ಬಾಲಯ್ಯಗೆ ಆಘಾತ, ಅಖಂಡ 2 ಪ್ರೀಮಿಯರ್ ಪ್ರದರ್ಶನ ರದ್ದು ; ಡಿಸೆಂಬರ್ 5ರಂದು ಬಿಡುಗಡೆಯಾಗುತ್ತಾ ? ಕಾರಣವೇನು ?
ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು, ಕಲಾವಿದರು, ತಂತ್ರಜ್ಞರನ್ನೆಲ್ಲಾ ಒಂದು ಕಡೆ ಸೇರಿಸಿ ಸಿನಿಮಾ ಮಾಡಿ, ಅದನ್ನು ತೆರೆಗೆ ತರೋ ಹೊತ್ತಿಗೇ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ. ಯಾಕೆಂದರೆ ಎಷ್ಟೇ ಶ್ರೀಮಂತ ನಿರ್ಮಾಪಕರೇ ಆದರೂ ಸಿನಿಮಾ ಅಂದಮೇಲೆ ಅದಕ್ಕೆ ಸಾಲದ ದುಡ್ಡು ಇದ್ದೇ ಇರುತ್ತದೆ. ಸರಿಯಾದ ಸಮಯಕ್ಕೆ ತೆಗೆದುಕೊಂಡ ಹಣ ನೀಡದೇ ಇದ್ದರೆ.. ಮಾಡಿದ ಸಾಲಕ್ಕೆ...
ಬಡ್ಡಿಯನ್ನು ಕೊಡದೇ ಇದ್ದರೆ.. ಯಾರು ಬಿಡುವುದಿಲ್ಲ. ಇದಕ್ಕೆ ಕೊನೆ ಗಳಿಗೆಯಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯದ ಮಹತ್ವಕಾಂಕ್ಷೆಯ ಚಿತ್ರ ''ಅಖಂಡ 2''ಗೆ ಬಡಿದ ಬರಸಿಡಿಲು ಸದ್ಯದ ಉದಾಹರಣೆ. ಹೌದು, ಅಸಲಿಗೆ ಬಾಲಯ್ಯ ಅಭಿನಯದ ''ಅಖಂಡ 2'' ನಾಳೆ ( ಡಿಸೆಂಬರ್ 5 ) ಬಿಡುಗಡೆಯಾಗಲಿದೆ.

ಇನ್ನೂ ಬಾಲಯ್ಯ ಕ್ರೇಜ್ ಹೇಗಿದೆ ಎನ್ನುವುದು ಬಹುತೇಕರಿಗೆ ಗೊತ್ತು. ಕೇವಲ ಹೈದರಾಬಾದ್ ಮಾತ್ರವಲ್ಲ ಸಪ್ತಸಾಗರದಾಚೆ ಕೂಡ ಬಾಲಯ್ಯ ಜಪ ಮಾಡುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಈ ಹಿನ್ನೆಲೆ ಇಂದು ( ಡಿಸೆಂಬರ್ 4 ) ಈ ಚಿತ್ರದ ಪ್ರೀಮಿಯರ್ ಪ್ರದರ್ಶನವನ್ನು ಚಿತ್ರತಂಡ ಆಯೋಜಿಸಿತ್ತು. ಹಲವರು ಈ ಪ್ರೀಮಿಯರ್ ಪ್ರದರ್ಶನದ ಟಿಕೆಟ್ಗಳನ್ನು ಮುಗಿಬಿದ್ದು ಖರೀದಿ ಮಾಡಿದ್ದರು. ಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದರು.
ಆದರೆ.. ''ಅಖಂಡ 2'' ತಂಡದ ಈ ಪ್ರೀಮಿಯರ್ ಪ್ರದರ್ಶನಗಳನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಲಾಗಿದೆ. ಈ ಕುರಿತು ಸೋಶಿಯಲ್ ಮೀಡಿಯಾ ಮೂಲಕ ಚಿತ್ರದ ನಿರ್ಮಾಣ ಸಂಸ್ಥೆ 14 ರೀಲ್ಸ್ ಪ್ಲಸ್ ಮಾಹಿತಿಯನ್ನು ಹಂಚಿಕೊಂಡಿದ್ದು ಈ ಪ್ರದರ್ಶನಗಳು ರದ್ದಾಗಲು ತಾಂತ್ರಿಕ ಸಮಸ್ಯೆ ಕಾರಣ ಎಂದು ಹೇಳಿದೆ. ಆದರೆ.. ಹೈದರಬಾದ್ನಲ್ಲಿ ಬೇರೆಯದ್ದೇ ಚರ್ಚೆ ನಡೆಯುತ್ತಿದೆ.
