"ದೇವರ ದಯೆಯಿದ್ರೆ ರಾಜಮೌಳಿ ಮಹಾಭಾರತ ಮಾಡ್ತಾರೆ": 'ಆದಿಪುರುಷ್' ಸೋಲು.. ವಿಜಯೇಂದ್ರ ಪ್ರಸಾದ್ ಸಿಹಿ ಸುದ್ದಿ
ಐತಿಹಾಸಿಕ ಸಿನಿಮಾವಿರಲಿ.. ಪೌರಾಣಿಕ ಸಿನಿಮಾವಿರಲಿ.. ಅಂತಹ ಸಿನಿಮಾಗಳನ್ನು ಮಾಡುವುದರಲ್ಲಿ ರಾಜಮೌಳಿ ಎತ್ತಿದ ಕೈ. ಈಗಾಗಲೇ 'ಬಾಹುಬಲಿ' ಸೀರಿಸ್ ಹಾಗೂ RRR ಸಿನಿಮಾ ಮೂಲಕ ಅದು ಸಾಬೀತು ಕೂಡ ಆಗಿದೆ. ಈ ಸಿನಿಮಾಗಳು ದಕ್ಷಿಣ ಭಾರತದ ಸಿನಿಮಾಗಳ ಪವರ್ ಏನು ಅನ್ನೋದನ್ನು ತೋರಿಸಿವೆ.
'ಬಾಹುಬಲಿ'ಯಿಂದಾನೇ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಾಗೇ ದಕ್ಷಿಣ ಭಾರತದ ಸೂಪರ್ಸ್ಟಾರ್ಗಳಿಗೂ ಪ್ಯಾನ್ ಇಂಡಿಯಾ ಇಮೇಜ್ ಸಿಕ್ಕಿದೆ. ಸಿನಿಮಾದಿಂದ ಸಿನಿಮಾಗೆ ರಾಜಮೌಳಿ ರೇಂಜ್ ಬದಲಾಗುತ್ತಲೇ ಇದೆ. ಈ ಮಧ್ಯೆ ರಾಜಮೌಳಿ 'ಮಹಾಭಾರತ' ಸಿನಿಮಾ ಮಾಡುವ ಬಗ್ಗೆನೂ ಚರ್ಚೆ ಆರಂಭ ಆಗಿದೆ.

ಇತ್ತೀಚೆಗಷ್ಟೇ ತೆರೆಕಂಡಿರೋ ಪೌರಾಣಿಕ ಸಿನಿಮಾ 'ಆದಿಪುರುಷ್' ಸೋಲುಂಡಿದೆ. ಇದೇ ಬೆನ್ನಲ್ಲೇ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಹಾಭಾರತದ ಬಗ್ಗೆ ಕೆಲವು ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಆ ಕಮೆಂಟ್ಗಳೇ ಈಗ ಎಲ್ಲೆಡೆ ವೈರಲ್ ಆಗುತ್ತಿವೆ. ಅಷ್ಟಕ್ಕೂ ವಿಜಯೇಂದ್ರ ಪ್ರಸಾದ್ 'ಮಹಾಭಾರತ'ದ ಬಗ್ಗೆ ಹೇಳಿದ್ದೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಪುರಾಣಗಳೇ ಸಿನಿಮಾಗೆ ಸ್ಫೂರ್ತಿ
ವಿಜಯೇಂದ್ರ ಪ್ರಸಾದ್ 'ಬಾಹುಬಲಿ'ಯ ಕಥೆ ಹೇಗೆ ರಚನೆ ಮಾಡಿದ್ರು? ಪಾತ್ರಗಳ ಆಯ್ಕೆ ಮಾಡಿದ್ದು ಹೇಗೆ? ಅನ್ನೋದನ್ನು ಯೂಟ್ಯೂಬ್ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ಎಲ್ಲೆಂದರಲ್ಲಿ ಕಥೆಗಳನ್ನು ತೆಗೆದುಕೊಳ್ಳಬೇಕಾಗಿಲ್ಲ. ನಮ್ಮ ಪುರಾಣಗಳಲ್ಲೇ ಸಾಕಷ್ಟು ಕಥೆಗಳು ಸಿಗುತ್ತವೆ." ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.
"ಬಾಹುಬಲಿಯ ಕಟ್ಟಪ್ಪ ಹಾಗೂ ಶಿವಗಾಮಿ ಪಾತ್ರಗಳು 'ಮಹಾಭಾರತ'ದ ಭೀಷ್ಮ ಹಾಗೂ ಕರ್ಣನಿಂದ ಪ್ರೇರಣೆ ಹೊಂದಿದೆ. ಶಕುನಿ ಪಾತ್ರದ ಪ್ರೇರಣೆಯಿಂದ ಬಿಜ್ಜಳನ ಪಾತ್ರ ಸೃಷ್ಟಿಯಾಗಿತ್ತು" ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಹಾಗೇ ಮಹಾಭಾರತದ ಬಗ್ಗೆ ರಾಜಮೌಳಿ ಆಡಿದ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.

