ಆರು ವರ್ಷಗಳ ನಂತರ ಮತ್ತೆ ಜೊತೆಯಾದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ, ಐತಿಹಾಸಿಕ ಚಿತ್ರದಲ್ಲಿ ಜಗದ್ವಿಖ್ಯಾತ ಜೋಡಿ
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಒಂದು ಜೋಡಿ ಯಶಸ್ವಿಯಾದರೆ, ಆ ಜೋಡಿಯನ್ನೇ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲು ಅನೇಕರು ಮುಂದಾಗುತ್ತಾರೆ.ಪ್ರೇಕ್ಷಕರು ಕೂಡ ತಮ್ಮ ನೆಚ್ಚಿನ ಜೋಡಿಯನ್ನೇ ಮತ್ತೆ ಮತ್ತೆ ತೆರೆಯ ಮೇಲೆ ನೋಡಲು ಬಯಸುತ್ತಾರೆ.ಇದಕ್ಕೆ ಉದಾಹರಣೆ ಎನ್ನುವಂತೆ ಯಶ್-ರಾಧಿಕಾ ಪಂಡಿತ್ ಒಂದಾದ ಮೇಲೊಂದು ಸಿನಿಮಾ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿಯನ್ನು ರಿಯಲ್ ಮತ್ತು ರೀಲ್ ಲೈಫ್ನಲ್ಲಿ ಕೂಡ ಜನ ಮೆಚ್ಚಿದ್ದಾರೆ.
ಇನ್ನು ಡಾ.ರಾಜ್ ಕುಮಾರ್ ಮತ್ತು ಜಯಂತಿ ಅವರದ್ದು ಆ ಕಾಲದ ದಿ ಬೆಸ್ಟ್ ಜೋಡಿ. 36 ಚಿತ್ರಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದರು ಇಬ್ಬರು. ಕೇವಲ ಕನ್ನಡ ಮಾತ್ರವಲ್ಲ ಬಾಲಿವುಡ್..ಟಾಲಿವುಡ್.. ಕಾಲಿವುಡ್ ನಲ್ಲಿ ಕೂಡ ಅನೇಕ ಜೋಡಿಗಳು ಅಭಿಮಾನಿಗಳ ಹೃದಯವನ್ನು ಗೆದ್ದಿವೆ. ಆ ಪೈಕಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಕೂಡ ಒಂದು.

ಹೌದು. ಎಲ್ಲರಿಗೆ ಗೊತ್ತಿರುವಂತೆ ರಶ್ಮಿಕಾ ಮಂದಣ್ಣ ಅವರಿಗೆ ತೆಲುಗು ಚಿತ್ರರಂಗದಲ್ಲಿ ಅಡಿಪಾಯ ಹಾಕಿದ್ದೇ ವಿಜಯ್ ದೇವರಕೊಂಡ. ಇವರಿಬ್ಬರ ಕಾಂಬಿನೇಷನ್ನಲ್ಲಿ 2018ರಲ್ಲಿ ಬಂದಿದ್ದ ''ಗೀತ ಗೋವಿಂದಂ'' ಆ ಕಾಲದಲ್ಲಿ ವ್ಯಾಪಕ ಸದ್ದು ಮಾಡಿತ್ತು. ಇಬ್ಬರ ನಡುವೆ ಸಂಬಂಧವನ್ನು ಬೆಸೆಯುವಲ್ಲಿ ಪ್ರಮುಖವಾದ ಪಾತ್ರವನ್ನು ಕೂಡ ನಿರ್ವಹಿಸಿತ್ತು. ತಮ್ಮ ವೃತ್ತಿ ಬದುಕಿನಲ್ಲಿ ಅರ್ಜುನ್ ರೆಡ್ಡಿ ಹೊರತು ಪಡಿಸಿದರೆ ವಿಜಯ್ ದೇವರಕೊಂಡ ಬಹುದೊಡ್ಡ ಗೆಲುವನ್ನೇನಾದರೂ ಕಂಡಿದ್ದರೆ ಅದು ಈ ಚಿತ್ರದಲ್ಲಿಯೇ.
''ಗೀತ ಗೋವಿಂದಂ'' ಚಿತ್ರದ ನಂತರ ಮರು ವರ್ಷವೇ ಅಂದರೆ 2019ರಲ್ಲಿ ವಿಜಯ್ ದೇವರಕೊಂಡ ಮತ್ತೆ ರಶ್ಮಿಕಾ ಮಂದಣ್ಣ ಅವರ ಕೈ ಹಿಡಿದಿದ್ದರು. ಇಬ್ಬರು ''ಡಿಯರ್ ಕಾಮ್ರೇಡ್'' ಎಂಬ ಚಿತ್ರ ಮಾಡಿದ್ದರು.
ಆದರೆ.. ''ಗೀತ ಗೋವಿಂದಂ'' ಮಾಡಿದ ಸದ್ದನ್ನು ಮಾಡುವಲ್ಲಿ ಈ ಚಿತ್ರ ವಿಫಲವಾಯ್ತು. ಆದರೂ ಕೂಡ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಕೆಮೆಸ್ಟ್ರೀಗೆ ಹಲವರು ಮನ ಸೋತಿದ್ದರು. ಅಲ್ಲಿಂದ ಇಲ್ಲಿಯವರೆಗೆ ಈ ಜೋಡಿ ಕಂಡಿದ್ದು ತೆರೆಯ ಹಿಂದೆಯಷ್ಟೇ. ಈ ಕಾರಣಕ್ಕೆ ಅನೇಕರು ಇಬ್ಬರು ಮತ್ತೆ ಒಂದಾಗಿ ಸಿನಿಮಾ ಮಾಡಿ ಎಂಬ ಮನವಿಯನ್ನು ಇಬ್ಬರ ಬಳಿ ಮಾಡುತ್ತಲೇ ಬಂದಿದ್ದರು.
ಆದರೆ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಆದರೆ ಈಗ ಕಾಲ ಕೂಡಿ ಬಂದಿದೆ. ಬೆಳ್ಳಿತೆರೆಯ ಮೇಲೆ ಮತ್ತೊಮ್ಮೆ ಮೋಡಿ ಮಾಡಲು ಈ ಜಗದ್ವಿಖ್ಯಾತ ಜೋಡಿ ರೆಡಿಯಾಗಿದೆ. ಹೌದು, ''ಪಿಂಕ್ವಿಲ್ಲಾ'' ಈ ಕುರಿತು ವರದಿಯನ್ನು ಮಾಡಿದ್ದು ವಿಜಯ್ ದೇವರಕೊಂಡ ಅವರ ಹದಿನಾಲ್ಕನೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿಬ ಆಯ್ಕೆಯಾಗಿದ್ಧಾರೆ.

