ವಿಚಾರಣೆಗೆ ಬಂದ ಪೊಲೀಸರ ಮೇಲೆ ನಾಯಿಗಳನ್ನು ಛೂಬಿಟ್ಟ ನಿರ್ಮಾಪಕ
ಪೊಲೀಸರು ವಿಚಾರಣೆಗೆ ಬಂದಾಗ ಇಲ್ಲದ ಸಬೂಬು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುವುದು ಮಾಮೂಲು. ಇನ್ನು ರೌಡಿಗಳನ್ನು ಬಿಟ್ಟು ಪೊಲೀಸರ ಮೇಲೆ ದಾಳಿ ಮಾಡಿಸುವ ಸನ್ನಿವೇಶಗಳನ್ನು ಸಿನಿಮಾಗಳಲ್ಲಿ ನೋಡಿದ್ದೇವೆ. ನೆರೆಯ ಆಂಧ್ರಪ್ರದೇಶದಲ್ಲಿ ಇಂತಹದೇ ಸಿನಿಮೀಯ ಘಟನೆ ನಡೆದಿದೆ. ತನಿಖೆಗೆಂದು ಬಂದ ಪೊಲೀಸರ ಮೇಲೆ ನಿರ್ಮಾಪಕರೊಬ್ಬರು ಸಾಕು ನಾಯಿಗಳನ್ನು ಛೂ ಬಿಟ್ಟಿದ್ದಾರೆ. ಸಿನಿಮಾದವರೇ ಆಗಿರುವುದರಿಂದ ಅದೇ ಮನಸ್ಥಿತಿಯಲ್ಲಿ ನಾಯಿಗಳನ್ನು ಬಿಟ್ಟಿರಲೂಬಹುದು.
Recommended Video
ಈ ಘಟನೆ ನಡೆದಿರುವುದು ಹೈದಾರಾಬಾದ್ನಲ್ಲಿ. ಖ್ಯಾತ ನಿರ್ಮಾಪಕ ಮತ್ತು ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಪ್ರಸಾದ್ ವಿ. ಪೊಟ್ಲುರಿ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ನಿರ್ಮಾಪಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಮತ್ತು ಹಲ್ಲೆ ನಡೆಸಿದ ಆರೋಪಗಳಲ್ಲಿ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ. ಮುಂದೆ ಓದಿ...

ದೂರಿನ ವಿಚಾರಣೆಗೆ ಹೋದಾಗ ಘಟನೆ
ನಿರ್ಮಾಪಕ ಹಾಗೂ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಪ್ರಸಾದ್ ವಿ. ಪೊಟ್ಲುರಿ ವಿರುದ್ಧ ದೂರೊಂದು ದಾಖಲಾಗಿತ್ತು. ಅದರ ವಿಚಾರಣೆಗೆಂದು ಪೊಲೀಸ್ ಅಧಿಕಾರಿಗಳು ಪ್ರಸಾದ್ ನಿವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಪ್ರಸಾದ್ ತಮ್ಮ ಐದು ನಾಯಿಗಳನ್ನು ಛೂ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಮೂವರ ವಿರುದ್ಧ ಪ್ರಕರಣ
ಪಿವಿಪಿ ಎಂದೇ ಹೆಸರಾಗಿರುವ ಪ್ರಸಾದ್, ಅವರ ಪತ್ನಿ ಹಾಗೂ ಮತ್ತೊಬ್ಬ ವ್ಯಕ್ತಿಯ ವಿರುದ್ಧ ಹೈದರಾಬಾದ್ ಪೊಲೀಸರು ಐಪಿಸಿ ಸೆಕ್ಷನ್ 353ರ ಅಡಿ (ಸಾರ್ವಜನಿಕ ಸೇವಕರು ಕರ್ತವ್ಯ ನೆರವೇರಿಸುವ ಸಂದರ್ಭದಲ್ಲಿ ಅದನ್ನು ಕೆಡಿಸಲು ಹಲ್ಲೆ ಅಥವಾ ಕ್ರಿಮಿನಲ್ ಶಕ್ತಿ ಬಳಸಿದ ಆರೋಪ) ಪ್ರಕರಣ ದಾಖಲಿಸಿದ್ದಾರೆ. ವಿವಿಧ ಉದ್ಯಮ, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಪ್ರಸಾದ್, ಪಿವಿಪಿ ಸಿನಿಮಾ ಎಂಬ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ.

