'ಮನಸ್ಸೆಲ್ಲಾ ನೀನೇ' ಚೆಲುವೆಯ ಹೊಸ ಅವತಾರ ಕಂಡು ಬೆರಗಾದ ಅಭಿಮಾನಿಗಳು
ಕೆಲ ನಟ-ನಟಿಯರೇ ಕೆಲವೇ ಸಿನಿಮಾಗಳಲ್ಲಿ ನಟಿಸಿದರೂ ಸಿನಿರಸಿಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸಿಬಿಡುತ್ತಾರೆ. ಒಮ್ಮೆ ಬಣ್ಣ ಹಚ್ಚಿದ್ದರೆ ಮುಗೀತು. ಪದೇ ಪದೆ ತೆರೆಮೇಲೆ ಕಾಣಿಸಿಕೊಳ್ಳುವ ಖಯಾಲಿ ಇದ್ದೇ ಇರುತ್ತದೆ. ಆದರೆ ಕೆಲವರು ಮಾತ್ರ ಇದಕ್ಕೆ ತದ್ವಿರುದ್ಧ. ಏಕಾಏಕಿ ಚಿತ್ರರಂಗಕ್ಕೆ ಗುಡ್ಬೈ ಹೇಳಿ ಹೊರಟುಬಿಡುತ್ತಾರೆ.
ಚೆನ್ನೈ ಚೆಲುವೆ ಗಾಯತ್ರಿ ರಘುರಾಮ್ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದರು. ಕನ್ನಡದಲ್ಲಿ 'ಮನಸೆಲ್ಲಾ ನೀನೇ' ಚಿತ್ರದಲ್ಲಿ ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್ ಜೋಡಿಯಾಗಿ ಮಿಂಚಿದರು. ಸಿನಿಮಾ ಅಷ್ಟಾಗಿ ಸದ್ದು ಮಾಡದಿದ್ದರೂ ಹಾಡುಗಳು ಸಿನಿರಸಿಕರ ಮನಗೆದ್ದಿತ್ತು.

ತೆಲುಗಿನ 'ಮನಸ್ಸಂತಾ ನುವ್ವೆ' ಸಿನಿಮಾ ರೀಮೆಕ್ ಆಗಿದ್ದ ಈ ಚಿತ್ರವನ್ನು ನಾಗೇಂದ್ರ ಪ್ರಸಾದ್ ತಂದೆ ಮೂಗೂರು ಸುಂದರಂ ನಿರ್ದೇಶಿಸಿದ್ದರು. ಈ ಸಿನಿಮಾ ಬಿಟ್ಟರೆ ಗಾಯತ್ರಿ ಕನ್ನಡದಲ್ಲಿ ಮತ್ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಆದರೆ ತೆಲುಗು, ತಮಿಳುನಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದ ಚೆಲುವೆ ಬಳಿಕ ಸೈಲೆಂಟ್ ಆಗಿಬಿಟ್ಟಿದ್ದರು. 2006ರಲ್ಲಿ ದೀಪಕ್ ಚಂದ್ರಶೇಖರ್ ಎಂಬುವವರ ಕೈಹಿಡಿದಿದ್ದ ಚೆಲುವೆ 4 ವರ್ಷಗಳ ಬಳಿಕ ಡಿವೋರ್ಸ್ ಪಡೆದಿದ್ದರು.
ನಟಿಯಾಗಿ ಮಾತ್ರವಲ್ಲದೇ ಕೊರಿಯೋಗ್ರಫರ್ ಆಗಿಯೂ ಗಾಯತ್ರಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದರು. ಇನ್ನು ಒಂದು ಸಿನಿಮಾ ನಿರ್ದೇಶನ ಮಾಡಿದ್ದು ಮಾತ್ರವಲ್ಲೇ ಸಿನಿಮಾ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದರು. 2 ವರ್ಷಗಳ ಹಿಂದೆ ತೆಲುಗಿನ 'ರಂಗ್ದೇ' ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು, ಬಳಿಕ ಚಿತ್ರರಂಗಕ್ಕೆ ಗುಡ್ಬೈ ಹೇಳಿದ್ದರು.

