ದಿ ಗರ್ಲ್ಫ್ರೆಂಡ್ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು ? ಬೆಲೆ ಕಟ್ಟಲು ಸಾಧ್ಯ ಇಲ್ಲ ಎಂದಿದ್ದೇಕೆ ನಿರ್ಮಾಪಕ ?
ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು, ಕಲಾವಿದರು, ತಂತ್ರಜ್ಞರನ್ನೆಲ್ಲಾ ಒಂದು ಕಡೆ ಸೇರಿಸಿ ಸಿನಿಮಾ ಮಾಡಿ, ಅದನ್ನು ತೆರೆಗೆ ತರೋ ಹೊತ್ತಿಗೇ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ.
ಯಾಕೆಂದರೆ ಎಷ್ಟೇ ಶ್ರೀಮಂತ ನಿರ್ಮಾಪಕರೇ ಆದರೂ ಸಿನಿಮಾ ಅಂದ ಮೇಲೆ ಅದಕ್ಕೆ ಸಾಲದ ದುಡ್ಡು ಇದ್ದೇ ಇರುತ್ತದೆ. ಬಡ್ಡಿ ಕಟ್ಟದಿದ್ದರೆ ಯಾರೂ ಬಿಡೋದಿಲ್ಲ. ಕ್ರೆಡಿಟ್ಟು, ಇಂಟರೆಸ್ಟುಗಳ ವಿಚಾರವಿರಲಿ....
ಇಷ್ಟೆಲ್ಲಾ ಖರ್ಚು ಮಾಡಿ ನಮ್ಮ ನಿರ್ಮಾಪಕರು ಸಿನಿಮಾ ಮಾಡಿದ್ದಾರೆ. ಎಲ್ಲೆಲ್ಲಿಂದಾ ತಂದು ಸುರಿದಿದ್ದಾರೋ.? ಅವರ ಕಷ್ಟ ಏನು ಅಂತಾ ಯಾವ ಹೀರೋ-ಹೀರೋಯಿನ್ ಕೂಡಾ ಕೇಳುವುದಿಲ್ಲ. ಕೊರೋನಾನಾದರೂ ಇರಲಿ, ಕಾಲರಾವಾದರೂ ಬರಲಿ, ದುಡ್ಡು ಮಡಗಿದ ಮೇಲೆಯೇ ಸಿನಿಮಾ ಅನ್ನುವ ಮನಸ್ಥಿತಿಯೇ ಬಹುತೇಕರದ್ದು.

ಹಾಗಂಥ ಎಲ್ಲರೂ ಇಲ್ಲಿ ಒಂದೇ ಸಾಲಿನಲ್ಲಿ ಸೇರುವುದಿಲ್ಲ. ಅಲ್ಲೊಬ್ಬರು.. ಇಲ್ಲೊಬ್ಬರು.. ನಿರ್ಮಾಪಕರ ಕಷ್ಟವನ್ನು ಅರ್ಥ ಮಾಡಿಕೊಳ್ತಾರೆ. ಸಂಭಾವನೆಗಿಂತ ಆ ತಂಡದ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ತಮ್ಸಂಮ ಭಾವನೆ ಕಡಿಮೆ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಸಂಭಾವನೆ ತೆಗೆದುಕೊಳ್ಳದೇ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದ ಹಾಗೇ ಉಚಿತವಾಗಿ ಅಭಿನಯಿಸುತ್ತಾರೆ. ಕೆಲಸ ಮಾಡುತ್ತಾರೆ. ಉದಾಹರಣೆಗೆ ರಶ್ಮಿಕಾ ಮಂದಣ್ಣ.
ಹೌದು, ಸದ್ಯ ರಶ್ಮಿಕಾ ಮಂದಣ್ಣ ಅಭಿನಯದ ''ಥಮ್ಮ'' ಬಿಡುಗಡೆಯಾಗಿದೆ. ಬಾಕ್ಸಾಫೀಸ್ನಲ್ಲಿ ಹಣವನ್ನು ಕೂಡ ದೋಚುತ್ತಿದೆ. ಮತ್ತೊಂದು ಕಡೆ ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಚಿತ್ರ '' ದಿ ಗರ್ಲ್ಫ್ರೆಂಡ್'' ಬಿಡುಗಡೆಗೆ ಸಿದ್ಧವಾಗಿದೆ. ಇದೇ ನವೆಂಬರ್ 7ರಂದು ಈ ಚಿತ್ರ ತೆರೆಗೆ ಬರಲಿದೆ.
ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡುತ್ತಿರುವ ಚಿತ್ರತಂಡ ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಇದೇ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕ ಧೀರಜ್ ಮೊಗಿಲಿನೇನಿ ರಶ್ಮಿಕಾ ಮಂದಣ್ಣ ಅವರ ಕುರಿತು ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಸಿನಿಮಾ ಮೇಲಿರುವ ಶ್ರದ್ದೆ ಮತ್ತು ಭಕ್ತಿಯ ಕುರಿತು ಮಾತನಾಡಿದ್ದಾರೆ. ''ದಿ ಗರ್ಲ್ಫ್ರೆಂಡ್'' ಚಿತ್ರಕ್ಕೆ ರಶ್ಮಿಕಾ ಮಾಡಿದ ಸಹಾಯ ನೆನೆದು ಭಾವುಕರಾಗಿದ್ದಾರೆ.
