ತಾರಕಕ್ಕೇರಿದ ಆಂಧ್ರ ಸರ್ಕಾರ v/s 'ಭೀಮ್ಲಾ ನಾಯಕ್' ಗಲಾಟೆ: ರಂಗಕ್ಕಿಳಿದ ಮಾಜಿ ಸಿಎಂ
ಆಂಧ್ರ ಪ್ರದೇಶದಲ್ಲಿ 'ಭೀಮ್ಲಾ ನಾಯಕ್' ಸಿನಿಮಾ ರಾಜಕೀಯದಲ್ಲಿಯೂ ಬಿರುಗಾಳಿ ಎಬ್ಬಿಸಿದೆ. ಆಂಧ್ರದಲ್ಲಿ ಈಗ ಸಿನಿಮಾ ವಿಷಯ ರಾಜಕೀಯ ವಿಷಯವಾಗಿ ಪರಿವರ್ತಿತಗೊಂಡಿದೆ.
ರಾಜಕಾರಣಿಯೂ ಆಗಿರುವ ನಟ ಪವನ್ ಕಲ್ಯಾಣ್ರ 'ಭೀಮ್ಲಾ ನಾಯಕ್' ಸಿನಿಮಾ ಫೆಬ್ರವರಿ 25 ರಂದು ಆಂಧ್ರದಲ್ಲಿ ಬಿಡುಗಡೆ ಆಗಿದ್ದು, ಜಗನ್ ಸರ್ಕಾರ ಅಧಿಕಾರಿಗಳು ಕೆಲವು ಚಿತ್ರಮಂದಿರಗಳ ಮೇಲೆ ದಾಳಿ ನಡೆಸಿ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಮಾಡಿದ್ದಾರೆ, ಕೆಲವು ಚಿತ್ರಮಂದಿರಗಳನ್ನು ಮುಚ್ಚಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
Recommended Video
ಪವನ್ ಕಲ್ಯಾಣ್ರ ಈ ಹಿಂದಿನ ಸಿನಿಮಾ 'ವಕೀಲ್ ಸಾಬ್' ಸಮಯದಲ್ಲಿ ಸಹ ಜಗನ್ ಸರ್ಕಾರ ಇದೇ ರೀತಿ ಸಿನಿಮಾಕ್ಕೆ ತೊಂದರೆ ನೀಡಿತ್ತು. ಈಗಲೂ ಪವನ್ ಸಿನಿಮಾಕ್ಕೆ ತೊಂದರೆ ನೀಡುತ್ತಿರುವ ವಿರುದ್ಧ ಚಿತ್ರರಂಗದವರು ಸೇರಿದಂತೆ ರಾಜಕಾರಣಿಗಳು ಆಂಧ್ರ ಸರ್ಕಾರವನ್ನು ಟೀಕಿಸುತ್ತಿದ್ದಾರೆ.

ಎಲ್ಲವನ್ನೂ ನಾಶ ಮಾಡುತ್ತಿರುವ ಜಗನ್: ಚಂದ್ರಬಾಬು
'ಭಿಮ್ಲಾ ನಾಯಕ್' ಸಿನಿಮಾ ವಿಷಯವಾಗಿ ಸರಣಿ ಟ್ವೀಟ್ ಮಾಡಿರುವ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು, 'ರಾಜ್ಯದಲ್ಲಿ ಯಾವ ಸಂಸ್ಥೆಯನ್ನೂ, ರಂಗವನ್ನೂ ಉಳಿಯಲು ಬಿಡುವಂತೆ ಕಾಣುತ್ತಿಲ್ಲ ಸಿಎಂ ಜಗನ್ ಮೋಹನ್ ರೆಡ್ಡಿ. ಸಿನಿಮಾ ರಂಗವನ್ನು ತೀವ್ರವಾಗಿ ಬಾಧಿಸುತ್ತಿದ್ದಾರೆ. 'ಭೀಮ್ಲಾ ನಾಯಕ್' ಸಿನಿಮಾ ವಿಷಯಕ್ಕೆ ಸಂಬಂಧಿಸಿದಂತೆ ಜಗನ್ ನಡೆದುಕೊಳ್ಳುತ್ತಿರುವ ರೀತಿ ಉಗ್ರವಾದಿತನವನ್ನು ತೋರುತ್ತಿದೆ'' ಎಂದಿದ್ದಾರೆ.

