ತ್ಯಾಗ ಮಾಡಲೇಬೇಕು; 'ಬಾಹುಬಲಿ' ಚಿತ್ರಕ್ಕೆ ರಾಜಮೌಳಿ ಕತ್ತರಿ ಪ್ರಯೋಗ
ಸೂಪರ್ ಹಿಟ್ 'ಬಾಹುಬಲಿ' ಸರಣಿ ಸಿನಿಮಾಗಳನ್ನು ಒಟ್ಟಿಗೆ ಸೇರಿಸಿ ಒಂದೇ ಸಿನಿಮಾ ಆಗಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಹೆಚ್ಚು ಕಮ್ಮಿ 6 ಗಂಟೆಗಳ ಫುಟೇಜ್ ಅನ್ನು 3 ಗಂಟೆ 45 ನಿಮಿಷಕ್ಕೆ ಇಳಿಸುವ ಪ್ರಯತ್ನ ಮಾಡಲಾಗಿದೆ. ಸ್ವತಃ ರಾಜಮೌಳಿ ಚಿತ್ರದ ಸನ್ನಿವೇಶಗಳಿಗೆ ಕತ್ತರಿ ಹಾಕಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿದ್ದು ಪ್ರಚಾರ ಕೆಲಸಗಳು ಆರಂಭವಾಗಿದೆ.
ಸೂಪರ್ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಟ್ರೆಂಡ್ ನಡೀತಿದೆ. 'ಬಾಹುಬಲಿ' ಕತೆಯನ್ನು ಎರಡು ಭಾಗಗಳಾಗಿ ಜಕ್ಕಣ್ಣ ತೆರೆಗೆ ತಂದಿದ್ದರು. ಮೊದಲಿಗೆ ತಾವು ಮಾಡಿಕೊಂಡಿದ್ದ ಕಥೆ ಚಿತ್ರೀಕರಣ ಮಾಡ್ತಾ ಮಾಡ್ತಾ 2 ಭಾಗಗಳಾಗಿತ್ತು. ಅಷ್ಟು ಕಥೆಯನ್ನು ಒಂದೇ ಚಿತ್ರದಲ್ಲಿ ಹೇಳುವುದು ಕಷ್ಟ ಎಂದು ಭಾವಿಸಿ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿತ್ತು. ಈ ಮೂಲಕ ಸೀಕ್ವೆಲ್ ಟ್ರೆಂಡ್ ಶುರುವಾಗಿತ್ತು.

'ಬಾಹುಬಲಿ' ಕಥೆ ಎರಡು ಭಾಗಗಳಾಗಿ ತೆರೆಗೆ ಬಂದು ಗೆದ್ದ ಬಳಿಕ 'KGF', 'ಪುಷ್ಪ' ಸೇರಿ ಹಲವು ಸಿನಿಮಾಗಳನ್ನು ಇದೇ ರೀತಿ ತೆರೆಗೆ ತರಲಾಗಿತ್ತು. ಆದರೆ ಇದೀಗ ರೀ-ರಿಲೀಸ್ ಮಾಡಲು ಎರಡೂ ಸಿನಿಮಾಗಳನ್ನು ಒಂದಾಗಿ ಎಡಿಟ್ ಮಾಡಲಾಗುತ್ತಿದೆ. ಅಂದರೆ ಮುಖ್ಯವಾದ ಸನ್ನಿವೇಶಗಳನ್ನು ಇಟ್ಟುಕೊಂಡು ಬೇಡದ್ದನ್ನು ಡಿಲೀಟ್ ಮಾಡಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಸಲಾಗುತ್ತಿದೆ. ಈ ಪ್ರಯತ್ನದಲ್ಲಿ ಮೌಳಿ ಗೆದ್ದರೆ ಮುಂದೆ ಇದು ಹೊಸ ಟ್ರೆಂಡ್ ಆಗುವ ಸಾಧ್ಯತೆಯಿದೆ.
'ಬಾಹುಬಲಿ' ಸರಣಿ ಸಿನಿಮಾಗಳಲ್ಲಿರುವ ಪ್ರತಿ ಸನ್ನಿವೇಶ, ಪ್ರತಿ ಹಾಡು ಅದ್ಭುತ. ಯಾವುದನ್ನು ಕತ್ತರಿಸಿದರೂ ಅಭಿಮಾನಿಗಳಿಗೆ ಬೇಸರವಾಗಿತ್ತದೆ. ಆದರೆ ಬೇರೆ ವಿಧಿಯಿಲ್ಲ. ಎರಡೂ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಇದು ಒಳ್ಳೆ ಉಪಾಯ. ಇಲ್ಲದಿದ್ದರೆ ಈಗಾಗಲೇ ಸಾಕಷ್ಟು ಬಾರಿ ನೋಡಿರುವ ಸಿನಿಮಾವನ್ನು ಮತ್ತೆ ಬಂದು ಪ್ರೇಕ್ಷಕರು ಯಾಕೆ ಟಿಕೆಟ್ ಖರೀದಿಸಿ ಚಿತ್ರಮಂದಿರದಲ್ಲಿ ನೋಡುತ್ತಾರೆ? ಹಾಗಾಗಿ ಇಂತಹದೊಂದು ಪ್ರಯತ್ನ ಮಾಡಲಾಗ್ತಿದೆ.

