"ಆ ಸಿನ್ಮಾದಲ್ಲಿ ನಾನು ಶಿವಣ್ಣನನ್ನು ನೋಡಿ ಕಾಪಿ ಮಾಡ್ದೆ"; ಸತ್ಯ ಒಪ್ಪಿಕೊಂಡ ಬಾಲಯ್ಯ
ತೆಲುಗು ನಟ ನಂದಮೂರಿ ಬಾಲಕೃಷ್ಣ ಹಾಗೂ ಶಿವರಾಜ್ಕುಮಾರ್ ನಡುವೆ ಆತ್ಮೀಯ ಸ್ನೇಹವಿದೆ. ಸಾಕಷ್ಟು ವೇದಿಕೆಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಬಾಲಯ್ಯನ ಚಿತ್ರದಲ್ಲಿ ಶಿವಣ್ಣ ಹೆಜ್ಜೆ ಹಾಕಿರುವುದು ಇದೆ. ಇಬ್ಬರೂ ಸೇರಿ ಒಟ್ಟಿಗೆ ನಟಿಸುವ ಬಗ್ಗೆ ಕೂಡ ಮಾತನಾಡುತ್ತಿರುತ್ತಾರೆ. ಇದೀಗ ಶಿವಣ್ಣನನ್ನು ನೋಡಿ ಆ ಚಿತ್ರದ ಗೆಟಪ್ ಕಾಪಿ ಮಾಡ್ದೆ ಎಂದು ಬಾಲಯ್ಯ ಹೇಳಿದ್ದಾರೆ.
ಬಾಲಕೃಷ್ಣ ನಟನೆಯ 'ಅಖಂಡ- 2' ಚಿತ್ರದ ಟ್ರೈಲರ್ ಅನ್ನು ಶಿವರಾಜ್ಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಚಿಂತಾಮಣಿಯಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೀತು. ಮಳೆಯ ನಡುವೆಯೂ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ಬಾಲಯ್ಯ-ಶಿವಣ್ಣನನ್ನು ಕಣ್ತುಂಬಿಕೊಂಡರು. ಬೊಯಪಾಟಿ ಶ್ರೀನು ನಿರ್ದೇಶನದ 'ಅಖಂಡ- 2' ಸಿನಿಮಾ ಡಿಸೆಂಬರ್ 5ಕ್ಕೆ ತೆರೆಗೆ ಬರಲಿದೆ.

ಮೊದಲಿನಿಂದಲೂ ಎನ್ಟಿಆರ್ ಹಾಗೂ ಡಾ. ರಾಜ್ಕುಮಾರ್ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯ ಇದೆ. ಎನ್ಟಿಆರ್- ಅಣ್ಣಾವ್ರು ಸ್ನೇಹಿತರಾಗಿದ್ದರು. ಬಳಿಕ ಶಿವಣ್ಣ- ಬಾಲಯ್ಯ, ಜ್ಯೂ. ಎನ್ಟಿಆರ್- ಪುನೀತ್ ರಾಜ್ಕುಮಾರ್ ನಡುವೆ ಸ್ನೇಹ, ಸಹೋದರ ಭಾವ ಮುಂದುವರೆದಿದೆ. ಶಿವಣ್ಣ ನಟಿಸಿದ 'ಮಾಸ್ ಲೀಡರ್' ಆಡಿಯೋ ಲಾಂಚ್ ಕಾರ್ಯಕ್ರಮ, 'ಶಿವಲಿಂಗ' ಚಿತ್ರದ 100ನೇ ದಿನದ ಸಂಭ್ರಮಾಚರಣೆಗೆ ಬಾಲಯ್ಯ ಮುಖ್ಯ ಅತಿಥಿಯಾಗಿ ಬಂದಿದ್ದರು.
ಬಾಲಕೃಷ್ಣ ನಟನೆಯ 'ಗೌತಮಿಪುತ್ರ ಶಾತಕರ್ಣಿ' ಚಿತ್ರ ಹಾಡೊಂದರಲ್ಲಿ ಶಿವಣ್ಣ ಮಿಂಚಿದ್ದರು. ಕನ್ನಡ ಬಿಟ್ಟು ಪರಭಾಷೆಯಲ್ಲಿ ಇದು ಅವರ ಮೊದಲ ಸಿನಿಮಾ ಆಗಿತ್ತು. 'ಅಖಂಡ- 2' ಕಾರ್ಯಕ್ರಮದಲ್ಲಿ ತಮ್ಮ ಎರಡೂ ಕುಟುಂಬಗಳ ನಡುವಿನ ಒಡನಾಟ, ತಮ್ಮಿಬ್ಬರ ಸ್ನೇಹದ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ. ಶಿವಣ್ಣನ 'ಮಫ್ತಿ' ಚಿತ್ರ ನೋಡಿ ನಾನು 'ವೀರಸಿಂಹರೆಡ್ಡಿ' ಸಿನಿಮಾ ಗೆಟಪ್ ಕಾಪಿ ಮಾಡ್ದೆ ಎಂದು ಬಾಲಕೃಷ್ಣ ಹೇಳಿದ್ದಾರೆ.
