Bholaa Shankar: ಬ್ಯಾಕ್-ಟು-ಬ್ಯಾಕ್ ರಿಮೇಕ್ಗಳಲ್ಲಿ ಮೆಗಾಸ್ಟಾರ್, ಫ್ಯಾನ್ಸ್ ಮುನಿಸಿಗೆ ಚಿರಂಜಿವಿ ಹೇಳಿದ್ದೇನು?
ಖ್ಯಾತ ನಟರು ರಿಮೇಕ್ ಸಿನಿಮಾಗಳನ್ನು ಮಾಡುವುದನ್ನು ಬಹಳಷ್ಟು ಅಭಿಮಾನಿಗಳು ಒಪ್ಪುವುದಿಲ್ಲ. ತಮ್ಮ ನಟನನ್ನು ಇನ್ನೊಬ್ಬ ನಟನಂತೆ ಊಹಿಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಈಗ್ಯಾಕೆ ಇದೆಲ್ಲಾ ಹೇಳ್ತಾಯಿದ್ದಿನಿ ಅಂದ್ರೆ... ಮೆಗಾಸ್ಟಾರ್ ಚಿರಂಜೀವಿ ಅವರ ಭೋಳಾ ಶಂಕರ್ ಇನ್ನೇನು ಶುಕ್ರವಾರ ತೆರೆಗೆ ಅಪ್ಪಳಿಸಲಿದೆ. ಚಿರು ಸಿನಿಮಾ ನಿರೀಕ್ಷೆಯಲ್ಲಿ ಕೋಟ್ಯಾಂತರ ಅಭಿಮಾನಿಗಳು ಇದ್ದರೂ ಕೂಡ ಹಲವರು ಇದನ್ನು ಟೀಕಿಸಿದ್ದಾರೆ.
ನಟ ಚಿರಂಜೀವಿ ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದರೆ, ಆಗಸ್ಟ್ 11 ರಂದು ಬಿಡುಗಡೆಯಾಗುತ್ತಿರುವ ಭೋಳಾ ಶಂಕರ್, ತಮಿಳಿನ ಸೂಪರ್ ಹಿಟ್ ಚಿತ್ರ ವೇದಾಲಂ ನ ರಿಮೇಕ್. ಇದನ್ನು ಈಗಾಗಲೇ ಕೋಟ್ಯಾಂತರ ಮಂದಿ ವೀಕ್ಷಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಚಿರಂಜೀವಿಯಿಂದ ಹೊಸತನದ ಕಥೆಗಳು, ಪಾತ್ರಗಳ ನಿರೀಕ್ಷೆಯಲ್ಲಿದ್ದರು.

ಇತ್ತೀಚೆಗಷ್ಟೇ ಮಲಯಾಳಂ ಚಿತ್ರ 'ಲೂಸಿಫರ್'ನ ತೆಲುಗು ರಿಮೇಕ್ ಗಾಡ್ಫಾದರ್ನಲ್ಲಿ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದರ ಹಿಂದೆ ತಮಿಳಿನ ಕತ್ತಿ ಸಿನಿಮಾದ ರಿಮೇಕ್ 'ಖೈದಿ ನಂ 150' ಯಲ್ಲಿ ಅಭಿನಯಿಸಿದ್ದರು. ಆ ವೇಳೆಯೇ ಚಿರಂಜೀವಿ ಮೂಲ ಚಿತ್ರಗಳನ್ನು ಮಾಡಬೇಕು ಎಂದು ಫ್ಯಾನ್ಸ್ ಆಗ್ರಹಿಸಿದ್ದರು. ಆದಾದ ನಂತರವೂ ಚಿರಂಜೀವಿ ಬ್ಯಾಕ್ ಟು ಬ್ಯಾಕ್ ರಿಮೇಕ್ ಚಿತ್ರಗಳನ್ನು ಮಾಡುತ್ತಿದ್ದಾರೆ.