ಯಾವ ದೃಶ್ಯವನ್ನು ಉಳಿಸಿಕೊಳ್ಳುವುದು, ಯಾವುದನ್ನು ಬಿಡುವುದು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ, ವಾಗ್ದಾದ ನಡೀತು. ಎಲ್ಲಾ ಸನ್ನಿವೇಶ, ಹಾಡುಗಳು ನನಗೆ ಅಮೂಲ್ಯ. ಎಡಿಟ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಕೆಲವೊಮ್ಮೆ ತ್ಯಾಗ ಮಾಡಬೇಕಾಗುತ್ತದೆ ಎಂದು ರಾಜಮೌಳಿ ಸಂದರ್ಶನವೊಂದರಲ್ಲಿ ಹೇಳಿರುವುದಾಗಿ ವರದಿಯಾಗಿದೆ. ಅಂದರೆ ಚಿತ್ರದ ಹಾಡುಗಳಿಗೆ ಜಕ್ಕಣ್ಣ ಕತ್ತರಿ ಹಾಕಿರುವಂತೆ ಕಾಣುತ್ತಿದೆ.
ಬಹಳ ಮುಖ್ಯವಾದ ಮಾಂಟೇಜ್ ಹಾಡುಗಳನ್ನು ಹೊರತುಪಡಿಸಿ ಇನ್ನುಳಿದ ಹಾಡುಗಳಿಗೆ ಕತ್ತರಿ ಹಾಕಿದ್ದಾರೆ ಎನ್ನಲಾಗ್ತಿದೆ. ಮುಖ್ಯವಾಗಿ ಮೊದಲ ಭಾಗದಲ್ಲಿ ತಮನ್ನಾ ಜೊತೆಗಿನ ಪ್ರಭಾಸ್ ಸಾಂಗ್, ಎರಡನೇ ಭಾಗದಲ್ಲಿರುವ 'ಕನ್ನ ನಿದುರಿಂಚರಾ' ಹಾಗೂ 'ಓರೋರಿ ರಾಜಾ' ಹಾಡುಗಳನ್ನು ಕೈಬಿಟ್ಟಿರುವ ಸಾಧ್ಯತೆಯಿದೆ. ಮೊದಲ ಭಾಗದಲ್ಲಿರುವ ಐಟಂ ಸಾಂಗ್ ಕೂಡ 'ಬಾಹುಬಲಿ ಎಪಿಕ್' ವರ್ಷನ್ನಲ್ಲಿ ಇರುವುದಿಲ್ಲ ಎನ್ನಲಾಗ್ತಿದೆ.
'ಬಾಹುಬಲಿ' ಸರಣಿ ಸಿನಿಮಾಗಳು ಬಿಡುಗಡೆಯಾದಾಗ ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ಇರಲಿಲ್ಲ. ಹಾಗಾಗಿ ಆಗ ಕನ್ನಡದಲ್ಲಿ 'ಬಾಹುಬಲಿ' ಕಥೆ ನೋಡಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಡಬ್ಬಿಂಗ್ಗೆ ಅವಕಾಶ ಇದೆ. ಹಾಗಾಗಿ ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿ ಮರುಬಿಡುಗಡೆ ಮಾಡ್ತಾರಾ? ಎನ್ನುವ ಚರ್ಚೆ ನಡೀತಿದೆ.
ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ, ಸತ್ಯರಾಜ್ ಸೇರಿ ಘಟಾನುಘಟಿ ಕಲಾವಿದರು 'ಬಾಹುಬಲಿ' ಸರಣಿ ಸಿನಿಮಾಗಳಲ್ಲಿ ನಟಿಸಿದ್ದರು. ಕೀರವಾಣಿ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಆಗಿತ್ತು. ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ರಾಜಮೌಳಿ ಪ್ರತಿಭೆ, ಪ್ರಭಾಸ್ ಹಾಗೂ ರಮ್ಯಾಕೃಷ್ಣ ನಟನೆಗೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.


Click it and Unblock the Notifications











