ಜೂ.ಎನ್ಟಿಆರ್ ರಾಜಕೀಯ ಪ್ರವೇಶಕ್ಕೆ ಬಾಲಕೃಷ್ಣ ಅಡ್ಡಗಾಲು: ಸಂಚಲನ ಮೂಡಿಸಿದ ಹೇಳಿಕೆ
ಆಂಧ್ರಪ್ರದೇಶ-ತೆಲಂಗಾಣದ ಪ್ರಮುಖ ರಾಜಕೀಯ ಮತ್ತು ಸಿನಿಮಾತಾರೆಯರ 'ನಂದಮೂರಿ' ಕುಟುಂಬದಲ್ಲಿ ದೊಡ್ಡ ಮಟ್ಟದ ವೈಮನಸ್ಯ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸೀನಿಯರ್ ಎನ್ಟಿಆರ್ ಇದ್ದಾಗಿನಿಂದಲೂ ಈ ಕುಟುಂಬದಲ್ಲಿ ವೈಮಸ್ಯಗಳು ಸಾಮಾನ್ಯವಾಗಿದ್ದವು. ಜೂ.ಎನ್ಟಿಆರ್ ತಂದೆ ಹರಿಪ್ರಸಾದ್ ಕಾಲವಾದ ಬಳಿಕ ವೈಮನಸ್ಯ ಇನ್ನಷ್ಟು ಹೆಚ್ಚಾಗಿದ್ದು ಇದೀಗ ನಟ, ಶಾಸಕ ಬಾಲಕೃಷ್ಣ, ಜೂ.ಎನ್ಟಿಆರ್ ಕುರಿತಂತೆ ನೀಡಿರುವ ಹೇಳಿಕೆ ತೆಲುಗು ರಾಜ್ಯಗಳ ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ.
ಸೀನಿಯರ್ ಎನ್ಟಿಆರ್ ಸ್ಥಾಪಿಸಿದ್ದ ಟಿಡಿಪಿ ಪಕ್ಷದ ಶಾಸಕರಾಗಿರುವ ನಟ ಬಾಲಕೃಷ್ಣ ಪಕ್ಷದ ಪ್ರಮುಖ ಮುಖಂಡರಲ್ಲೊಬ್ಬರು. ಕಳೆದ ಆಂಧ್ರ, ತೆಲಂಗಾಣ ವಿಧಾನಸಭೆ ಚುನಾವಣೆ ಬಳಿಕ ಟಿಡಿಪಿ ಪಕ್ಷ ಚಿಂತಾಜನಕ ಸ್ಥಿತಿಯಲ್ಲಿದೆ. ಈ ಸಮಯದಲ್ಲಿ ಜೂ.ಎನ್ಟಿಆರ್ ಸಕ್ರಿಯ ರಾಜಕೀಯ ಪ್ರವೇಶ ಮಾಡಬೇಕು ಟಿಡಿಪಿ ಪಕ್ಷಕ್ಕೆ ನವಚೈತನ್ಯ ನೀಡಬೇಕು ಎಂಬ ಬೇಡಿಕೆಗಳು ಹೆಚ್ಚಾಗಿವೆ.
ಜೂ.ಎನ್ಟಿಆರ್, ಬಾಲಕೃಷ್ಣಗೆ ಸ್ವಂತ ಅಣ್ಣನ ಮಗ. ಆದರೆ ಜೂ.ಎನ್ಟಿಆರ್ ಟಿಡಿಪಿ ಪಕ್ಷದ ಸಕ್ರಿಯ ರಾಜಕಾರಣಕ್ಕೆ ಬರುವುದು ಬಾಲಕೃಷ್ಣಗೆ ಇಷ್ಟವಿಲ್ಲ. ಈವರೆಗೆ ತೆರೆ-ಮರೆಯಲ್ಲಿದ್ದ ಈ ವಿಷಯ ಈಗ ಬಹಿರಂಗವಾಗಿದೆ. ಜೂ.ಎನ್ಟಿಆರ್ ರಾಜಕೀಯ ಪ್ರವೇಶಿಸುವುದು ತಮಗೆ ಇಷ್ಟವಿಲ್ಲವೆಂದು ಬಾಲಕೃಷ್ಣ ನೇರವಾಗಿಯೇ ಹೇಳಿದ್ದಾರೆ.

