ತೆಲುಗು ಚಿತ್ರರಂಗದ ನಾಯಕ ಪಟ್ಟ ಚಿರಂಜೀವಿಗೆ: ಬಾಲಕೃಷ್ಣ ಗರಂ
ತೆಲುಗು ಚಿತ್ರರಂಗದ ಇಬ್ಬರು ದಿಗ್ಗಜ ನಟರಾದ ಚಿರಂಜೀವಿ ಮತ್ತು ಬಾಲಕೃಷ್ಣ ನಡುವೆ ನಿಂತಿದ್ದ ಮಾತಿನ ಸಮರ ಈಗ ಮತ್ತೆ ಪ್ರಾರಂಭವಾಗುವ ಲಕ್ಷಣ ಗೋಚರಿಸಿದೆ.
Recommended Video
ನಟ, ಶಾಸಕ ಬಾಲಕೃಷ್ಣ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು ಅವರ ಮಾತುಗಳು ಪರೋಕ್ಷವಾಗಿ ಚಿರಂಜೀವಿ ಅವರನ್ನುದ್ದೇಶಿಸಿಯೇ ಆಗಿದ್ದವು ಎಂಬುದರಲ್ಲಿ ಅನುಮಾನವಿಲ್ಲ.
ಬಾಲಕೃಷ್ಣ ಅಸಮಾಧಾನಕ್ಕೆ ಕಾರಣ ತೆಲುಗು ಚಿತ್ರರಂಗವು ತನ್ನನ್ನು ನಿರ್ಲಕ್ಷಿಸಿ ಚಿರಂಜೀವಿ ಅವರನ್ನು ನಾಯಕನನ್ನಾಗಿ ಪರಿಗಣಿಸಿದೆ ಎಂಬುದೇ ಆಗಿದೆ. ಬಾಲಕೃಷ್ಣ ಏನೆಂದರು? ಬಾಲಕೃಷ್ಣ ಸಿಟ್ಟಾಗಲು ಕಾರಣವೇನು? ಎಲ್ಲ ಮಾಹಿತಿ ಲೇಖನದಲ್ಲಿ.

ಚಿರಂಜೀವಿ ಮನೆಯಲ್ಲಿ ಸಭೆ ನಡೆಸಿದ್ದಕ್ಕೆ ಅಸಮಾಧಾನ?
ತೆಲಂಗಾಣ ಸಿನಿಮಾಟೋಗ್ರಫಿ ಸಚಿವರು ಸೇರಿದಂತೆ ತೆಲುಗು ಸಿನಿರಂಗದ ಪ್ರಮುಖರು ಇತ್ತೀಚೆಗೆ ಚಿರಂಜೀವಿ ನಿವಾಸದಲ್ಲಿ ಸಭೆ ಸೇರಿ ಕೊರೊನಾದಿಂದ ಜರ್ಜರಿತವಾಗಿರುವ ತೆಲುಗು ಚಿತ್ರರಂಗದ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದರು. ಇದರಲ್ಲಿ ಬಾಲಕೃಷ್ಣ ಭಾಗವಹಿಸಿರಲಿಲ್ಲ. ಈ ಸಭೆಯೇ ಬಾಲಕೃಷ್ಣ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂಬ ಬಾಲಕೃಷ್ಣ
ಎನ್ಟಿಆರ್ ಜಯಂತಿ ಸಂದರ್ಭ ಈ ಬಗ್ಗೆ ಮಾತನಾಡಿದ ಬಾಲಕೃಷ್ಣ, 'ಸಿನಿಮಾ ಉದ್ಯಮದ ಪ್ರಮುಖರು ಸಭೆ ನಡೆಸಿದ್ದಾಗಿ ನಂತರ ಅವರೆಲ್ಲರೂ ತೆಲಂಗಾಣ ಹಾಗೂ ಆಂಧ್ರ ಸಿಎಂ ಅವರನ್ನು ಭೇಟಿ ಆಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ನನ್ನನ್ನು ಯಾರೂ ಕರೆದಿಲ್ಲ' ಎಂದು ಬಾಲಕೃಷ್ಣ ಹೇಳಿದ್ದಾರೆ. ಬಾಲಕೃಷ್ಣ ಅವರ ಈ ಹೇಳಿಕೆ ವಿವಾದ ಎಬ್ಬಿಸಿದೆ.

