ಮತ್ತೊಂದು ರಾಮಾಯಣ: ವಿಜಯೇಂದ್ರ ಪ್ರಸಾದ್ 'ಸೀತಾ' ಚಿತ್ರದಲ್ಲಿ ರಣ್ವೀರ್ ಸಿಂಗ್
ರಾಮಾಯಣ, ಮಹಾಭಾರತದ ಬಗ್ಗೆ ಸಾಕಷ್ಟು ಧಾರಾವಾಹಿಗಳು, ಸಿನಿಮಾಗಳು ಬಂದಿವೆ. ಆದರೂ ಜನರಿಗೆ ಅದರ ಬಗ್ಗೆ ಆಸಕ್ತಿ ಕಡಿಮೆ ಆಗಿಲ್ಲ. ಮತ್ತೆ ಮತ್ತೆ ತೆರೆಮೇಲೆ ನೋಡಲು ಇಷ್ಟ ಪಡುತ್ತಾರೆ. ಹಾಗಾಗಿಯೇ ಮಹಾಭಾರತ ಮತ್ತು ರಾಮಾಯಣದ ಮೇಲೆ ಸಿನಿಮಾಗಳು ಬರುತ್ತಲೇ ಇದೆ.
ಬಾಲಿವುಡ್ನಲ್ಲಿ ಬಿಗ್ ಬಜೆಟ್ನ ರಾಮಾಯಣ ಸಿನಿಮಾ ಸೆಟ್ಟೇರುತ್ತೆ ಎಂದು ಎರಡು ಮೂರು ವರ್ಷಗಳಿಂದ ಹೇಳಲಾಗುತ್ತಿದೆ. ನಿತೀಶ್ ತಿವಾರಿ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿರುವ ರಾಮಾಯಣ ಇನ್ನು ಪ್ರಾರಂಭವಾಗಿಲ್ಲ. ಆದರೆ ಆಗಲೇ ರಾಮಾಯಣದ ಮೇಲೆ ಮತ್ತೊಂದು ಚಿತ್ರ ಶುರುವಾಗಿದೆ. ಪ್ರಭಾಸ್ ನಾಯಕನಾಗಿ ನಟಿಸುತ್ತಿರುವ ಆದಿಪುರುಷ್ ಈಗಾಗಲೇ ಚಿತ್ರೀಕರಣ ಪ್ರಾರಂಭ ಮಾಡಿದೆ.
ಈ ನಡುವೆ ಮತ್ತೊಂದು ರಾಮಾಯಣ ಸೆಟ್ಟೇರಲು ಸೈಲೆಂಟ್ ಆಗಿ ಕೆಲಸ ಮಾಡುತ್ತಿದೆ. ಬಾಹುಬಲಿ ಬರಹಗಾರ, ನಿರ್ದೇಶಕ ರಾಜಮೌಳಿ ತಂದೆ ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಬರೆಯುತ್ತಿರುವ ರಾಮಾಯಣ ಸೆಟ್ಟೇರಲು ಸಿದ್ಧವಾಗುತ್ತಿದೆ.

ಈ ಚಿತ್ರಕ್ಕೆ 'ಸೀತಾ' ಎಂದು ಹೆಸರಿಡಲಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಅಲೌಕಿಕ್ ದೇಸಾಯಿ ನಿರ್ದೇಶನದ ಸೀತಾ ಚಿತ್ರದ ಬಹುಮುಖ್ಯ ಸೀತಾ ಪಾತ್ರಕ್ಕೆ ಬಾಲಿವುಡ್ನ ಇಬ್ಬರು ಸ್ಟಾರ್ ನಟಿಯರ ಹೆಸರು ಕೇಳಿಬರುತ್ತಿದೆ. ಕರೀನಾ ಕಪೂರ್ ಮತ್ತು ಅಲಿಯಾ ಭಟ್ ಇಬ್ಬರಲ್ಲಿ ಸೀತೆ ಯಾರಾಗ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಇದೀಗ ಚಿತ್ರದ ಬಗ್ಗೆ ಮತ್ತೊಂದು ಅಪ್ ಡೇಟ್ ಹೊರಬಿದ್ದಿದೆ. ಚಿತ್ರದಲ್ಲಿ ರಾವಣನಾಗಿ ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ರಾವಣನ ಪಾತ್ರಕ್ಕೆ ಚಿತ್ರತಂಡ ರಣ್ವೀರ್ ಸಿಂಗ್ ಅವರನ್ನು ಸಂಪರ್ಕ ಮಾಡಿದೆ ಎನ್ನಲಾಗುತ್ತಿದೆ. ಆದರೆ ರಣ್ವೀರ್ ಕಡೆಯಿಂದ ಇನ್ನು ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
ಒಂದು ವೇಳೆ ರಣವೀರ್ ಸೀತಾ ಚಿತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿದ್ರೆ ಮೊದಲ ಬಾರಿಗೆ ಕರೀನಾ ಮತ್ತು ರಣ್ವೀರ್ ಸಿಂಗ್ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಕೊರೊನಾ ಲಾಕ್ ಡೌನ್ ಇರುವುದರಿಂದ ಚಿತ್ರೀಕರಣ ತಡವಾಗಿ ಪ್ರಾರಂಭವಾಗುವ ಸಾಧ್ಯತೆ ಇದೆ.


Click it and Unblock the Notifications











