Veera Simha Reddy Trailer: ದುನಿಯಾ ವಿಜಯ್- ಬಾಲಯ್ಯ ಏಟು ಎದಿರೇಟು: ವೀರ'ಸಿಂಹ' ಘರ್ಜನೆ
ಟಾಲಿವುಡ್ ನಟಸಿಂಹ ಬಾಲಕೃಷ್ಣ ನಟನೆಯ 'ವೀರಸಿಂಹ ರೆಡ್ಡಿ' ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಒಂಗೋಲಿನಲ್ಲಿ ಸಿನಿಮಾ ಪ್ರೀ ರಿಲೀಸ್ ಈವೆಂಟ್ ನಡೀತಿದೆ. ಅದೇ ವೇದಿಕೆಯಲ್ಲಿ ಟ್ರೈಲರ್ ಲಾಂಚ್ ಆಗಿದೆ. ಮಾಸ್ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡ್ತಿದೆ.
ಬಾಲಯ್ಯ ಪವರ್ಫುಲ್ ಡೈಲಾಗ್ಸ್, ಆಕ್ಷನ್ ಸೀನ್ಸ್, ಚೇಸಿಂಗ್ ಸನ್ನಿವೇಶಗಳನ್ನು ಸೇರಿಸಿ ಟ್ರೈಲರ್ ಕಟ್ ಮಾಡಿದ್ದಾರೆ. ಚಿತ್ರದಲ್ಲಿ ಕನ್ನಡದ ನಟ ದುನಿಯಾ ವಿಜಯ್ ನೆಗೆಟಿವ್ ರೋಲ್ನಲ್ಲಿ ಅಬ್ಬರಿಸಿದ್ದಾರೆ. ಇನ್ನು ನಾಯಕಿಯರಾಗಿ ಶೃತಿ ಹಾಸನ್ ಸಾಥ್ ಕೊಟ್ಟಿದ್ದು ವರಲಕ್ಷ್ಮಿ ಶರತ್ಕುಮಾರ್, ಹನಿ ರೋಸ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 'ವೀರಸಿಂಹ ರೆಡ್ಡಿ' ಪೋಸ್ಟರ್ಸ್, ಟೀಸರ್, ಮೇಕಿಂಗ್ ಝಲಕ್, ಸಾಂಗ್ಸ್ಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಟ್ರೈಲರ್ ಕೂಡ ಅದೇ ರೀತಿ ಸಖತ್ ಮಜಾ ಕೊಡ್ತಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ನಲ್ಲಿ ಸಿನಿಮಾ ಬಹಳ ಅದ್ಧೂರಿಯಾಗಿ ನಿರ್ಮಾಣವಾಗಿದ್ದು, ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗಪ್ಪಳಿಸಲಿದೆ.
ಎಸ್. ತಮನ್ ಜಬರ್ದಸ್ತ್ ಬಿಜಿಎಂ ಹಿನ್ನಲೆಯಲ್ಲಿ ಆಕ್ಷನ್ ಪ್ಯಾಕ್ಡ್ ಟ್ರೈಲರ್ ಸದ್ದು ಮಾಡ್ತಿದೆ. ಆಂಧ್ರ ಫ್ಯಾಕ್ಷನ್ ಕಿಂಗ್ ಆಗಿ ಒನ್ಸ್ ಅಗೇನ್ ಬಾಲಕೃಷ್ಣ ಘರ್ಜಿಸಿದ್ದಾರೆ. ಪೊಲಿಟಿಕಲ್ ಲೈಫ್ಗೆ ಸಂಬಂಧಿಸಿದಂತೆ ಒಂದಷ್ಟು ಕೌಂಟರ್ ಡೈಲಾಗ್ಗಳು ಕೂಡ ಇದೆ.