2014ರಲ್ಲಿ ಗಾಯತ್ರಿ ರಘುರಾಮ್ ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದರು. 2017ರಲ್ಲಿ ತಮಿಳು ಬಿಗ್ಬಾಸ್ ಶೋ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆದರೆ 56ನೇ ದಿನಕ್ಕೆ ಶೋನಿಂದ ಎಲಿಮಿನೇಟ್ ಆಗಿದ್ದರು. ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರಿದ್ದ ಗಾಯತ್ರಿ ತಮಿಳುನಾಡು ಬಿಜೆಪಿ ಪಕ್ಷದ ಕಲೆ ಮತ್ತು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಇದೇ ವರ್ಷ ಆಕೆ ಬಿಜೆಪಿ ಪಕ್ಷಕ್ಕೆ ಗುಡ್ಬೈ ಹೇಳಿದ್ದರು. ಪಕ್ಷದಿಂದ ಅಮಾನತುಗೊಂಡಿದ್ದ ನಟಿ ಗಾಯತ್ರಿ ರಘುರಾಮ್, 40 ದಿನಗಳ ಬಳಿಕ ಪಕ್ಷದಿಂದ ಹೊರ ಬಂದಿದ್ದರು.
"ಮಹಿಳೆಯರ ವಿಚಾರಣೆ, ಸಮಾನ ಹಕ್ಕುಗಳು ಹಾಗೂ ಗೌರವಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ನಾನು ಭಾರವಾದ ಮನಸ್ಸಿನಿಂದ ತಮಿಳುನಾಡು ಬಿಜೆಪಿಗೆ ರಾಜೀನಾಮೆ ನೀಡಲು ಮುಂದಾಗಿದ್ದೇನೆ. ಅಣ್ಣಾಮಲೈ ನಾಯಕತ್ವದಡಿಯಲ್ಲಿ ಮಹಿಳೆಯರು ಸುರಕ್ಷಿತರಲ್ಲ. ಪಕ್ಷದ ಹೊರಗಿನವಳಾಗಿ ಟ್ರೋಲ್ ಆಗುವುದೇ ಉತ್ತಮ ಎಂದು ನನಗೆ ಅನಿಸಿದೆ" ಎಂದು ಗಾಯತ್ರಿ ರಘುರಾಮ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಸದ್ಯ ಗಾಯತ್ರಿ ರಘುರಾಮ್ ಹೊಸ ಅವತಾರ ನೋಡಿದವರು ಅಚ್ಚರಿಗೊಂಡಿದ್ದಾರೆ. ಆಕೆ ಸನ್ಯಾಸಿನಿ ಆಗಿಬಿಟ್ರಾ? ಎಂದು ಕನ್ಫ್ಯೂಸ್ ಆಗಿದ್ದಾರೆ. ಇತ್ತೀಚೆಗೆ ನಟಿ ಗಾಯತ್ರಿ ತಿರುಪತಿ ತಿಮ್ಮಪ್ಪದ ದರ್ಶನ ಪಡೆದಿದ್ದಾರೆ. ಈ ವೇಳೆ ಕೇಶ ಮುಂಡನ ಮಾಡಿಸಿಕೊಂಡಿದ್ದಾರೆ. ಹೊಸ ಅವತಾರದಲ್ಲಿ ಫೋಟೊಗಳನ್ನು, ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
"10 ವರ್ಷಗಳ ನನ್ನ ಪ್ರಾರ್ಥನೆ. ಕೊನೆಗೂ ಮುಡಿ ಕೊಟ್ಟಿದ್ದೇನೆ" ಎಂದು ಕ್ಯಾಪ್ಷನ್ ಕೊಟ್ಟು ಗಾಯತ್ರಿ ರಘುರಾಮ್ ಫೋಟೊಗಳನ್ನು ಶೇರ್ ಮಾಡಿದ್ದಾರೆ. ವಾರಕ್ಕೂ ಮೊದಲು ತಮ್ಮ ಉದ್ದ ಜಡೆಯ ಫೋಟೊವನ್ನು ಆಕೆ ಪೋಸ್ಟ್ ಮಾಡಿದ್ದರು. ದಿಢೀರನೆ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳು ನಿಮ್ಮ ಹೊಸ ಲುಕ್ ಕೂಡ ಚೆನ್ನಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದು ನಿಜಾನಾ? ಫೋಟೊಶಾಪ್ ಮಾಡಿರೋದಾ? ಎಂದು ಕಾಮೆಂಟ್ ಬಾಕ್ಸ್ನಲ್ಲಿ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