ಇದಲ್ಲದೆ ಈಗ ಅವರು 'ಬ್ರೋ ಡ್ಯಾಡಿ' ತೆಲುಗು ರಿಮೇಕ್ನಲ್ಲಿ ನಾಯಕನಾಗಿ ನಟಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂಬ ವರದಿಗಳು ಬರುತ್ತಿವೆ. ಕಳೆದ ಕೆಲವು ವಾರಗಳಿಂದ, ಚಿರಂಜೀವಿ ರಿಮೇಕ್ ನಂತರ ರೀಮೇಕ್ ಮಾಡುತ್ತಿದ್ದಾರೆ ಎಂಬ ಮಾತುಗಳು ಹೆಚ್ಚಾಗುತ್ತಿದ್ದು, ಅನೇಕರು ಅವರನ್ನು ಟೀಕಿಸಿ, ಟ್ರೋಲ್ ಮಾಡುತ್ತಿದ್ದಾರೆ. ಸ್ವಂತ ಕಥೆಗಳಿಗೆ ಬಣ್ಣ ಹಚ್ಚಬೇಕು ಎಂದು ಹೇಳುತ್ತಿದ್ದಾರೆ.

ಭೋಳಾ ಶಂಕರ್ನಲ್ಲಿ ಯಾಕೆ ನಟಿಸಿದೆ?
ಟೀಕೆ, ಟ್ರೋಲ್ಗಳಿಗೆ ಪ್ರತಿಕ್ರಿಯೆ ನೀಡಿರುವ ನಟ 'ಭೋಳಾ ಶಂಕರ್' ಪ್ರಿ-ರಿಲೀಸ್ ಸಮಾರಂಭದಲ್ಲಿ ತಾವು 'ವೇದಾಲಂ' ಸಿನಿಮಾದ ರಿಮೇಕ್ನಲ್ಲಿ ನಟಿಸಲು ಒಪ್ಪಿಕೊಂಡ ಬಗ್ಗೆ ಮಾತನಾಡಿದ್ದಾರೆ. 'ಭೋಳಾ ಶಂಕರ್' ಉತ್ತಮ ಸಂದೇಶವನ್ನು ಹೊಂದಿದ್ದು, ಇದು ಯಾವುದೇ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿಲ್ಲ ಎಂದು ಚಿರಂಜೀವಿ ತಿಳಿಸಿದ್ದಾರೆ.
'ಭೋಳಾ ಶಂಕರ್' ಚಿತ್ರದ ಪ್ರೀ-ರಿಲೀಸ್ ಸಮಾರಂಭದಲ್ಲಿ, 'ಖೈದಿ ನಂ 150' ಚಿತ್ರದ ಸಂಭಾಷಣೆಯನ್ನು ನೆನಪಿಸಿಕೊಂಡ ಅವರು, "ನಾನು ಈ ಸಿನಿಮಾ ಮಾಡಿದ್ದೇನೆ. ಏಕೆಂದರೆ ಇದರ ಕಥೆ ನನಗೆ ಇಷ್ಟವಾಯಿತು. ನೀವು (ಪ್ರೇಕ್ಷಕರು) ಅದನ್ನು ಇಷ್ಟಪಡುತ್ತೀರಿ ಎಂಬ ಭರವಸೆಯಿಂದ ಇದರಲ್ಲಿ ನಟಿಸಿದ್ದೇನೆ. ನನಗೆ ಅರ್ಥವಾಗದ ಸಂಗತಿಯೆಂದರೆ, ರೀಮೇಕ್ ಏಕೆ ಮಾಡುತ್ತಿದ್ದೀರಿ ಎಂದು ಹಲವರು ನನ್ನನ್ನು ಕೇಳುತ್ತಿದ್ದಾರೆ. ಸ್ಟ್ರಾಂಗ್ ಕಂಟೆಂಟ್ ಇದ್ದರೆ ಮತ್ತು ಅದನ್ನು ತೆಲುಗು ಜನರಿಗೆ ತಲುಪಿಸಲು ನಿರ್ದೇಶಕರು ಮತ್ತು ನಟರು ರಿಮೇಕ್ ಅವಕಾಶವನ್ನು ಬಳಸುತ್ತಿದ್ದರೇ ಅದರಲ್ಲಿ ತಪ್ಪೇನಿದೆ..? ಎಂದು ಪ್ರಶ್ನಿಸಿದ್ದಾರೆ.

