ಪವನ್- ದೇವರಕೊಂಡ ನಡುವೆ ಬಾಕ್ಸಾಫೀಸ್ ಫೈಟ್; ಕಾರಣ ಯಾರು ಗೊತ್ತಾ?
ದೊಡ್ಡ ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುವುದು ಒಳ್ಳೆ ಬೆಳವಣಿಗೆ ಖಂಡಿತ ಅಲ್ಲ. ಬಾಕ್ಸಾಫೀಸ್ನಲ್ಲಿ ಯಾವುದಾದರೂ ಒಂದು ಚಿತ್ರಕ್ಕೆ ಹಿನ್ನಡೆ ಆಗುತ್ತದೆ. ಆದರೂ ಕೆಲವೊಮ್ಮೆ ಅನಿವಾರ್ಯವಾಗಿ ಸ್ಟಾರ್ ನಟರ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತವೆ. ಇದೀಗ ಟಾಲಿವುಡ್ನಲ್ಲಿ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಖಾ ಸುಮ್ಮನೆ ಸಿನಿಮಾ ರಿಲೀಸ್ ಡೇಟ್ ಮುಂದೂಡುತ್ತಾ ಬಂದು ಈಗ ಒಂದು ದಿನದ ಅಂತರದಲ್ಲಿ ಪವನ್ ಕಲ್ಯಾಣ್ ಹಾಗೂ ವಿಜಯ್ ದೇವರಕೊಂಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಆದರೆ ಇದಕ್ಕೆ ಕಾರಣ ಮಾತ್ರ ವಿಚಿತ್ರವಾಗಿದೆ. ಇದು ಚಿತ್ರರಂಗಕ್ಕೆ ಒಂದು ರೀತಿಯ ಆತಂಕಕ್ಕೂ ಕಾರಣವಾಗಿದೆ. ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ಸಿನಿಮಾ ಬಹಳ ಹಿಂದೆ ಸೆಟ್ಟೇರಿತ್ತು. ಆದರೆ ಇದೀಗ ಬಿಡುಗಡೆಗೆ ಸಜ್ಜಾಗಿದೆ.

'ಲೈಗರ್' ಸೋಲಿನಿಂದ ವಿಜಯ್ ದೇವರಕೊಂಡ ಇನ್ನು ಹೊರಬಂದಿಲ್ಲ. 'ಖುಷಿ' ಸಿನಿಮಾ ಬಂದು ಹೋಗಿದ್ದು ಗೊತ್ತಾಗಲಿಲ್ಲ. ಸದ್ಯ 'ಕಿಂಗ್ಡಮ್' ಸಿನಿಮಾ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ಕೆಜಿಎಫ್ ಮಾದರಿಯ ಆಕ್ಷನ್ ಥ್ರಿಲ್ಲರ್ ಸಿನಿಮಾ ಎನ್ನಲಾಗ್ತಿದೆ. ಜುಲೈ 24ಕ್ಕೆ 'ಹರಿಹರ ವೀರಮಲ್ಲು' ಬಿಡುಗಡೆ ಆಗಲಿದ್ದು ಮರುದಿನ 'ಕಿಂಗ್ಡಮ್' ಸಿನಿಮಾ ತೆರೆಗೆ ಬರುತ್ತದೆ ಎನ್ನುವ ಚರ್ಚೆ ನಡೀತಿದೆ.
ಎರಡೂ ಸಿನಿಮಾಗಳು ಹೀಗೆ ಒಮ್ಮೆಲೆ ತೆರೆಗೆ ಬಂದು ಬಾಕ್ಸಾಫೀಸ್ ಕ್ಲ್ಯಾಶ್ ಪರಿಸ್ಥಿತಿ ನಿರ್ಮಾಣವಾಗಲು ಓಟಿಟಿ ಸಂಸ್ಥೆಗಳು ಕಾರಣ ಎನ್ನಲಾಗ್ತಿದೆ. ಭಾರೀ ಮೊತ್ತಕ್ಕೆ ಚಿತ್ರದ ಡಿಜಿಟಲ್ ರೈಟ್ಸ್ ಕೊಂಡುಕೊಳ್ಳುವ ಸಂಸ್ಥೆಗಳು ಯಾವಾಗ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಬೇಕು? ಯಾವಾಗ ಓಟಿಟಿಗೆ ಬರಬೇಕು? ಎಂದು ನಿರ್ಧರಿಸುತ್ತಿವೆ. ಈಗ ಪವನ್ ಹಾಗೂ ವಿಜಯ್ ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗಲು ಇದೇ ಕಾರಣ ಎನ್ನಲಾಗ್ತಿದೆ.
ಮೊದಲೆಲ್ಲಾ ಫಿಲ್ಮ್ ಮೇಕರ್ಸ್ ಬಾಕ್ಸಾಫಿಸ್ ಗಳಿಕೆಯನ್ನೇ ನಂಬಿಕೊಂಡಿದ್ದರು. ರೀಮೆಕ್ ಹಾಗೂ ಡಬ್ಬಿಂಗ್ ರೈಟ್ಸ್ನಿಂದ ಹೆಚ್ಚು ಹಣ ಬರಲ್ಲ. ಬಳಿಕ ಸ್ಯಾಟಲೈಟ್ ರೈಟ್ಸ್ಗೆ ಡಿಮ್ಯಾಂಡ್ ಸೃಷ್ಟಿಯಾಗಿತ್ತು. ಆದರೆ ಇತ್ತೀಚಿನ ವರ್ಷಗಳ ಓಟಿಟಿ ರೈಟ್ಸ್ ಚಿನ್ನದ ಬೆಲೆ ತಂದುಕೊಡುತ್ತಿವೆ. ಸ್ಟಾರ್ ನಟರ ಸಿನಿಮಾಗಳನ್ನು ನೂರಾರು ಕೋಟಿಗೆ ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳುತ್ತಿವೆ.

