'ಅಖಂಡ- 2' ಚಿತ್ರದ ಈ ದೃಶ್ಯಗಳಲ್ಲಿ ಲಾಜಿಕ್ ಇಲ್ವಾ? ನಿರ್ದೇಶಕರ ಸ್ಪಷ್ಟನೆ ಕೇಳಿ
ಬಾಲಕೃಷ್ಣ ನಟನೆಯ 'ಅಖಂಡ- 2' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಪ್ರೀಮಿಯರ್ ಶೋಗಳು ಹಾಗೂ ಮೊದಲ ದಿನದ ಕಲೆಕ್ಷನ್ 59 ಕೋಟಿ ರೂ. ದಾಟಿದೆ ಎಂದು ಚಿತ್ರತಂಡವೇ ಘೋಷಣೆ ಮಾಡಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ಕೆಲ ಸನ್ನಿವೇಶಗಳಲ್ಲಿ ಲಾಜಿಕ್ ಇಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಬೊಯಪಾಟಿ ಶ್ರೀನು 'ಅಖಂಡ- 2' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಾಲಯ್ಯ ಸಿನಿಮಾಗಳು ಅಂದ್ರೆ ಬರೀ ಬಿಲ್ಡಪ್, ಬಹಳ ವಿಚಿತ್ರ ಎನಿಸುವ ಸ್ಟಂಟ್ಸ್ ಮಾತ್ತಾರೆ, ಸೂಪರ್ ಹೀರೊ ರೀತಿ ಅವರನ್ನು ಬಿಂಬಿಸುವ ಪ್ರಯತ್ನ ನಡೆಯುತ್ತದೆ. ಅಭಿಮಾನಿಗಳು ಅದನ್ನು ಒಪ್ಪಿಕೊಂಡರೂ ಸಾಮಾನ್ಯ ಪ್ರೇಕ್ಷಕರು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. 'ಅಖಂಡ'-2 ಚಿತ್ರದಲ್ಲಿ ಕೂಡ ಅಂತಹ ಸಾಕಷ್ಟು ಸನ್ನಿವೇಶಗಳಿವೆ.

ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ಹೀಗೆ ಲಾಜಿಕ್ ಇಲ್ಲದ, ಇದೆಲ್ಲಾ ಹೇಗೆ ಸಾಧ್ಯ ಎಂದು ಕೇಳುವಂತಹ ಕೆಲ ಸನ್ನಿವೇಶಗಳ ತುಣು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ತ್ರಿಶೂಲದಲ್ಲಿ ದೊಡ್ಡ ಮಿಷನ್ ಗನ್ ಫೈಯರ್ ಮಾಡೋದು, ಕಿಡಿಗೇಡಿಯೊಬ್ಬನ ತಲೆ ಹಿಡಿದು ದೃಷ್ಟಿ ತೆಗೆದು ಕೆಳಗೆ ಹಾಕಿ ಸಾಯಿಸುವುದು ಹೀಗೆ ಲಿಸ್ಟ್ ಬೆಳೆಯುತ್ತಾ ಹೋಗುತ್ತದೆ. ವ್ಯಕ್ತಯೊಬ್ಬನನ್ನು ಹೀಗೆ ಅಂಗೈಯಲ್ಲಿ ಎತ್ತಿ ಸುತ್ತಿ ಸುತ್ತಿ ಕೆಳಗೆ ಹಾಕೋಕೆ ಹೇಗೆ ಸಾಧ್ಯ? ಮಂಜು ತುಂಬಿದ ಬೆಟ್ಟದಲ್ಲಿ ಅವನ ತಲೆ ಒಡೆದು ರಕ್ತ ಬಂದು ಸಾಯುವುದು ಹೇಗೆ? ಕೊಂಚ ಆದರೂ ಲಾಜಿಕ್ ಬೇಡವೇ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.