ವೈಯಕ್ತಿಕವಾಗಿ ಯಾರೂ ತಿಳಿಸಿಲ್ಲ: ಬಾಲಕೃಷ್ಣ
ಸರ್ಕಾರಗಳೊಂದಿಗೆ ತೆಲುಗು ಸಿನಿಪ್ರಮುಖರು ಚರ್ಚಿಸುತ್ತಿರುವ ವಿಷಯದ ಬಗ್ಗೆ ನನಗೆ ಯಾರೂ ವೈಯಕ್ತಿಕವಾಗಿ ತಿಳಿಸಿಲ್ಲ, ಬದಲಿಗೆ ಟಿವಿಗಳಲ್ಲಿ ಬರುತ್ತಿರುವುದನ್ನು ನೋಡಿದೆ. ಮಾತುಕತೆ ಫಲಪ್ರದವಾದಲ್ಲಿ ಜೂನ್ ಎರಡನೇ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದ ಬಾಲಕೃಷ್ಣ, ಚಿತ್ರರಂಗಕ್ಕೆ ಸರ್ಕಾರವು ವಿಶೇಷ ಅನುದಾನ ನೀಡಬೇಕು ಎಂದು ಸಹ ಒತ್ತಾಯಿಸಿದರು.

ಬಾಲಕೃಷ್ಣ ಅಭಿಮಾನಿಗಳು ಗರಂ
ಬಾಲಕೃಷ್ಣ ಹೇಳಿಕೆ ಬಳಿಕ ಎನ್ಟಿಆರ್ ಕುಟುಂಬ ಅಭಿಮಾನಿಗಳು ಮತ್ತು ಬಾಲಕೃಷ್ಣ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ಚಿರಂಜೀವಿ ಅವರನ್ನೇ ಇದಕ್ಕೆ ಕಾರಣವನ್ನಾಗಿ ದೂಷಣೆ ಆರಂಭಿಸಿದ್ದಾರೆ. ಆದರೆ ಚಿರಂಜೀವಿ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಹಿಂದೊಮ್ಮೆ ಚಿರಂಜೀವಿ ವಿರುದ್ಧ ತೊಡೆತಟ್ಟಿದ್ದರು ಬಾಲಕೃಷ್ಣ
ಹಿಂದೊಮ್ಮೆ ಚುನಾವಣೆ ಸಂರ್ಭದಲ್ಲಿ ಬಾಲಕೃಷ್ಣ ವೇದಿಕೆ ಮೇಲೆ ಬಹಿರಂಗವಾಗಿ ಚಿರಂಜೀವಿ ವಿರುದ್ಧ ಗುಡುಗಿ ತೊಡೆತಟ್ಟಿ ಸವಾಲು ಎಸೆದಿದ್ದರು. ಅದು ಬಹುದೊಡ್ಡ ಫ್ಯಾನ್ಸ್ ವಾರ್ ಆಗಿಯೂ ಪರಿಣಮಿಸಿತ್ತು. ಆದರೆ ಅದಾಗಲೇ ರಾಜಕೀಯದಲ್ಲಿದ್ದ ಚಿರಂಜೀವಿ, 'ಬಾಲಕೃಷ್ಣ ಅವರದ್ದು ಮನಸ್ಸು ಮಕ್ಕಳ ಮನಸ್ಸು, ಬಾಲಕೃಷ್ಣ ಮಾತುಗಳನ್ನು 'ಬಾಲವಾಕ್ಯ' ಎಂದು ಪರಿಗಣಿಸಿ ಅದರ ಬಗ್ಗೆ ಗಮನ ಕೊಡುವುದಿಲ್ಲ ಎಂದು ಬುದ್ಧಿವಂತಿಕೆಯಿಂದಲೇ ಎದುರೇಟು ನೀಡಿದ್ದರು ಚಿರಂಜೀವಿ.


Click it and Unblock the Notifications











