ಅಲ್ಲು ಅರ್ಜುನ್ 'ಪುಷ್ಪ'-2 ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ?
ಕನ್ನಡ ಪ್ರತಿಭೆಗಳು ಇತ್ತೀಚೆಗೆ ಪರಭಾಷಾ ಚಿತ್ರಗಳಲ್ಲಿ ಹೆಚ್ಚು ಹೆಚ್ಚು ಕೆಲಸ ಮಾಡ್ತಿದ್ದಾರೆ. 'KGF' ಹಾಗೂ 'ಕಾಂತಾರ' ಚಿತ್ರಗಳಿಂದ ಮತ್ತೆ ಸ್ಯಾಂಡಲ್ವುಡ್ ಕಡೆ ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತಾಗಿದೆ. ಆ ಚಿತ್ರಗಳಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರಿಗೆ ಪರಭಾಷೆಯಿಂದ ಬುಲಾವ್ ಬರ್ತಿದೆ.
'KGF' ಸಾರಥಿ ಪ್ರಶಾಂತ್ ನೀಲ್ ಈಗಾಗಲೇ ತೆಲುಗಿನಲ್ಲಿ ಒಂದು ಚಿತ್ರ ಕಟ್ಟಿಕೊಟ್ಟಿದ್ದಾರೆ. ಮತ್ತೆರಡು ಸಿನಿಮಾಗಳು ಲೈನಪ್ ಆಗಿದೆ. ರಿಷಬ್ ಶೆಟ್ಟಿ 'ಜೈ ಹನುಮಾನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿದೆ. ಇನ್ನು ಗರುಡ ರಾಮ್, ರವಿಬಸ್ರೂರು ಸೇರಿದಂತೆ ಹಲವು ಕಲಾವಿದರು, ತಂತ್ರಜ್ಞರು ಬೇರೆ ಭಾಷೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ನಿಜ ಹೇಳಬೇಕು ಅಂದ್ರೆ ಕನ್ನಡದ ಪ್ರತಿಭೆಗಳಿಗೆ ಈಗ ಭಾರೀ ಡಿಮ್ಯಾಂಡ್ ಶುರುವಾಗಿದೆ. ದೀಪಾವಳಿ ಸಂಭ್ರಮದಲ್ಲಿ ಬಿಡುಗಡೆಯಾದ ಮಲ್ಟಿಸ್ಟಾರರ್ 'ಸಿಂಗಂ ಅಗೇನ್' ಚಿತ್ರಕ್ಕೆ ರವಿಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದರು. ಈಗಾಗಲೇ ತೆಲುಗು, ಹಿಂದಿ ಚಿತ್ರಗಳಿಗೆ ರವಿ ರೀ-ರೆಕಾರ್ಡಿಂಗ್ ಮಾಡ್ತಿದ್ದಾರೆ. ಸ್ಟಾರ್ ನಟರೇ ಬೇಕು ಎಂದು ಮಾಡಿಸುತ್ತಿದ್ದಾರೆ. ನಿಧಾನವಾಗಿ ಅಜನೀಶ್ ಲೋಕನಾಥ್ ಕೂಡ ಪರಭಾಷೆ ಚಿತ್ರಗಳಿಗೆ ಟ್ಯೂನ್ ಹಾಕುತ್ತಿದ್ದಾರೆ.
ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಚಿತ್ರಕ್ಕೆ ಅಜನೀಶ್ ಕೆಲಸ ಮಾಡುತ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ತೆಲುಗು ಮಾಧ್ಯಮಗಳಲ್ಲಿ ಇದೇ ಈಗ ದೊಡ್ಡ ಸುದ್ದಿಯಾಗಿದೆ. ಸುಕುಮಾರ್ ನಿರ್ದೇಶನದ 'ಪುಷ್ಪ'-2 ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಡಿಸೆಂಬರ್ 5ಕ್ಕೆ ಈ ಸೀಕ್ವೆಲ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.

