ಮುಟ್ಟಾದ ಮಹಿಳೆಯರು 'ಆದಿಪುರುಷ್' ಸಿನಿಮಾ ನೋಡಬಹುದಾ? ಪಾಪ್ಕಾರ್ನ್ ಬದಲು ಪ್ರಸಾದ ಸಿಗುತ್ತಾ? ಬಾಬು ಗೊಗಿನೇನಿ ವ್ಯಂಗ್ಯ
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗುತ್ತಿದೆ. ಟೀಸರ್ನಿಂದ ಶುರುವಾಗ ಸಂಕಷ್ಟ ಚಿತ್ರವನ್ನು ಬೆಂಬಿಡದೇ ಕಾಡುತ್ತಿದೆ. ಎಲ್ಲಾ ಮುಗೀತು ಸಿನಿಮಾ ಬಿಡುಗಡೆಗೆ ಯಾವುದೇ ಸಮಸ್ಯೆ ಇಲ್ಲ ಎಂದುಕೊಳ್ಳುವ ಸಮಯದಲ್ಲಿ ನಿರ್ದೇಶಕ ಓಂ ರಾವುತ್ ಒಂದು ಎಡವಟ್ಟು ಮಾಡಿದ್ದರು. ತಿರುಪತಿ ದೇವಸ್ಥಾನದ ಆವರಣದಲ್ಲಿ ನಟಿಗೆ ಕೃತಿಗೆ ಮುತ್ತು ಕೊಟ್ಟು ಅಪ್ಪಿಕೊಂಡಿದ್ದರು.
ಮುಂದಿನ ಶುಕ್ರವಾರ ಸಿನಿಮಾ 5 ಭಾಷೆಗಳಲ್ಲಿ ವಿಶ್ವದಾದ್ಯಂತ ಬಹಳ ಅದ್ಧೂರಿಯಾಗಿ ತೆರೆಗಪ್ಪಳಿಸುತ್ತಿದೆ. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಇನ್ನು 'ಆದಿಪುರುಷ್' ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದರೆ ಸೀತೆಯಾಗಿ ಕೃತಿ ಸನೂನ್ ಕಾಣಿಸಿಕೊಂಡಿದ್ದಾರೆ. ರಾವಣನಾಗಿ ಸೈಫ್ ಅಲಿಖಾನ್, ಲಕ್ಷ್ಮಣನಾಗಿ ಸನ್ನಿಸಿಂಗ್, ಹನುಮಂತನಾಗಿ ದೇವದತ್ತ ಬಣ್ಣ ಹಚ್ಚಿದ್ಧಾರೆ. ಟೀ ಸೀರಿಸ್ ಹಾಗೂ ರೆಟ್ರೊಪ್ಲಿಸ್ ಸಂಸ್ಥೆಗಳು 500 ಕೋಟಿ ರೂ. ಗೂ ಅಧಿಕ ಬಜೆಟ್ನಲ್ಲಿ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿವೆ.

'ಆದಿಪುರುಷ್' ಸಿನಿಮಾ ಬಿಡುಗಡೆಯಾಗುವ ಪ್ರತಿ ಚಿತ್ರಮಂದಿರದಲ್ಲಿ ಒಂದೊಂದು ಸೀಟ್ ಹನುಮಂತನಿಗಾಗಿ ಮೀಸಲಿಡಲು ಚಿತ್ರತಂಡ ನಿರ್ಧರಿಸಿದೆ. ಇದೇ ವಿಚಾರ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಸದ್ದು ಮಾಡ್ತಿದೆ. ರಾಮಾಯಣ ಪಾರಾಯಣ ಮಾಡುವ ಜಾಗಕ್ಕೆ ಹನುಮ ಬರ್ತಾನೆ ಎನ್ನುವುದು ನಮ್ಮ ನಂಬಿಕೆ. ಈ ನಂಬಿಕೆಯನ್ನು ಗೌರವಿಸುತ್ತಾ ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಪ್ರದರ್ಶನವಾಗುವ ಎಲ್ಲಾ ಥಿಯೇಟರ್ಗಳಲ್ಲಿ ಒಂದು ಸೀಟ್ ಹನುಮಂತನಿಗಾಗಿ ಖಾಲಿ ಬಿಡಲು ನಿರ್ಧರಿಸಿದ್ದೇವೆ ಎಂದು ಚಿತ್ರತಂಡ ಹೇಳಿದೆ. ಪ್ರೀ ರಿಲೀಸ್ ಈವೆಂಟ್ನಲ್ಲೂ ಓಂ ರಾವುತ್ ಈ ಬಗ್ಗೆ ಮಾತನಾಡಿದ್ದರು.
ಬಾಬು ಗೊಗಿನೇನಿ ವ್ಯಂಗ್ಯ
ಹನುಮಂತನಿಗೆ ಥಿಯೇಟರ್ಗಳಲ್ಲಿ ಒಂದು ಸೀಟ್ ಖಾಲಿ ಬಿಡುವುದಾಗಿ ಚಿತ್ರತಂಡ ಹೇಳಿರುವುದನ್ನು ಕೆಲವರು ಮೂಢನಂಬಿಕೆ ಎನ್ನುತ್ತಿದ್ದಾರೆ. ಇದೇ ವಿಚಾರದ ಬಗ್ಗೆಮಾನವತಾವಾದಿ, ವಿಚಾರವಾದಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಬಾಬು ಗೊಗಿನೇನಿ ವ್ಯಂಗ್ಯವಾಗಿ ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. "ಥಿಯೇಟರ್ಗಳನ್ನು ದೇವಸ್ಥಾನವಾಗಿ ಬದಲಿಸಲು ಅನುಮತಿ ಇದ್ಯಾ? ಅಲ್ಲಿ ಭಕ್ತರು ತೆಂಗಿನ ಕಾಯಿ ಒಡೆಯಲು ಅವಕಾಶ ಮಾಡಿಕೊಟ್ಟಿದ್ದೀರಾ?" ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಅನ್ನದಾನಕ್ಕೆ ಹುಂಡಿ ಇರಬೇಕಲ್ಲವೇ?
"ಥಿಯೇಟರ್ಗಳು ದೇವಸ್ಥಾನವಾಗಿ ಬದಲಾದರೆ ಅಲ್ಲಿ ಭಕ್ತರು ಪೂಜೆ ಮಾಡಲು ಕಂಚಿನ ಗಂಟೆ, ಆಶೀರ್ವಾದ ಪಡೆಯಲು ಒಂದು ಹಸು, ಸರಿಯಾದ ಕುಲದಿಂದ ಒಬ್ಬ ಪೂಜಾರಿ, ಥಿಯೇಟರ್ಗಳಲ್ಲಿ ನಿತ್ಯ ಅನ್ನದಾನಕ್ಕೆ ಒಂದು ಹುಂಡಿ ಇರಬೇಕು ಅಲ್ಲವೇ? ಅನ್ಯ ಮತದವರು ಸಿನಿಮಾ ನೋಡಬೇಕು ಅಂದರೆ ಟಿಕೆಟ್ ತೆಗೆದುಕೊಳ್ಳುವ ಮುನ್ನ ರಿಜಿಸ್ಟರ್ನಲ್ಲಿ ಸಹಿ ಮಾಡಬೇಕು ಅಲ್ಲವೇ ಅದಕ್ಕಾಗಿ ರಿಜಿಸ್ಟರ್ ಪುಸ್ತಕ ಸಿದ್ಧವಾಗಿದ್ಯಾ?" ಎಂದು ಪ್ರಶ್ನಿಸಿದ್ದಾರೆ.