ಆ ಪ್ರಕಾರ ಪ್ರಖ್ಯಾತ ನಿರ್ಮಾಣ ಸಂಸ್ಥೆಯಲ್ಲಿ ಒಂದಾದ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆ ಮತ್ತು ''ಅಖಂಡ 2'' ನಿರ್ಮಾಣ ಸಂಸ್ಥೆಯಾದ 14 ರೀಲ್ಸ್ ಸಂಸ್ಥೆಯ ನಡುವೆ ತೆರೆಮರೆಯಲ್ಲಿ ಕಾನೂನು ಸಮರ ನಡೆಯುತ್ತಿದೆ. ಎರಡು ನಿರ್ಮಾಣ ಸಂಸ್ಥೆ ನಡುವೆ ಆಗಿದ್ದ ಆರ್ಥಿಕ ಒಪ್ಪಂದ ಈ ವಿವಾದಕ್ಕೆ ಕಾರಣ.
ಈ ವಿವಾದ ಇನ್ನೂ ಬಗೆಹರಿಯದ ಹಿನ್ನೆಲೆ ''ಅಖಂಡ 2'' ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಎರೋಸ್ ನ್ಯಾಯಾಲಯದ ಮೊರೆ ಹೋಗಿತ್ತು. ಈಗ ಹೈಕೋರ್ಟ್ ಎರೋಸ್ ಪರ ತೀರ್ಪು ನೀಡಿದ್ದು ''ಅಖಂಡ 2'' ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ. 14 ರೀಲ್ಸ್ ಸಂಸ್ಥೆಗೆ ನೀಡಬೇಕಿರುವ 28 ಕೋಟಿಯನ್ನು ಕೂಡಲೇ ಎರೋಸ್ ಸಂಸ್ಥೆಗೆ ನೀಡುವಂತೆ ತಾಕಿತ್ತು ಮಾಡಿದೆ.

ಹೀಗೆ ಕೊನೆ ಕ್ಷಣದಲ್ಲಿ ''ಅಖಂಡ 2'' ಬಿಡುಗಡೆಯ ಮೇಲೆ ಕಾರ್ಮೋಡ ಕವಿದಿದ್ದು, ಇಂದು ಪ್ರೀಮಿಯರ್ ಪ್ರದರ್ಶನಕ್ಕೆ ಕಾದು ಕುಂತ ಹಲವರಿಗೆ ನಿರಾಸೆಯಾಗಿದೆ. ನಾಳೆ ( ಡಿಸೆಂಬರ್ 5 ) ಅಖಂಡ ಭಾರತದೆಲ್ಲೆಡೆ ''ಅಖಂಡ 2'' ಬಿಡುಗಡೆಯಾಗುತ್ತಾ..? ಇಲ್ವಾ..? ಎನ್ನುವ ಪ್ರಶ್ನೆ ಈಗ ಬಾಲಯ್ಯ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಎದುರಾದ ಈ ಅಡೆತಡೆಯನ್ನು ಚಿತ್ರದ ನಿರ್ಮಾಣ ಸಂಸ್ಥೆ 14 ರೀಲ್ಸ್ ಪಾರು ಮಾಡುತ್ತಾ..? ''ಅಖಂಡ 2'' ಬಿಡುಗಡೆಯಾಗುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.
ಅಂದ್ಹಾಗೇ ಬೋಯಪಾಟಿ ಶ್ರೀನು ನಿರ್ದೇಶನದ ಈ ಚಿತ್ರಕ್ಕೆ ತಮನ್ ಸಂಗೀತ ನಿರ್ದೇಶನ ಇದೆ.ರಾಮ್ ಅಚಂತಾ ಮತ್ತು ಗೋಪಿ ಅಚಂತಾ ಈ ಚಿತ್ರವನ್ನು 14 ರೀಲ್ಸ್ ಬ್ಯಾನರ್ ಅಡಿ ನಿರ್ಮಾಣ ಮಾಡಿದ್ದಾರೆ. ಸಂಯುಕ್ತಾ ಮೆನನ್ ಮತ್ತು ಹರ್ಷಾಲಿ ಮಲ್ಹೋತ್ರಾ ನಾಯಕಿಯರ ಪಾತ್ರಕ್ಕೆ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