ಈ ಹಿಂದೆ ವಿಜಯ್ ದೇವರಕೊಂಡ ಅವರಿಗೆ ''ಟ್ಯಾಕ್ಸಿವಾಲಾ'' ಚಿತ್ರವನ್ನು ನಿರ್ದೇಶಿಸಿದ್ದ ರಾಹುಲ್ ಸಂಕೃತ್ಯನ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದ್ದು, 1800ರ ದಶಕದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ನಡೆದ ಕಥೆಯನ್ನು ಈ ಚಿತ್ರ ಹೊಂದಿದೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಪಾತ್ರ ಹಾಗೂ ಪೋಷಾಕು ವಿಭಿನ್ನವಾಗಿರಲಿದ್ದು ಈ ಐತಿಹಾಸಿಕ ಕಥೆ ವಿಜಯ್ ದೇವರಕೊಂಡ ವೃತ್ತಿ ಬದುಕಿನ ಬಹುದೊಡ್ಡ ಚಿತ್ರವಾಗಲಿದೆ ಎಂದು ಕೂಡ ಸದ್ಯ ಹೇಳಲಾಗುತ್ತಿದೆ.
ಇನ್ನು ಫ್ರೆಂಚ್ನ ಖ್ಯಾತ ಸಿನಿಮ್ಯಾಟೋಗ್ರಾಫರ್ ಎರಿಕ್ ಗೌಟಿಯರ್ ಈ ಚಿತ್ರವನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯಲಿದ್ದು, ಬಾಲಿವುಡ್ ಮತ್ತು ಮರಾಠಿ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಅಜಯ್-ಅತುಲ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಹಾಲಿವುಡ್ನ ಸೂಪರ್ ಸ್ಟಾರ್ ಅರ್ನಾಲ್ಡ್ ಕೂಡ ಈ ಚಿತ್ರದಲ್ಲಿದ್ದಾರೆ ಎನ್ನುವ ಸುದ್ದಿ ಕೂಡ ಸದ್ಯ ಗುಲ್ಲಾಗಿದೆ. ಸದ್ಯದಲ್ಲಿಯೇ ಈ ಚಿತ್ರದ ಕುರಿತು ಇನ್ನುಳಿದ ವಿವರಗಳು ಹೊರ ಬೀಳುವ ನಿರೀಕ್ಷೆಗಳಿವೆ.


Click it and Unblock the Notifications