ವ್ಯವಸ್ಥೆಯನ್ನೇ ನಾಶ ಮಾಡಲು ಹೊರಟಿದ್ದಾರೆ: ಚಂದ್ರಬಾಬು
ವ್ಯಕ್ತಿಗಳ ಮೇಲಿನ ಖಾಸಗಿ ದ್ವೇಷದಿಂದಾಗಿ ಇಡೀಯ ಒಂದು ವ್ಯವಸ್ಥೆಯನ್ನೇ ನಾಶ ಮಾಡಲು ಮಾಡುತ್ತಿರುವ ಈ ಪ್ರಯತ್ನವನ್ನು ನಾನು ಖಂಡಿಸುತ್ತೇನೆ. 'ಭಾರತಿ ಸಿಮೆಂಟ್' ಬೆಲೆಯ ಮೇಲೆ ಇರದ ನಿಯಂತ್ರಣ ಸಿನಿಮಾದ ಮೇಲೆ ಏಕೆ? ತೆಲುವು ಸಿನಿಮಾ ರಂಗವು ವಿಶ್ವದಾದ್ಯಂತ ಹೆಸರು ಮಾಡಿದೆ. ಅದನ್ನು ತುಳಿಯುವ ಮೂರ್ಖ ಪ್ರಯತ್ನವನ್ನು ಜಗನ್ ಕೈಬಿಡಬೇಕು'' ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಭೀಮ್ಲಾ ನಾಯಕ್ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ: ಚಂದ್ರಬಾಬು
ರಾಜ್ಯದಲ್ಲಿನ ಎಲ್ಲ ಸಾರ್ವಜನಿಕ ಸಮಸ್ಯೆಗಳನ್ನು ಬದಿಗಿಟ್ಟು. ಕಂದಾಯ ನೌಕರರನ್ನು ನಾಡಕಚೇರಿಗಳ ಬದಲಿಗೆ ಚಿತ್ರಮಂದಿರಗಳ ಬಳಿ ಕಾವಲು ಕಾಯಲು ಬಿಟ್ಟಿರುವ ಸರ್ಕಾರದ ಕ್ರಮ ತೀವ್ರ ಆಕ್ಷೇಪಾರ್ಹ. ಉಕ್ರೇನ್ನಲ್ಲಿ ಸಿಲುಕಿರುವ ತಮ್ಮ ಜನರನ್ನು ರಕ್ಷಿಸಲು ದೇಶದ ಎಲ್ಲಾ ರಾಜ್ಯಗಳು ಪ್ರಯತ್ನಿಸುತ್ತಿದ್ದರೆ, ಆದರೆ, ಆಂಧ್ರಪ್ರದೇಶ ಸಿಎಂ ಮಾತ್ರ 'ಭೀಮ್ಲಾ ನಾಯಕ್' ಸಿನಿಮಾ ವಿರುದ್ಧ ದ್ವೇಷ ಸಾಧಿಸುವುದರಲ್ಲಿ ನಿರತರಾಗಿದ್ದಾರೆ. ನಮ್ಮ ತೆಲುಗು ದೇಶಂ ಪಕ್ಷವು ತಪ್ಪನ್ನು ಪ್ರಶ್ನಿಸುತ್ತದೆ. 'ಭೀಮ್ಲಾ ನಾಯಕ್' ಪ್ರಕರಣದಲ್ಲಿ ಸರ್ಕಾರ ನೀಡುತ್ತಿರುವ ಕಿರುಕುಳವನ್ನು ತಕ್ಷಣವೇ ನಿಲ್ಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ'' ಎಂದಿದ್ದಾರೆ ಚಂದ್ರಬಾಬು ನಾಯ್ಡು.

'ವಕೀಲ್ ಸಾಬ್' ಸಿನಿಮಾಕ್ಕೂ ಸಮಸ್ಯೆ
ರಾಜಕಾರಣಿಯೂ ಆಗಿರುವ ಪವನ್ ಕಲ್ಯಾಣ್ ಬಿಜೆಪಿ ಜೊತೆ ಕೈಜೋಡಿಸಿದ್ದು, ಕೆಲವು ರಾಜಕೀಯ ಸಭೆಗಳಲ್ಲಿ ಜಗನ್ ಅನ್ನು ತೀವ್ರವಾಗಿ ಟೀಕಿಸಿದ್ದರು. ಅದಕ್ಕೆ ಬದಲಾಗಿ ಅವರ 'ವಕೀಲ್ ಸಾಬ್' ಸಿನಿಮಾಕ್ಕೆ ಆಂಧ್ರದಲ್ಲಿ ಅಡ್ಡಿಪಡಿಸಲಾಯಿತು. ಈಗ 'ಭೀಮ್ಲಾ ನಾಯಕ್' ಸಿನಿಮಾಕ್ಕೂ ಸಮಸ್ಯೆ ನೀಡಲಾಗುತ್ತಿದೆ. ಅಭಿಮಾನಿಗಳನ್ನು ಹತ್ತಿಕ್ಕಲು ಚಿತ್ರಮಂದಿರಗಳ ಬಳಿ ಸಿಆರ್ಪಿಎಫ್ ಯೋಧರನ್ನು ನಿಯೋಜಿಸಲಾಗಿದೆ. ಕಂದಾಯ ಅಧಿಕಾರಿಗಳು ಚಿತ್ರಮಂದಿರದಿಂದ ಚಿತ್ರಮಂದಿರಕ್ಕೆ ಭೇಟಿ ನೀಡುತ್ತಾ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸರ್ಕಾರದ ಈ ಕ್ರಮ ತೀವ್ರ ಟೀಕೆಗೆ ಗುರಿಯಾಗಿದೆ.


Click it and Unblock the Notifications











