ನಾನು 'ಕನ್ನಡಿಗ' ಎಂದವನಿಗೆ ಕನ್ನಡದಲ್ಲೇ ನೀತಿಪಾಠ ಮಾಡಿದ ಬಾಲಯ್ಯ; ವಿಡಿಯೋ ವೈರಲ್
ತೆಲುಗು ನಟ ಬಾಲಕೃಷ್ಣ ನಟನೆಯ 'ಅಖಂಡ- 2' ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ತಿದೆ. ಆದರೂ ಫಸ್ಟ್ ವೀಕೆಂಡ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಇನ್ನು ಚಿತ್ರದಲ್ಲಿ ಬಾಲಯ್ಯ ಆರ್ಭಟ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಬಾಲಕೃಷ್ಣ ಅಂದ್ರೆ ಹೈವೋಲ್ಟೇಜ್ ಆಕ್ಷನ್ ಹಾಗೂ ಖಡಕ್ ಡೈಲಾಗ್ಸ್.. ಅವರ ಪ್ರತಿ ಸಿನಿಮಾಗಳಲ್ಲಿ ಅದರ ಬಗ್ಗೆ ನಿರ್ದೇಶಕರು ಗಮನ ಹರಿಸುತ್ತಾರೆ. 'ಅಖಂಡ- 2' ಚಿತ್ರದಲ್ಲಿ ಅದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಚಿತ್ರದಲ್ಲಿ ಬಾಲಯ್ಯ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಮುರಳಿಕೃಷ್ಣ ಪಾತ್ರ ಪರಿಚಯಿಸೋ ಸನ್ನಿವೇಶದಲ್ಲಿ ಜಬರ್ದಸ್ತ್ ಆಕ್ಷನ್ ಸೀಕ್ವೆನ್ಸ್ ಇದೆ. ಜೊತೆಗೆ ಖಡಕ್ ಡೈಲಾಗ್ಸ್ ಕೂಡ ಅಭಿಮಾನಿಗಳಿಗೆ ಕಿಕ್ ಕೊಡುತ್ತದೆ.

ಫೈಟ್ ವೇಳೆ ಪಾತ್ರಧಾರಿ ನಾನು 'ಕನ್ನಡಿಗ' ಎಂದು ಮುಂದೆ ಬಂದಾಗ ದಿಢೀರನೆ ಬಾಲಯ್ಯ ಕನ್ನಡದಲ್ಲೇ ತಿರುಗೇಟು ನೀಡುವ ಸನ್ನಿವೇಶ ಅದು. ಹೌದು ತೆಲುಗು ಚಿತ್ರದಲ್ಲಿ ಕನ್ನಡದ ಸಂಭಾಷಣೆ ಇದೆ. ಅದನ್ನು ಸ್ವತಃ ಬಾಲಯ್ಯ ಡಬ್ ಮಾಡಿದ್ದಾರೆ. ಆ ವೀಡಿಯೋ ಈಗ ಸಖತ್ ವೈರಲ್ ಆಗ್ತಿದೆ. ಈ ಸನ್ನಿವೇಶದಲ್ಲಿ ಇದೇ ರೀತಿ ಹಿಂದಿ ಹಾಗೂ ತಮಿಳು ಡೈಲಾಗ್ಸ್ ಕೂಡ ಇದೆ. ಎರಡು ನಿಮಿಷದ ಈ ಸ್ವಗತ ಚಿತ್ರದಲ್ಲಿ ಹೈಲೆಟ್ ಅನಿಸಿಕೊಂಡಿದೆ. ಬಾಲಯ್ಯ ಅಭಿಮಾನಿಗಳಿಗೆ ಇಷ್ಟವಾಗಿದೆ.
"ಕರ್ನಾಟಕ ನನ್ನ ಸಹೋದರನ ಮನೆ.. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಕುವೆಂಪು ಹೇಳಿದ್ದನ್ನು ನೀನು ಹಿಂದೆ ಕೇಳಿದ್ದಾ. ಕೃಷ್ಣದೇವರಾಯ ಆಗ ವೀರ, ದೊಡ್ಮನೆ ಕಂಠೀರವ ರಾಜಕುಮಾರ ಆಗ ವೀರ. ಇಂತಹ ಕೆಲಸ ಮಾಡುವ ನಿನಗೆ 'ಕನ್ನಡಿಗ' ಎಂದು ಹೇಳಿಕೊಳ್ಳುವ ಅರ್ಹತೆ ಇಲ್ಲ" ಎಂದು ಆತನಿಗೆ ಹೊಡೆಯುವ ಸನ್ನಿವೇಶ ಚಿತ್ರದಲ್ಲಿದೆ.