"ಮಹಾಭಾರತ ಕಥೆ ಸಿದ್ಧಪಡಿಸಿದ್ದೇನೆ"
ರಾಜಮೌಳಿಗೆ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳನ್ನು ಹೆಚ್ಚು ಇಷ್ಟ ಪಡುತ್ತಾರಂತೆ. ಹಾಗಾಗಿ ಕಥೆಯಲ್ಲಿ ಹೆಚ್ಚೆಚ್ಚು ಸಾಹಸ ದೃಶ್ಯಗಳನ್ನೇ ಸೃಷ್ಟಿ ಮಾಡುತ್ತೇನೆಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಹಾಗೇ ರಾಜಮೌಳಿ ಬಯಸಿದಂತೆ ಸ್ಕ್ರಿಪ್ಟ್ ರೆಡಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಬಾಹುಬಲಿ ಸ್ಕ್ರಿಪ್ಟ್ ಮಾಡುವಾಗ ರಾಜಮೌಳಿ ತಂದೆ ಬಳಿ ಹೇಳಿಕೊಂಡ ಮಾತನ್ನು ನೆನಪಿಸಿಕೊಂಡಿದ್ದಾರೆ.
"ಬಾಹುಬಲಿ ಸ್ಕ್ರಿಪ್ಟ್ ಬರೆಯುತ್ತಿದ್ದಾಗ, ಒಂದು ರಾಜಮೌಳಿ ಬಂದು ನನ್ನ ಬಳಿ ಕೇಳಿದ್ದರು. ಅಪ್ಪ ನಾವ್ಯಾಕೆ ಈ ಸಿನಿಮಾ ಮಾಡುತ್ತಿದ್ದೇವೆ ಅಂತ ಗೊತ್ತಾ? ಅಂತ ಕೇಳಿದ್ದರು. ಆಗ ನಾನು ಯಾಕೆ ಎಂದು ಕೇಳಿದೆ. ಈ ಸಿನಿಮಾದಲ್ಲಿ ರಾಜರು, ಅರಮನೆಗಳು, ರಾಣಿಯರು, ಎದುರಾಳಿಗಳು, ಕುದುರೆಗಳು ಹಾಗೂ ಯುದ್ಧಗಳು ಇತ್ಯಾದಿಗಳಿವೆ. ಈ ಸಿನಿಮಾ ಮೂಲಕ ಮುಂದಿನ ದಿನಗಳಲ್ಲಿ ನಾನು ಮಹಾಭಾರತವನ್ನು ಮಾಡಲು ಎಷ್ಟು ರೆಡಿಯಿದ್ದೇನೆ ಎಂದು ಪರೀಕ್ಷೆ ಮಾಡಿಕೊಳ್ಳಲು ಮಾಡುತ್ತಿದ್ದೇನೆ" ಎಂದು ರಾಜಮೌಳಿ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.
"ಮಹಾಭಾರತ ಸಿನಿಮಾ ಮಾಡುತ್ತಾರೆ"
"ಬಾಹುಬಲಿ' ಸಿನಿಮಾ ಮಾಡುವಾಗ " ಈ ಸಿನಿಮಾ ಗೆದ್ದರೆ, ಮಹಾಭಾರತ ಸಿನಿಮಾ ಮಾಡುತ್ತೇನೆ ಎಂದಿದ್ದರು" ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ದೇವರ ದಯೆಯಿಂದ ಆ ಸಿನಿಮಾ ಸಿನಿಮಾ ಆಗುತ್ತೆ. ರಾಜಮೌಳಿ ಸಿನಿಮಾ ಮಾಡುತ್ತಾರೆ" ಎಂದು ರಾಜಮೌಳಿ ತಂದೆ ಸ್ಪಷ್ಟಪಡಿಸಿದ್ದಾರೆ.
ಸದ್ಯ ಮಹೇಶ್ ಬಾಬು ಜೊತೆ ಸಿನಿಮಾದಲ್ಲಿ ರಾಜಮೌಳಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮಹೇಶ್ ಬಾಬು ಪಾತ್ರ ಕೂಡ ಹನುಮಂತನ ಪಾತ್ರದಿಂದಲೇ ಪ್ರೇರಣೆ ಪಡೆದಿದೆ ಎಂದು ಹೇಳಲಾಗಿತ್ತು. ಆದರೆ, ಸ್ವತ: ವಿಜಯೇಂದ್ರ ಪ್ರಸಾದ್ "ಮಹೇಶ್ ಬಾಬು ಪಾತ್ರಕ್ಕೂ ಹನುಮಂತನ ಪಾತ್ರಕ್ಕೂ ಸಂಬಂಧವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











