'ಪುಷ್ಪ- 2' ರಿಲೀಸ್ ಯಾವಾಗ? 'ಜವಾನ್' ಚಿತ್ರದಲ್ಲಿ ಅಲ್ಲು ಅರ್ಜುನ್? ಅಶ್ವತ್ಥಾಮ ಆಗ್ತಾರಾ ಸ್ಟೈಲಿಶ್ ಸ್ಟಾರ್?
ಐಕಾನ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ'- 2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 2 ವರ್ಷಗಳ ಹಿಂದೆ ಬಂದಿದ್ದ ಈ ಸರಣಿಯ ಮೊದಲ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ 2ನೇ ಸಿನಿಮಾ ಬಗ್ಗೆ ನಿರೀಕ್ಷೆ ಗರಿಗೆದರಿದೆ. 'ಪುಷ್ಪ'- 2 ರಿಲೀಸ್ ಯಾವಾಗ? ಮುಂದೆ ಬನ್ನಿ ಯಾವ ಚಿತ್ರದಲ್ಲಿ ನಟಿಸ್ತಾರೆ? ಎನ್ನುವ ಬಗ್ಗೆ ಭಾರೀ ಕುತೂಹಲ ಇದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಪುಷ್ಪ'- 2 ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಪ್ರೀಕ್ವೆಲ್ ಸಕ್ಸಸ್ ನಂತರ ಸೀಕ್ವೆಲ್ ಸೆಟ್ಟೇರುವುದು ತಡವಾಯಿತು. ಮೊಲದ ಭಾಗ ಊಹಿಸಿದ್ದಕ್ಕಿಂತ ದೊಡ್ಡದಾಗಿ ಸಕ್ಸಸ್ ಕಂಡಿತ್ತು. ಹಾಗಾಗಿ ಸುಕುಮಾರ್ ಕಥೆಯನ್ನು ಮತ್ತೆ ತಿದ್ದಿ ತೀಡಿ ಸಿನಿಮಾ ಮಾಡೋದು ತಡವಾಗಿತ್ತು. ಇದೀಗ ಸಿನಿಮಾ ರಿಲೀಸ್ ಯಾವಾಗ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಈ ವರ್ಷವೇ ಮತ್ತೆ 'ಪುಷ್ಪ'ರಾಜ್ ಆರ್ಭಟ ಶುರುವಾಗುತ್ತಾ? ಅಥವಾ ಮುಂದಿನ ವರ್ಷದವರೆಗೂ ಕಾಯಬೇಕಾ? ಗೊತ್ತಿಲ್ಲ.

'ಪುಷ್ಪ'- 2 ನಂತರ ಅಲ್ಲು ಅರ್ಜುನ್ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಇತ್ತೀಚೆಗೆ 'ಜವಾನ್' ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಇನ್ನು ಬಾಲಿವುಡ್ನ 'ದಿ ಇಮ್ಮಾರ್ಟೆಲ್ ಅಶ್ವತ್ಥಾಮ' ಚಿತ್ರದಲ್ಲೂ ಐಕಾನ್ ಸ್ಟಾತ್ ನಟಿಸೋ ಬಗ್ಗೆ ಊಹಾಪೋಹಾ ಶುರುವಾಗಿದೆ. ಇದೆಲ್ಲದರ ಬಗ್ಗೆ ಅಲ್ಲು ಅರ್ಜುನ್ ಆಪ್ತ ಬನ್ನಿ ವಾಸು ಮಾಹಿತಿ ನೀಡಿದ್ದಾರೆ.
ವರ್ಷಾಂತ್ಯಕ್ಕೆ 'ಪುಷ್ಪ- 2' ರಿಲೀಸ್?
ಸುಕುಮಾರ್ ನಿರ್ದೇಶನದ 'ಪುಷ್ಪ'- 2 ಸಿನಿಮಾ ಭಾರೀ ಸದ್ದು ಮಾಡ್ತಿದೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ನಟಿಸಿದ್ದು ಭರದಿಂದ ಚಿತ್ರೀಕರಣ ಸಾಗುತ್ತಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ರಯತ್ನಿಸುತ್ತಿದೆ ಎಂದು ಬನ್ನಿ ವಾಸು ಮಾಹಿತಿ ನೀಡಿದ್ದಾರೆ. ಆದರೆ ಚಿತ್ರೀಕರಣ ಇನ್ನು ಮುಗಿದಿಲ್ಲ. ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್, ರಿಲೀಸ್ಗೆ ಬಹಳ ಸಮಯ ಬೇಕು. ಈ ವರ್ಷವೇ ಸಿನಿಮಾ ರಿಲೀಸ್ ಆಗುತ್ತಾ?ಎನ್ನುವ ಪ್ರಶ್ನೆ ಕೂಡ ಎದ್ದಿದೆ.
ಗೀತಾ ಆರ್ಟ್ಸ್ ಬ್ಯಾನರ್ನಲ್ಲಿ ಸಿನಿಮಾ
ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಖ್ಯಾತ ನಿರ್ಮಾಪಕರು. ಗೀತಾ ಆರ್ಟ್ಸ್ ಬ್ಯಾನರ್ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. 'ಸರೈನೋಡು' ನಂತರ ಬನ್ನಿ ತಮ್ಮ ಬ್ಯಾನರ್ನಲ್ಲಿ ನಟಿಸಿಲ್ಲ. ಮುಂದಿನ ವರ್ಷ ಚಿತ್ರವೊಂದನ್ನು ಪ್ಲ್ಯಾನ್ ಮಾಡುತ್ತಿದ್ದಾರಂತೆ. ಕಥೆ, ನಿರ್ದೇಶಕರು ಯಾರು ಎನ್ನುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ಸಿಗುತ್ತೆ ಎಂದು ಬನ್ನಿ ವಾಸು ತಿಳಿಸಿದ್ದಾರೆ.