'ಪುಷ್ಪ'-2 ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಟ್ಯೂನ್ ಹಾಕುತ್ತಿರುವುದು ಗೊತ್ತೇಯಿದೆ. 'ಪುಷ್ಪ' ಚಿತ್ರದಲ್ಲಿ ಡಿಎಸ್ಪಿ ಟ್ಯೂನ್ಗಳು ಕ್ಲಿಕ್ ಆಗಿತ್ತು. ಬಿಜಿಎಂ ಕೂಡ ಚಿತ್ರಕ್ಕೆ ಪ್ಲಸ್ ಆಗಿತ್ತು. ಈಗಾಗಲೇ 2ನೇ ಭಾಗದ 2 ಹಾಡುಗಳು ರಿಲೀಸ್ ಆಗಿ ಹಿಟ್ ಆಗಿದೆ. ಟೈಟಲ್ ಸಾಂಗ್ ಹಾಗೂ ಕಪಲ್ ಸಾಂಗ್ ಸಿನಿರಸಿಕರ ಮನಗೆದ್ದಿದೆ. ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಅಂತಿಮ ಹಂತದ ಕೆಲಸಗಳು ನಡೀತಿದೆ. ಸದ್ಯ ಚಿತ್ರಕ್ಕೆ ಡಿಎಸ್ಪಿ ಜೊತೆಗೆ ಮತ್ತಿಬ್ಬರು ಸಂಗೀತ ನೀಡುತ್ತಾರೆ ಎನ್ನಲಾಗ್ತಿದೆ.
ದೇವಿಶ್ರೀ ಪ್ರಸಾದ್ ರೀ-ರೆಕಾರ್ಡಿಂಗ್ ಬಗ್ಗೆ ತೃಪ್ತಿಯಾಗದ ಕಾರಣ ಸುಕುಮಾರ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. 'ಪುಷ್ಪ'- 2 ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಹಾಗಾಗಿ ಯಾವುದೇ ವಿಚಾರದಲ್ಲೂ ರಾಜಿಯಾಗಲೂ ನಿರ್ದೇಶಕರು ಸಿದ್ಧವಿಲ್ಲವಂತೆ. ಅದೇ ಕಾರಣಕ್ಕೆ ಅಜನೀಶ್ ಲೋಕನಾಥ್ ಹಾಗೂ ಎಸ್. ತಮನ್ ಇಬ್ಬರನ್ನು ಅಖಾಡಕ್ಕೆ ಇಳಿಸುತ್ತಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. 'ಕಾಂತಾರ' ಚಿತ್ರದಿಂದ ಅಜನೀಶ್ ತೆಲುಗು ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಆ ಚಿತ್ರಕ್ಕೆ ಅಜ್ಜು ರೀ-ರೆಕಾರ್ಡಿಂಗ್ ಜೀವಾಳವಾಗಿತ್ತು.
ಈಗಾಗಲೇ 'ಮಂಗಳವಾರಂ' ಎನ್ನುವ ಒಂದು ತೆಲುಗು ಹಾರರ್ ಚಿತ್ರಕ್ಕೂ ಅಜನೀಶ್ ಮ್ಯೂಸಿಕ್ ಮಾಡಿದ್ದಾರೆ. ಅದು ಹಿಟ್ ಆಗಿತ್ತು. ಅದೇ ಕಾರಣಕ್ಕೆ 'ಪುಷ್ಪ'-2 ಚಿತ್ರದ ಕೆಲ ದೃಶ್ಯಗಳಿಗೆ ಅವರಿಂದ ರೀ-ರೆಕಾರ್ಡಿಂಗ್ ಮಾಡಿಸಲು ಸುಕ್ಕು ಅಂಡ್ ಟೀಂ ತೀರ್ಮಾನಿಸಿದೆ ಎನ್ನಲಾಗ್ತಿದೆ. ಮುಖ್ಯವಾಗಿ ಜಾತ್ರೆ ಸನ್ನಿವೇಶಕ್ಕೆ ಅಜನೀಶ್ ಮ್ಯೂಸಿಕ್ ಬೇಕು ಎಂದು ನಿರ್ದೇಶಕರು ಕೇಳುತ್ತಿದ್ದಾರೆ ಎನ್ನಲಾಗ್ತಿದೆ.
ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಗಂಗಮ್ಮ ಜಾತ್ರೆ ಸನ್ನಿವೇಶದ ಟೀಸರ್ ರಿಲೀಸ್ ಆಗಿತ್ತು. ಆದರೆ ಬಿಜಿಎಂ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಅದೇ ಸನ್ನಿವೇಶಕ್ಕೆ ಅಜನೀಶ್ ಮ್ಯೂಸಿಕ್ ಮಾಡ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ದೇವಿಶ್ರೀ ಪ್ರಸಾದ್ ಜೊತೆಗೆ ಅಜನೀಶ್ ಹಾಗೂ ತಮನ್ ಕೆಲಸ ಮಾಡುತ್ತಾರೆ ಎಂದು ಹೇಳಲಾಗ್ತಿದೆ.


Click it and Unblock the Notifications