ಕೆಲವೊಮ್ಮೆ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದರೂ ಓಟಿಟಿ ರೈಟ್ಸ್ನಿಂದ ನಿರ್ಮಾಪಕರು ಸೇಫ್ ಆಗುತ್ತಿದ್ದಾರೆ. ಪದೇ ಪದೇ ಸಿನಿಮಾ ರಿಲೀಸ್ ಡೇಟ್ ಬದಲಿಸಿದರೆ ಓಟಿಟಿ ಸಂಸ್ಥೆಗಳಿಗೂ ಇದರಿಂದ ಹಿನ್ನಡೆ ಆಗುತ್ತದೆ. ಸಿನಿಮಾ ತೆರೆಗೆ ಬರುವುದು ತಡವಾದರೆ ಅದಕ್ಕೆ ತಕ್ಕಂತೆ ಓಟಿಟಿ ಸ್ಟ್ರೀಮಿಂಗ್ ಕೂಡ ಮುಂದಕ್ಕೆ ಹೋಗುತ್ತದೆ. 'ಕಿಂಗ್ಡಮ್' ಚಿತ್ರವನ್ನು ಜುಲೈ 26ಕ್ಕೆ ರಿಲೀಸ್ ಮಾಡುವಂತೆ ನೆಟ್ಫಿಕ್ಸ್ ಪಟ್ಟುಹಿಡಿದಿದೆ ಎನ್ನಲಾಗ್ತಿದೆ. ಹಾಗಾಗಿ 'ಹರಿಹರ ವೀರಮಲ್ಲು' ಸಿನಿಮಾ ಬೆನ್ನಲ್ಲೇ ಈ ಸಿನಿಮಾ ಕೂಡ ತೆರೆಗಪ್ಪಳಿಸುವಂತಾಗಿದೆ.
ಕ್ರಿಶ್ ಹಾಗೂ ಜ್ಯೋತಿಕೃಷ್ಣ 'ಹರಿಹರ ವೀರಮಲ್ಲು' ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಕಾಸ್ಟ್ಯೂಮ್ ಡ್ರಾಮಾದಲ್ಲಿ ಪವನ್ ವೀರಯೋಧನ ಪಾತ್ರದಲ್ಲಿ ಮಿಂಚಿದ್ದಾರೆ. ಬಾಬಿ ಡಿಯೋಲ್, ನಿಧಿ ಅಗರ್ವಾಲ್, ಸತ್ಯರಾಜ್ ಚಿತ್ರದ ತಾರಾಗಣದಲ್ಲಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ಸ್, ಟೀಸರ್ ಕುತೂಹಲ ಮೂಡಿಸಿದೆ. ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕಿದೆ. 200 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
ಗೌತಮ್ ತಿನ್ನನೂರಿ ನಿರ್ದೇಶನದ ಸ್ಪೈ ಥ್ರಿಲ್ಲರ್ ಸಿನಿಮಾ 'ಕಿಂಗ್ಡಮ್'. ಭಾಗ್ಯಶ್ರೀ ಚಿತ್ರದ ನಾಯಕಿಯಾಗಿ ಮಿಂಚಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ. ನಾಗವಂಶಿ, ಸಾಯಿ ಸೌಜನ್ಯ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜುಲೈ 4ಕ್ಕೆ ಈ ಸಿನಿಮಾ ತೆರೆಗೆ ಬರಬೇಕಿತ್ತು.


Click it and Unblock the Notifications











