ತೆಲುಗು ಚಿತ್ರರಂಗದ ಹುಳುಕು ಬಿಚ್ಚಿಟ್ಟ ರಾಜಶೇಖರ್ ವಿರುದ್ದ ಚಿರಂಜೀವಿ ರೋಷಾಗ್ನಿ.!
ಮೆಗಾ ಸ್ಟಾರ್ ಚಿರಂಜೀವಿ ಮತ್ತು ನಟ ರಾಜಶೇಖರ್ ನಡುವಿನ ಮನಸ್ತಾಪ ಇಂದು ನಿನ್ನೆಯದ್ದಲ್ಲ. ಇಬ್ಬರ ನಡುವಿನ ವಿವಾದ ಆಗಾಗ ಟಾಲಿವುಡ್ ನಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಈಗ ನೋಡಿದ್ರೆ, ಒಂದೇ ವೇದಿಕೆಯಲ್ಲಿ ಚಿರಂಜೀವಿ ಮತ್ತು ರಾಜಶೇಖರ್ ಮಧ್ಯೆ ವಾಗ್ವಾದ ನಡೆದಿದೆ.
ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ನೇತೃತ್ವದಲ್ಲಿ ನಡೆದ 'ಮಾ' ಡೈರಿ ಬಿಡುಗಡೆ ಕಾರ್ಯಕ್ರಮದಲ್ಲಿ ಚಿರಂಜೀವಿ ಎದುರಿಗೆ ತೆಲುಗು ಚಿತ್ರರಂಗದ ಬಗ್ಗೆ ನಟ ರಾಜಶೇಖರ್ ತಮ್ಮಲ್ಲಿದ್ದ ಅಸಮಾಧಾನವನ್ನ ಹೊರಗೆ ಹಾಕಿದರು.
ರಾಜಶೇಖರ್ ರನ್ನ ತಡೆಯಲು ಯಾರು ಎಷ್ಟೇ ಪ್ರಯತ್ನ ಪಟ್ಟರೂ, ಅವರು ಸುಮ್ಮನಾಗಲಿಲ್ಲ. ರಾಜಶೇಖರ್ ವರ್ತನೆಯಿಂದ ಚಿರಂಜೀವಿ ಗರಂ ಆದರು. ರಾಜಶೇಖರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ 'ಮಾ'ಗೆ ಚಿರಂಜೀವಿ ಸೂಚಿಸಿದರು. ಈ ಘಟನೆ ಬಳಿಕ 'ಮಾ' ಉಪಾಧ್ಯಕ್ಷ ಸ್ಥಾನಕ್ಕೆ ರಾಜಶೇಖರ್ ರಾಜೀನಾಮೆ ನೀಡಿದ್ದಾರೆ.
ಅಸಲಿಗೆ, ರಾಜಶೇಖರ್ ಮಾತನಾಡಿದ್ದೇನು.? ಚಿರಂಜೀವಿ ಸಿಡಿಮಿಡಿಗೊಂಡಿದ್ದು ಯಾಕೆ.? ಕಾರ್ಯಕ್ರಮದಲ್ಲಿ ಏನೇನಾಯ್ತು.? ಸಂಪೂರ್ಣ ವಿವರ ಇಲ್ಲಿದೆ, ಓದಿರಿ....

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಬಗ್ಗೆ ಚಿರಂಜೀವಿ ಮೆಚ್ಚುಗೆ
ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ನೇತೃತ್ವದಲ್ಲಿ 'ಮಾ' ಡೈರಿ ಬಿಡುಗಡೆ ಕಾರ್ಯಕ್ರಮವನ್ನು ಇತ್ತೀಚೆಗಷ್ಟೇ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಿರಂಜೀವಿ, ಮೋಹನ್ ಬಾಬು, ಕೃಷ್ಣಂರಾಜು, ಜಯಸುಧಾ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು. ಇದೇ ವೇದಿಕೆಯಲ್ಲಿ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಬಗ್ಗೆ ಮೆಗಾ ಸ್ಟಾರ್ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದರು.