ಬಾಲಯ್ಯ ಮಾತನಾಡಿ "ಅಲ್ಲಿ ತಂದೆ ಎನ್ಟಿಆರ್, ಇಲ್ಲಿ ಕನ್ನಡ ಕಂಠೀರವ ಡಾ. ರಾಜ್ಕುಮಾರ್. ಅವರಿಬ್ಬರು ಮಾಡದ ಪಾತ್ರಗಳಿಲ್ಲ. ಆ ವಾರಸತ್ವವನ್ನು ಸಹೋದರ ಶಿವಣ್ಣ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹಿಂದೂಪುರದಲ್ಲಿ 3ನೇ ಬಾರಿ ಶಾಸಕನಾಗಿ ಆಯ್ಕೆ ಆಗಿದ್ದೇನೆ. ಹಿಂದೂಪುರದ ಜನರಿಗೆ ನನ್ನ ಧನ್ಯವಾದ. 'ಅಖಂಡ -2' ಚಿತ್ರದ ಸಕ್ಸಸ್ ಸೆಲೆಬ್ರೇಷನ್ ಕೂಡ ಇದೇ ಚಿಂತಾಮಣಿಯಲ್ಲಿ ಮಾಡ್ತೀವಿ" ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿದ ಬಾಲಕೃಷ್ಣ "ವೀರಸಿಂಹ ರೆಡ್ಡಿ ಚಿತ್ರದಲ್ಲಿ ನಾನು ಸಹೋದರ ಶಿವಣ್ಣನ 'ಮಫ್ತಿ' ಚಿತ್ರದ ಗೆಟಪ್ ಕಾಪಿ ಮಾಡ್ದೆ. ಕೊಟ್ಟು ತಗೋಳ್ಳೋದು ಅಷ್ಟೆ. ಒಬ್ಬ ಕಲಾವಿದನನ್ನು ನೋಡಿ ಸ್ಫೂರ್ತಿ ಪಡೆಯುತ್ತೇವೆ ಅಷ್ಟೆ. ಎಲ್ಲಿಂದ ಏನು ತಗೋಬೇಕು, ಯಾವುದು ನಾವು ಮಿಸ್ ಮಾಡುತ್ತಿದ್ದೇವೆ ಎನ್ನುವುದು ಮುಖ್ಯ. ಇದು ಎಲ್ಲರಿಂದ ಸಾಧ್ಯವಿಲ್ಲ, ನಮ್ಮಿಬ್ಬರಿಗೆ ಸಾಧ್ಯವಾಗಿದೆ" ಎಂದು ವಿವರಿಸಿದ್ದಾರೆ.
ನರ್ತನ್ ನಿರ್ದೇಶನದ 'ಮಫ್ತಿ' ಚಿತ್ರದಲ್ಲಿ ಬೈರತಿ ರಣಗಲ್ ಎಂಬ ಮಾಫಿಯಾ ಡಾನ್ ಪಾತ್ರದಲ್ಲಿ ಶಿವರಾಜ್ಕುಮಾರ್ ನಟಿಸಿದ್ದರು. ಕಪ್ಪು ಶರ್ಟ್, ಕಪ್ಪು ಲುಂಗಿ ಉಟ್ಟು ಖಡಕ್ ಅಭಿನಯ ಪ್ರದರ್ಶಿಸಿದ್ದರು. ಥೇಟ್ ಅದೇ ಗೆಟಪ್ನಲ್ಲಿ 'ವೀರಸಿಂಹ ರೆಡ್ಡಿ' ಚಿತ್ರದಲ್ಲಿ ಬಾಲಯ್ಯ ಅಬ್ಬರಿಸಿದ್ದರು. ದುನಿಯಾ ವಿಜಯ್ ಈ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದು ವಿಶೇಷ.
ಒಳ್ಳೆ ಕಥೆ ಸಿಕ್ಕರೆ ಖಂಡಿತ ನಾನು ಹಾಗೂ ಶಿವಣ್ಣ ಒಟ್ಟಿಗೆ ಒಂದೇ ಚಿತ್ರದಲ್ಲಿ ನಟಿಸುತ್ತೇವೆ ಎಂದು ಬಾಲಕೃಷ್ಣ ಹೇಳ್ತಾ ಬರ್ತಿದ್ದಾರೆ. 'ಮಫ್ತಿ' ಚಿತ್ರವನ್ನು ಬಾಲಯ್ಯ ತೆಲುಗಿಗೆ ರೀಮೆಕ್ ಮಾಡ್ತಾರೆ ಎನ್ನುವ ಊಹಾಪೋಹ ಕೂಡ ಕೇಳಿಬಂದಿತ್ತು. ಆದರೆ ಅದು ನಿಜವಾಗಲಿಲ್ಲ. ತಮಿಳಿನಲ್ಲಿ ಸಿಂಬು ರೀಮೆಕ್ ಮಾಡಿದ್ದರು.


Click it and Unblock the Notifications