ಸ್ವತಃ ನಿರ್ದೇಶಕ ಬೋಯಪಾಟಿ ಶ್ರೀನು ಈ ದೃಶ್ಯದ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ. ತೆಲುಗು ಟಿವಿ5 ವಾಹಿನಿ ಸಂದರ್ಶನದಲ್ಲಿ ನಿರ್ದೇಶಕರು ಮಾತನಾಡಿದ್ದಾರೆ. "ಚಿತ್ರದ ಆರಂಭದಲ್ಲೇ ನಾವು ಬಾಲಕೃಷ್ಣ ಪಾತ್ರದ ಬಗ್ಗೆ ಹೇಳ್ತೀವಿ. ಆತ ಅಷ್ಟಸಿದ್ಧಿ ಸಾಧಿಸಿದವನು. ಅಷ್ಟದಿಗ್ಬಂದನಕ್ಕೆ ಹೋಗಿ 12 ವರ್ಷಗಳ ಬಳಿಕ ಬಂದವನು. ಆತ ಸೂಪರ್ ಹೀರೊ. ಅಂತಹವರಿಗೆ ಲಾಜಿಕ್ ಅಥವಾ ಮ್ಯಾಜಿಕ್ ಅಲ್ಲ, ಏನು ಬೇಕಾದರೂ ಮಾಡುತ್ತಾರೆ. ಬರೀ ಆಯುಧ ಹಿಡಿದು ಆಟ ಆಡಿದ್ದೀವಿ. ಒಬ್ಬ ಸೂಪರ್ ಹೀರೊ ಆ ಸಂದರ್ಭ, ಟೈಮಿಂಗ್ಗೆ ತಕ್ಕಂತೆ ಹೇಗೆ ಬೇಕಾದರೂ ಬದಲಾಗುತ್ತಾನೆ. ಹಾಗಾಗಿ ಏನೇ ಮಾಡಿದ್ರು, ಅಲ್ಲಿ ಲಾಜಿಕ್ ಬೇಕಾಗಲ್ಲ. ಕಾರಣ ಅಷ್ಟಸಿದ್ಧಿ ಸಾಧಕ" ಎಂದು ವಿವರಿಸಿದ್ದಾರೆ.
ಚಿತ್ರದಲ್ಲಿ ಮುರಳಿ ಕೃಷ್ಣ ಹಾಗೂ ಅಖಂಡ ರುದ್ರ ಸಿಕಂದರ್ ಅಘೋರ ಆಗಿ ದ್ವಿಪಾತ್ರದಲ್ಲಿ ಬಾಲಕೃಷ್ಣ ಅಬ್ಬರಿಸಿದ್ದಾರೆ. 3 ವರ್ಷಗಳ ಹಿಂದೆ 'ಅಖಂಡ' ಸಿನಿಮಾ ಬಂದು ಗೆದ್ದಿತ್ತು. ಆ ಕಥೆಯನ್ನು ಸೀಕ್ವೆಲ್ನಲ್ಲಿ ಮುಂದುವರೆಸಿದ್ದಾರೆ. ಅಲ್ಲಿಂದ 16-17 ವರ್ಷಗಳ ಬಳಿಕ 'ಅಖಂಡ'-2 ಕಥೆ ಶುರುವಾಗುತ್ತದೆ. ದೇಶದ ಮೇಲೆ ದುಷ್ಟಶಕ್ತಿಗಳ ವಕ್ರದೃಷ್ಟಿ ಬಿದ್ದಾಗ ಅದನ್ನು ಅಂತ್ಯಗೊಳಿಸುವ ಅಘೋರ ಆರ್ಭಟ ಹೇಗಿರುತ್ತದೆ ಎನ್ನವುದು ಚಿತ್ರದ ಒನ್ಲೈನ್ ಸ್ಟೋರಿ.
ದೇಶಕ್ಕೆ ಸನಾತನ ಧರ್ಮಕ್ಕೆ ಸಂಕಷ್ಟ ಬಂದಾಗ 'ಅಖಂಡ' ಏನೆಲ್ಲಾ ಮಾಡ್ತಾನೆ. ತನ್ನ ಅದ್ಭುತ ಶಕ್ತಿಯಿಂದ ಭಾರೀ ವಿಪತ್ತನ್ನು ಹೇಗೆ ತಡೆಯುತ್ತಾನೆ ಎನ್ನುವುದನ್ನು ಬೊಯಪಾಟಿ ಶ್ರೀನು ಚಿತ್ರದಲ್ಲಿ ಹೇಳಿದ್ದಾರೆ. ಬಾಲಯ್ಯ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಿದೆ. ಬೇರೆ ಯಾರಿಂದಲೂ ಈ ಸಿನಿಮಾ ಮಾಡೋಕೆ ಸಾಧ್ಯವಾಗುತ್ತಿರಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಂದಾಜು 150 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ನಟಿಸಲು ಬಾಲಯ್ಯ 40 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಗುಲ್ಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.


Click it and Unblock the Notifications