'ಜವಾನ್' ಚಿತ್ರದಲ್ಲಿ ಅಲ್ಲು ಅರ್ಜುನ್?
ಅಟ್ಲಿ ನಿರ್ದೇಶನದ 'ಜವಾನ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈ ಚಿತ್ರದಲ್ಲಿ ಶಾರುಕ್ ಖಾನ್ ಜೊತೆಗೆ ವಿಜಯ್ ಸೇತುಪತಿ, ನಯನತಾರಾ, ಸಂಜಯ್ ದತ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ದಳಪತಿ ವಿಜಯ್ ಹಾಗೂ ದೀಪಿಕಾ ಪಡುಕೋಣೆ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಟಾಲಿವುಡ್ನಿಂದ ಅಲ್ಲು ಅರ್ಜುನ್ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಈಗಾಗಲೇ ಶೂಟಿಂಗ್ ಕೂಡ ಮುಗಿದಿದೆ ಎನ್ನುವ ಮಾತುಗಳು ಇತ್ತೀಚೆಗೆ ಕೇಳಿಬಂದಿತ್ತು. ಈ ಬಗ್ಗೆ ಬನ್ನಿ ವಾಸು ಪ್ರತಿಕ್ರಿಯಿಸಿ ಇದೆಲ್ಲಾ ಬರೀ ವದಂತಿ ಅಷ್ಟೇ ಎಂದಿದ್ದಾರೆ.
'ಅಶ್ವತ್ಥಾಮ'ನಾಗಿ ಐಕಾನ್ ಸ್ಟಾರ್?
ಅಲ್ಲು ಅರ್ಜುನ್ ಬಾಲಿವುಡ್ ಎಂಟ್ರಿ ಬಗ್ಗೆ ಕೂಡ ದಿನಕ್ಕೊಂದು ಸುದ್ದಿ ಹರಿದಾಡುತ್ತಿದೆ. 'ಉರಿ' ಸಿನಿಮಾ ಮಾಡಿದ್ದ ಆದಿತ್ಯಾ ಧರ್ 'ದಿ ಇಮ್ಮಾರ್ಟೆಲ್ ಅಶ್ವತ್ಥಾಮ' ಎನ್ನುವ ಸಿನಿಮಾ ಘೋಷಿಸಿದ್ದರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ನಟಿಸಬೇಕಿತ್ತು. ಆದರೆ ಇದೀಗ ನಿರ್ಮಾಪಕರು ಬದಲಾಗಿದ್ದು ವಿಕ್ಕಿ ಬದಲು ಬೇರೆ ಕಲಾವಿದರು ತಲಾಶೆಯಲ್ಲಿದೆ ಚಿತ್ರತಂಡ. ಮಹಾಭಾರತದ ಅಶ್ವತ್ಥಾಮನಾಗಿ ನಟಿಸಲು ಚಿತ್ರತಂಡ ಅಲ್ಲು ಅರ್ಜುನ್ನ ಕೂಡ ಸಂಪರ್ಕಿಸಿತ್ತಂತೆ. ಈ ಬಗ್ಗೆ ಮಾತನಾಡಿರುವ ವಾಸು, "ಹೌದು, ಕೇಳಿದ್ದಾರೆ? ಇನ್ನು ಅಲ್ಲು ಅರ್ಜುನ್ ಒಪ್ಪಿಗೆ ಸೂಚಿಸಿಲ್ಲ" ಎಂದಿದ್ದಾರೆ.


Click it and Unblock the Notifications