ಪ್ರತಾಪ್ ರೆಡ್ಡಿ- ವೀರಸಿಂಹ ರೆಡ್ಡಿ ಫೈಟ್
ಕರ್ನೂಲ್ ಹಿನ್ನಲೆಯಲ್ಲಿ 'ವೀರಸಿಂಹ ರೆಡ್ಡಿ' ಸಿನಿಮಾ ಕಥೆಯನ್ನು ನಿರ್ದೇಶಕ ಗೋಪಿಚಂದ್ ಮಲಿನೇನಿ ಹೆಣೆದಿದ್ದಾರೆ. ಅಲ್ಲಿ ವೀರಸಿಂಹ ರೆಡ್ಡಿ ಹಾಗೂ ಮುಸಲಿ ಮಡುಗು ಪ್ರತಾಪ್ ರೆಡ್ಡಿ ನಡುವಿನ ದ್ವೇಷ ವೈಷಮ್ಯದ ಸನ್ನಿವೇಶಗಳು ಚಿತ್ರದಲ್ಲಿದೆ. ಪ್ರತಾಪ್ ರೆಡ್ಡಿ ಆಗಿ ದುನಿಯಾ ವಿಜಯ್ ಅಬ್ಬರಿಸಿದ್ದಾರೆ. ಇವರಿಬ್ಬರ ನಡುವಿನ ಪೈಪೋಟಿ ನೋಡುಗರಿಗೆ ಕಿಕ್ ಕೊಡಲಿದೆ. ಪದ್ಮ ಆಗಿ ವರಲಕ್ಷ್ಮಿ ಕೂಡ ಪ್ರತಾಪ್ ರೆಡ್ಡಿ ಜೊತೆ ನಿಂತಿದ್ದಾರೆ. ಕೃಷ್ಣ ರೆಡ್ಡಿ ಆಗಿ ಆರ್ಮುಗ ರವಿಶಂಕರ್ ಕೂಡ ವೀರಸಿಂಹ ರೆಡ್ಡಿ ಎದುರು ಅಬ್ಬರಿಸಿದ್ದಾರೆ. ಟ್ರೈಲರ್ನಲ್ಲಿ ದುನಿಯಾ ವಿಜಯ್ಗೆ ಅಷ್ಟಾಗಿ ಅವಕಾಶ ಸಿಕ್ಕಿಲ್ಲ.

ಪಕ್ಕಾ ಫ್ಯಾಮಿಲಿ ಎಂಟರ್ಟೈನರ್
ಈಗಾಗಲೇ ಇಂಥದ್ದೇ ರಾಯಲ ಸೀಮ ಫ್ಯಾಕ್ಷನ್ ಹಿನ್ನಲೆಯ ಸಾಕಷ್ಟು ಸಿನಿಮಾಗಳು ಟಾಲಿವುಡ್ನಲ್ಲಿ ಬಂದು ಹೋಗಿದೆ. ಸ್ವತಃ ಬಾಲಕೃಷ್ಣ ಇಂತಹ ಸಿನಿಮಾಗಳಲ್ಲಿ ನಟಿಸಿದ್ದು, ಆ ಸಾಲಿಗೆ ಹೊಸ ಸೇರ್ಪಡೆ 'ವೀರಸಿಂಹ ರೆಡ್ಡಿ' ಎನ್ನಬಹುದು. ಫೈಟ್ಸ್, ಎಮೋಷನಲ್ ಸೀನ್ಸ್, ವಿಷ್ಯುವಲ್ಸ್, ಬಿಜಿಎಂ ಎಲ್ಲವೂ ಸೂಪರ್. ಇನ್ನು ಬಾಲಯ್ಯ 60 ವರ್ಷ ದಾಟಿದ್ರು ಬಾಲಯ್ಯ ಡ್ಯಾನ್ಸ್, ಆಕ್ಷನ್, ಡೈಲಾಗ್ ಡೆಲಿವರಿ, ಎನರ್ಜಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

