ತೆಲುಗು ಚಿತ್ರದಲ್ಲಿ ಹನುಮಂತನ ಪಾತ್ರಕ್ಕೆ ರಿಷಬ್ ಶೆಟ್ಟಿ ಆಯ್ಕೆ?
ಪ್ಯಾನ್ ಇಂಡಿಯಾ.. ಪ್ಯಾನ್ ಇಂಡಿಯಾ.. ಪ್ಯಾನ್ ಇಂಡಿಯಾ.. ಚಿತ್ರರಂಗದಲ್ಲೀಗ ಇದೇ ಚರ್ಚೆ ಜೋರಾಗಿದೆ. ಸ್ಯಾಂಡಲ್ವುಡ್, ಕಾಲಿವುಡ್, ಬಾಲಿವುಡ್, ಮಾಲಿವುಡ್, ಟಾಲಿವುಡ್ ಬಿಟ್ಟು ಇಂಡಿಯನ್ ಸಿನಿಮಾ ಎಂದು ಸಿನಿಮಾಗಳನ್ನು ನಿರ್ಮಿಸುವ ಪ್ರಯತ್ನವೇ ಜೋರಾಗಿದೆ. ಇದೇ ಕಾರಣಕ್ಕೆ ಭಾಷೆಯ ಗಡಿಮೀರಿ ಕಲಾವಿದರು ನಟಿಸುತ್ತಿದ್ದಾರೆ.
ಆಯಾ ಭಾಷಾ ನಟರು ಆಯಾ ಭಾಷೆಯ ಸಿನಿಮಾಗಳಲ್ಲಿ ಮಾತ್ರ ನಟಿಸುವ ಕಾಲವೊಂದಿತ್ತು. ಆಗೊಮ್ಮೆ ಈಗೊಮ್ಮೆ ಕೆಲವರು ಬೇರೆ ಭಾಷೆಗಳಲ್ಲಿ ನಟಿಸಿದರೂ ದೊಡ್ಡಮಟ್ಟದಲ್ಲಿ ಆ ಪ್ರಯತ್ನ ನಡೆಯುತ್ತಿರಲಿಲ್ಲ. ಅದರಲ್ಲೂ ಬಾಲಿವುಡ್ ಸ್ಟಾರ್ಸ್ ಸೌತ್ ಸಿನಿಮಾಗಳತ್ತ ಮುಖ ಮಾಡುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಬಿಗ್ಬಿ, ಸೈಫ್ ಅಲಿಖಾನ್, ಆಲಿಯಾ ಭಟ್, ಸಂಜಯ್ ದತ್ ಹೀಗೆ ಎಲ್ಲರೂ ದಕ್ಷಿಣದತ್ತ ಬರುವಂತಾಗಿದೆ.

ಕನ್ನಡ ಕಲಾವಿದರು, ತಂತ್ರಜ್ಞರು ಬೇರೆ ಭಾಷೆಗಳಲ್ಲಿ ಕೆಲಸ ಮಾಡಲು ಆರಂಭಿಸಿದ್ದಾರೆ. 'KGF' ಹಾಗೂ 'ಕಾಂತಾರ' ರೀತಿಯ ಚಿತ್ರಗಳು ಪರಭಾಷಿಕರು ಕನ್ನಡದತ್ತ ತಿರುಗಿ ನೋಡುವಂತಾಗಿದೆ. ಈಗಾಗಲೇ ಪ್ರಶಾಂತ್ ನೀಲ್ ಸೇರಿದಂತೆ ಕೆಲವರು ಬೇರೆ ಭಾಷೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ರಿಷಬ್ ಶೆಟ್ಟಿ ತೆಲುಗು ಚಿತ್ರದಲ್ಲಿ ನಟಿಸುವ ಬಗ್ಗೆ ಚರ್ಚೆ ಶುರುವಾಗಿದೆ.
ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ತೆಲುಗಿನ 'ಹನುಮಾನ್' ಸಿನಿಮಾ ಪ್ಯಾನ್ಇಂಡಿಯಾ ಮಟ್ಟದಲ್ಲಿ ಗೆದ್ದಿತ್ತು. ಇದೀಗ ಚಿತ್ರದ ಸೀಕ್ವೆಲ್ 'ಜೈ ಹನುಮಾನ್' ಸಿನಿಮಾ ಮೂಡಿ ಬರ್ತಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಾರೆ ಎನ್ನಲಾಗ್ತಿದೆ. ಬಹಳ ಹಿಂದೆಯೇ ಇಂತಾದೊಂದು ಗುಸುಗುಸು ಶುರುವಾಗಿತ್ತು. ಇದೀಗ ಮತ್ತೆ ಆ ವಿಷಯ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದೆ. ರಿಷಬ್ ನಟಿಸೋಕೆ ಒಪ್ಪಿದ್ದಾರೆ ಎನ್ನಲಾಗ್ತಿದೆ.
