಹೈದ್ರಾಬಾದ್ಗೆ ಕರೆತರಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಬರಲು ಸಮಯ ಬೇಕು ನೀವು ಹೊರಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ದಾರೆ. ಆ ನಂತರ ಪೊಲೀಸ್ ಠಾಣೆಯಿಂದ ಹೊರ ಬಂದ ಆಯೇಷಾ ಅಲ್ಲಿದ್ದ ಮಾಧ್ಯಮದವರ ಮೇಲೆ ಕೂಡ ಕಿಡಿ ಕಾರಿದ್ದಾರೆ. ನನ್ನನ್ನೂ ನೀವು ಕ್ಯಾಮರಾದಲ್ಲಿ ಸೆರೆ ಹಿಡಿದರೆ ನಾನು ನಿಮ್ಮ ಮೇಲೆ ಕೇಸ್ ಹಾಕುತ್ತೇನೆ ಎಂದು ಬೆದರಿಕೆಯನ್ನೂ ಹಾಕಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಅಲ್ಲಿಂದ ಹೋಗಿದ್ದಾರೆ.
ಅಂದ್ಹಾಗೇ ಈ ಪ್ರಕರಣದಲ್ಲಿ ಕೇವಲ ಜಾನಿ ಮಾಸ್ಟರ್ ಮೇಲೆ ಮಾತ್ರ ಯುವತಿ ಆರೋಪ ಮಾಡಿಲ್ಲ. ಜಾನಿ ಮಾಸ್ಟರ್ ಪತ್ನಿ ಆಯೇಷಾ ವಿರುದ್ಧ ಕೂಡ ಆ ಯುವತಿ ಆರೋಪ ಮಾಡಿದ್ದಾರೆ. ಗಂಡನ ಜೊತೆ ಸೇರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಇನ್ನೂ.. ದೂರುದಾರ ಯುವತಿಗೆ ಈಗ 21 ವರ್ಷ. ಆದರೆ ಜಾನಿ ಮಾಸ್ಟರ್ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಯುವತಿ ಈ ಘಟನೆ ನಡೆದಾಗ ಅಪ್ರಾಪ್ತರಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಜಾನಿ ಮಾಸ್ಟರ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ಧಾರೆ. ಸೆಕ್ಷನ್ 376, 506, 323 (2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನೂ ವಿಚಾರಣೆ ಸಮಯದಲ್ಲಿ ತಮ್ಮ ಧರ್ಮಕ್ಕೆ ಮತಾಂತರಗೊಳ್ಳುವಂತೆ ಕೂಡ ಜಾನಿ ಮಾಸ್ಟರ್ ಪೀಡಿಸುತ್ತಿದ್ದ ಎಂಬ ಆರೋಪವನ್ನೂ ಕೂಡ ಯುವತಿ ಮಾಡಿದ್ದಾರೆ. ಉಳಿದಂತೆ ಜಾನಿ ಮಾಸ್ಟರ್ ಅವರ ಈ ಕಾಮಕಾಂಡ ಬಯಲಾದ ನಂತರ ಸಂತ್ರಸ್ತ ಯುವತಿಗೆ ತೆಲುಗು ಚಿತ್ರರಂಗ ಅನೇಕರು ಬೆಂಬಲ ಸೂಚಿಸಿದ್ದಾರೆ. ಟಾಲಿವುಡ್ನ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಎಲ್ಲ ಚಿತ್ರಗಳಲ್ಲಿಯೂ ಸಂತ್ರಸ್ತ ಯುವತಿಗೆ ಕೆಲಸ ಕೊಡುವುದಾಗಿ ಭರವಸೆಯನ್ನು ಕೂಡ ನೀಡಿದ್ದಾರೆ. ಅಲ್ಲು ಅರ್ಜುನ್ ಅವರಲ್ಲದೇ ಅನೇಕ ನಿರ್ದೇಶಕರು ಮತ್ತು ನಟಿಯರು ಕೂಡ ಯುವತಿ ಪರ ನಿಂತಿದ್ದಾರೆ.
ಇನ್ನೂ ಈ ಪ್ರಕರಣವನ್ನು ತೆಲುಗಿನ ನೃತ್ಯ ನಿರ್ದೇಶಕ ಸಂಘ ಕೂಡ ಗಂಭೀರವಾಗಿ ಪರಿಗಣಿಸಿದ್ದು, ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ಸದಸ್ಯತ್ವವನ್ನು ಕೂಡ ಜಾನಿ ಮಾಸ್ಟರ್ನಿಂದ ಹಿಂಪಡೆಯಲಾಗಿದೆ. ಸದ್ಯಕ್ಕೆ ಜಾನಿ ಮಾಸ್ಟರ್ ಅವರನ್ನು ಹೈದ್ರಾಬಾದ್ ಗೆ ಪೊಲೀಸರು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಇದೀಗ ಹೈದ್ರಾಬಾದ್ಗೆ ಕರೆತರುತ್ತಿದ್ದಾರೆ. ಪೊಲೀಸರ ತನಿಖೆಯಲ್ಲಿ ಇನ್ನೂ ಯಾವೆಲ್ಲ ವಿಚಾರಗಳು ಹೊರ ಬರಲಿವೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