ಚಿರಂಜೀವಿ ಹೇಳಿದ್ದೇನು.?
''ನಾನು, ಮೋಹನ್ ಬಾಬು ಸೇರಿದಂತೆ ಅನೇಕರು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಭವನ ಉದ್ಘಾಟನೆಗೆಂದು ಬೆಂಗಳೂರಿಗೆ ಹೋಗಿದ್ವಿ. ಕಲಾವಿದರ ಸಂಘದ ಭವನಕ್ಕಾಗಿ ಅಲ್ಲಿನ ಸರ್ಕಾರ ಭೂಮಿ ನೀಡಿದೆ. ಕಾರ್ಪೊರೇಟ್ ಶೈಲಿಯಲ್ಲಿ ನಾಲ್ಕು ಅಂತಸ್ತಿನ ಕಲಾವಿದರ ಸಂಘದ ಭವನ ನಿರ್ಮಿಸಲಾಗಿದೆ. ಥಿಯೇಟರ್, ರೂಮ್, ಕ್ಲಬ್, ಮೀಟಿಂಗ್ ಹಾಲ್ ಸೇರಿದಂತೆ ಎಲ್ಲವೂ ಅಲ್ಲಿದೆ. ನಮ್ಮಲ್ಲಿಯೂ ಹಾಗೇ ಮಾಡೋಣ. ನಮ್ಮ 'ಮಾ' ಸಂಘದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿವೆ. ಅದನ್ನು ಬಗೆಹರಿಸಿಕೊಂಡು ನಾವೂ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಂತೆ ಬೆಳೆಯೋಣ. ನಮ್ಮ ಆಂತರಿಕ ಸಮಸ್ಯೆಗಳನ್ನು ನಮ್ಮೊಳಗೆ ಚರ್ಚಿಸೋಣ. ಬಹಿರಂಗಗೊಳಿಸುವುದು ಬೇಡ'' ಎಂದು ಚಿರಂಜೀವಿ ಹೇಳಿದರು.

ಮೈಕ್ ಕಿತ್ತುಕೊಂಡ ರಾಜಶೇಖರ್.!
ಹಿರಿಯ ನಟ ಪರಚೂರಿ ಗೋಪಾಲಕೃಷ್ಣ ಮಾತನಾಡುವ ವೇಳೆ ವೇದಿಕೆ ಹತ್ತಿದ 'ಮಾ' ಉಪಾಧ್ಯಕ್ಷ ರಾಜಶೇಖರ್ ಬಲವಂತವಾಗಿ ಮೈಕ್ ಕಿತ್ತುಕೊಂಡು ಮಾತನಾಡಲು ಆರಂಭಿಸಿದರು. 'ಮಾ' ಸಂಘದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುತ್ತ ತೆಲುಗು ಚಿತ್ರರಂಗದ ಹುಳುಕನ್ನು ರಾಜಶೇಖರ್ ಬಿಚ್ಚಿಡಲು ಆರಂಭಿಸಿದರು.

ರಾಜಶೇಖರ್ ಹೇಳಿದ್ದೇನು.?
''ಮಾ'ನಲ್ಲಿ ಗಲಾಟೆಗಳು ಆಗುತ್ತಿವೆ. ಬಹಿರಂಗವಾಗಿ ಮಾತನಾಡಲು ಅವಕಾಶ ಕೊಡುತ್ತಿಲ್ಲ. ಚಿರಂಜೀವಿ ಮಾತುಗಳು ಕೇಳಲು ಚೆನ್ನಾಗಿವೆ. ಆದ್ರೆ, ಕೆಂಡವನ್ನು ಮುಚ್ಚಿಟ್ಟರೆ, ಹೊಗೆ ಬಾರದೇ ಇರುತ್ತಾ.? 'ಮಾ' ಸಂಘಕ್ಕೆ ನಾನು ಉಪಾಧ್ಯಕ್ಷ ಆದಾಗಿನಿಂದ ನನಗೆ ಒಂದೇ ಒಂದು ಸಿನಿಮಾ ಮಾಡಲು ಸಾಧ್ಯವಾಗಿಲ್ಲ. ನನ್ನ ಸಮಯವನ್ನೆಲ್ಲಾ 'ಮಾ'ಗಾಗಿ ಮೀಸಲಿಟ್ಟಿದ್ದೇನೆ. ಇದರಿಂದ ನನ್ನ ಸಂಸಾರದಲ್ಲೂ ನಿತ್ಯ ಗಲಾಟೆ ಆಗುತ್ತಿದೆ. ಇತ್ತೀಚೆಗೆ ನನ್ನ ಮರ್ಸಿಡೀಸ್ ಕಾರು ಅಪಘಾತವಾಗಿದ್ದೂ ಈ ಕಾರಣಕ್ಕೆ. ನಿಜಜೀವನದಲ್ಲೂ ಹೀರೋ ಆಗಿರುವ ನನ್ನನ್ನು ತುಳಿಯುತ್ತಿದ್ದಾರೆ'' ಎಂದರು ರಾಜಶೇಖರ್.

