ಬಾಲಿವುಡ್ ನಟಿ ಜೊತೆ ನಟಿಸುವ ಅವಕಾಶ ಬೇಡವೆಂದ ಬಾಲಕೃಷ್ಣ
ಇತ್ತೀಚೆಗೆ ಸುದ್ದಿಯೊಂದು ಹರಿದಾಡಿತ್ತು, ಬಾಲಕೃಷ್ಣ ಸಿನಿಮಾಗೆ ನಾಯಕಿಯರೇ ಸಿಗುತ್ತಿಲ್ಲ. ಅವರೊಂದಿಗೆ ನಟಿಸಲು ಹೊಸ ತಲೆಮಾರಿನ ನಾಯಕಿಯರು ಒಪ್ಪುತ್ತಿಲ್ಲ, ಒಪ್ಪಿದರೂ ಭಾರಿ ದೊಡ್ಡ ಸಂಭಾವನೆ ಕೇಳುತ್ತಿದ್ದಾರೆಂದು.
ಆದರೆ ಈಗ ಬಂದಿರುವ ಹೊಸ ಸುದ್ದಿಯೆಂದರೆ ಬಾಲಿವುಡ್ ನಟಿಯ ಜೊತೆ ನಟಿಸುವ ಅವಕಾಶ ತಾನಾಗಿಯೇ ಹುಡುಕಿ ಬಂದಿದ್ದರೂ ಸಹ ಅದನ್ನು ಸ್ವತಃ ಬಾಲಕೃಷ್ಣ ಅವರೇ ಬೇಡವೆಂದಿದ್ದಾರೆ.
ತೆಲುಗು ಸ್ಟಾರ್ ನಟ ಬಾಲಕೃಷ್ಣ ತಮ್ಮ ಪಾಲಿಗೆ ಒದಗಿ ಬಂದಿದ್ದ ಉತ್ತಮ ಸಿನಿಮಾ ಅವಕಾಶವೊಂದನ್ನು ಬೇಡವೆಂದಿದ್ದಾರೆ. ಕೇವಲ ಬಾಲಕೃಷ್ಣ ಮಾತ್ರವಲ್ಲ, ಇದೇ ಸಿನಿಮಾದ ಅವಕಾಶವನ್ನು ಜ್ಯೂ.ಎನ್ಟಿಆರ್ ಸಹ ಬೇಡವೆಂದು ಹೇಳಿದ್ದಾರಂತೆ.

ಕಂಗನಾ ಜೊತೆ ನಟಿಸುವ ಅವಕಾಶ
ಬಾಲಿವುಡ್ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕಂಗನಾ ರನೌತ್ ತಮಿಳಿನಲ್ಲಿ ನಟಿಸುತ್ತಿರುವ ತಲೈವಿ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರ ಆಫರ್ ಅನ್ನು ಬಾಲಕೃಷ್ಣಗೆ ನೀಡಲಾಗಿತ್ತಂತೆ. ಆದರೆ ಅದನ್ನು ನಿರ್ವಹಿಸಲು ಬಾಲಕೃಷ್ಣ ಸಾರಾಸಗಟಾಗಿ ನಿರಾಕರಿಸಿದ್ದಾರೆ.

ಬಾಲಕೃಷ್ಣ ಅವರನ್ನು ಕೇಳಲಾಗಿತ್ತು
ಜಯಲಲಿತಾ ಕುರಿತ ಕತೆಯ 'ತಲೈವಿ' ಸಿನಿಮಾದಲ್ಲಿ ಎನ್ಟಿಆರ್ ಪಾತ್ರ ನಿರ್ವಹಿಸುವಂತೆ, ಎನ್ಟಿಆರ್ ಮಗ ಬಾಲಕೃಷ್ಣ ಅವರನ್ನು ಕೇಳಲಾಗಿತ್ತು, ಆದರೆ ತಾವು ತಲೈವಿ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಬಾಲಕೃಷ್ಣ ಹೇಳಿದ್ದಾರಂತೆ.

ಜಯಲಲಿತಾ ಮತ್ತು ಎನ್ಟಿಆರ್ ಉತ್ತಮ ಗೆಳೆಯರಾಗಿದ್ದರು
ಜಯಲಲಿತಾ ಮತ್ತು ಎನ್ಟಿಆರ್ ಅವರು ಉತ್ತಮ ಗೆಳೆಯರಾಗಿದ್ದರೂ ಸಿನಿಮಾದಿಂದಲೇ ರಾಜಕೀಯದ ಉತ್ತುಂಗಕ್ಕೆ ಏರಿದವರು. ಸಿನಿಮಾದಲ್ಲಿಯೂ ಒಟ್ಟಿಗೆ ನಟಿಸಿದ್ದ ಇವರುಗಳು, ರಾಜಕೀಯ ರಂಗದಲ್ಲಿಯೂ ಉತ್ತಮ ಸ್ನೇಹಿತರಾಗಿದ್ದರು.

ಎನ್ಟಿಆರ್ ಪಾತ್ರ ನಿರ್ವಹಿಸಿರುವ ಬಾಲಕೃಷ್ಣ
ಬಾಲಕೃಷ್ಣ ಅವರು ತಮ್ಮ ತಂದೆಯ ಪಾತ್ರವನ್ನು ಈ ಹಿಂದೆ ನಿರ್ವಹಿಸಿದ್ದಾರೆ. ಎನ್.ಟಿ.ಆರ್ ಕತಾನಾಯಕುಡು, ಎನ್ಟಿಆರ್ ಮಹಾನಾಯಕುಡು ಎಂಬ ಎರಡು ಭಾಗಗಳಲ್ಲಿ ತಯಾರಾದ ಸಿನಿಮಾದಲ್ಲಿ ಅವರು ತಮ್ಮ ತಂದೆ ಎನ್ಟಿಆರ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ.

ಎಂಜಿಆರ್ ಪಾತ್ರದಲ್ಲಿ ಅರವಿಂದ ಸ್ವಾಮಿ
ತಲೈವಿ ಸಿನಿಮಾದಲ್ಲಿ ಕಂಗನಾ ರನೌತ್ ಜಯಲಲಿತಾ ಪಾತ್ರ ನಿರ್ವಹಿಸುತ್ತಿದ್ದು, ಎಂಜಿಆರ್ ಪಾತ್ರವನ್ನು ಅರವಿಂದ ಸ್ವಾಮಿ ನಿರ್ವಹಿಸುತ್ತಿದ್ದಾರೆ. ಚಿತ್ರವನ್ನು ಎಲ್.ವಿಜಯ್ ನಿರ್ದೇಶಿಸುತ್ತಿದ್ದು, ಕೊರೊನಾ ಲಾಕ್ಡೌನ್ ಕಾರಣದಿಂದ ಚಿತ್ರೀಕರಣ ಸದ್ಯಕ್ಕೆ ಸ್ಥಗಿತಗೊಂಡಿದೆ. ಚಿತ್ರದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ.


Click it and Unblock the Notifications











