ಪಿಂಚಣಿ ಹಣ ದೇಣಿಗೆ ನೀಡಿದ್ದ ಅಂಧ ಮಹಿಳೆಗೆ ವಿಶೇಷ ಗೌರವ ನೀಡಿದ ಸೋನು
ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಜನಪರ ಕೆಲಸ ಮಾಡ್ತಿದ್ದ ಸೋನು ಸೂದ್ ಫೌಂಡೇಶನ್ಗೆ ಅಂಧ ಮಹಿಳೆಯೊಬ್ಬರು ತನ್ನ 5 ತಿಂಗಳ ಪಿಂಚಣಿ ಹಣವನ್ನು ದೇಣಿಗೆಯಾಗಿ ಕೊಟ್ಟಿದ್ದರು. 15 ಸಾವಿರ ರೂಪಾಯಿಯನ್ನು ಸೋನು ಫೌಂಡೇಶನ್ಗೆ ನೀಡಿದ ಮಹಿಳೆಯನ್ನು 'ಭಾರತದ ಶ್ರೀಮಂತ ಮಹಿಳೆ' ಎಂದು ಸೋನು ಸೂದ್ ಪರಿಚಯಿಸಿದ್ದರು.
ಇದೀಗ, ಈ ಮಹಿಳೆಗೆ ವಿಶೇಷ ಸ್ಥಾನಮಾನ ನೀಡುವ ಮೂಲಕ ಗೌರವಿಸಲಾಗುತ್ತಿದೆ. ಆಂಧ್ರದಲ್ಲಿ ಸೋನು ಸೂದ್ ಫೌಂಡೇಶನ್ ವತಿಯಿಂದ ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ. ಇದನ್ನು ಜುಲೈ 23 ರಂದು ಉದ್ಘಾಟಿಸಲಾಗುತ್ತಿದೆ.
ಸೋನು ಸೂದ್ ಸಾರಥ್ಯದಲ್ಲಿ ನಿರ್ಮಾಣವಾಗಿರುವ ಆಮ್ಲಜನಕ ಘಟಕವನ್ನು ವಿಶೇಷ ಚೇತನ ಮಹಿಳೆ ಬುಡಾ ನಾಗಲಕ್ಷ್ಮಿ ಉದ್ಘಾಟಿಸಲಿದ್ದಾರೆ ಎಂಬ ವಿಷಯ ಹೊರಬಿದ್ದಿದೆ. ಈ ಕುರಿತು ಸ್ವತಃ ಸೋನು ಸೂದ್ ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

''ಸೋನು ಸೂದ್ ಫೌಂಡೇಶನ್ಗೆ ತನ್ನ 5 ತಿಂಗಳ ಪಿಂಚಣಿ ಹಣ 15000 ಸಾವಿರ ರೂಪಾಯಿ ದೇಣಿಗೆ ನೀಡಿದ್ದ ಬುಡಾ ನಾಗಲಕ್ಷ್ಮಿ ಆಂಧ್ರದಲ್ಲಿ ಸ್ಥಾಪಿತವಾಗಿರುವ ಆಮ್ಲಜನಕ ಘಟಕದ ಉದ್ಘಾಟನೆ ಮಾಡಲಿದ್ದಾರೆ ಎನ್ನುವುದು ನನಗೆ ಹೆಮ್ಮೆ ತಂದಿದೆ. ಜುಲೈ 23ರಂದು ಬೆಳಗ್ಗೆ 11.15ಕ್ಕೆ ಈ ಕಾರ್ಯಕ್ರಮ ನೆರವೇರಲಿದೆ'' ಎಂದು ಸೋನು ಸೂದ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಐಟಿ ಸಚಿವ ಗೌತಮ್ ರೆಡ್ಡಿ, ಚಂದ್ರಾಧರ್ ಬಾಬು, ಜಿಲ್ಲಾಧಿಕಾರಿ ಸಹ ಭಾಗಿಯಾಗಲಿದ್ದಾರೆ ಎಂದು ಸೋನು ಸೂದ್ ಮಾಹಿತಿ ನೀಡಿದ್ದಾರೆ.
ಮೇ 13 ರಂದು ಬುಡಾ ನಾಗಲಕ್ಷ್ಮಿ ಸೋನು ಸೂದ್ ಫೌಂಡೇಶನ್ಗೆ 15 ಸಾವಿರ ರೂಪಾಯಿ ದೇಣಿಗೆ ನೀಡಿದ್ದರು.

ಅಮ್ಮನ ಸ್ಮರಿಸಿದ ಸೋನು ಸೂದ್ ಭಾವುಕರಾಗಿದ್ದರು
ಜುಲೈ 22 ರಂದು ಸೋನು ಸೂದ್ ಅವರ ತಾಯಿ ಸರೋಜ್ ಸೂದ್ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆ ಸೋನು ಸೂದ್ ಅಮ್ಮನ ಬಗ್ಗೆ ಭಾವುಕ ಪೋಸ್ಟ್ ಹಾಕಿದ್ದರು. ''ಹ್ಯಾಪಿ ಬರ್ತಡೇ ಅಮ್ಮಾ. ಪ್ರತಿ ವರ್ಷವೂ ನಿಮ್ಮನ್ನು ತಬ್ಬಿಕೊಂಡು ವಿಶ್ ಮಾಡಬೇಕಿತ್ತು ಎಂದೆನಿಸುತ್ತದೆ. ನೀನು ಕಲಿಸಿದ ಜೀವನದ ಪಾಠಗಳಿಗೆ ಧನ್ಯವಾದಗಳು. ಸದಾ ಉತ್ತಮ ಕೆಲಸಗಳನ್ನು ಮಾಡುತ್ತಾ ನಿಮಗೆ ಹೆಮ್ಮೆ ತರುತ್ತೇನೆ ಎಂದು ಮಾತು ಕೊಡುತ್ತಿದ್ದೇನೆ'' ಎಂದಿದ್ದರು.


Click it and Unblock the Notifications











