ಪವನ್ ಕಲ್ಯಾಣ್ ಅಭಿಮಾನಿ, ನಿರ್ಮಾಪಕ ಬಂಡ್ಲಾ ಗಣೇಶ್ ಐಸಿಯುಗೆ ದಾಖಲು
ತೆಲುಗು ನಿರ್ಮಾಪಕ, ನಟ ಬಂಡ್ಲಾ ಗಣೇಶ್ ಅವರಿಗೆ ಎರಡನೇ ಬಾರಿ ಕೊರೊನಾ ಸೋಂಕು ತಗುಲಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೈದರಾಬಾದ್ನ ಜ್ಯೂಬ್ಲಿ ಹಿಲ್ಸ್ನ ಅಪೋಲೋ ಆಸ್ಪತ್ರೆಗೆ ಬಂಡ್ಲಾ ಗಣೇಶ್ ದಾಖಲಾಗಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ಬಂಡ್ಲಾ ಗಣೇಶ್ ಅವರಿಗೆ ಮೊದಲ ಕೋವಿಡ್ ಸೋಂಕು ತಗುಲಿತ್ತು. ನಂತರ ಚೇತರಿಸಿಕೊಂಡಿದ್ದರು. ಇದೀಗ, ಮತ್ತೆ ಕೊರೊನಾ ಎರಡನೇ ಅಲೆ ಪರಿಣಾಮ ಬಂಡ್ಲಾ ಗಣೇಶ್ ಅವರು ಮತ್ತೆ ಸೋಂಕಿಗೆ ತುತ್ತಾಗಿದ್ದಾರೆ.
ಇತ್ತೀಚಿಗಷ್ಟೆ ಬಂಡ್ಲಾ ಗಣೇಶ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದರು. ಲಸಿಕೆ ಪಡೆದ ನಂತರ ಕೊರೊನಾ ಪಾಸಿಟಿವ್ ಬಂದಿದೆ ಎಂದು ವರದಿಯಾಗಿದೆ. ದೇಶದಲ್ಲಿ ಕೋವಿಡ್ ಲಸಿಕೆ ಪಡೆದ ನಂತರ ಹಲವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ನಂತರ ಚೇತರಿಸಿಕೊಂಡಿದ್ದಾರೆ.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಂಡ್ಲಾ ಗಣೇಶ್ ಅವರ ಆರೋಗ್ಯದ ಮೇಲೆ ತಜ್ಞರು ನಿಗಾ ವಹಿಸಿದ್ದಾರೆ. ಬಂಡ್ಲಾ ಅವರಿಗೆ ಎರಡನೇ ಸಲ ಕೋವಿಡ್ ಬಂದುದರಿಂದ ಸಹಜವಾಗಿ ಕುಟುಂಬದವರು ಆತಂಕಕ್ಕೀಡಾಗಿದ್ದಾರೆ.
ಪವನ್ ಕಲ್ಯಾಣ್ ಅವರ ಅಪ್ಪಟ ಅಭಿಮಾನಿಯಾಗಿರುವ ಬಂಡ್ಲಾ ಗಣೇಶ್ ಇತ್ತೀಚಿಗೆ 'ವಕೀಲ್ ಸಾಬ್' ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಅದ್ಭುತವಾದ ಭಾಷಣದ ಮೂಲಕ ಗಮನ ಸೆಳೆದಿದ್ದರು.
ಇನ್ನು ಬಂಡ್ಲಾ ಗಣೇಶ್ ಅವರ ಬಗ್ಗೆ ಹೇಳುವುದಾದರೇ, ಆಂಜನೇಯಲು, ತೀನ್ಮಾರ್, ಗಬ್ಬರ್ ಸಿಂಗ್, ಬಾದ್ಶಾ, ಇದ್ದರಮ್ಮಾಯಿಲತೋ, ಟೆಂಪರ್ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ.


Click it and Unblock the Notifications