'ಜೂ.ಎನ್ಟಿಆರ್ ಬಂದರೆ ಪಕ್ಷಕ್ಕೆ ಪೆಟ್ಟು ಬಿದ್ದರೂ ಬೀಳಬಹುದು'
ಇತ್ತೀಚೆಗೆ ಖಾಸಗಿ ಮಾಧ್ಯಮಕ್ಕೆ ಬಾಲಕೃಷ್ಣ ಸಂದರ್ಶನ ನೀಡಿದ್ದು, 'ಟಿಡಿಪಿ ಪಕ್ಷ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಜೂ.ಎನ್ಟಿಆರ್ ಸಕ್ರಿಯ ರಾಜಕೀಯಕ್ಕೆ ಬರಬೇಕು ಎನ್ನಲಾಗುತ್ತಿದೆ ಇದಕ್ಕೆ ನಿಮ್ಮ ಅಭಿಪ್ರಾಯವೇನು?' ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿರುವ ಬಾಲಕೃಷ್ಣ, 'ಜೂ.ಎನ್ಟಿಆರ್ ಸಕ್ರಿಯ ರಾಜಕೀಯಕ್ಕೆ ಬಂದರೆ ಪಕ್ಷಕ್ಕೆ ಒಳಿತಾಗುತ್ತದೆ ಎಂದು ಹೇಳಲಾಗದು. ಆತ ಬರುವುದರಿಂದ ಪಕ್ಷಕ್ಕೆ ಪೆಟ್ಟು ಸಹ ಬೀಳಬಹುದು' ಎಂದಿದ್ದಾರೆ. ಆ ಮೂಲಕ ಜೂ.ಎನ್ಟಿಆರ್ ಟಿಡಿಪಿ ಪಕ್ಷದ ಸಕ್ರಿಯ ರಾಜಕೀಯಕ್ಕೆ ಬರುವುದು ತಮಗೆ ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆ ವಿಷಯದ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ: ಬಾಲಕೃಷ್ಣ
ಮುಂದುವರೆದು ಮಾತನಾಡಿರುವ ಬಾಲಕೃಷ್ಣ, 'ಅವರವರ ಇಷ್ಟ ಅವರದ್ದು ಅವರಿಗೆ ಇಷ್ಟವಾದ ವಿಷಯಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಜೂ.ಎನ್ಟಿಆರ್ ರಾಜಕೀಯಕ್ಕೆ ಬರುತ್ತಾರೋ ಇಲ್ಲವೋ ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ' ಎಂದು ಖಾರವಾಗಿಯೇ ಹೇಳಿದ್ದಾರೆ ಬಾಲಕೃಷ್ಣ.

ಅಂಥವರಿಗಷ್ಟೆ ಅವಕಾಶ ಕೊಡುತ್ತೇವೆ: ಬಾಲಕೃಷ್ಣ
'ಏನೋ ರಾಮರಾವ್ (ಸೀನಿಯರ್ ಎನ್ಟಿಆರ್) ಸಿಎಂ ಆದರೆಂದೋ ಅಥವಾ ಸಿನಿಮಾದಲ್ಲಿ ಇದ್ದೇವೆ ಎಂದ ಮಾತ್ರಕ್ಕೆ ಎಲ್ಲ ಆಗಿಬಿಡುವುದಿಲ್ಲ. ಈಗ ನಾನಿದ್ದೇನೆ, ನನ್ನ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಾನು ಪಾರದರ್ಶಕ ವ್ಯಕ್ತಿ. ನಮ್ಮ ಪಕ್ಷದ ಕಾರ್ಯಕರ್ತರು ಸಹ ಪಾರದರ್ಶಕ ವ್ಯಕ್ತಿತ್ವವುಳ್ಳವರು. ಅಂಥಹವರಿಗಷ್ಟೆ ನಮ್ಮ ಪಕ್ಷದಲ್ಲಿ ಅವಕಾಶ ನೀಡಲಾಗುತ್ತದೆ. ಡಿಪ್ಲೋಮ್ಯಾಟಿಕ್ ಆಗಿರುವವರಿಂದ ಪ್ರಯೋಜನವಿಲ್ಲ' ಎಂದಿದ್ದಾರೆ ಬಾಲಕೃಷ್ಣ.
Recommended Video

ಯುವಕರನ್ನು ಸೆಳೆಯುವ ಕೆಲಸ ನನಗೆ ಬಿಟ್ಟುಬಿಡಿ: ಬಾಲಕೃಷ್ಣ
'ಕಳೆದ ಮೀಟಿಂಗ್ನಲ್ಲಿ ಸಹ ಯುವಕರನ್ನು ನಾವು ಗಮನಿಸುತ್ತಿಲ್ಲ ಎಂಬ ಮಾತುಗಳು ಕೇಳಿಬಂತು. ನಾನು ಹೇಳಿದೆ ಯುವಕರನ್ನು ಸೆಳೆಯುವ ಜವಾಬ್ದಾರಿ ನನಗೆ ಬಿಟ್ಟುಬಿಡಿ. ನಾನು ಅವರನ್ನು ನೋಡಿಕೊಳ್ಳುತ್ತೇನೆ. ನನಗಿನ್ನೂ ಈಗ 60 ಆಗಿದೆ ಅಷ್ಟೆ' ಎಂದಿದ್ದಾರೆ ಬಾಲಕೃಷ್ಣ. ಪಕ್ಷಕ್ಕೆ ಯುವಕರನ್ನು ಸೆಳೆಯಬೇಕೆಂದೇ ಜೂ.ಎನ್ಟಿಆರ್ ಅನ್ನು ಸಕ್ರಿಯ ರಾಜಕೀಯಕ್ಕೆ ಕರೆತರಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ಬಾಲಕೃಷ್ಣ, ಯುವಕರನ್ನು ಸೆಳೆಯುವ ಕಾರ್ಯವನ್ನು ನಾನೇ ಮಾಡುತ್ತೇನೆ ಎಂದಿದ್ದಾರೆ.


Click it and Unblock the Notifications











