ಪವನ್ ಕಲ್ಯಾಣ್ ಆಪ್ತ ಗೆಳೆಯನ ಆಡಿಯೋ ವೈರಲ್, ನಿರ್ದೇಶಕನ ಬಗ್ಗೆ ದೂರು
ವ್ಯಕ್ತಿ ಎತ್ತರಕ್ಕೆ ಏರಿದಷ್ಟು ಅವನ ಗೆಳೆಯರ ನಡುವೆ ವಿರಸ ಹೆಚ್ಚಾಗುತ್ತದೆ. ಮಾಸ್ ಇಮೇಜಿರುವ ಸ್ಟಾರ್ ನಟರ ವಿಷಯದಲ್ಲಂತೂ ಇದು ಸದಾ ಸತ್ಯ. ದರ್ಶನ್-ಉಮಾಪತಿ ಶ್ರೀನಿವಾಸ್ ಪ್ರಕರಣದ ಪೂರ್ಣ ಎಪಿಸೋಡ್ ಇದಕ್ಕೆ ಒಳ್ಳೆಯ ಉದಾಹರಣೆ.
ದರ್ಶನ್ರ ಒಂದು ಗೆಳೆಯರ ಗುಂಪನ್ನು ಮತ್ತೊಂದು ಗುಂಪು ಬೈದುಕೊಂಡಿದ್ದು, ಪರಸ್ಪರ ದೂರು ನೀಡಿದ್ದು, ದರ್ಶನ್ರ ಆಪ್ತ ಗೆಳೆಯರಾಗಿದ್ದ ಸಂದೇಶ್ರ ಆಡಿಯೋ ಲೀಕ್ ಆಗಿದ್ದು ಹಲವು ಸಂಗತಿಗಳು ನಡೆದಿದ್ದವು. ಇದೀಗ ತೆಲುಗು ಚಿತ್ರರಂಗದಲ್ಲಿಯೂ ಇದೇ ರೀತಿಯ ಪ್ರಕರಣವೊಂದು ಉಂಟಾಗಿದೆ.
ಪವನ್ ಕಲ್ಯಾಣ್ರ ಇಬ್ಬರು ಗೆಳೆಯರ ನಡುವೆ ವೈಮನಸ್ಯ ಆರಂಭವಾಗಿದೆ. ಪವನ್ಗೆ ತಾನು ಹೆಚ್ಚು ಹತ್ತಿರವಾಗಬೇಕು ಎಂದು ಅವರ ಆಪ್ತ ಗೆಳೆಯರೇ ಪರಸ್ಪರರ ವಿರುದ್ಧ ಪಿತೂರಿ ಮಾಡುವುದರಲ್ಲಿ ನಿರತರಾಗಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಪವನ್ರ ಆಪ್ತ ಬಂಡ್ಲ ಗಣೇಶ್ರ ಆಡಿಯೋ ಒಂದು ಬಿಡುಗಡೆ ಆಗಿದೆ.
ಪವನ್ ಕಲ್ಯಾಣ್ ನಟನೆಯ 'ಭೀಮ್ಲ ನಾಯಕ್' ಸಿನಿಮಾದ ಬಿಡುಗಡೆಗೆ ಮುನ್ನ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಲವು ಪ್ರಮುಖರಿಗೆ ಆಹ್ವಾನ ಸಹ ನೀಡಲಾಗಿತ್ತು. ಇದೇ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪವನ್ರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವ ನಟ, ನಿರ್ಮಾಪಕ, ನಿರ್ದೇಶಕ ಬಂಡ್ಲ ಗಣೇಶ್ ಮಾತನಾಡಿರುವ ಆಡಿಯೋ ಒಂದು ವೈರಲ್ ಆಗಿದೆ.

ತ್ರಿವಿಕ್ರಮ್ ಶ್ರೀನಿವಾಸ್ ಬಗ್ಗೆ ಬಂಡ್ಲ ಆರೋಪ
ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ಬಂಡ್ಲ ಗಣೇಶ್ಗೆ ಕರೆ ಮಾಡಿ, ''ನೀವು 'ಭೀಮ್ಲ ನಾಯಕ್' ಪ್ರೀ ರಿಲೀಸ್ ಇವೆಂಟ್ಗೆ ಬರುತ್ತೀರಿ ತಾನೆ?'' ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿರುವ ಬಂಡ್ಲ ಗಣೇಶ್, ''ನಾನು ಬರಲು ಉತ್ಸುಕನಾಗಿದ್ದೇನೆ. ಆದರೆ ಆ ತ್ರಿವಿಕ್ರಮ್ (ಪವನ್ ಕಲ್ಯಾಣ್ರ ಆಪ್ತ ಗೆಳೆಯ, ನಿರ್ದೇಶಕ) ನಾನು ಬರದಂತೆ ತಡೆಯುತ್ತಿದ್ದಾನೆ'' ಎಂದು ಹೇಳಿದ್ದಾರೆ.