ನಂದಮೂರಿ ಹಾಗೂ ಅಣ್ಣಾವ್ರ ಕುಟುಂಬದ ಮಧ್ಯೆ ಆತ್ಮೀಯ ಒಡನಾಟವಿದೆ. ಚಿಕ್ಕಬಳ್ಳಾಪುರದಲ್ಲಿ ನಡೆದ 'ಅಖಂಡ- 2' ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಶಿವರಾಜ್ಕುಮಾರ್ ಅತಿಥಿಯಾಗಿ ಹೋಗಿದ್ದರು. ಅಣ್ಣಾವ್ರು- ಎನ್ಟಿಆರ್ ಸ್ನೇಹಿತರಾಗಿದ್ದರು. ಅಪ್ಪು ಹಾಗೂ ತಾರಕ್ ಕೂಡ ಆತ್ಮೀಯರಾಗಿದ್ದರು. ಹಾಗಾಗಿ "ಕರ್ನಾಟಕ ನನ್ನ ಸಹೋದರನ ಮನೆ" ಎನ್ನುವ ಅರ್ಥದಲ್ಲಿ ಡೈಲಾಗ್ ಬರೆಸಿದಂತಿದೆ.
ಬೊಯಪಾಟಿ ಶ್ರೀನು ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಅಖಂಡ'-2 ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ. ಕನ್ನಡಕ್ಕೂ ಡಬ್ ಆಗಿ ಬಂದಿದೆ. 3 ವರ್ಷಗಳ ಹಿಂದೆ ಬಂದಿದ್ದ 'ಅಖಂಡ' ಚಿತ್ರ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ಸೀಕ್ವೆಲ್ ಮಾಡುವ ಪ್ರಯತ್ನ ಮಾಡಿದ್ದರು. ಕಳೆದ ವಾರವೇ ಸಿನಿಮಾ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ಕೊನೆ ಹಂತದಲ್ಲಿ ಸಿನಿಮಾ ಬಿಡುಗಡೆ ರದ್ದಾಗಿತ್ತು. ಎಲ್ಲಾ ಸಮಸ್ಯೆ ಮೀರಿ ಸಿನಿಮಾ ತೆರೆಗಪ್ಪಳಿಸಿದೆ.
ಲಾಜಿಕ್ ಇಲ್ಲದ ಸೀನ್ಗಳೇ ಹೆಚ್ಚಾಗಿದೆ. ಅಲ್ಲಲ್ಲಿ ಕೆಲ ಒಳ್ಳೆ ಸನ್ನಿವೇಶಗಳನ್ನು ಬಿಟ್ಟರೆ ಒಟ್ಟಾರೆಯಾಗಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿದೆ. ಇನ್ನು ಬಾಲಯ್ಯ ಓವರ್ಡೋಸ್ ಆಕ್ಷನ್ ಸೀಕ್ವೆನ್ಸ್ ಕೆಲವೊಮ್ಮೆ ಬೇಸರ ಮೂಡಿಸುತ್ತದೆ. ಇಂತಹ ಕೆಲ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗ್ತಿದೆ.
14 ರೀಲ್ಸ್ ಪ್ಲಸ್ ಎಂಟರ್ಟೈನ್ಮೆಂಟ್ ಹಾಗೂ ಐವಿ ಎಂಟರ್ಟೈನ್ಮೆಂಟ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿವೆ 150ರಿಂದ 200 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಹೈದರಾಬಾದ್, ಹಿಮಾಲಯ, ತಿರುವಣ್ಣಾಮಲೈ ಹಾಗೂ ಕುಂಭಮೇಳದಲ್ಲಿ 'ಅಖಂಡ- 2' ಚಿತ್ರದ ಚಿತ್ರೀಕರಣ ನಡೆದಿತ್ತು. ಚಿತ್ರಕ್ಕೆ ಎಸ್. ತಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
'ಅಖಂಡ-2' ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿತ್ತು. ಒಂದು ದಿನ ಮುನ್ನ ಪ್ರೀಮಿಯರ್ ಶೋಗಳು ಆರಂಭವಾಗಿದ್ದವು. ಪ್ರೇಕ್ಷಕರು ಮುಗಿಬಿದ್ದು ಟಿಕೆಟ್ ಖರೀದಿಸಿದ್ದರು. ವಿದೇಶಗಳಲ್ಲಿ ಕೂಡ ಸಿನಿಮಾ ಸಖತ್ ಸದ್ದು ಮಾಡ್ತಿದೆ.


Click it and Unblock the Notifications