ಮುಟ್ಟಾದ ಮಹಿಳೆಯರು ಸಿನಿಮಾ ನೋಡಬಹುದಾ?
"ಅದೇ ರೀತಿ ಥಿಯೇಟರ್ನಲ್ಲಿ ಯುರೋಪಿಯನ್ನರ ಚಿಪ್ಸ್, ಮೆಕ್ಸಿಕನ್, ಪಾಪ್ಕಾರ್ನ್, ಅಮೇರಿಕನ್ ಬರ್ಗರ್ಗಳು, ಕೋಕ್ ಮಾರಬಹುದಾ? ಮಾರುವವರ ಮತ, ಕುಲ ಏನು ಅಂತ ತಿಳಿಸುಕೊಂಡಿದ್ದೀರಾ? ವಾಸ್ತವವಾಗಿ ನಿರ್ಮಾಪಕರು ಪ್ರಸಾದವನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಬೇಕಲ್ಲವೇ? ಮಾಡುತ್ತಿದ್ದಾರಾ? ಮುಟ್ಟಾದ ಮಹಿಳೆಯರು ಬ್ರಹ್ಮಚಾರಿಗಳು ಇರುವ ಸಿನಿಮಾ ಥಿಯೇಟರ್ಗಳಿಗೆ ಅಥವಾ ಸಿನಿಮಾ ತೋರಿಸುವ ದೇವಸ್ಥಾನಗಳಿಗೆ ಪ್ರವೇಶಿಸಬಹುದೇ?" ಎಂದು ವ್ಯಂಗ್ಯವಾಡಿದ್ದಾರೆ.
ರಾಹುಕಾಲದಲ್ಲಿ ಶೋ ಇದ್ದರೆ ಹೇಗೆ?
"ನಿಯಮದ ಪ್ರಕಾರ ಪುರುಷರು ಅಂಗಿ ಇಲ್ಲದೇ, ಯಾರು ಕೂಡ ಚರ್ಮದ ವಸ್ತುಗಳನ್ನು ತರದೇ, ಚರ್ಮದ ಬೆಲ್ಟ್ಗಳನ್ನು ಧರಿಸದೇ ಚಪ್ಪಲಿ ಧರಿಸದೇ ಒಳಗೆ ಥಿಯೇಟರ್ಗಳ ಒಳಗೆ ಪ್ರವೇಶಿಸಬೇಕು ಅಲ್ಲವೇ? ರಾಹುಕಾಲದಲ್ಲಿ ಶೋ ಇದ್ದರೆ ಏನು ಮಾಡಬೇಕು? ಥಿಯೇಟರ್ ವಾಸ್ತು ಪ್ರಕಾರ ಇಲ್ಲದಿದ್ದರೆ ಪರಿಹಾರ ಯಾರು ಕೊಡಬೇಕು? ಪೂರ್ವ ದಿಕ್ಕಿಗೆ ನಮಿಸಬೇಕು ಅಂದರೆ, ಆ ದಿಕ್ಕು ತೋರಿಸುವ ದಿಕ್ಸೂಚಿ ಪ್ರತಿ ಥಿಯೇಟರ್ನಲ್ಲಿ ಇರುತ್ತಾ?" ಎಂದು ಬಾಬು ಗೊಗಿನೇನಿ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ಗೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ.


Click it and Unblock the Notifications