ದೂರು ದಾಖಲು
ಸಬ್ ಇನ್ಸ್ಪೆಕ್ಟರ್ ಡಿ. ಹರೀಶ್ ರೆಡ್ಡಿ ದೂರಿನ ಅನ್ವಯ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜುಬಿಲಿ ಹಿಲ್ಸ್ನಲ್ಲಿನ ಪ್ರಸಾದ್ ಅವರ ಐಷಾರಾಮಿ ಬಂಗಲೆಗೆ ಹರೀಶ್ ರೆಡ್ಡಿ ಅವರು ಮತ್ತೊಬ್ಬ ಪೊಲೀಸ್ ಅಧಿಕಾರಿ ಹಾಗೂ ಒಬ್ಬ ಹೋಮ್ ಗಾರ್ಡ್ ಜತೆ ತೆರಳಿದ್ದರು.

ಮನೆ ಕಟ್ಟಲು ಅಡ್ಡಿ ಆರೋಪ
ತಮ್ಮ ಮನೆ ನಿರ್ಮಾಣಕ್ಕೆ ಪ್ರಸಾದ್ ಅಡ್ಡಿಪಡಿಸುತ್ತಿದ್ದು, ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕಳೆದ ವಾರ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರ ವಿಚಾರಣೆಗಾಗಿ ಪೊಲೀಸ್ ಅಧಿಕಾರಿಗಳು ಪ್ರಸಾದ್ ಮನೆಗೆ ಹೋಗಿದ್ದರು. ಆದರೆ ಅವರನ್ನು ಗೇಟ್ ಬಳಿಯೇ ತಡೆದಿದ್ದ ವ್ಯಕ್ತಿಯೊಬ್ಬರು ಭೇಟಿಯ ಉದ್ದೇಶ ಕೇಳಿದ್ದರು. ಬಳಿಕ ಮನೆಯ ಒಳಗೆ ಹೋಗಿ ಬಂದಿದ್ದ ವ್ಯಕ್ತಿ, ಯಾರನ್ನೂ ಒಳಗೆ ಬಿಡಬಾರದುಎಂದು ಪ್ರಸಾದ್ ಹಾಗೂ ಅವರ ಪತ್ನಿ ಹೇಳಿದ್ದಾರೆ ಎಂದಿದ್ದ.

ಐದು ನಾಯಿಗಳ ದಾಳಿ
ಆದರೆ ಪೊಲೀಸರು ಒಳಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಐದು ನಾಯಿಗಳು ಅವರ ಮೇಲೆ ದಾಳಿ ಮಾಡಲು ಮುಂದಾಗಿದ್ದವು. ಪೊಲೀಸರು ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿದ್ದರು. ಪಿವಿಪಿ 2019ರ ಲೋಕಸಭೆ ಚುನಾವಣೆಗೂ ಮುನ್ನ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿದ್ದರು. ವಿಜಯವಾಡ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ರಾಜಪಟ್ಟೈ, ನಾನ್ ಈ, ವಿಶ್ವರೂಪಂ, ಕ್ಷಣಂ, ದಿ ಘಾಜಿ ಅಟ್ಯಾಕ್, ರಾಜು ಗಾರಿ ಗಾದಿ 2 ಮುಂತಾದ ಚಿತ್ರಗಳನ್ನು ಅವರು ನಿರ್ಮಿಸಿದ್ದಾರೆ.


Click it and Unblock the Notifications