ಸುಮ್ಮನಾಗದ ರಾಜಶೇಖರ್
ರಾಜಶೇಖರ್ ಮಾತನಾಡುತ್ತಿದ್ದ ವೇಳೆ, ಮೋಹನ್ ಬಾಬು ಮತ್ತು ಜಯಸುಧಾ ಮಧ್ಯಪ್ರವೇಶಿಸಿ, ಅವರನ್ನು ತಡೆಯಲು ಪ್ರಯತ್ನಿಸಿದರು. ಆದರೆ ರಾಜಶೇಖರ್ ಸುಮ್ಮನಾಗಲಿಲ್ಲ. ಇದರಿಂದ ಚಿರಂಜೀವಿ ಮುನಿಸಿಕೊಂಡರು. ವೇದಿಕೆ ಮೇಲೆ ರಾಜಶೇಖರ್ ವಿರುದ್ಧ ಚಿರಂಜೀವಿ ಗುಡುಗಿದರು.

ಉರಿದ ಚಿರಂಜೀವಿ ರೋಷಾಗ್ನಿ
''ನನ್ನ ಮಾತಿಗೆ ಬೆಲೆ ಇಲ್ಲ. ನಮ್ಮ ಹಿರಿತನಕ್ಕೆ ಬೆಲೆ ಇಲ್ಲದ ಕಡೆ ನಾವೇಕೆ ಇರಬೇಕು.? ಸಭೆಗೆ ಗೌರವ ಕೊಡದೆ ಮೈಕ್ ಕಿತ್ತುಕೊಂಡು ರಾಜಶೇಖರ್ ಮಾತನಾಡಿದ್ದು ಸರಿ ಅಲ್ಲ. ರಾಜಶೇಖರ್ ವಿರುದ್ಧ 'ಮಾ' ಶಿಸ್ತು ಕ್ರಮ ಕೈಗೊಳ್ಳಬೇಕು'' ಎನ್ನುತ್ತ ವೇದಿಕೆ ಮೇಲೆ ಚಿರಂಜೀವಿ ಗರಂ ಆದರು.

ರಾಜೀನಾಮೆ ನೀಡಿದ ರಾಜಶೇಖರ್
ಕಾರ್ಯಕ್ರಮ ಮುಗಿದ ಬಳಿಕ 'ಮಾ' ಉಪಾಧ್ಯಕ್ಷ ಸ್ಥಾನಕ್ಕೆ ರಾಜಶೇಖರ್ ರಾಜೀನಾಮೆ ನೀಡಿದ್ದಾರೆ. 'ಮಾ' ಅಧ್ಯಕ್ಷ ನರೇಶ್ ಕಾರ್ಯವೈಖರಿ ಸರಿಯಿಲ್ಲ ಎಂದು ರಾಜಶೇಖರ್ ದೂರಿದ್ದಾರೆ. ಹಾಗೇ, ಚಿರಂಜೀವಿಗೂ ಕ್ಷಮೆ ಕೇಳಿದ್ದಾರೆ.


Click it and Unblock the Notifications