ಅಂದಹಾಗೆ ಈಗಾಗಲೇ ರಿಷಬ್ ಶೆಟ್ಟಿ ತೆಲುಗು ಚಿತ್ರವೊಂದರಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಸದ್ಯ 'ಕಾಂತಾರ' ಪ್ರೀಕ್ವೆಲ್ ಕೆಲಸಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಬೇರೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಆದರೆ 'ಜೈ ಹನುಮಾನ್' ಚಿತ್ರದಲ್ಲಿ ನಟಿಸಲು ಉತ್ಸಾಹ ತೋರಿಸಿದ್ದಾರೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. 'ಹನುಮಾನ್' ಚಿತ್ರ ಕಟ್ಟಿಕೊಟ್ಟಿದ್ದ ಪ್ರಶಾಂತ್ ವರ್ಮಾ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಜೈ ಹನುಮಾನ್' ಚಿತ್ರದಲ್ಲಿ ಚಿರಂಜೀವಿ, ರಾಮ್ಚರಣ್ ನಟಿಸುತ್ತಾರೆ ಎನ್ನಲಾಗಿತ್ತು. ಬಳಿಕ ರಿಷಬ್ ಶೆಟ್ಟಿ ಹಾಗೂ ಯಶ್ ಹೆಸರುಗಳು ಕೇಳಿಬಂದಿತ್ತು. 'ಹನುಮಾನ್' ಚಿತ್ರದಲ್ಲಿ ಆಂಜನೇಯ ಕೃಪೆಯಿಂದ ಯುವಕನೊಬ್ಬ ಮಾಡುವ ಚಮತ್ಕಾರ, ಸಾಹಸಗಳನ್ನು ತೆರೆಮೇಲೆ ತರಲಾಗಿತ್ತು. ಇದೀಗ ಸೀಕ್ವೆಲ್ನಲ್ಲಿ ಆಂಜನೇಯನ್ನು ತೋರಿಸಲಾಗ್ತಿದೆ.
ಮೆಗಾಸ್ಟಾರ್ ಚಿರಂಜೀವಿ ಈ ಚಿತ್ರದಲ್ಲಿ ಆಂಜನೇಯನ ಪಾತ್ರ ಮಾಡಬೇಕು ಎನ್ನುವುದು ಚಿತ್ರತಂಡದ ಆಸೆ ಆಗಿತ್ತು. ಇದೀಗ ಅದೇ ಪಾತ್ರ ರಿಷಬ್ ಶೆಟ್ಟಿ ಪಾಲಾಗುತ್ತಿದೆ ಎನ್ನಲಾಗ್ತಿದೆ. ಈ ಪಾತ್ರ ಮಾಡಲು ಯಶ್ ಬಳಿ ಕೂಡ ಚರ್ಚಿಸಿದ್ದರೂ ಎಂದು ಟಾಲಿವುಡ್ನಲ್ಲಿ ವರದಿಯಾಗಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. 'ಕಾಂತಾರ'-1 ಚಿತ್ರದಲ್ಲಿ ಬ್ಯುಸಿಯಿರುವ ರಿಷಬ್ ಶೆಟ್ಟಿ ಸದ್ಯ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ಎರಡು ವರ್ಷಗಳ ಹಿಂದೆ ಬಂದ 'ಕಾಂತಾರ' ಸಿನಿಮಾ ಬರೆದ ದಾಖಲೆ ಒಂದೆರಡಲ್ಲ. 'KGF' ಸರಣಿ ರೀತಿಯಲ್ಲೇ ಈ ಸಿನಿಮಾ ಕೂಡ ಅಕ್ಕಪಕ್ಕದ ಇಂಡಸ್ಟ್ರಿಯಲ್ಲಿ ಸಖತ್ ಸದ್ದು ಮಾಡಿತ್ತು. ಸೀಕ್ವೆಲ್ಗಾಗಿ ಪರಭಾಷಿಕರು ಕಾಯುತ್ತಿದ್ದಾರೆ. ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಬೇರೆ ಭಾಷೆಗಳಿಂದ ಅವಕಾಶಗಳು ಹುಡುಕಿ ಬರುತ್ತಿವೆ. ಶೀಘ್ರದಲ್ಲೇ ಬೇರೆ ಭಾಷೆಯ ಚಿತ್ರದಲ್ಲಿ ನಟಿಸಿದರೆ ಅಚ್ಚರಿ ಪಡಬೇಕಿಲ್ಲ.
ಮುಂದಿನ ವರ್ಷ ಆಗಸ್ಟ್ ವೇಳೆಗೆ 'ಕಾಂತಾರ'-1 ಸಿನಿಮಾ ತೆರೆಗೆ ಬರುತ್ತದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದಾರೆ. 'ಜೈ ಹನುಮಾನ್' ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರದಲ್ಲಿ ಹನುಮಂತನ ವೇಷದಲ್ಲಿ ರಿಷಬ್ ಶೆಟ್ಟಿ ನಟಿಸ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