ಒಟಿಟಿ ಪ್ಲಾಟ್ಫಾರ್ಮ್ನ ಬಂದ ನಂತರ, ಜನರು ವಿಭಿನ್ನ ಪ್ರಕಾರಗಳ ಚಲನಚಿತ್ರಗಳಿನ್ನು ನೋಡುತ್ತಾರೆ. ಆದ್ದರಿಂದ, ಒಟಿಟಿ ಜಗತ್ತಿನಲ್ಲಿ ರಿಮೇಕ್ ಅಗತ್ಯವಿದೆ. ಅಲ್ಲದೇ 'ವೇದಾಲಂ' ಯಾವುದೇ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿಲ್ಲ. ಅದು ನಮಗೆ ಸಿನಿಮಾ ಮಾಡುವ ವಿಶ್ವಾಸ ಮೂಡಿಸಿತು. ಆ ವಿಶ್ವಾಸದಿಂದ ನಿರ್ದೇಶಕ ಮೆಹರ್ ರಮೇಶ್ ಮತ್ತು ನಿರ್ಮಾಪಕ ಅನಿಲ್ ಸುಂಕರ ನನ್ನನ್ನು ಸಂಪರ್ಕಿಸಿದರು ಎಂದು ಮಾಹಿತಿ ಹೊರಹಾಕಿದ್ದಾರೆ.
ಚಿರಂಜೀವಿ ಅವರ ಮುಂಬರುವ ಚಿತ್ರ, 'ಭೋಳಾ ಶಂಕರ್' ಆಗಸ್ಟ್ 11 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ. ಅದರ ಹಿಂದಿನ ದಿನ ರಜನಿಕಾಂತ್ ಅವರ 'ಜೈಲರ್' ಚಿತ್ರ ಬಿಡುಗಡೆಯಾಗಲಿದೆ. ಹೀಗಾಗಿ ಇಬ್ಬರು ಸೂಪರ್ ಸ್ಟಾರ್ಗಳ ಚಿತ್ರಗಳ ಘರ್ಷಣೆಗೆ ಸೌತ್ ಇಂಡಿಯಾ ಸಾಕ್ಷಿಯಾಗಲಿದೆ.
ಭೋಳಾ ಶಂಕರ್ ಸಿನಿಮಾ
'ಭೋಳಾ ಶಂಕರ್' ತೆಲುಗು ಆಕ್ಷನ್ ಥ್ರಿಲ್ಲರ್ ಆಗಿದ್ದು, ಸಿನಿಮಾಕ್ಕೆ ಮೆಹರ್ ರಮೇಶ್ ನಿರ್ದೇಶನವಿದೆ. ಇದು ಅಜಿತ್ ಕುಮಾರ್ ಅಭಿನಯದ 2015 ರ ತಮಿಳು ಚಿತ್ರ 'ವೇದಾಲಂ' ನ ಅಧಿಕೃತ ತೆಲುಗು ರಿಮೇಕ್ ಆಗಿದೆ. ತೆಲುಗು ಆವೃತ್ತಿಯಲ್ಲಿ ಚಿರಂಜೀವಿ, ತಮನ್ನಾ ಭಾಟಿಯಾ, ಕೀರ್ತಿ ಸುರೇಶ್ ಮತ್ತು ಸುಶಾಂತ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಕೆ ಎಂಟರ್ಟೈನ್ಮೆಂಟ್ಸ್ ಮತ್ತು ಕ್ರಿಯೇಟಿವ್ ಕಮರ್ಷಿಯಲ್ಸ್ ನಿರ್ಮಿಸಿರುವ 'ಭೋಳಾ ಶಂಕರ್' ಚಿತ್ರಕ್ಕೆ ಮಹತಿ ಸ್ವರ ಸಾಗರ್ ಅವರ ಸಂಗೀತ, ಡಡ್ಲಿ ಅವರ ಛಾಯಾಗ್ರಹಣ ಮತ್ತು ಮಾರ್ತಾಂಡ್ ಕೆ ವೆಂಕಟೇಶ್ ಅವರ ಸಂಕಲನವಿದೆ.


Click it and Unblock the Notifications











