ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ರಿಲೀಸ್ ಡೇಟ್ ಫಿಕ್ಸ್!
ತೆಲುಗು ನಟ ಪವನ್ ಕಲ್ಯಾಣ್ ರಾಜಕೀಯರಂಗಕ್ಕೆ ಧುಮುಕಿ ಸಕ್ಸಸ್ ಕಂಡಿದ್ದಾರೆ. ಆಂಧ್ರ ಉಪಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದಾರೆ. ಬಹಳ ದಿನಗಳಿಂದ ಸಿನಿಮಾ ಚಿತ್ರೀಕರಣಕ್ಕೆ ಹಾಜರಾಗದೇ ಪಾಲಿಟಿಕ್ಸ್ನಲ್ಲೇ ಬ್ಯುಸಿಯಾಗಿದ್ದಾರೆ. ಪವರ್ ಸ್ಟಾರ್ ಚಿತ್ರರಂಗದಲ್ಲಿ ಮುಂದುವರೆಯುತ್ತಾರೋ ಇಲ್ಲವೋ ಎನ್ನುವ ಗೊಂದಲ ಮೂಡಿದೆ.
'ಹರಿಹರ ವೀರಮಲ್ಲು', 'OG' ಹಾಗೂ 'ಉಸ್ತಾದ್ ಭಗತ್ ಸಿಂಗ್' ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದರು. ಅಷ್ಟರಲ್ಲೇ ಆಂಧ್ರ ವಿಧಾನಸಭೆ ಚುನಾವಣೆ ಜೊತೆಗೆ ಲೋಕಸಭೆ ಚುನಾವಣೆ ಘೋಷಣೆ ಆಗಿತ್ತು. ಹಾಗಾಗಿ ಸಿನಿಮಾಗಳಿಂದ ದೂರಾಗಿ ರಾಜಕೀಯರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಬಹಳ ಹಿಂದೆ ಸೆಟ್ಟೇರಿದ್ದ 'ಹರಿಹರ ವೀರಮಲ್ಲು' ಸಿನಿಮಾ ಕೊನೆಗೂ ಬಿಡುಗಡೆಗೆ ಸಿದ್ಧವಾಗ್ತಿದೆ.

ಎರಡು ದಿನಗಳ ಪ್ಯಾಚ್ವರ್ಕ್ ಮಾತ್ರ ಬಾಕಿಯಿತ್ತು. ಇತ್ತೀಚೆಗೆ ಪವನ್ ಅದನ್ನು ಮುಗಿಸಿಕೊಟ್ಟಿದ್ದರು. ಹಾಗಾಗಿ ಚಿತ್ರತಂಡ ಈಗ ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ಶುರು ಮಾಡಿದೆ. ಜೂನ್ 13ಕ್ಕೆ 'ಹರಿಹರ ವೀರಮಲ್ಲು' ಸಿನಿಮಾ ತೆರೆಗೆ ಬರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. 17ನೇ ಶತಮಾನದಲ್ಲಿ ಮೊಘಲರ ಆಳ್ಮಿಕೆ ಸಮಯದಲ್ಲಿದ್ದ ವೀರಮಲ್ಲು ಎಂಬ ವೀರ ಯೋಧನ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ.
ಮೊದಲಿಗೆ ಕ್ರಿಶ್ ಜಗರ್ಲಮುಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದರು. ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಅವರು ಸಿನಿಮಾದಿಂದ ಹೊರ ನಡೆದಿದ್ದರು. ಇದೀಗ ಬೇರೆ ನಿರ್ದೇಶಕರು ಆ ಚಿತ್ರವನ್ನು ಮುಂದುವರೆಸಿದ್ದಾರೆ. ಇನ್ನು 300 ವರ್ಷಗಳ ಹಿಂದಿನ ಕಾಲಘಟ್ಟ ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿದೆ. ವೀರಮಲ್ಲು ಆಗಿ ಪವನ್ ಕಲ್ಯಾಣ್ ಲುಕ್, ಗೆಟಪ್ ಭರವಸೆ ಮೂಡಿಸಿದೆ.