ಈ ಕುರಿತು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ನಿರ್ಮಾಪಕ ಧೀರಜ್ ಮೊಗಿಲಿನೇನಿ, ಕಥೆ ಕೇಳಿದ ತಕ್ಷಣ ರಶ್ಮಿಕಾ ಅವರು ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡರು. ಆದರೆ.. ಸಂಭಾವನೆ ವಿಚಾರದಲ್ಲಿ ನಮಗೆ ಗೊಂದಲ ಇತ್ತು. ಈ ಹಿನ್ನೆಲೆ ನಾನು ಅವರ ಮ್ಯಾನೇಜರ್ ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದೆ, ಆದರೆ.. ಅದು ಸಾಧ್ಯವಾಗಲಿಲ್ಲ. ಹೀಗಾಗಿ ನಾನೇ ನೇರವಾಗಿ ಸಂಭಾವನೆಯ ವಿಚಾರ ಮಾತನಾಡಲು ರಶ್ಮಿಕಾ ಅವರನ್ನು ನೇರವಾಗಿ ಭೇಟಿಯಾದೆ ಎಂದು ಹೇಳಿದ್ದಾರೆ.

ಮುಂದುವರೆದು ನಾನು ಸಂಭಾವನೆಯ ಬಗ್ಗೆ ಮಾತನಾಡಲು ಹೋದಾಗ, ನಾವೆಲ್ಲರೂ ಸೇರಿ ಮೊದಲು ಒಂದೊಳ್ಳೆಯ ಸಿನಿಮಾ ಮಾಡೋಣ. ಸಂಭಾವನೆ ಮಾತು ಆ ನಂತರ ಇದ್ದಿದ್ದೇ ಎಂದು ರಶ್ಮಿಕಾ ಹೇಳಿದರು ಎಂದು ಹೇಳಿರುವ ನಿರ್ಮಾಪಕ ಧೀರಜ್ ಸಿನಿಮಾ ಬಿಡುಗಡೆಯಾಗಲಿ, ನಿಮಗೆ ಲಾಭ ಆಗಲಿ ಆ ನಂತರ ಸಂಭಾವನೆಯ ವಿಚಾರ ನೋಡೋಣ ಎಂದು ರಶ್ಮಿಕಾ ನನಗೆ ಹೇಳಿದರು ಎಂದು ಹೇಳಿದ್ದಾರೆ. ಈ ಮೂಲಕ ನಮ್ಮಲ್ಲಿನ ಆತ್ಮವಿಶ್ವಾಸವನ್ನು ಅವರು ಹೆಚ್ಚಿಸಿದರು ಎಂದು ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ರಶ್ಮಿಕಾ ಮಂದಣ್ಣ ಅವರ ಶ್ರದ್ಧೆಯ ಕುರಿತು ಕೂಡ ಮಾತನಾಡಿರುವ ನಿರ್ಮಾಪಕ ನಮ್ಮ ಚಿತ್ರವನ್ನು ಮಾಡುವಾಗ ರಶ್ಮಿಕಾ ಪುಷ್ಪ 2 ಚಿತ್ರದ ಚಿತ್ರೀಕರಣವನ್ನು ಕೂಡ ಮಾಡುತ್ತಿದ್ದರು. ಆದರೆ ಯಾವತ್ತು ಆ ಚಿತ್ರದಿಂದ ನಮಗೆ ತೊಂದರೆಯಾಗಲಿಲ್ಲ ಅದಕ್ಕೆ ಕಾರಣ ರಶ್ಮಿಕಾ ಅವರ ಶ್ರಮ ಎಂದು ಹೇಳಿದ್ದಾರೆ. ಎರಡು ಚಿತ್ರಗಳ ಚಿತ್ರೀಕರಣವನ್ನು ರಶ್ಮಿಕಾ ಏಕಕಾಲಕ್ಕೆ ಮಾಡುತ್ತಿದ್ದರು ಪುಷ್ಪ2 ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಸೀದಾ ನಮ್ಮ ಚಿತ್ರೀಕರಣದ ಸ್ಥಳಕ್ಕೆ ಓಡಿ ಬರುತ್ತಿದ್ದರು ಎಂದು ಹೇಳಿರುವ ನಿರ್ಮಾಪಕ ಧೀರಜ್ ಹೆಚ್ಚೆಂದರೆ ಎರಡು ಮೂರು ಗಂಟೆ ಅಷ್ಟೇ ನಿದ್ರೆ ಮಾಡುತ್ತಿದ್ದರು. ಬೆಳಗ್ಗೆ 7ಕ್ಕೆ ಮೇಕಪ್ ಸಮೇತ ಚಿತ್ರೀಕರಣಕ್ಕೆ ಹಾಜರಾಗುತ್ತಿದ್ದರು ಎಂದು ಹೇಳಿದ್ದಾರೆ. ನಮ್ಮ ಚಿತ್ರಕ್ಕೆ ರಶ್ಮಿಕಾ ಹಾಕಿರುವ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಈ ಸಿನಿಮಾ ಪ್ರೀತಿಗೆ ಸದ್ಯ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Click it and Unblock the Notifications