'ಲೆಜೆಂಡ್' ಮುಂದುವರೆದ ಭಾಗ?
'ವೀರಸಿಂಹ ರೆಡ್ಡಿ' ಟ್ರೈಲರ್ ಚೆನ್ನಾಗಿ ಇದ್ದರೂ ಇದನ್ನೆಲ್ಲಾ ಎಲ್ಲೋ ನೋಡಿದಂತಿದೆ. ಈಗಾಗಲೇ ನೋಡಿರುವ ಸಿನಿಮಾದಂತೆ ಕಾಣುತ್ತಿದೆ. ಬಾಲಯ್ಯ ನಟನೆಯ 'ಲೆಜೆಂಡ್' ಕಥೆ ಕೂಡ ಇದೇ ರೀತಿ ಇತ್ತು. ತನ್ನವರು, ತನ್ನ ಊರಿಗಾಗಿ ಹೋರಾಡುವ ನಾಯಕನ ಪಾತ್ರದಲ್ಲಿ ಬಾಲಕೃಷ್ಣ ಅಬ್ಬರಿಸಿದ್ದಾರೆ. ಅದಕ್ಕೆ ಒಂದಷ್ಟು ಪೊಲಿಟಿಕಲ್ ಡೈಲಾಗ್ಸ್ ಸೇರಿಸಿದ್ದಾರೆ. ಜಗನ್ ಸರ್ಕಾರಕ್ಕೆ ಟಾಂಗ್ ಕೊಡುವಂತಹ ಡೈಲಾಗ್ಗಳಿವೆ. 'ಲೆಜೆಂಡ್' ಚಿತ್ರದಲ್ಲಿ ಬೋಯಪಾಟಿ ಶ್ರೀನು ಕೂಡ ಇದನ್ನೇ ಮಾಡಿದ್ದರು. ಬಾಲಯ್ಯ ನಟನೆ ಕೂಡ ಹಳೆಯದನ್ನೇ ನೆನಪಿಸುತ್ತಿದೆ. ಟ್ರೈಲರ್ ಭರವಸೆ ಮೂಡಿಸಿದ್ದರೂ ಕಂಪ್ಲೀಟ್ ಸಿನಿಮಾದಲ್ಲಿ ಏನಿದೆ ಎನ್ನುವುದನ್ನು ಕಾದು ನೋಡಬೇಕು.

ಸಂಕ್ರಾಂತಿಗೆ ಸಿನಿಮಾ ರಿಲೀಸ್
ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ 4 ಸೌತ್ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಎದಿರು ಬಿದಿರಾಗುತ್ತಿವೆ. ತಮಿಳಿನ ತುನಿವು, ವಾರಿಸು ಜೊತೆಗೆ ತೆಲುಗಿನಲ್ಲಿ 'ವಾಲ್ತೇರು ವೀರಯ್ಯ' ಹಾಗೂ 'ವೀರಸಿಂಹ ರೆಡ್ಡಿ' ಸಿನಿಮಾಗಳು ತೆರೆಗಪ್ಪಳಿಸುತ್ತಿದೆ. ಜನವರಿ 12ಕ್ಕೆ ಬಾಲಯ್ಯ ಆರ್ಭಟ ಶುರುವಾಗಲಿದೆ. ಮರುದಿನ ಚಿರಂಜೀವಿ 'ವಾಲ್ತೇರು ವೀರಯ್ಯ' ಆಗಿ ಬರ್ತಿದ್ದಾರೆ. 2 ಸಿನಿಮಾಗಳನ್ನು ಮೈತ್ರಿ ಸಂಸ್ಥೆ ನಿರ್ಮಿಸಿರುವುದು ವಿಶೇಷ. ಮತ್ತೊಂದು ವಿಶೇಷ ಅಂದರೆ 2 ಸಿನಿಮಾದಲ್ಲೂ ಶ್ರುತಿ ಹಾಸನ್ ನಾಯಕಿಯಾಗಿ ಮಿಂಚಿದ್ದಾರೆ.


Click it and Unblock the Notifications