ಓಟಿಟಿ ಸಂಸ್ಥೆಗಳು ಈಗ ಸಿನಿಮಾ ಬಿಡುಗಡೆ ದಿನಾಂಕವನ್ನು ನಿರ್ಧರಿಸುವಂತಾಗಿದೆ. ಸಿನಿಮಾ ಬಿಡುಗಡೆಯಾಗಿ 30 ದಿನಗಳ ಬಳಿಕ ಓಟಿಟಿಗೆ ಬರುತ್ತದೆ. ಅಮೇಜಾನ್ ಪ್ರೈಂ ಸಂಸ್ಥೆ 'ಹರಿಹರ ವೀರಮಲ್ಲು' ಸಿನಿಮಾ ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಭರ್ಜರಿ ಬೆಲೆಗೆ ಡೀಲ್ ಕುದುರಿದೆ. ಹಾಗಾಗಿ ನಾವು ಹೇಳುವ ದಿನ ಸಿನಿಮಾ ಬಿಡುಗಡೆ ಮಾಡಿ ಎಂದು ಪ್ರೈಂ ವೀಡಿಯೋ ಸಂಸ್ಥೆ ಪಟ್ಟು ಹಿಡಿದಿತ್ತು. ಇದೀಗ ಮಾತುಕತೆ ಅಂತಿಮವಾಗಿ ಜೂನ್ 13ಕ್ಕೆ ಸಿನಿಮಾ ತೆರೆಗೆ ಬಂದರೆ ಬಳಿಕ ಜುಲೈನಲ್ಲಿ ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡಲು ಚರ್ಚೆ ನಡೀತಿದೆ.
ಚಿತ್ರದಲ್ಲಿ ನಿಧಿ ಅಗರ್ವಾಲ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಬಾಬಿ ಡಿಯೋಲ್, ನರ್ಗೀಸ್ ಫಕ್ರಿ, ಆದಿತ್ಯಾ ಮೆನನ್, ಶುಭಲೇಖ ಸುಧಾಕರ್ ತಾರಾಗಣದಲ್ಲಿದ್ದಾರೆ. ರೋಚಕ ಯುದ್ಧದ ಸನ್ನಿವೇಶಗಳು ಚಿತ್ರದಲ್ಲಿದೆ. ಈಗಾಗಲೇ 'ಹರಿಹರ ವೀರಮಲ್ಲು' ಚಿತ್ರದ ಸಣ್ಣ ಸಣ್ಣ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡಿದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತಾಗಿದೆ.
2020 ಸೆಪ್ಟೆಂಬರ್ನಲ್ಲಿ 'ಹರಿಹರ ವೀರಮಲ್ಲು' ಸಿನಿಮಾ ಸೆಟ್ಟೇರಿತ್ತು. ಕಾರಣಾಂತರಗಳಿಂದ ಸಿನಿಮಾ ತಡವಾಗುತ್ತಾ ಬಂದಿತ್ತು. 2022ರಲ್ಲೇ ಚಿತ್ರ ತೆರೆಗೆ ಬರುತ್ತದೆ ಎಂದಿದ್ದರು. ಕೋವಿಡ್ ಲಾಕ್ಡೌನ್ ಕಾರಣಗಳಿಂದ ಕೊಂಚ ತಡವಾಗಿತ್ತು. ಪವನ್ ಕಲ್ಯಾಣ್ ಸಂಪೂರ್ಣವಾಗಿ ರಾಜಕೀಯರಂಗದತ್ತ ಮುಖ ಮಾಡಿದ್ದರಿಂದ ಸಿನಿಮಾ ಚಿತ್ರೀಕರಣ ತಡವಾಗಿತ್ತು. ಇದೀಗ ಅಂತೂ ಇಂತೂ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ತಯಾರಿ ನಡೀತಿದೆ. ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕಿದೆ.
'ಹರಿಹರ ವೀರಮಲ್ಲು' ಚಿತ್ರೀಕರಣ ಕೊನೆಗೂ ಮುಗಿದಿದೆ. ಆದರೆ 'ಉಸ್ತಾದ್ ಭಗತ್ ಸಿಂಗ್' ಹಾಗೂ 'OG' ಚಿತ್ರಗಳ ಚಿತ್ರೀಕರಣ ಸಾಕಷ್ಟು ಬಾಕಿಯಿದೆ. ಆ ಎರಡು ಸಿನಿಮಾಗಳನ್ನು ಪವನ್ ಮುಗಿಸ್ತಾರಾ? ಎನ್ನುವ ಅನುಮಾನ ಮೂಡಿದೆ. ಚಿತ್ರರಂಗಕ್ಕೆ ಪವರ್ ಸ್ಟಾರ್ ಗುಡ್ ಬೈ ಹೇಳಿಬಿಡ್ತಾರಾ? ಎನ್ನುವ ಗೊಂದಲ ಅಭಿಮಾನಿಗಳನ್ನು ಕಾಡುತ್ತಿರುವುದು ಸುಳ್ಳಲ್ಲ.


Click it and Unblock the Notifications