ತ್ರಿವಿಕ್ರಮ್ ನನ್ನನ್ನು ತಡೆಯುತ್ತಿದ್ದಾನೆ: ಬಂಡ್ಲ ಗಣೇಶ್
''ಕಾರ್ಯಕ್ರಮಕ್ಕೆ ಬಂದು ಮಾತನಾಡಲೆಂದು ಕೆಲವು ಸಾಲುಗಳನ್ನು ಸಹ ನಾನು ತಯಾರು ಮಾಡಿಕೊಟ್ಟಿದ್ದೇನೆ. ಆದರೆ ಆ ತ್ರಿವಿಕ್ರಮ್ ನನ್ನನ್ನು ತಡೆಯುತ್ತಿದ್ದಾನೆ. ನಾನು ಕಾರ್ಯಕ್ರಮಕ್ಕೆ ಬಂದು ನನಗೆ ಮಾತನಾಡಲು ಅವಕಾಶ ಸಿಕ್ಕರೆ ಅವನನ್ನು ಡಾಮಿನೇಟ್ ಮಾಡಿಬಿಡುತ್ತೇನೆ. ನನ್ನ ಮುಂದೆ ಅವನು ಮಂಕಾಗಿಬಿಡುತ್ತಾನೆ ಎಂಬ ಹೆದರಿಕೆ ಅವನದ್ದು ಹಾಗಾಗಿ ನಾನು ಕಾರ್ಯಕ್ರಮಕ್ಕೆ ಬರದಂತೆ ತಡೆಯುತ್ತಿದ್ದಾನೆ'' ಎಂದಿದ್ದಾರೆ ಬಂಡ್ಲ ಗಣೇಶ್.

ನನ್ನ ಹೆಸರು ಕೂಗಿ ನಾನು ಬರುತ್ತೇನೆ: ಬಂಡ್ಲ
''ನೀವು ಒಂದು ಕೆಲಸ ಮಾಡಿ, ಅಭಿಮಾನಿಗಳಿಗೆ ಹೇಳಿ ಕಾರ್ಯಕ್ರಮ ನಡೆಯುವಾಗಲೇ ಮಧ್ಯದಲ್ಲಿ 'ಬಂಡ್ಲನ್ನ', 'ಬಂಡ್ಲನ್ನ' ಎಂದು ಕೂಗುಗಳನ್ನು ಹಾಕಿ ಆಗ ನಾನು ಅಲ್ಲಿಯೇ ಸ್ಟೇಜ್ ಬಳಿ ಬಚ್ಚಿಕೊಂಡಿರುತ್ತೇನೆ. ನೀವು ಕೂಗು ಹಾಕಿದ ಕೂಡಲೇ ಸ್ಟೇಜ್ ಮೇಲಕ್ಕೆ ಬಂದು ಬಿಡುತ್ತೇನೆ ಎಲ್ಲರಿಗೂ ಶಾಕ್ ಆಗುತ್ತದೆ'' ಎಂದಿದ್ದಾರೆ ಬಂಡ್ಲ. ಅದಕ್ಕೆ ಅಭಿಮಾನಿಯೂ ಒಪ್ಪಿಕೊಂಡಿದ್ದಾನೆ. ಬಂಡ್ಲ ಗಣೇಶ್ರ ಆಡಿಯೋ ಕ್ಲಿಪ್ನಲ್ಲಿನ ಹೇಳಿಕೆ ಬಗ್ಗೆ ನಿರ್ದೇಶಕ ತ್ರಿವಿಕ್ರಮ್ ಸ್ಪಂದಿಸಿಲ್ಲ.

ಕಾರ್ಯಕ್ರಮ ರದ್ದು
'ಭೀಮ್ಲ ನಾಯಕ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಇಂದು ಆಯೋಜಿತವಾಗಿತ್ತು. ಆದರೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಆಂಧ್ರ ಪ್ರದೇಶದ ಕೈಗಾರಿಕ ಸಚಿವ ಮೇಕಪೇಟಿ ಗೌತಮ್ ರೆಡ್ಡಿ ಇಂದು ಹೃದಯಾಘಾತದಿಂದ ಇಂದು ನಿಧನರಾದ ಕಾರಣ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. 'ಭೀಮ್ಲ ನಾಯಕ್' ಸಿನಿಮಾವು ಫೆಬ್ರವರಿ 25 ರಂದು ಬಿಡುಗಡೆ ಆಗಲಿದ್ದು, ಈ ನಡುವೆ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯುವ ಸಾಧ್ಯತೆ ಕ್ಷೀಣ. 'ಭೀಮ್ಲ ನಾಯಕ್' ಸಿನಿಮಾವು ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ಆಗಿದ್ದು ಸಿನಿಮಾದಲ್ಲಿ ಪವನ್ ಜೊತೆಗೆ ರಾಣಾ ದಗ್ಗುಬಾಟಿ ಸಹ ನಟಿಸಿದ್ದಾರೆ.


Click it and Unblock the Notifications











