'ಕೆಜಿಎಫ್' ಅನ್ನು ಹಿಯಾಳಿಸಿದ್ದ ನಿರ್ದೇಶಕನಿಂದ ಪ್ರಶಾಂತ್ ನೀಲ್ ಭೇಟಿ
'ಕೆಜಿಎಫ್ 2' ಸಿನಿಮಾ ಐತಿಹಾಸಿಕ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿದೆ. ಸಿನಿಮಾ ಪ್ರೇಕ್ಷಕರಿಗೆ ಮಾತ್ರವಲ್ಲ, ಚಿತ್ರಕರ್ಮಿಗಳಿಗೂ ಬಹಳ ಹಿಡಿಸಿದ್ದು, 'ಕಲಿಕಾ ಮಾದರಿ'ಯ ರೀತಿಯಲ್ಲಿ ನಿರ್ದೇಶಕರು 'ಕೆಜಿಎಫ್ 2' ಸಿನಿಮಾವನ್ನು ಪರಿಗಣಿಸುತ್ತಿದ್ದಾರೆ.
ಬಾಲಿವುಡ್ನ ಸ್ಟಾರ್ಗಳು, ನಿರ್ದೇಶಕರು ಸೇರಿದಂತೆ ದಕ್ಷಿಣ ಭಾರತದ ಹಲವು ಸ್ಟಾರ್ ನಟರು, ನಿರ್ದೇಶಕರು 'ಕೆಜಿಎಫ್ 2' ಸಿನಿಮಾವನ್ನು ಕೊಂಡಾಡಿದ್ದಾರೆ. ಆದರೆ ಈ ಹಿಂದೆ ಒಬ್ಬ ತೆಲುಗು ನಿರ್ದೇಶಕ 'ಕೆಜಿಎಫ್' ಸಿನಿಮಾದ ಬಗ್ಗೆ ಹಗುರವಾಗಿ ಮಾತನಾಡಿದ್ದ, ಆದರೆ ಆತನಿಗೂ ಈಗ ಬುದ್ಧಿಬಂದಂತಿದೆ.
ತೆಲುಗಿನ 'ಉಪ್ಪೆನ' ಹೆಸರಿನ ಸಿನಿಮಾ ಮಾಡಿರುವ ನಿರ್ದೇಶಕ ಬುಚ್ಚಿಬಾಬು ಸನಾ ಕೆಲವು ತಿಂಗಳ ಹಿಂದೆ 'ಕೆಜಿಎಫ್' ಸಿನಿಮಾದ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದ ಆದರೆ ಇಂದು ಆತನೇ 'ಕೆಜಿಎಫ್' ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಭೇಟಿಯಾಗಿ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರೆ.

'ಪುಷ್ಪ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬುಚ್ಚಿಬಾಬು ಸನಾ, ತಾನು 'ಪುಷ್ಪ' ಸಿನಿಮಾವನ್ನು ಈಗಾಗಲೇ ನೋಡಿದ್ದು, ''ಪುಷ್ಪ' ಸಿನಿಮಾ 10 'ಕೆಜಿಎಫ್'ಗೆ ಸಮ' ಎಂದಿದ್ದರು. ಬುಚ್ಚಿಬಾಬು ಸನಾರ ಈ ಹೇಳಿಕೆ ಕನ್ನಡ ಸಿನಿಮಾ ಪ್ರೇಕ್ಷಕರಲ್ಲಿ ಆಕ್ರೋಶ ಹುಟ್ಟಿಸಿತ್ತು. 'ಪುಷ್ಪ' ಸಿನಿಮಾ ನೋಡದಂತೆ ಅಭಿಯಾನ ಸಹ ಮಾಡಲಾಗಿತ್ತು.
ಈಗ 'ಕೆಜಿಎಫ್ 2' ಸಿನಿಮಾ, 'ಪುಷ್ಪ' ಸಿನಿಮಾವನ್ನು ಮಾತ್ರವಲ್ಲ, 'RRR' ಹಾಗೂ ಕೆಲವು ಪ್ರದೇಶಗಳಲ್ಲಿ 'ಬಾಹುಬಲಿ 2' ಸಿನಿಮಾವನ್ನೂ ಸಹ ಕಲೆಕ್ಷನ್ನಲ್ಲಿ ಮೀರಿಸಿದ್ದು, ಭಾರತದ ಬಹುದೊಡ್ಡ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ. ಈಗ ಬುಚ್ಚಿಬಾಬು ಸನಾಗೆ ತನ್ನ ತಪ್ಪಿನ ಅರಿಯಾಗಿದೆಯೋ ಏನೊ? 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಭೇಟಿಯಾಗಿದ್ದಾರೆ.
'ಕೆಜಿಎಫ್' ಸಿನಿಮಾ ಬಗ್ಗೆ ಬುಚ್ಚಿಬಾಬು ಕಮೆಂಟ್ ಮಾಡಿದ ಬಳಿಕ, ಬುಚ್ಚಿಬಾಬುವನ್ನು 'ಕೆಜಿಎಫ್' ಸಿನಿಮಾ ಅಭಿಮಾನಿಗಳು ವಿಪರೀತ ಟ್ರೋಲ್ ಮಾಡಿದ್ದರು. ಬುಚ್ಚಿಬಾಬು, ಸಾಮಾಜಿಕ ಜಾಲತಾಣದಲ್ಲಿ ಏನೇ ಪೋಸ್ಟ್ ಹಾಕಿದರೂ ಯಶ್ ಹಾಗೂ 'ಕೆಜಿಎಫ್' ಅಭಿಮಾನಿಗಳು ಬುಚ್ಚಿಬಾಬು ಕಾಲೆಳೆಯುತ್ತಿದ್ದರು. ಇದೀಗ ಕೊನೆಗೆ ಬುಚ್ಚಿಬಾಬು, ಪ್ರಶಾಂತ್ ನೀಲ್ ಅನ್ನು ಭೇಟಿಯಾಗಿದ್ದು, ಪ್ರಶಾಂತ್ ನೀಲ್ ಒಟ್ಟಿಗಿನ ತಮ್ಮ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಸಲಿಗೆ, ಪ್ರಶಾಂತ್ ನೀಲ್ ಹಾಗೂ ಬುಚ್ಚಿಬಾಬು ಸನಾ ಇಬ್ಬರೂ ಜೂ ಎನ್ಟಿಆರ್ಗಾಗಿ ಸಿನಿಮಾ ಮಾಡಲಿದ್ದಾರೆ. ಹಾಗಾಗಿ ಇಬ್ಬರೂ ನಿರ್ದೇಶಕರು ಒಟ್ಟಿಗೆ ಕೂತು ತಮ್ಮಿಬ್ಬರ ಸಿನಿಮಾದಲ್ಲಿ ಸಾಮ್ಯತೆ ಇಲ್ಲದಿರುವಂತೆ, ಡೇಟ್ಸ್ ಕ್ಲಾಶ್ ಆಗದೆ ಚಿತ್ರೀಕರಣ ಯೋಜನೆ ಮಾಡುವುದು ಇತರೆ ವಿಷಯಗಳ ಬಗ್ಗೆ ಮಾತನಾಡಿಕೊಂಡಿದ್ದಾರೆ ಎನ್ನಲಾಗಿದೆ.


Click it and Unblock the Notifications











